ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
ಭಾರತೀಯ ಜನತಾ ಪಾರ್ಟಿಯ ಶಾಸಕ ಮಾಡಾಳು ವಿರುಪಾಕ್ಷಪ್ಪನವರ ಮಗನ ಮೇಲೆ ಲೋಕಾಯುಕ್ತ ದಾಳಿ, ಎಂಟು ಕೋಟಿ ರೂ ಮಿಕ್ಕಿ ಸಿಕ್ಕಿದ ನಗದು, ಬಂಧನ, ಬಿಡುಗಡೆ, ಬೇಲ್, ಲೋಕಾಯುಕ್ತ ತನಿಖೆ, ಮೆರವಣಿಗೆಯ ಮೂಲಕ ಅದ್ದೂರಿ ಸ್ವಾಗತ ಹೀಗೆ ಯಾವುದನ್ನು ಕೂಡ ನಾವು ಒಪ್ಪಲು ಸಾಧ್ಯವೇ ಇಲ್ಲ. ಅದನ್ನು ಯಾರಾದರೂ ಸಮರ್ಥಿಸಿದರೆ ಅವರು ಮಾಡಾಳು ಅವರಿಗಿಂತ ದೊಡ್ಡ ಭ್ರಷ್ಟರು ಎನ್ನುವುದರಲ್ಲಿ ಯಾವ ಸಂಶಯ ಕೂಡ ಇಲ್ಲ. ಅವರು ತಪ್ಪು ಮಾಡಿದ್ದರೆ ತನಿಖೆ ನೂರಕ್ಕೆ ನೂರರಷ್ಟು ನಡೆದು ಭ್ರಷ್ಟಾಚಾರ ಸಾಬೀತು ಆದ್ದಲ್ಲಿ ಸೂಕ್ತವಾದ ಶಿಕ್ಷೆ ಆಗಲೇಬೇಕು. ಕಾಂಗ್ರೆಸ್ಸಿಗರು ಒಂದು ವಿಪಕ್ಷವಾಗಿ ಮಾಡಾಳು ವಿರುದ್ಧ ಪ್ರತಿಭಟನೆ ಮಾಡಲೇಬೇಕು. ಮಾಡುತ್ತಿದ್ದಾರೆ. ಆದರೆ ಪ್ರತಿಭಟನೆ ಮಾಡುತ್ತಿರುವವರ ಮುಖವನ್ನಾದರೂ ಒಮ್ಮೆ ನೋಡಿ. ಅದೇ ಡಿಕೆ ಶಿವಕುಮಾರ್, ಸಿದ್ಧರಾಮಯ್ಯ ಇತ್ಯಾದಿ.
ಡಿಕೆಶಿ ಬಿಡಿ, ಅವರ ಮೇಲಿರುವ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಒಂದಿಷ್ಟು ದಿನ ಅವರು ದೆಹಲಿಯ ತಿಹಾರ್ ಜೈಲಿನಲ್ಲಿ ಕೂಡ ಇದ್ದರು. ಅವರು ಅದನ್ನು ರಾಜಕೀಯ ದ್ವೇಷಕ್ಕೆ ಕೇಂದ್ರದ ಬಿಜೆಪಿಯವರು ಮಾಡುತ್ತಿರುವ ಕೃತ್ಯ ಎಂದು ಹೇಳುತ್ತಿದ್ದಾರೆ. ಇರಲಿ, ಅದು ಜನರಿಗೆ ಗೊತ್ತಿದೆ. ಎಲ್ಲಿದ್ದವರು ಈಗ ಏನಾಗಿದ್ದಾರೆ ಎಂದು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಡಿಕೆಶಿಯ ಬ್ರಹ್ಮಾಂಡ ಭ್ರಷ್ಟಾಚಾರದ ಎದುರು ಈ ವಿಷಯದಲ್ಲಿ ಪಕ್ಕಾ ಸೋಬಗನಂತೆ ಕಾಣಿಸುವ ಸಿದ್ಧಣ್ಣ ಕೂಡ ಯಾವ ವಿಷಯದಲ್ಲಿಯೂ ಹಿಂದೆ ಬಿದ್ದಿಲ್ಲ ಎನ್ನುವುದಕ್ಕೆ ಅವರು ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡ ಕ್ರಮಗಳೇ ಸಾಕ್ಷಿ. ಈಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿರುವ ಸಿದ್ದು ವಿರುದ್ಧ 2014 ರ ಏಪ್ರಿಲ್ ನಿಂದ 2018 ರ ಮಾರ್ಚ್ 31 ವರೆಗೆ 61 ಪ್ರಕರಣಗಳು ದಾಖಲಾಗಿದ್ದು, 50 ಪ್ರಕರಣಗಳ ವಿಚಾರಣೆಯೇ ನಡೆದಿಲ್ಲ. ಸಿಎಂ ಆಗಿ ರಾಜ್ಯವನ್ನು 5 ವರ್ಷ ಆಳಿದ ರಾಜಕಾರಣಿಯೊಬ್ಬರ ದಾಖಲಾಗಿರುವ ಅತೀ ಹೆಚ್ಚು ಪ್ರಕರಣ ಇದಾಗಿತ್ತು. ಯಾವಾಗ ಲೋಕಾಯುಕ್ತದ ಪ್ರಕರಣಗಳು ತಮ್ಮ ಕುತ್ತಿಗೆಗೆ ಬರುತ್ತದೆ ಎಂದು ಸಿದ್ದುಗೆ ಅನಿಸಿತೋ ಆಗ ಆತಂಕ ಸಿದ್ದು ಅವರನ್ನು ಕಾಡಲು ಶುರುವಾಗಿತ್ತು. ಅವರು ಲೋಕಾಯುಕ್ತವನ್ನು ದುರ್ಬಲಗೊಳಿಸಿ ಭ್ರಷ್ಟಾಚಾರ ವಿರೋಧಿ ನಿಗ್ರಹ ದಳವನ್ನು ಸ್ಥಾಪಿಸಿದರು. ಎಸಿಬಿ ಇವರೇ ರಚಿಸಿದ ತನಿಖಾ ಸಂಸ್ಥೆಯಾಗಿದ್ದ ಕಾರಣ ಇವರು ಹೇಳಿದಂತೆ ನಡೆಯುತ್ತಿತ್ತು. ಆದ್ದರಿಂದ ಕೇಸುಗಳು ಫೈಲಿನಲ್ಲಿಯೇ ಉಳಿದುಕೊಂಡವು. ಸಿದ್ದು ವಿರುದ್ಧ ಯಾವುದೇ ತನಿಖೆ ದಡ ಸೇರಲೇ ಇಲ್ಲ. ಯಾಕೆಂದರೆ ಸಿದ್ದು ಲೋಕಾಯುಕ್ತವನ್ನು ಹಲ್ಲಿಲ್ಲದ ಹಾವಾಗಿ ಮಾಡಿದ್ದರು. ಎಸಿಬಿ ಹೆಸರಿಗೆ ಮಾತ್ರ ಇತ್ತು. ರಾಜಕಾರಣದಲ್ಲಿ ಸಿಕ್ಕಿಬೀಳುವ ತನಕ ಎಲ್ಲರೂ ಸೋಬಗರೇ ಎಂಬ ಮಾತಿದೆ. ಆರೋಪಗಳು, ದೂರುಗಳು, ವಿಚಾರಣೆಗಳು, ಬೇಲ್ ಇದೆಲ್ಲ ಇಲ್ಲದಿದ್ದರೆ ಅವರೊಂದು ರಾಜಕಾರಣಿಯಾ ಎನ್ನುವ ಮಾತಿದೆ. ಎಲ್ಲಾ ಪಕ್ಷಗಳಿಗೂ ಇದು ಅನ್ವಯಿಸುತ್ತದೆ. ಆದರೆ ಸಿದ್ದು ತಮ್ಮ ಅಧಿಕಾರ ಬಳಸಿ ಲೋಕಾಯುಕ್ತ ಎಂಬ ಸಂಸ್ಥೆಯ ಸಮಾಧಿ ಮೇಲೆ ರಬ್ಬರ್ ಹಾವು ಎಸಿಬಿಯ ಪಟ್ಟಾಭಿಷೇಕ ಮಾಡಿದ್ದರು.
ಹೀಗಿರುವಾಗಲೇ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಸಿಬಿಯನ್ನು ಬರ್ಖಾಸ್ತುಗೊಳಿಸಿ ಲೋಕಾಯುಕ್ತಕ್ಕೆ ಸಂಪೂರ್ಣ ಶಕ್ತಿಯನ್ನು ಕೊಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಭರವಸೆಯನ್ನು ಬಿಜೆಪಿ ಮುಖಂಡರು ನೀಡಿದ್ದರು. ಅದರಂತೆ ಬಿಜೆಪಿ ನಡೆದುಕೊಂಡಿದೆ. ಈಗ ಎಸಿಬಿಯಲ್ಲಿರುವ ಕೇಸುಗಳೆಲ್ಲ ಮತ್ತೆ ಲೋಕಾಯುಕ್ತಕ್ಕೆ ಬರಬೇಕು. ಅದರೊಂದಿಗೆ ಲೋಕಾಯುಕ್ತ ತನ್ನ ಹಿಂದಿನ ಪ್ರಕರಣಗಳನ್ನು ರೀ ಒಪನ್ ಮಾಡಬೇಕು. ಇನ್ನು ಲೋಕಾಯುಕ್ತಕ್ಕೂ ಫ್ರೀ ಹ್ಯಾಂಡ್ ನೀಡಿ ಬಲಪಡಿಸಬೇಕಾಗಿದೆ.
