• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಥಾಯ್ ಅಂತಹ ಒಬ್ಬ ಅಧಿಕಾರಿ ಮಂಗಳೂರು ಮಹಾನಗರ ಪಾಲಿಕೆಗೆ ಬೇಕು, ಕೊಡ್ತೀರಾ ಸಿಎಂ!!

Nagendra Shenoy Posted On October 19, 2018


  • Share On Facebook
  • Tweet It

ನಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಜನರಿಗೆ ಸಾಧ್ಯವಾದಷ್ಟು ಉಪಕಾರ ಮಾಡಿಬಿಡಬೇಕು. ಇಲ್ಲದಿದ್ದರೆ ಅಧಿಕಾರದಲ್ಲಿದ್ದು ಏನು ಉಪಯೋಗ ಎಂದು ಆ ವ್ಯಕ್ತಿ ಹೇಳುತ್ತಿದ್ದಂತೆ ತುಂಬಾ ಖುಷಿಯಾಯಿತು. ಈಗಿನ ದಿನಗಳಲ್ಲಿ ಕೆಎಎಸ್ ಅಧಿಕಾರಿಯೊಬ್ಬರು ಹೀಗೆ ಹೇಳುವುದು ಅಪರೂಪ. ಹೇಳಿದರೂ ಹಾಗೆ ನಡೆದುಕೊಳ್ಳುವುದು ಅಪರೂಪ. ಸೇವೆಗೆ ಸೇರಿದ ಕೆಲವು ಕಾಲ ಹಾಗೆ ನಡೆದುಕೊಂಡರೂ ಅದನ್ನು ಬಹಳ ವರ್ಷಗಳ ತನಕ ಮುಂದುವರೆಸಿಕೊಂಡು ಹೋಗುವುದು ಅಪರೂಪ. ಆದರೆ ಕೆ ಮಥಾಯ್ ಅವರು ಹಾಗೆ ಹೇಳುವುದು ಮಾತ್ರವಲ್ಲ, ಹಾಗೆ ನಡೆದುಕೊಂಡು ಬರುತ್ತಿದ್ದಾರೆ. ಹಾಗೆ ನಡೆದುಕೊಂಡು ಬರುತ್ತಿರುವುದರಿಂದ ಅಸಂಖ್ಯಾತ ಬಾರಿ ವರ್ಗಾವಣೆಗೊಂಡಿದ್ದಾರೆ. ಅವರು ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಾರೋ ಆ ಇಲಾಖೆಯ ಹಗರಣಗಳನ್ನು ಹೊರಗೆ ತರುತ್ತಾರೆ. ಆದ್ದರಿಂದ ಒಂದೆರಡು ಸಲ ಅವರು ಹೀಗೆ ಮಾಡುವಾಗಲೇ ಎಚ್ಚೆತ್ತುಕೊಳ್ಳುವ ಆಯಾ ಅವಧಿಯ ರಾಜ್ಯ ಸರಕಾರಗಳು ಅವರನ್ನು ಹಲ್ಲಿಲ್ಲದ ಇಲಾಖೆಗಳಿಗೆ ಹಾಕಿ ನೆಮ್ಮದಿಯ ಉಸಿರನ್ನು ಎಳೆದುಕೊಳ್ಳುತ್ತವೆ. ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಸ್ಟಿಸ್ಟೆಂಟ್ ಕಮೀಷನರ್ ಆಗಿದ್ದಾಗ ಮತ್ತು ಮಂಡ್ಯದ ಮೂಡಾದಲ್ಲಿ ಇದ್ದಾಗ ಬಹುಕೋಟಿ ಹಗರಣಗಳನ್ನು ಬೆಳಕಿಗೆ ತಂದಿದ್ದರು. ಅದಕ್ಕಾಗಿ ಇವರಿಗೆ ಕಿರುಕುಳ ಕೊಡಬೇಕೆಂಬ ಉದ್ದೇಶದಿಂದ ಉನ್ನತಾಧಿಕಾರಿಗಳು ಇವರ ಸರಕಾರಿ ವಾಹನವನ್ನು ಕಿತ್ತುಕೊಂಡಿದ್ದರು. ಆಗ ಮಥಾಯ್ ಅವರು ಸೈಕಲ್ಲಿನಲ್ಲಿ ಕಚೇರಿಗೆ ಬರುವ ಮೂಲಕ ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಸರಕಾರ ಮತ್ತು ಐಎಎಸ್ ಅಧಿಕಾರಿಗಳ ಸಮೂಹ ಹೇಗೆ ನಡೆಸಿಕೊಳ್ಳುತ್ತದೆ ಎಂದು ಸಮಾಜಕ್ಕೆ ತೋರಿಸಿದ್ದರು.
