• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಯಡ್ಡಿ ಮತ್ತೊಮ್ಮೆ ದೆಹಲಿಗೆ, ನೀವು ಎನಿಸಿದ್ದೇ ಆಗುತ್ತಾ?

Tulunadu News Posted On May 10, 2021
0


0
Shares
  • Share On Facebook
  • Tweet It

ಕೊರೊನಾ ಅಬ್ಬರದ ನಡುವೆ ಮಾಧ್ಯಮಗಳಿಗೆ ಮತ್ತೊಂದು ವಿಷಯ ಸಿಕ್ಕಿದೆ. ಅದೇನೆಂದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರನ್ನು ಬದಲು ಮಾಡಲಾಗುತ್ತದೆ ಎನ್ನುವ ವಿಷಯ. ಇದು ವದಂತಿಯೂ ಆಗಿರಬಹುದು ಅಥವಾ ನಿಜವೂ ಆಗಿರಬಹುದು. ಆದರೆ ಅಧಿಕೃತವಾದ ಮಾಹಿತಿ ಬರುವ ತನಕ ಯಾವುದೇ ಊಹಾಪೋಹವನ್ನು ನಂಬಲು ಮಾತ್ರ ಸಾಧ್ಯವಿಲ್ಲ. ಯಾಕೆಂದರೆ ಯಡ್ಡಿಯವರನ್ನು ಬದಲಾಯಿಸಲಾಗುತ್ತದೆ ಎನ್ನುವುದು ಇವತ್ತು ನಿನ್ನೆ ಉದ್ಭವಾದ ವಿಷಯ ಅಲ್ಲ. ಯಡ್ಡಿಜಿಯನ್ನು ಪ್ರತಿ ಬಾರಿ ದೆಹಲಿಗೆ ಹೈಕಮಾಂಡ್ ಕರೆಸಿಕೊಂಡಾಗ ಬದಲಾಯಿಸಲು ಕರೆಸುತ್ತಿದ್ದಾರೆ ಎಂದು ಬೆಂಗಳೂರಿನ ವಿಧಾನಸಭಾದ ಕಂಬಗಳು ಅಂದುಕೊಳ್ಳುತ್ತವೆ. ಆದರೆ ಅಲ್ಲಿ ಯಡ್ಡಿ ಮೋದಿಯವರಿಗೆ ಕಾಲ್ ಮಾಡಿ ಅಮಿತಾ ಶಾರಿಗೆ ಹೇಳಿಸಿ ಏನಾದರೂ ಮಾಡಿ ವಿಕ್ಟರಿ ಚಿನ್ನೆಯನ್ನು ಪ್ರದರ್ಶಿಸುತ್ತಾ ಹೊರಗೆ ಬರುತ್ತಾರೆ. ಅಲ್ಲಿಗೆ ಅವರ ರಾಜೀನಾಮೆಯನ್ನು ನಿರೀಕ್ಷೆ ಮಾಡುತ್ತಾ ಕುಳಿತಿದ್ದವರ ಮುಖದಲ್ಲಿ ನಿರಾಶೆ. ಆದ್ದರಿಂದ ಈ ಬಾರಿಯೂ ಅಂತಹುದೇ ಆಗುತ್ತಾ ಎನ್ನುವ ಅನುಮಾನಗಳೊಂದಿಗೆ ಬುಧವಾರ ದೆಹಲಿಗೆ ತೆರಳಲಿರುವ ಯಡ್ಡಿಯವರಿಗೆ ಹ್ಯಾಪಿ ಜರ್ನಿ ಹೇಳಲು ಮಾತ್ರ ಕೆಲವರು ಮನಸ್ಸು ಮಾಡಿದಂತಿದೆ.

