ಮೂಡಾ ಅದಾಲತ್ ನಾಮಕಾವಸ್ತೆ ಆಗಬಾರದು!!
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬುಧವಾರ ಮೂಡಾ ಅದಾಲತ್ ಮಾಡಿದ್ದರು. ನಾನು ಅದನ್ನು ಸಾರಾಸಗಟಾಗಿ ವಿರೋಧಿಸುತ್ತಿಲ್ಲ. ಆದರೆ ಮೂಡಾ ಅದಾಲತ್ ಇದರ ಉದ್ದೇಶ ಮಾತ್ರ ಈಡೇರಿಲ್ಲ ಎನ್ನುವುದು ಸ್ಪಷ್ಟ. ವಾರದ ಹಿಂದೆಯೇ ಇವರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ್ದರು. ಅದರಲ್ಲಿ ಸ್ಪಷ್ಟವಾಗಿ ಅರ್ಜಿದಾರರಿಗೆ ಮಾತ್ರ ಎಂದು ಬರೆದಿದ್ದರು. ಆಗಲೇ ಇದರ ಉದ್ದೇಶ ಈಡೇರುವುದಿಲ್ಲ ಎಂದು ನನಗೆ ಅನಿಸಿತ್ತು. ಅಷ್ಟಕ್ಕೂ ಅದಾಲತ್ ಎಂದು ಮಾಡಿದ ಬಳಿಕ ಕೇವಲ ಅರ್ಜಿದಾರರು ಮಾತ್ರ ಬನ್ನಿ ಎಂದರೆ ಅದರಿಂದ ಆದ ಪ್ರಯೋಜನವಾದರೂ ಏನು? ಅಷ್ಟಕ್ಕೂ ಅರ್ಜಿದಾರರ ಸಮಸ್ಯೆಯನ್ನು ಈಡೇರಿಸಲು ಅದಾಲತ್ ಯಾಕೆ? ಮೂಡಾ ಕಚೇರಿಯಲ್ಲಿ ಹೇಗೂ ಪೆಂಡಿಂಗ್ ಫೈಲ್ ಎಂದು ಇರುತ್ತದೆ. ಅದರಲ್ಲಿ ಏಕ ನಿವೇಶನ, ಝೋನಲ್ ಸರ್ಟಿಫಿಕೇಟ್, ಫೀಸ್ ವ್ಯತ್ಯಯ, ನಕ್ಷೆಯಲ್ಲಿ ತಪ್ಪಾಗಿರುವುದರ ಬದಲಾವಣೆ ಹೀಗೆ ವಿವಿಧ ತಪ್ಪುಗಳು ಸರಿ ಮಾಡಿ ಎಂದು ಕೇಳಿ ಅದರ ಪರಿಹಾರ ನಿರೀಕ್ಷಿಸುವ ನಾಗರಿಕರ ಅರ್ಜಿಗಳು ಇರುವ ಫೈಲ್ ಇರುತ್ತವೆ. ಅದರ ಅರ್ಜಿದಾರರಿಗೆ ಒಂದು ವಾರ ಮೊದಲೇ ಮಾಹಿತಿ ನೀಡಿ ಇಂತಿಂತಹ ದಿನ ಬನ್ನಿ ಎಂದು ಕರೆದು ಮಾತನಾಡಿ ಸರಿ ಮಾಡಿ ಕಳುಹಿಸಿದರೆ ಮುಗಿಯಿತು. ಅನೇಕರಿಗೆ ತಮ್ಮ ಸಮಸ್ಯೆ ಯಾವ ಹಂತದಲ್ಲಿ ಇದೆ ಎಂದು ಗೊತ್ತಾಗಬೇಕಾದರೆ ಬ್ರೋಕರಿಗೆ ಕೇಳಬೇಕು. ಅರ್ಜಿದಾರರು ಬಂದರೂ ಅವರಿಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಅವರು ಮೂಡಾ ಅಧ್ಯಕ್ಷರ, ಆಯುಕ್ತರ ಮುಂದೆ ಕುಳಿತುಕೊಂಡರೂ ಸರಿಯಾದ ರೀತಿಯಲ್ಲಿ ವಿವರಿಸಲು ಗೊತ್ತಿರುತ್ತೆ ಎನ್ನುವುದು ಕಷ್ಟ.
