• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಉರ್ವಾ ಹೊಸ ಮಾರುಕಟ್ಟೆಗೆ ಅವಧಿ ಮೀರಿ ಮದುವೆಯಾದ ಸಂಭ್ರಮ!

Hanumantha Kamath Posted On July 21, 2022


  • Share On Facebook
  • Tweet It

ಅಣ್ಣನ ಹತ್ತಿರ ಜಾಗ ಇತ್ತು. ತಮ್ಮನ ಹತ್ತಿರ ಹಣ ಇತ್ತು. ತಮ್ಮ ಅಣ್ಣನ ಬಳಿ ಜಾಗ ತೆಗೆದುಕೊಂಡು ಹಣ ಹಾಕಿ ಕಟ್ಟಡ ಕಟ್ಟಿದ. ಆದರೆ ಆ ಕಟ್ಟಡದಿಂದ ಏನೂ ಬಿಡಿಗಾಸು ಹುಟ್ಟಲಿಲ್ಲ. ಈಗ ಮತ್ತೆ ತಂದೆಯ ಮಧ್ಯಸ್ಥಿಕೆಯಲ್ಲಿ ಕಟ್ಟಡವನ್ನು ಅಣ್ಣನಿಗೆ ಹಸ್ತಾಂತರಿಸಲಾಗಿದೆ. ತಮ್ಮ ಹಾಕಿದ ಹಣವನ್ನು ಹಣ ಹೇಗಾದರೂ ಹೊಂದಿಸಿ ನೀಡಬೇಕಿದೆ. ವಿಷಯ ಇಷ್ಟೇ. ಇಲ್ಲಿ ಅಣ್ಣನ ಸ್ಥಾನದಲ್ಲಿ ಮಂಗಳೂರು ಮಹಾನಗರ ಪಾಲಿಕೆಯನ್ನು ಕಲ್ಪಿಸಬಹುದು. ತಮ್ಮನಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ತಂದೆಯಾಗಿ ರಾಜ್ಯ ಸರಕಾರವನ್ನು ಊಹಿಸಬಹುದು. ಇವರೆಲ್ಲಾ ಒಂದುಗೂಡಿ ಮಂಗಳೂರಿನ ಉರ್ವಾ ಹೊಸ ಮಾರುಕಟ್ಟೆ ಕಟ್ಟಡಕ್ಕೆ ಕೊನೆಗೂ ಗತಿ ಕಾಣಿಸಿದ್ದಾರೆ. ಇರಲಿ, ಅಂತಿಮವಾಗಿ ಉರ್ವಾ ಮಾರುಕಟ್ಟೆಗೆ ಒಂದು ಕಳೆ ಬಂತಲ್ಲ, ಅಷ್ಟೇ ಸಮಾಧಾನ. ಆದರೆ ಒಂದು ಕಟ್ಟಡ ಇಲ್ಲಿಯ ತನಕ ಅನಾವಶ್ಯಕವಾಗಿ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳುತ್ತಾ, ರಾತ್ರಿಯಾದರೆ ಅನೈತಿಕ ಚಟುವಟಿಕೆಗಳಿಗೆ ಆಶ್ರಯದಾಣವಾಗುತ್ತಾ, ಕುಡುಕರಿಗೆ, ಗಾಂಜಾ ವ್ಯಸನಿಗಳಿಗೆ ಅಡ್ಡೆಯಾಗುತ್ತಾ, ಒಂದಿಷ್ಟು ವರ್ಷ ಹಾಗೆ ಬಿಟ್ಟರೆ ಭೂತಬಂಗ್ಲೆಯಾಗಲು ತಯಾರಾಗಿದ್ದ ಒಂದು ಕಟ್ಟಡಕ್ಕೆ ಮೋಕ್ಷ ಸಿಕ್ಕಿತ್ತಲ್ಲ ಎನ್ನುವುದು ಆಶಾದಾಯಕ ವಿಷಯ. ಆದರೆ ಈ ಒಟ್ಟು ಪ್ರಕ್ರಿಯೆಯಲ್ಲಿ ಆಗಿರುವ ಅಷ್ಟು ಗೊಂದಲಗಳು ಬೇರೆ ಸರಕಾರಿ ಕಟ್ಟಡಗಳ ವಿಷಯಗಳಲ್ಲಿ ಆಗಬಾರದು ಎಂದಾದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಕಲಿಯಬೇಕಾದ ವಿಷಯಗಳು ಸಾಕಷ್ಟಿವೆ.