ಈ ನಡುವೆ ಯಡ್ಡಿ ಪುತ್ರ ವಿಜಯೇಂದ್ರ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ದೆಹಲಿಗೆ ಹೋಗಿ ಅಮಿತಾ ಶಾ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಇದು ಯಾಕೆ ಎನ್ನುವುದು ಈಗ ಇರುವ ಪ್ರಶ್ನೆ. ಬೊಮ್ಮಾಯಿ ಅಥವಾ ಅವರ ಒರಗೆಯ ಸಚಿವರು ಹೋಗಿ ಮಾತನಾಡಿ ಬಂದರೆ ಅದು ರಾಜ್ಯದ ಪರಿಸ್ಥಿತಿಯನ್ನು, ಕೊರೊನಾಗೆ ಸಂಬಂಧಪಟ್ಟ ಕಾರ್ಯಗಳ ಪ್ರಗತಿಯನ್ನು ತಿಳಿಸಲು ಹೋಗಿದ್ದರು ಎಂದು ಹೇಳಬಹುದು. ಆದರೆ ವಿಜಯೇಂದ್ರ ಯಾರು? ಅವರು ಸರಕಾರದ ಭಾಗವಲ್ಲ. ಹೋಗಲಿ, ರಾಜ್ಯದ ಪರಿಸ್ಥಿತಿಯನ್ನು ಸಂಘಟನಾತ್ಮಕವಾಗಿ ವಿವರಿಸಲು ಹೋಗಿದ್ರು ಎಂದು ಹೇಳಲು ಅವರು ರಾಜ್ಯಾಧ್ಯಕ್ಷರೂ ಅಲ್ಲ. ಇವರು ರಾಜ್ಯ ಉಪಾಧ್ಯಕ್ಷರು ಮಾತ್ರ. ಇನ್ನು ಇವರಂತಹ ಮೂರ್ನಾಕು ಉಪಾಧ್ಯಕ್ಷರು ಇದ್ದಾರೆ. ಹಾಗಿರುವಾಗ ಇವರನ್ನು ಕರೆದು ಸಮಾಲೋಚನೆ ಮಾಡುವುದು ಏನಿದೆ? ಹಾಗಿದ್ದ ಮೇಲೆ ವಾರದ ಅಂತರದಲ್ಲಿ ಮಗ ಮತ್ತು ತಂದೆ ದೆಹಲಿಗೆ ಹೋಗುತ್ತಾರೆ ಎಂದರೆ ಅದಕ್ಕೆ ಏನಾದರೂ ಪ್ರಬಲ ಕಾರಣಗಳಿರಬಹುದು.

ಈ ಬಾರಿ 2018 ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು ಸರಕಾರ ಬಂದ ನಂತರ ಒಂದು ವರ್ಷ ಯಡ್ಯೂರಪ್ಪವರಿಗೆ ಸಿಎಂ ಮಾಡಿ ನಂತರ ಬೇರೆಯವರಿಗೆ ನೀಡುವ ಐಡಿಯಾ ಉನ್ನತ ಮಟ್ಟದಲ್ಲಿ ಇತ್ತು ಎಂದು ಹೇಳಲಾಗುತ್ತಿತ್ತು. ಆದರೆ ಸರಕಾರ ಬಿಜೆಪಿಯದ್ದು ಬರಲಿಲ್ಲ. ಬಂದದ್ದು ಚೌಚೌ ಸರಕಾರ. ಒಂದು ವರ್ಷದ ಬಳಿಕ ಯಡ್ಡಿಜಿ ಏಕಾಂಗಿಯಾಗಿ ರಣಾಂಗಣದಲ್ಲಿ ಹೋರಾಡುತ್ತಾ ಬಿಜೆಪಿ ಸರಕಾರವನ್ನು ತಂದುಬಿಟ್ಟರು. ಈಗ ಬಿಜೆಪಿ ಸರಕಾರ ಎರಡು ವರ್ಷ ಆಗಿದೆ. ಸಾಮಾನ್ಯ ಪರಿಸ್ಥಿತಿ ಇದ್ದಿದ್ದರೆ ಯಡ್ಡಿ ಇನ್ನೆರಡು ವರ್ಷ ಆರಾಮವಾಗಿ ಸಿಎಂ ಆಗಿ ಸರಕಾರವನ್ನು ನಡೆಸಬಹುದಾಗಿತ್ತು. ಆದರೆ ಈಗ ಸ್ಥಿತಿ ಮಾಮೂಲಿಯಾಗಿಲ್ಲ. ಅಕ್ಷರಶ: ಜೈವಿಕ ಯುದ್ಧದ ಪರಿಸ್ಥಿತಿ ನಡೆಯುತ್ತಿದೆ. ವಿಧಾನಸಭಾ ಚುನಾವಣೆಗೆ ಸರಿಯಾಗಿ ಎರಡು ವರ್ಷ ಕೂಡ ಇಲ್ಲ. ಕೊರೊನಾ ಯಾವಾಗ ಮುಗಿಯುತ್ತೆ ಎಂದು ಯಾರಿಗೂ ಗೊತ್ತಿಲ್ಲ. ಇದೇ ಕಥೆ ಮುಂದುವರೆದರೆ ಚುನಾವಣೆಯ ಹೊಸ್ತಿಲಲ್ಲಿ ಯಡ್ಡಿ ಬಿಜೆಪಿಯನ್ನು ಕಾವೇರಿಯಲ್ಲಿ ಮುಳುಗಿಸಿ ಅಲ್ಲಿಯೇ ಕೈಕಾಲು ತೊಳೆದು ಶಿಕಾರಿಪುರಕ್ಕೆ ಹೋಗಿ ಪದ್ಮಾಸನ ಹಾಕಿ ಕುಳಿತರೆ ಬಿಜೆಪಿಯನ್ನು ದೇವರೇ ಕಾಪಾಡಬೇಕು.