ಅದೇಗೆ ಎಂದರೆ ಲೋಕಾಯುಕ್ತ ಒಂದು ಪ್ರಕರಣದಲ್ಲಿ ಒಬ್ಬ ಭ್ರಷ್ಟ ಅಧಿಕಾರಿ ಅಥವಾ ರಾಜಕಾರಣಿಯ ವಿರುದ್ಧ ತನಿಖೆ ಮಾಡಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಆರೋಪಿ ತಪ್ಪಿತಸ್ಥ ಎಂದು ಸಾಬೀತು ಆದರೆ ಆ ಅಧಿಕಾರಿ ಅಥವಾ ರಾಜಕಾರಣಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಧಿಕಾರಿಯಾದರೆ ಉದ್ಯೋಗದಲ್ಲಿ ಹಿಂಬಡ್ತಿ ನೀಡಬಹುದು. ಪೆನ್ಷಶ್ ತಡೆಗಟ್ಟಬಹುದು. ಉನ್ನತಿ ಪದವಿಯನ್ನು ನಿರಾಕರಿಸಬಹುದು, ಆಸ್ತಿ ಜಪ್ತಿ ಮಾಡಬಹುದು. ಕೆಲಸದಿಂದ ತೆಗೆದುಹಾಕಲೂಬಹುದು. ರಾಜಕಾರಣಿ ಹಾಲಿ ಶಾಸಕ, ಸಚಿವರಾದರೆ ಅವರ ಸ್ಥಾನದಿಂದ ವಜಾಗೊಳಿಸುವ ಅಧಿಕಾರ ಕೂಡ ನೀಡಬೇಕು. ಸದ್ಯ ಲೋಕಾಯುಕ್ತಕ್ಕೆ ಆ ಅಧಿಕಾರ ಇಲ್ಲ. ಅವರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿರಿ ಎಂದು ಸರಕಾರಕ್ಕೆ ಶಿಫಾರಸ್ಸು ಮಾಡಬಹುದೇ ವಿನ: ಬೇರೆನೂ ಮಾಡುವಂತಿಲ್ಲ. ಇನ್ನು ಸರಕಾರಗಳು ನಮಗೆ ಗೊತ್ತೆ ಇದೆ. ಅದು ಯಾವುದೇ ಪಕ್ಷದ ಸರಕಾರ ಇರಲಿ, ಒಳಗೊಳಗೆ ಆ ಅಧಿಕಾರಿಗೆ ಎಲ್ಲಿಯಾದರೂ ಒಂದು ಪೋಸ್ಟ್ ಕೊಟ್ಟು ತನ್ನ ಪಾಲಿನದ್ದನ್ನು ತೆಗೆದುಕೊಂಡು ಮುಂದಕ್ಕೆ ಹೋಗಿರುತ್ತದೆ. ವಿಧಾನಸೌಧದ ಕಾರಿಡಾರ್ ಗಳಲ್ಲಿ ಅಂತಹ ಕೆಲಸಗಳಿಗೆ ಪವರ್ ಬ್ರೋಕರ್ ಗಳೇ ಇರುತ್ತಾರೆ. ಆದ್ದರಿಂದ ಲೋಕಾಯುಕ್ತ ಪೊಲೀಸರು ಎಷ್ಟೇ ಕಷ್ಟಪಟ್ಟು ಭ್ರಷ್ಟರನ್ನು ಹಿಡಿದರೂ ಆ ಪ್ರಯತ್ನಗಳು ಹಲವು ಬಾರಿ ಕೆರೆಯಲ್ಲಿ ಹುಣಸೇ ಹಣ್ಣು ತೊಳೆದ ಹಾಗೆ ಆಗುತ್ತದೆ.ಒಂದು ವೇಳೆ ಲೋಕಾಯುಕ್ತ ತನ್ನ ವಿರುದ್ಧ ತೆಗೆದುಕೊಂಡ ಕ್ರಮ ಸರಿಯಿಲ್ಲ ಎಂದು ಆರೋಪಿಗೆ ಅನಿಸಿದರೆ ಅವರು ಅದನ್ನು ಹೈಕೋರ್ಟಿನಲ್ಲಿ ದಾವೆ ಹೂಡಿ ಹೋರಾಡಲಿ. ಅಲಿ ಏನಾಗುತ್ತದೋ ನೋಡೋಣ. ಆದರೆ ಲೋಕಾಯುಕ್ತ ಮಾತ್ರ ಬಲಿಷ್ಟವಾದಂತಾಗುತ್ತದೆ.!!
Leave A Reply