ಬಿಜೆಪಿಯಿಂದ 6 ವರ್ಷಗಳಿಗೆ ಉಚ್ಚಾಟನೆಗೊಂಡಿರುವ ಯತ್ನಾಳ್ ಮುಂದಿದೆ ಈ 10 ದಾರಿಗಳು!

ಕೊನೆಗೂ ಭಾರತೀಯ ಜನತಾ ಪಾರ್ಟಿಯ ಹೈಕಮಾಂಡ್ ಖಡಕ್ ನಿರ್ಧಾರ ಕೈಗೊಂಡಿದೆ. ಉತ್ತರ ಕರ್ನಾಟಕದ ಪ್ರಭಾವಿ ನಾಯಕ, ಲಿಂಗಾಯತ ಸಮುದಾಯದ ವರ್ಚಸ್ವಿ ಮುಖಂಡ, ಹಿಂದೂ ಹುಲಿ ಎಂದೇ ಬಿರುದು ಹೊಂದಿದ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಮಟ್ಟಿಗೆ ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿ ಕೆಲವು ದಿನಗಳ ಹಿಂದೆ ನೋಟಿಸು ನೀಡಿ ಉತ್ತರಿಸಲು ಯತ್ನಾಳ್ ಅವರಿಗೆ ಸೂಚಿಸಿತ್ತು. ಅದರ ನಂತರವೂ ಯತ್ನಾಳ್ ಅವರು ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪನವರ ವಿರುದ್ಧ ಟೀಕೆಗಳನ್ನು ಮಾಡುತ್ತಾ ಬರುತ್ತಿದ್ದರು. ವಿಜಯೇಂದ್ರ ಕೂಡ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಮ್ಮ ತಂದೆಯವರ ಮೂಲಕ ಮತ್ತು ಸ್ವತ: ದೆಹಲಿಗೆ ತೆರಳಿ ದೂರು ನೀಡುತ್ತಾ ಬರುತ್ತಿದ್ದರು. ಆದರೆ ಬಿಜೆಪಿ ಉನ್ನತ ಮುಖಂಡರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿಯ ಐವರು ನಾಯಕರಿಗೆ ಪಕ್ಷ ನೋಟಿಸು ನೀಡಿ ಉತ್ತರಿಸಲು ಸೂಚನೆ ನೀಡಿದೆ. ಅದರಲ್ಲಿ ಬಿಜೆಪಿಯಿಂದ ಎರಡೂ ಕಾಲು ಹೊರಗೆ ಇಟ್ಟಿರುವ ಸೋಮಶೇಖರ್ ಮತ್ತು ಹೆಬ್ಬಾರ್ ಅವರೂ ಸೇರಿದ್ದಾರೆ. ಇನ್ನುಳಿದಂತೆ ಯತ್ನಾಳ್ ಬಣದ ಬಿ.ಪಿ.ಹರೀಶ್, ಬಿವೈವಿ ಬಣದ ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೂಡ ಸೇರಿದ್ದಾರೆ. ಈ ಐವರಿಗೆ ನೋಟಿಸು ಬರುವಾಗ ಯತ್ನಾಳ್ ಅವರನ್ನು ಮುಟ್ಟುವ ಧೈರ್ಯ ಪಕ್ಷ ಮಾಡುವುದಿಲ್ವಾ ಎನ್ನುವ ಅನುಮಾನ ಪಕ್ಷದ ಒಳಗೆ ಮತ್ತು ಹೊರಗೆ ಮೂಡಿತ್ತು. ಇದಕ್ಕೆಲ್ಲಾ ಉತ್ತರ ಎನ್ನುವಂತೆ ರಾಷ್ಟ್ರೀಯ ಶಿಸ್ತು ಸಮಿತಿ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಆರು ವರ್ಷಗಳ ತನಕ ಉಚ್ಚಾಟನೆ ಮಾಡಿದೆ. ಇದರಿಂದ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಯತ್ನಾಳ್ ಅವರಿಗೆ ಈ ಉಚ್ಚಾಟನೆ ಇದೇ ಮೊದಲಲ್ಲ. 2015 ರಲ್ಲಿ ಕೂಡ ಅವರು ಉಚ್ಚಾಟಿಸಲ್ಪಟ್ಟಿದ್ದರು.