ಎದುರಿಗೆ ಡಿಕೆಶಿ ಅಪ್ಪಟ ಬಬ್ರುವಾಹನನ ಗೆಟಪ್ಪಿನಲ್ಲಿ ನಿಂತಿದ್ದಾರೆ. ಸಿದ್ದು ಸುಯೋಧನನ ವೇಷದಲ್ಲಿ ನಿಂತಿದ್ದಾರೆ. ಮೊನ್ನೆಯಷ್ಟೇ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಬಿಜೆಪಿಯನ್ನು ನೀರಿನಲ್ಲಿ ಮುಳುಗಿಸಿ ಅರ್ಧ ಜೀವ ಬಾಯಿಗೆ ಬರುವಂತೆ ಮಾಡಿದ್ದಾರೆ. ಮಸ್ಕಿಯ ಫಲಿತಾಂಶ ಸುಮ್ಮನೆ ಬಂದಿಲ್ಲ. ಹೀಗಿರುವಾಗ ಯಡ್ಡಿ ತಮ್ಮ ಸಿಎಂ ಸ್ಥಾನ ಉಳಿದರೆ ಸಾಕು ಎಂದು ಮುಂದಿನ ಎರಡು ವರ್ಷಗಳ ತನಕ ವಿಪಕ್ಷದ ಮುಖಂಡರನ್ನು ಚೆನ್ನಾಗಿ ಇಟ್ಟುಕೊಳ್ಳುತ್ತಾ ನಡೆದರೆ ಅಂತಿಮ ಸ್ಲೋಗ್ ಓವರ್ ಬಂದಾಗ ಬಿಜೆಪಿಯನ್ನು ಉಳಿಸಲು ಪಕ್ಷದಲ್ಲಿ ಧೋನಿಯಂತವರು ರೆಡಿಯಾಗಬೇಕಲ್ಲ. ಅದಕ್ಕೆ ಈಗಲೇ ವೇದಿಕೆ ತಯಾರಾಗಲೇಬೇಕು. ಬೇರೆ ಮುಖಕ್ಕೆ ಅನಧಿಕೃತ ಪಟ್ಟಾಭಿಷೇಕ ಆಗಲೇಬೇಕು. ಮ್ಯಾಚ್ ಪ್ರಾಕ್ಟಿಸ್ ನಡೆಯಲೇಬೇಕು. ಯಾಕೆಂದರೆ ಯಾವುದೇ ರಾಜಕೀಯ ಪಕ್ಷಗಳಿಗೆ 20 ತಿಂಗಳು ದೊಡ್ಡ ಅವಧಿಯಲ್ಲ. ಹೀಗೆ ಕಣ್ಣು ಮುಚ್ಚಿ ತೆರೆಯುವುದರ ಒಳಗೆ ಚುನಾವಣೆ ಎದುರಿಗೆ ನಿಂತಿರುತ್ತದೆ. ಇನ್ನು ಡಿಕೆಶಿ ಚಾಣಾಕ್ಷ ರಾಜಕಾರಣಿ. ಈ ಸಲ ಗೆಲ್ಲಲೇಬೇಕು ಎಂದು ಸಿದ್ದು ಜೊತೆಗೆ ಫಿಪ್ಟಿ-ಫಿಪ್ಟಿ ಒಡಂಬಡಿಕೆ ಮಾಡಿ ಕಣಕ್ಕೆ ಇಳಿದರೆ ಕಾಂಗ್ರೆಸ್ಸನ್ನು ತಡೆಯುವುದು ಸುಲಭದ ಮಾತಲ್ಲ. ಯಾಕೆಂದರೆ ಯಡ್ಡಿಜಿಗೆ ಎಷ್ಟೇ ಜಾತಿ ಬೆಂಬಲ ಇದೆ ಎಂದುಕೊಂಡರೂ ಅದನ್ನೊಂದನ್ನೇ ನಂಬಿ ಕಣಕ್ಕೆ ಇಳಿಯುವುದು ತಪ್ಪಾಗುತ್ತದೆ. ಹಾಗಂತ ಯಡ್ಡಿಯವರನ್ನು ಸುಮ್ಮನೆ ಮೂಲೆಗುಂಪು ಕೂಡ ಮಾಡಬಾರದು. ಏಕೆಂದರೆ ಅವರು ಪಕ್ಷ ಬಿಟ್ಟು ಹೋಗಿ ಸ್ವತ: ಪಕ್ಷ ಕಟ್ಟಿ ಚುನಾವಣೆಗೆ ಹೋದಾಗ ಅಧಿಕಾರಕ್ಕೆ ಬರದಿದ್ದರೂ ಬಿಜೆಪಿಯನ್ನು ಹಲವು ಕಡೆ ಮಲಗಿಸಿದ್ದರು. ಅದರಿಂದ ಬಿಜೆಪಿ ಕೂಡ ಸಾಕಷ್ಟು ಅನುಭವಿಸಿದೆ. ಈ ಹೊತ್ತಿನಲ್ಲಿ ಪಕ್ಷಕ್ಕೆ ಯುವ ನಾಯಕತ್ವದ ಅಗತ್ಯ ಇದೆ. ಯುವ ಎಂದ ಕೂಡಲೇ ಅರೆಬೆಂದ ಜನಪ್ರತಿನಿಧಿಗಳಿಗೆ ಸಿಎಂ ಮಾಡಬಾರದು. ಸಕ್ಷಮವಾಗಿರುವ ಜನಪ್ರತಿನಿಧಿಯ ಕೈಗೆ ರಾಜಭಾರ ನೀಡಬೇಕು. ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಎದುರು ಕರ್ನಾಟಕದ ಬಗ್ಗೆ ಉದ್ಭವಿಸಿರುವ ಸವಾಲು ಚಿಕ್ಕದೇನಲ್ಲ. ಇದನ್ನು ಅಮಿತಾ ಶಾ ಹೇಗೆ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ಕರ್ನಾಟಕದ ‘ಸಂತೋಷ’ ನಿಂತಿದೆ!

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search