ಮೊದಲನೇಯದಾಗಿ ನಮಗೆ ಆಗುವುದಿಲ್ಲ ಎಂದು ಪಾಲಿಕೆ ಆ ಜಾಗ ಮತ್ತು ಮಾರುಕಟ್ಟೆ ಕಟ್ಟಡ ಕಟ್ಟುವ ನಿರ್ಧಾರವನ್ನು ಕೈಬಿಟ್ಟಿದ್ದೇಕೆ? ಅದರ ಬಳಿಕ ಅದನ್ನು ಪಾಲಿಕೆಯಿಂದ ಮೂಡಾಕ್ಕೆ ಹಸ್ತಾಂತರಿಸಿದ್ದೇಕೆ? ಇದನ್ನು ಮಾಡಿದ್ದು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿದ್ದ ಪಾಲಿಕೆ. ಪಾಲಿಕೆ ಬಳಿ ಆ ಕಟ್ಟಡ ಕಟ್ಟಲು ಅಷ್ಟು ಫಂಡ್ ಇರಲಿಲ್ಲ ಎನ್ನುವುದೇ ನಿಜವಾದರೆ ಈಗ ಫಂಡ್ ಸಂಗ್ರಹಿಸಲು ಮಾಡಬೇಕಾದ ವ್ಯವಸ್ಥೆಯನ್ನು ಆಗಲೇ ಮಾಡಬಹುದಿತ್ತಲ್ಲ. ಆದರೆ ಈಗ ಪಾಲಿಕೆಯಲ್ಲಿ ಮತ್ತು ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ಸರಕಾರ ಇರುವುದರಿಂದ ನಮ್ಮ ಇಚ್ಚಾಶಕ್ತಿಯಿಂದ ನಾವು ಅದನ್ನು ಪಾಲಿಕೆಗೆ ತೆಗೆದುಕೊಳ್ಳುತ್ತಿದ್ದೇವೆ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಆದರೆ ವಿಷಯ ಇರುವುದು ಈ ಕೊಡುವುದು ಮತ್ತು ತೆಗೆದುಕೊಳ್ಳುವುದರ ಹಿಂದೆ ಒಬ್ಬ ಕಾರ್ಪೋರೇಟರ್ ಅವರ ಹಟ ಅಡಕವಾಗಿತ್ತು ಎನ್ನುವುದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಗೊತ್ತು. ಆರಂಭದಿಂದಲೂ ಕಾಂಗ್ರೆಸ್ ನಲ್ಲಿದ್ದ ಒಬ್ಬ ಮನಪಾ ಸದಸ್ಯರು “ಕೃಷ್ಣ”ನಂತೆ ಬಿಜೆಪಿಗೆ ಜಿಗಿದ ನಂತರ ಈ ಕಟ್ಟಡವನ್ನು ಮೂಡಾದಿಂದ ನಾವು ತೆಗೆದುಕೊಳ್ಳಲೇಬೇಕು ಎಂದು ಜಿದ್ದಿಗೆ ಬಿದ್ದಿದ್ದರು.

