ಖಾದರ್ ನಿಮಗೆ ಸಮಸ್ಯೆಗೆ ಪರಿಹಾರ ಬೇಕೋ, ಪ್ರಚಾರ ಬೇಕೋ. ಹೇಳಿಬಿಡಿ!!
ಮಂಗಳೂರು ವಿಧಾನಸಭಾ ಕ್ಷೇತ್ರ ಅಂದರೆ ಹಿಂದಿನ ಉಳ್ಳಾಲಕ್ಕೆ ಒಬ್ಬರು ಶಾಸಕರಿದ್ದಾರೆ. ಅವರನ್ನು ಯುಟಿ ಖಾದರ್ ಎನ್ನುತ್ತಾರೆ. ಕಾನೂನು ಡಿಗ್ರಿಯೊಂದು ಇದೆ. ಆದರೆ ನಾಲ್ಕನೇ ಕ್ಲಾಸ್ ಫೇಲ್ ತರಹ ವರ್ತಿಸುತ್ತಾರೆ. ಎಲ್ಲರಿಗೂ ಗೊತ್ತಿರುವಂತೆ ಆಗಾಗ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಭೆಯನ್ನು ಕರೆಯುತ್ತದೆ. ಅಲ್ಲಿ ಆಗಿರುವ, ಆಗಬೇಕಾದ ಕಾರ್ಯಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಯುತ್ತದೆ. ಅಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿ ಸಚಿವರಿಂದ, ಜಿಲ್ಲಾಧಿಕಾರಿಯವರಿಂದ, ನೋಡಲ್ ಆಫೀಸರ್ ಗಳಿಂದ ನೇರ ಉತ್ತರವನ್ನು ಪಡೆಯುವ ಅವಕಾಶ ಇರುತ್ತದೆ. ಆದರೆ ಈ ನಮ್ಮ ಮಾಜಿ ಆರೋಗ್ಯ ಸಚಿವರೂ ಆಗಿರುವ ಶಾಸಕ ಖಾದರ್ ಸಾಹೇಬ್ರಿಗೆ ಅಲ್ಲಿ ತಲೆ ಓಡಲ್ವೋ ಅಥವಾ ಅಧಿಕಾರಿಗಳಿಂದ, ಸಚಿವರಿಂದ ಉತ್ತರ ಪಡೆದರೆ ಸಮಸ್ಯೆ ಪರಿಹಾರವಾಗುತ್ತದೆ.
ಅದರ ಬದಲು ನೇರವಾಗಿ ಮಾಧ್ಯಮಗಳ ಮುಂದೆ ಇಟ್ಟರೆ ಪ್ರಚಾರ ಸಿಗುತ್ತದೆ ಎಂದು ಅಂದುಕೊಂಡಿದ್ದಾರೋ, ಅವರೇ ಹೇಳಬೇಕು. ಖಾದರ್ ಮೀಟಿಂಗ್ ಗಳ ನಂತರ ಸುದ್ದಿಗೋಷ್ಟಿ ಕರೆಯುತ್ತಾರೆ. ನಮ್ಮ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಕಡಿಮೆ ಇದ್ದರೂ 5 ಜನ ಸಾಯಲು ಏನು ಕಾರಣ ಎನ್ನುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ. ಅಷ್ಟೇ ಅಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕೇಳಬೇಕಾದ ಅನೇಕ ಪ್ರಶ್ನೆಗಳನ್ನು ಮಾಧ್ಯಮದವರಿಗೆ ಕೇಳುತ್ತಾರೆ. ಅದರೊಂದಿಗೆ ಬೇಕಾದಷ್ಟು ಆರೋಪಗಳನ್ನು ಜಿಲ್ಲಾಡಳಿತಕ್ಕೂ ಮಾಡುತ್ತಾರೆ. ಅದು ಸರಿನಾ, ಇದು ಸರಿನಾ ಎಂದು ಗಂಟೆಗಟ್ಟಲೆ ಬೇಕಾದರೆ ಮಾತನಾಡುತ್ತಾರೆ. ರೈಲು, ವಿಮಾನ, ಬಸ್ಸುಗಳ ಸಮಸ್ಯೆಗಳ, ಅನುಮಾನಗಳ ಬಗ್ಗೆ ಇವರು ಜಿಲ್ಲಾಧಿಕಾರಿಗಳಿಗೆ, ಉಸ್ತುವಾರಿ ಸಚಿವರಿಗೆ ಕೇಳಿದ್ದರೆ ಅವರು ಸರಕಾರದೊಂದಿಗೆ ಸಂವಹನ ಮಾಡಿ ಉತ್ತರ ಕೊಡಲು ಸಾಧ್ಯವಾಗುತ್ತಿತ್ತು. ಆದರೆ ಸುದ್ದಿಗೋಷ್ಟಿಯಲ್ಲಿ ಎದುರಿಗೆ ಪರಿಹಾರ ಕೊಡುವವರು ಯಾರು ಇರುವುದಿಲ್ಲ. ಕೆಲವು ಕ್ರಾಂತಿಕಾರಿ ವರದಿಗಾರರು ಒಂದೆರಡು ಕ್ರಾಸ್ ಕೇಳಿ ಮುಗಿಸುತ್ತಾರೆ. ಅದರಿಂದ ಏನೂ ಆಗುವುದಿಲ್ಲ. ಮರುದಿನ ಪತ್ರಿಕೆಯಲ್ಲಿ ಖಾದರ್ ಹೇಳಿದ್ದು ಬರುತ್ತದೆ. ಜನ ಅದನ್ನೇ ನಿಜ ಅಂದುಕೊಂಡು ಬಿಡುತ್ತಾರೆ. ಅಲ್ಲಿಗೆ ಖಾದರ್ ಅವರ ಪ್ರಯತ್ನ ಮತ್ತು ತಂತ್ರ ಯಶಸ್ವಿಯಾಗಿ ಬಿಡುತ್ತದೆ. ಅದೇ ಖಾದರ್ ಅವರು ಜಿಲ್ಲಾಡಳಿತ ಸಭೆಯಲ್ಲಿ ತಮ್ಮ ಅನುಮಾನಗಳನ್ನು ಕೇಳಿದ್ದರೆ ಅಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ವೆನ್ ಲಾಕ್ ಆಸ್ಪತ್ರೆಗಳ ಪ್ರಮುಖ ವೈದ್ಯಾಧಿಕಾರಿಗಳು ಇರುತ್ತಾರೆ. ಅವರು ಸರಿಯಾದ ಉತ್ತರವನ್ನು ಕೊಡುತ್ತಿದ್ದರು. ಆದರೆ ಅದನ್ನು ಖಾದರ್ ಅವರು ಮಾಡುವುದಿಲ್ಲ. ಯಾಕೆಂದರೆ ಅವರಿಗೆ ಉತ್ತರ ಬೇಕಾಗಿಲ್ಲ, ಪ್ರಚಾರ ಬೇಕು.
ಇನ್ನು ಖಾದರ್ ಅವರ ಕ್ಷೇತ್ರದಲ್ಲಿ ಅವರು ಹುಟ್ಟುವ ಮೊದಲಿನಿಂದಲೇ ಇರುವ ಕಡಲ್ಕೊರೆತ. ಅದನ್ನು ಸರಿಪಡಿಸಲು ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತಿದೆ. ಅದಕ್ಕೆ ಪರಿಹಾರ ಹುಡುಕಲು ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ವಿದೇಶಗಳ ತನಕ ಹೋಗಿ ಬಂದಿದ್ದಾರೆ. ಸಾಕಷ್ಟು ಅಧ್ಯಯನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಎಡಿಬಿಯಿಂದ ಹಿಡಿದು ಕೇಂದ್ರ, ರಾಜ್ಯ ಸರಕಾರದ ತನಕ ವಿವಿಧ ಅನುದಾನಗಳು ಸುರಿಯಲ್ಪಟ್ಟಿವೆ. ಖಾದರ್ ಅವರದ್ದು ಇಲ್ಲಿಯತನಕ ಶಾಸಕತ್ವದ ಮೂರುವರೆ ಟರ್ಮ್ ಮುಗಿದಿದೆ. ಅವರ ತಂದೆ ಕೂಡ ಅದೇ ಕ್ಷೇತ್ರದ ಶಾಸಕರಾಗಿದ್ದರು. ಆದರೂ ಕಡಲ್ಕೊರೆತ ಆಗುತ್ತಲೇ ಇದೆ. ಅದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಖಾದರ್ ಅವರಿಗೆ ನಿಜವಾಗಿಯೂ ಮನಸ್ಸಿಲ್ಲವೇ ಅಥವಾ ಪ್ರತಿವರ್ಷ ಅದಕ್ಕೆ ಬರುವ ಅನುದಾನಗಳು ಬರಲಿ ಎನ್ನುವ ಅಪೇಕ್ಷೆ ಇದೆಯಾ??
ಅದರ ಬದಲು ಯಾವ ಏರಿಯಾದಲ್ಲಿ ಪ್ರತಿ ಬಾರಿ ಕಡಲ್ಕೊರೆತ ಆಗುತ್ತಿದೆಯೋ ಆ ಮನೆಯವರನ್ನು ಅಲ್ಲಿಂದ ಸುರಕ್ಷಿತವಾದ ಸ್ಥಳಗಳಿಗೆ ಶಾಶ್ವತವಾಗಿ ಶಿಫ್ಟ್ ಮಾಡಿದರೆ ಒಳ್ಳೆಯದಲ್ಲವೇ? ಆಗ ಆ ಮನೆಯವರು ಜೀವವನ್ನು ಕೈಯಲ್ಲಿ ಹಿಡಿದು ಪ್ರತಿ ಮಳೆಗಾಲವನ್ನು ಎದುರಿಸುವ ಅಗತ್ಯ ಇರುವುದಿಲ್ಲ. ಇನ್ನು ಯಾರಿಗೂ ಆ ನಿರ್ದಿಷ್ಟ ಸ್ಥಳಗಳಲ್ಲಿ ಮನೆ ಕಟ್ಟದಂತೆ ನೋಡಿಕೊಂಡರೆ ಮುಗಿಯಿತು. ಇನ್ನು ಕಡಲ್ಕೊರೆತ ತಡೆಗಟ್ಟಲು ಬೇರೆ ದೇಶಗಳು ಏನು ಮಾಡಿದ್ದೆವೆಯೋ ಅದನ್ನು ಮಾಡಿಬಿಡಬೇಕು. ಆದರೆ ಖಾದರ್ ಅವರಿಗೆ ಅದರಲ್ಲಿ ಆಸಕ್ತಿ ಇಲ್ಲ. ಅವರಿಗೆ ಸುದ್ದಿಗೋಷ್ಟಿಯಲ್ಲಿ ಸಿಗುವ ಮೈಲೇಜ್ ಸಮಸ್ಯೆ ಪರಿಹರಿಸಿದರೆ ಸಿಗಲ್ಲ ಎನ್ನುವುದು ಗೊತ್ತಿದೆ!
Leave A Reply