2009 ರಲ್ಲಿ ಇವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಕಾರಣಕ್ಕೆ ಇವರು ಮರುವರ್ಷ ಜಾತ್ಯಾತೀತ ಜನತಾ ದಳವನ್ನು ಸೇರಿ, 2013 ರಲ್ಲಿ ಆ ಪಕ್ಷದಿಂದ ಸ್ಪರ್ಧಿಸಿದರೂ ಗೆಲುವನ್ನು ಕಾಣಿರಲಿಲ್ಲ. ಅದರ ನಂತರ ಜೆಡಿಎಸ್ ನಲ್ಲಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಿಲ್ಲ ಎನ್ನುವ ಕಾರಣಕ್ಕೆ ಆ ಪಕ್ಷವನ್ನು ಬಿಟ್ಟು ಬಿಜೆಪಿಯನ್ನು ಮತ್ತೆ ಸೇರಿಕೊಂಡರು. ಆದರೆ 2015 ರಲ್ಲಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆಗೊಳಗಾಗಿದ್ದರು. ಅದಕ್ಕೆ ಕಾರಣ ಪಕ್ಷ ಟಿಕೆಟ್ ನೀಡಿಲ್ಲ ಎಂದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. 2018 ರಲ್ಲಿ ಪಕ್ಷ ಅಮಾನತನ್ನು ಹಿಂದಕ್ಕೆ ಪಡೆದು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ವಿಧಾನಪರಿಷತ್ ಗೆ ನೇಮಕವನ್ನು ಮಾಡಲಾಗಿತ್ತು. ಅಂತಿಮವಾಗಿ ಇವರ ಮತ್ತು ಯಡಿಯೂರಪ್ಪನವರ ಕುಟುಂಬದ ನಡುವಿನ ಸಂಘರ್ಷ ತಾರಕಕ್ಕೆ ಏರಿ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ ಎಂದು ಪಕ್ಷದ ಉನ್ನತ ನಾಯಕರು ನಿರ್ಧಾರಕ್ಕೆ ಬಂದಿರುವುದರಿಂದ ಯತ್ನಾಳ್ ಅವರನ್ನು ಪಕ್ಷದಿಂದ ಆರು ತಿಂಗಳ ಕಾಲ ಉಚ್ಚಾಟಿಸಲಾಗಿದೆ.
ಅವರನ್ನು ಉಚ್ಚಾಟಿಸಿರುವುದರಿಂದ ಅವರ ಶಾಸಕತ್ವ ಹೋಗುವುದಿಲ್ಲ. ಆದರೆ ಯತ್ನಾಳ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೋ ಅಥವಾ ಹೀಗೆ ಮುಂದುವರೆಯುತ್ತಾರೋ, ರಾಜೀನಾಮೆ ಕೊಟ್ಟು ಸ್ವತಂತ್ರವಾಗಿ ಸ್ಪರ್ಧಿಸುತ್ತಾರೋ ಎನ್ನುವುದು ಕಾದು ನೋಡಬೇಕು.
ಅವರ ಮುಂದೆ ಇರುವ ಆಯ್ಕೆಗಳು ಹೀಗೆ ಇವೆ. ಮೊದಲನೇಯದಾಗಿ ತಮ್ಮ ಟೀಕೆಗಳನ್ನು ಇನ್ನಷ್ಟು ಮೊನಚುಗೊಳಿಸುವುದು. 2) ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು. 3) ಸ್ವತಂತ್ರವಾಗಿ ಸ್ಪರ್ಧಿಸುವುದು. 4) ಜೆಡಿಎಸ್ ಮೈತ್ರಿ ಬಿಜೆಪಿಯೊಂದಿಗೆ ಇರುವುದರಿಂದ ಅಲ್ಲಿ ಹೋಗುವ ಸಾಧ್ಯತೆಯೂ ಇಲ್ಲ, ಅವರು ಕರೆಸಿಕೊಳ್ಳುವ ಚಾನ್ಸ್ ಕೂಡ ಇಲ್ಲ. ಅದ್ದರಿಂದ ತಟಸ್ಥರಾಗಿ ಮುಂದುವರೆಯುವುದು 6) ಕಾಂಗ್ರೆಸ್ಸಿಗೆ ಸೇರುವುದು. ಆದರೆ ಹಿಂದೂ ಹುಲಿ ಎಂಬ ಪಟ್ಟ ಹೋಗುವುದರಿಂದ ಆ ಆಯ್ಕೆ ಅವರು ಪರಿಗಣಿಸುವುದಿಲ್ಲ. 7) ಬೇರೆಯದ್ದೇ ಪ್ರಾದೇಶಿಕ ಪಕ್ಷ ಕಟ್ಟುವುದು. 8) ತಮ್ಮ ಸಮುದಾಯದ ಸ್ವಾಮೀಜಿಯವರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ ಬಿಜೆಪಿ ನಾಯಕರಿಗೆ ಸಂದೇಶ ಕೊಡುವುದು. 9) ತಮ್ಮ ಬಣದ ಶಾಸಕರಿಗೂ ರಾಜೀನಾಮೆ ಕೊಡಿಸಿ ಪ್ರಾದೇಶಿಕ ಪಕ್ಷ ಕಟ್ಟುವ ಚಿಂತನೆ ಮಾಡುವುದು. 10) ರಾಷ್ಟ್ರೀಯ ನಾಯಕರ ಮನವೊಲಿಸಿ ಕೆಲವು ತಿಂಗಳ ಬಳಿಕ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರುವುದು.
ಹೀಗೆ ಹತ್ತು ಆಯ್ಕೆಗಳಿವೆ. ಅದರಲ್ಲಿ ಯಾವ ಆಯ್ಕೆಯನ್ನು ಅವರು ಪರಿಗಣಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
Leave A Reply