ಅದರಿಂದಾಗಿ ಮತ್ತೆ ಹಿಂದಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಶುರುವಾಯಿತು. ಹಾಗಾದರೆ ಮೂಡಾ ಆ ಕಟ್ಟಡವನ್ನು ಕಟ್ಟಿದ ನಂತರ ಅದರಲ್ಲಿ ವ್ಯಾಪಾರಿಗಳಿಗೆ ಯಾಕೆ ವ್ಯಾಪಾರಕ್ಕೆ ನೀಡುವ ಪ್ರಕ್ರಿಯೆಗೆ ಮುಂದಾಗಿರಲಿಲ್ಲ. ಮೊದಲನೇಯದಾಗಿ ಪಾಲಿಕೆಯ ಬಾಡಿಗೆಗೆ ಹೋಲಿಸಿದರೆ ಮೂಡಾದ ಬಾಡಿಗೆ ಜಾಸ್ತಿ. ಇನ್ನು ಹೊಸ ಕಟ್ಟಡದಲ್ಲಿ ಹಳೆ ಜಾಗದ ವ್ಯಾಪಾರಿಗಳು ಹೋಗಲು ಒಪ್ಪಲಿಲ್ಲ. ಅದು ಇನ್ನು ಮುಂದಾದರೂ ಅಷ್ಟು ಸುಲಭದಲ್ಲಿ ಪರಿಹಾರ ಆಗುತ್ತಾ ಎನ್ನುವುದನ್ನು ಕಾಲವೇ ಹೇಳಬೇಕು. ಯಾಕೆಂದರೆ ಸರಕಾರದ ನಿಯಮಗಳ ಪ್ರಕಾರ ಮಾರುಕಟ್ಟೆಯಲ್ಲಿ ಯಾವುದಾದರೂ ಅಂಗಡಿಯಲ್ಲಿ ಬಾಡಿಗೆಗೆ ಇರುವ ವ್ಯಕ್ತಿ ಹನ್ನೆರಡು ವರ್ಷಗಳಿಂದ ಬಾಡಿಗೆಗೆ ಇದ್ದರೆ ನಂತರ ಅದನ್ನು ಏಲಂ ಮಾಡಲೇಬೇಕಾಗುತ್ತದೆ. ಆಗ ಏಲಂನಲ್ಲಿ ತೆಗೆದುಕೊಂಡ ವ್ಯಾಪಾರಿಗೆ ಅದು ಕೊಡಲಾಗುತ್ತದೆ. ಆದರೆ ಕೆಲವೊಮ್ಮೆ ರಾಜಕೀಯ ಕಾರಣಗಳಿಂದ ಒಮ್ಮೆ ತೆಗೆದುಕೊಂಡವರೇ ವಂಶಪಾರಂಪರೆಯಂತೆ ಮುಂದುವರೆಸಿಕೊಂಡು ಹೋಗುತ್ತಾರೆ. ಆದರೆ ನಿಯಮಗಳಿಂದ ತೊಂದರೆಯಾದಾಗ ರಾಜಕಾರಣಿಗಳ ಮೊರೆ ಹೋಗಿ ಮತ್ತೆ ತಾವೇ ಮುಂದುವರೆಯುತ್ತಾರೆ.

ಈಗ ಉರ್ವಾ ಮಾರುಕಟ್ಟೆಯ ಹೊಸ ಕಟ್ಟಡವನ್ನು ಏಕಾಏಕಿ ವ್ಯಾಪಾರಿಗಳಿಗೆ ಕೊಡಲು ಆಗುವುದು ಡೌಟು. ಯಾಕೆಂದರೆ ಯಾವುದೋ ಬುದ್ಧಿವಂತ ಇಂಜಿನಿಯರ್ ಅದರ ವಿನ್ಯಾಸ ಹೇಗೆ ಮಾಡಿದ್ದಾರೆ ಎಂದರೆ ಅದು ಮಾರುಕಟ್ಟೆ ಕಡಿಮೆ, ಮಿನಿ ಮಾಲ್ ಜಾಸ್ತಿ ಎನ್ನುವ ರೀತಿಯಲ್ಲಿ ಕಾಣುತ್ತದೆ. ಆದ್ದರಿಂದ ಅದನ್ನು ಕೊಡುವ ಮೊದಲು ಒಂದಿಷ್ಟು ಬದಲಾವಣೆಗಳನ್ನು ಮಾಡುವ ಅನಿವಾರ್ಯತೆ ಪಾಲಿಕೆಗೆ ಇದೆ. ಕಟ್ಟಡದ ಒಳಗೆ ಆಫೀಸುಗಳನ್ನಾಗಿ ಮಾಡುವ ವ್ಯವಸ್ಥೆ ಇದೆ. ಅದಕ್ಕೆ ಒಂದು ಬಾಡಿಗೆ ದರ ನಿಗದಿಗೊಳಿಸಿ ಖಾಸಗಿಯವರಿಗೆ ಆಫೀಸುಗಳನ್ನಾಗಿ ಮಾಡಲು ಕೊಡಬಹುದು. ಹೇಗೂ ನಗರದ ಮಧ್ಯದಲ್ಲಿ ರಸ್ತೆಯ ಬದಿಯಲ್ಲಿಯೇ ಇರುವ ಕಟ್ಟಡವಾಗಿರುವುದರಿಂದ ಸ್ವಲ್ಪ ಬಾಡಿಗೆ ಹೆಚ್ಚಾದರೂ ಉದ್ಯಮಿಗಳು ಬರಬಹುದು. ಒಂದು ವೇಳೆ ನೀವು ಸುತ್ತೋಲೆ ಹೊರಡಿಸಿ ಮೂರು ತಿಂಗಳ ತನಕ ಯಾವುದೇ ಉದ್ಯಮಿಗಳು ಆಫೀಸ್ ತೆರೆಯಲು ಬರದೇ ಇದ್ದಲ್ಲಿ ಮಾಡಬಹುದಾದ ಅಂತಿಮ ಉಪಾಯ ಏನೆಂದರೆ ಸರಕಾರಿ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸುವುದು. ಇವತ್ತಿಗೂ ಸರಕಾರದ ವಿವಿಧ ಇಲಾಖೆಯ ಎಷ್ಟೋ ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ದುಬಾರಿ ಬಾಡಿಗೆಯನ್ನು ಕೊಟ್ಟು ಕಾರ್ಯ ನಿರ್ವಹಿಸುತ್ತಿವೆ. ಅವುಗಳನ್ನು ಪಾಲಿಕೆಯದ್ದೇ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಆ ಬಾಡಿಗೆಯನ್ನು ಪಾಲಿಕೆ ಸ್ವೀಕರಿಸಬಹುದು. ಇದರಿಂದ ಪಾಲಿಕೆಗೂ ಆದಾಯ ಮತ್ತೊಂದೆಡೆ ಖಾಸಗಿಯವರಿಗೆ ದುಬಾರಿ ಬಾಡಿಗೆ ಕೊಡುವುದು ಕೂಡ ಸರಕಾರದ ಬೊಕ್ಕಸಕ್ಕೆ ಬೀಳುವ ಹೊರೆ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಹೋದ ಚುನಾವಣೆಯಲ್ಲಿ ಮೈಲೇಜ್ ದೊರಕಿಸಿಕೊಳ್ಳಲು ಆಗಿನ ಶಾಸಕರಿಗೆ ಲಾಭ ಆಗುವಂತೆ ಅಂದಿನ ಉಸ್ತುವಾರಿ ಸಚಿವರು ಗಡಿಬಿಡಿಯಲ್ಲಿ ಲೋಕಾರ್ಪಣೆ ಮಾಡಿದ್ದರು. ಈಗ ಮುಂದಿನ ಚುನಾವಣೆಗೆ ಬೆರಳೆಣಿಕೆಯ ತಿಂಗಳು ಇರುವಾಗ ಪಾಲಿಕೆಗೆ ಈ ಕಟ್ಟಡ ಒಲಿಯುತ್ತಿದೆ. ಇದರಿಂದ ಯಾರೆಲ್ಲ ಬೆನ್ನು ತಟ್ಟಿಕೊಳ್ಳುತ್ತಿದ್ದಾರೋ ಅವರಿಗೆ ದೋಣಿ ಇನ್ನೂ ದಡ ಸೇರಿಲ್ಲ ಎನ್ನುವುದು ನೆನಪಿದ್ದರೆ ಸಾಕು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search