ಮಥಾಯ್ ಅವರು ಬರುವಾಗಲೇ ಬೋರ್ಡ್ ಕೂಡ ಬಂತು.
ಅಂತಹ ಮಥಾಯ್ ಅವರನ್ನು ಈಗ ಸಕಾಲ ಮಿಶನ್ ಎನ್ನುವ ಯೋಜನೆಗೆ ಆಡಳಿತಾಧಿಕಾರಿಯಾಗಿ ಸರಕಾರ ಕೂರಿಸಿದೆ. ಅದರ ಪರಿಶೀಲನೆಗೆ ಎಂದು ಅವರು ಈ ವಾರದ ಆದಿಯಲ್ಲಿ ಕರಾವಳಿಗೆ ಬಂದಿದ್ದರು. ಸಕಾಲ ಮಿಶನ್ ಎಂದರೆ ಯಾವುದೇ ಸರಕಾರಿ ಸೇವೆ ಕ್ಲಪ್ತ ಅವಧಿಯಲ್ಲಿ ಜನರಿಗೆ ಯಾವುದೇ ತೊಂದರೆಗೆ ಅವಕಾಶ ಇಲ್ಲದೆ, ಸರಕಾರಿ ಸಿಬ್ಬಂದಿಗಳಿಗೆ ಲಂಚ ಕೊಡದೇ ಎಲ್ಲವೂ ನಿಯಮಬದ್ಧವಾಗಿ ಸಿಗಬೇಕು ಎಂದು ಆರೇಳು ವರ್ಷಗಳ ಹಿಂದೆ ಇದ್ದ ಸರಕಾರ ಜಾರಿಗೆ ತಂದ ಯೋಜನೆ. ಆದರೆ ಈ ಬಗ್ಗೆ ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಯಾಕೆಂದರೆ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಎಂದು ಯಾವ ಮಾಹಿತಿ ಫಲಕ (ಬೋರ್ಡ್) ಕೂಡ ನಮ್ಮ ಸರಕಾರಿ ಕಚೇರಿಗಳಲ್ಲಿ ಇಲ್ಲ. ಮೊನ್ನೆ ಮಥಾಯ್ ಅವರು ಬರುವ ಸಮಯಕ್ಕೆ ಸರಿಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಕಾಲದಡಿಯಲ್ಲಿ ಸಿಗುವ ಯೋಜನೆಗಳ ಬಗ್ಗೆ ಒಂದು ಬೋರ್ಡ್ ಬರೆದು ತಂದು ಇಟ್ಟಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಂತೂ ಈ ಬಗ್ಗೆ ಯಾರಿಗೂ ಏನೂ ಬಿದ್ದೆ ಹೋಗಿಲ್ಲ ಎನ್ನುವ ರೀತಿಯಲ್ಲಿ ಅವರು ನಿರಾಳರಾಗಿದ್ದರು. ಅಷ್ಟಕ್ಕೂ ಪ್ರತಿಯೊಂದು ಸರಕಾರಿ ಕಚೇರಿಯಲ್ಲಿ ಸಕಾಲದ ಬೋರ್ಡ್ ಹಾಕಿದ್ದಾರಾ, ಅದರ ಉಪಯೋಗ ಜನರಿಗೆ ಸಿಗುತ್ತದೆಯಾ ಎಂದು ನೋಡಿಕೊಳ್ಳಲು ಆಯಾ ಜಿಲ್ಲೆಯಲ್ಲಿ ಅದಕ್ಕೆಂದೇ ಒಬ್ಬರು ಅಧಿಕಾರಿ ಇದ್ದಾರೆ. ಅವರು ನಮ್ಮ ತೆರಿಗೆಯ ಹಣದಲ್ಲಿ ಸಂಬಳ ಪಡೆದುಕೊಂಡು ಆರಾಮವಾಗಿದ್ದಾರೆ. ಸರಿಯಾಗಿ ನೋಡಿದರೆ ಇಷ್ಟು ವರ್ಷ ಈ ಯೋಜನೆ ಸರಿಯಾಗಿ ಜನರಿಗೆ ತಲುಪದೇ ಇರಲು ಮುಖ್ಯ ಕಾರಣ ಏನೆಂದರೆ ನಮಗೆ ಆ ಬಗ್ಗೆ ಗೊತ್ತಾಗಲು ಪಾಲಿಕೆ, ತಹಶೀಲ್ದಾರ ಕಚೇರಿ, ಆರ್ಟಿಒ ಕಚೇರಿಯಲ್ಲಿ ಬೋರ್ಡ್ ಹಾಕದೇ ಇರುವುದು. ಈಗ ಮಥಾಯ್ ಅವರು ಬರುತ್ತಾರೆ ಎಂದ ಕೂಡಲೇ ಹೇಗೆ ಬೋರ್ಡ್ ಓಡೋಡಿ ಬಂತು, ಅವರು ಒಂದು ವೇಳೆ ಇತ್ತ ಬರದೇ ಇದ್ದರೆ ಬೋರ್ಡ್ ಹಾಗಾದರೆ ಕಚೇರಿಗಳಲ್ಲಿ ಹಾಕದೇ ಇರುತ್ತಿದ್ದರಾ?
ಸಂದರ್ಶನದಿಂದ ಜನರಿಗೆ ಉಪಯೋಗವಾಗುವುದಾದರೆ ರೆಸ್ಟ್ ಬೇಡಾ…
ಸರ್, ಹಾಗಾದರೆ ಇಷ್ಟು ವರ್ಷ ನಿರ್ಲಕ್ಷ್ಯ ವಹಿಸಿದ ಅಧಿಕಾರಿಯ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲವೇ ಎಂದು ಕೇಳಿದೆ. ಈ ಬಾರಿ ಎಚ್ಚರಿಕೆ ಕೊಟ್ಟಿದ್ದೇವೆ. ಇನ್ನೊಂದು ಸಲ ಬಂದಾಗ ಹೀಗೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಆ ಅಧಿಕಾರಿ ಪಾಪ ಹೆಂಗಸು ಎನ್ನುವ ಅನುಕಂಪ ಕೂಡ ಅವರಲ್ಲಿ ಇತ್ತು. ಯಾಕೆ, ನಮ್ಮ ಅಧಿಕಾರಿಗಳು ಹೀಗೆ ಮಾಡುತ್ತಾರೆ, ಒಂದು ಬೋರ್ಡ್ ಹಾಕಿದರೆ ಅವರ ಗಂಟು ಏನು ಹೋಗುತ್ತದೆ ಎಂದು ಅನಿಸಿತು. ಇದೊಂದು ರೀತಿಯಲ್ಲಿ ಅಂಡರ್ ಸ್ಟ್ಯಾಂಡಿಂಗ್. ಮಾಹಿತಿ ಫಲಕ ಹಾಕಿದರೆ ಜನರಿಗೆ ವಿಷಯ ಗೊತ್ತಾಗುತ್ತದೆ. ನಂತರ ಜನ ಕಾನೂನು ಪ್ರಕಾರ ಕೆಲಸ ಮಾಡಿಕೊಡಿ, ಲಂಚ ಕೊಡಲ್ಲ ಎನ್ನುತ್ತಾರೆ. ಅದರಿಂದ ಕೆಲವು ಅಧಿಕಾರಿಗಳು ಒಳ ಒಪ್ಪಂದದೊಂದಿಗೆ ಹೀಗೆ ಸರಕಾರಿ ಸೌಲಭ್ಯಗಳು ನಮಗೆ ಸಿಗದಂತೆ ಮಾಡುತ್ತಾರೆ. ಅಂತವರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡಾಗ ಉಳಿದವರಿಗೂ ಬುದ್ಧಿ ಬರುತ್ತದೆ. ಆ ನಿಟ್ಟಿನಲ್ಲಿ ಮಥಾಯ್ ಅವರನ್ನು ನಾನು ಯಾಕೆ ಮೆಚ್ಚುತ್ತೇನೆ ಎಂದರೆ ಅವರು ಮಂಗಳೂರಿನಲ್ಲಿ ಬೆಳಿಗ್ಗೆಯಿಂದ ಸಂಜೆ ತನಕ ನಿರಂತರ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಒಂದು ಸಭೆಯಲ್ಲಿ ಅವರಿಗೂ ವಿವಿಧ ಸಾಮಾಜಿಕ ಕಾರ್ಯಕರ್ತರಿಗೂ ಸಾಕಷ್ಟು ಜಟಾಪಟಿ ಕೂಡ ಆಗಿತ್ತು. ನಿರಂತರ ಸಭೆಗಳಿಂದ ಮಥಾಯ್ ಅವರು ಸುಸ್ತಾಗಬಹುದು, ಬರುತ್ತಾರೋ ಇಲ್ಲವೋ ಇಲ್ಲವೋ ಎನ್ನುವ ಸಂಶಯ ನನಗೆ ಇತ್ತು. ಆದ್ದರಿಂದ ಟಿವಿ ಸಂದರ್ಶನಕ್ಕೆ ಕರೆಯಲು ಹಿಂದೇಟು ಹಾಕಿದ್ದೆ. ಆದರೆ ಕೊನೆಗೆ ಗೆಳೆಯರೊಬ್ಬರ ಸಹಾಯದಿಂದ ಅವರನ್ನು ಸಂಪರ್ಕಿಸಿ ಅವರನ್ನು ಬರಲು ವಿನಂತಿಸಿದೆ. ಮಥಾಯ್ ಅವರು ಮನಸ್ಸು ಮಾಡಿದ್ದರೆ ಆಗಲ್ಲ, ರೆಸ್ಟ್ ಬೇಕು ಎನ್ನಬಹುದಿತ್ತು. ಆದರೆ ನಾನು ಒಂದು ಗಂಟೆ ಸಂದರ್ಶನ ಕೊಡುವುದರಿಂದ ಜನರಿಗೆ ಉಪಯೋಗವಾಗುವುದಾದರೆ ಬರಲು ರೆಡಿ ಎಂದರು. ಹಾಗೆ ಬಂದರು. ಜನರ ಪ್ರಶ್ನೆಗಳಿಗೆ ಉತ್ತರಿಸಿದರು. ಅವರನ್ನು ಹುಡುಕಿಕೊಂಡು ಜನ ಸ್ಟುಡಿಯೋ ತನಕವೂ ಬಂದಿದ್ದರು. ಅವರನ್ನು ಕೂಡ ಸಮರ್ಪಕವಾಗಿ ಮಾತನಾಡಿಸಿದರು. ಇಂತಹ ದಕ್ಷ ಅಧಿಕಾರಿಗಳ ನಡುವೆ ಸಕಾಲದ ಮಾಹಿತಿ ಇರುವ ಒಂದು ಫಲಕ ಹಾಕಲು ಐದಾರು ವರ್ಷ ತೆಗೆದ ಆಲಸಿ ಅಧಿಕಾರಿಗಳೂ ಕೂಡ ಇರ್ತಾರಲ್ಲ, ಅದೇ ಅಸಹ್ಯ ಅಲ್ಲವಾ. ಮಥಾಯ್ ಅವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇದ್ದರೆ ಸ್ಮಾರ್ಟ್ ಸಿಟಿ ಆಗುವ ನಮ್ಮ ವೇಗ ಮತ್ತು ಕೆಲಸದ ಶೈಲಿಯ ಬಗ್ಗೆ ಕಲ್ಪಿಸಿಕೊಂಡೆ. ಥ್ರಿಲ್ ಆಯಿತು!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Nagendra Shenoy May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Nagendra Shenoy May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search