ನಿಜವಾದ ಅರ್ಥದಲ್ಲಿ ಮೂಡಾ ಅದಾಲತ್ ಎಂದರೆ ಸಾರ್ವಜನಿಕರಿಗೆ ಮುಕ್ತವಾದ ಪ್ರವೇಶಾವಕಾಶ ಇರಬೇಕು. ನಾಗರಿಕರಿಗೆ ಮೂಡಾದಲ್ಲಿ ಆಗುತ್ತಿರುವ ತೊಂದರೆಗಳನ್ನು ಹೇಳಲು ಅವಕಾಶ ಇರಬೇಕು. ಬೇಕಾದರೆ ಈಗ ಮಾಡಿದ ಹಾಗೆ ಒಂದು ದಿನ ನಿಗದಿಪಡಿಸಲಿ. ಆವತ್ತು ಜನರು ಮೂಡಾಕ್ಕೆ ಬಂದ ಕೂಡಲೇ ಸರದಿಯಲ್ಲಿ ಅವರಿಗೆ ಟೋಕನ್ ನೀಡಬೇಕು. ಹೆಚ್ಚಿನವರಿಗೆ ಅಲ್ಲಿ ಭ್ರಷ್ಟಾಚಾರವೇ ದೊಡ್ಡ ಸಮಸ್ಯೆಯಂತೆ ಎದ್ದು ಕಾಣುತ್ತದೆ. ಹಣ ಕೊಡದಿದ್ದರೆ ಕೆಲಸ ಆಗುತ್ತಾ? ಎನ್ನುವ ಪ್ರಶ್ನೆಗೆ ಯಾವಾಗ ಆಗುತ್ತೆ ಎನ್ನುವ ಉತ್ತರ ಯಾವಾಗ ಮೂಡಾದ ಪಡಸಾಲೆಯಿಂದ ಹೊರಗೆ ಬರುತ್ತದೋ ಆಗ ಮೂಡಾ ಅಧ್ಯಕ್ಷರು ಗೆದ್ದಂತೆ. ಅದು ಆಗಬೇಕಾದರೆ ಮೂಡಾ ಸ್ವಚ್ಚ ಮಾಡಲು ಯೋಚಿಸುವ ಮನಸ್ಸುಗಳಿಗೆ ಅಲ್ಲಿ ಅವಕಾಶ ಇರಬೇಕು. ಒಂದು ವೇಳೆ ಸಾರ್ವಜನಿಕರಿಗೆ ಭಾಗವಹಿಸುವ ಅವಕಾಶ ಇದ್ದರೆ “ಯಾರೋ ಒಬ್ಬ ಬ್ರೋಕರ್ ಕೆಲಸ ಮಾಡಿಸಲು 5 ಲಕ್ಷ ರೂಪಾಯಿ ತೆಗೆದುಕೊಂಡಿರುವ ಗುಸುಗುಸು ಮೂಡಾ ಆವರಣದಲ್ಲಿ ಕೇಳಿಬರುತ್ತಿದೆ” ಎನ್ನುವಂತಹ ಸತ್ಯಗಳು ಹೊರಗೆ ಬರುತ್ತಿದ್ದವು. ಜನ ಬಂದರೆ ಯಾವ ಸಿಬ್ಬಂದಿಯಿಂದ ತೊಂದರೆ ಆಗುತ್ತದೆ, ಯಾವ ಅಧಿಕಾರಿಯಿಂದ ಸಮಸ್ಯೆ ಆಗುತ್ತದೆ ಎನ್ನುವಂತಹ ವಿಷಯಗಳು ಹೊರಗೆ ಬರುತ್ತಿದ್ದವು. ಆಗ ಮೂಡಾದ ನೂತನ ಅಧ್ಯಕ್ಷರಿಗೆ ಮೂಡಾ ಕಗ್ಗಂಟನ್ನು ಸರಿ ಪಡಿಸಲು ಒಂದು ದಾರಿ ಸಿಗುತ್ತಿತ್ತು. ಈಗ ಅದಾಲತ್ ಕೇವಲ ನಾಮಕಾವಸ್ತೆ ಆದಂತಿದೆ. ಆರಾಮವಾಗಿ ಲೆಕ್ಕ ಮಾಡುವಷ್ಟು ಜನ ಮಾತ್ರ ಬಂದಿದ್ದರು. ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜನರಲ್ಲಿ ಸಹಜವಾಗಿ ನಿರೀಕ್ಷೆ ಜಾಸ್ತಿಯಾಗುತ್ತದೆ. ಸುಗಮ ಆಡಳಿತ, ಭ್ರಷ್ಟಾಚಾರರಹಿತ ವ್ಯವಸ್ಥೆ ಎಲ್ಲ ಭಾಷಣದಲ್ಲಿ ಹೇಳುವುದು ಸುಲಭ, ಆದರೆ ಈ ಮೂಡಾ ಎನ್ನುವುದು ಉತ್ತಮ ಆಡಳಿತ ಎನ್ನುವ ರಸ್ತೆಯಲ್ಲಿ ಹೊಂಡಗುಂಡಿ ಇದ್ದಂತೆ. ಇದನ್ನು ಸರಿ ಮಾಡದಿದ್ದರೆ ಆ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ಅದು ಯಾವಾಗಲೂ ಬಿಸಿತುಪ್ಪವೇ. ಮೊದಲ ಮೂಡಾ ಅದಾಲತ್ ಹೇಗೋ, ಏನೋ ಆಗಿ ಹೋಯಿತು. ಹೊಸ ಅಧ್ಯಕ್ಷರು ಉಮ್ಮೇದಿನಲ್ಲಿ ಕೆಲಸ ಶುರು ಮಾಡಿರಬಹುದು. ಆದರೆ ನಿಜವಾದ ಅದಾಲತ್ ಮಾಡಬೇಕಾದರೆ ಅವರು ಸಾರ್ವಜನಿಕರನ್ನು ಮುಕ್ತವಾಗಿ ಕರೆಯಬೇಕು. ಅವರಿಂದ ಮಾಹಿತಿ ಪಡೆಯಬೇಕು. ನಾಗರಿಕರ ಕುಂದುಕೊರತೆ ವಿಚಾರಿಸಬೇಕು. ಕೆಲವರು ತಮ್ಮ ಕೆಲಸ ಎಷ್ಟು ಸಮಯದಿಂದ ಆಗಿಲ್ಲ ಎನ್ನುವಂತಹ ಅಂಶ ಹೇಳಬಹುದು. ಅದನ್ನು ಯಾಕೆ ಅಧಿಕಾರಿಗಳು ತಡ ಮಾಡುತ್ತಿದ್ದಾರೆ ಎನ್ನುವುದನ್ನು ಕೂಡ ನೋಡಿ ಸರಿ ಮಾಡಿ ಬಿಟ್ಟರೆ ಅದರಿಂದ ಅಸಂಖ್ಯಾತ ಜನರಿಗೆ ಉಪಯೋಗವಾಗುತ್ತದೆ. ಆದಷ್ಟು ಶೀಘ್ರ ಮೂಡಾ ಅದಾಲತ್ ನಿಜವಾದ ಅರ್ಥದಲ್ಲಿ ಆಗಲಿ!
Leave A Reply