ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!

1893 ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ಬಾಲ ಗಂಗಾಧರ ತಿಲಕರಿಂದ ಪ್ರಾರಂಭವಾದ ಸಾರ್ವಜನಿಕ ಗಣೇಶೋತ್ಸವ ನಂತರ ಮುಂಬೈ ಹಾಗೂ ಪುಣೆಯಲ್ಲಿ ದೊಡ್ಡ ರೀತಿಯಲ್ಲಿ ಆಚರಣೆಯಲ್ಲಿ ಬಂತು. ಈ ಬಾರಿ ಮಹಾರಾಷ್ಟ್ರದ ರಾಜ್ಯ ಭಾರತೀಯ ಜನತಾ ಪಾರ್ಟಿ ಹಾಗೂ ಶಿವಸೇನೆ, ಎನ್ ಸಿಪಿ ಮೈತ್ರಿ ಸರಕಾರ ಗಣೇಶೋತ್ಸವವನ್ನು ರಾಜ್ಯದ ಹಬ್ಬವನ್ನಾಗಿ ಆಚರಿಸಲಾಗುವುದು ಎಂದು ಘೋಷಣೆ ಮಾಡಿದೆ. “ಇದು ರಾಜ್ಯದ ಸಂಸ್ಕೃತಿ, ಇಮೇಜ್ ಹಾಗೂ ಅವಕಾಶಗಳಿಗೆ ಹೊಸ ದಾರಿದೀಪವಾಗಲಿದೆ. ಇದು ಮಹಾರಾಷ್ಟ್ರದ ಚರಿಷ್ಮಾವನ್ನು ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೆ ಪರಿಚಯಿಸಲಿದೆ” ಎಂದು ಸಂಸ್ಕೃತಿ ವ್ಯವಹಾರಗಳ ಸಚಿವ ಆಶೀಷ್ ಶೇಲಾರ್ ತಿಳಿಸಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಅವರ ನೇತೃತ್ವದಲ್ಲಿ ಹಾಗೂ ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರ ಸಹಯೋಗದಿಂದ ಗಣೇಶೋತ್ಸವ ಹಬ್ಬಕ್ಕೆ ಬರುವ ಎಲ್ಲಾ ತಾಂತ್ರಿಕ ತೊಂದರೆಗಳನ್ನು ಕೊನೆಗಾಣಿಸಲಾಗುವುದು. ಹಿಂದಿನ ಸರಕಾರಗಳು ಸಾಂಪ್ರದಾಯಿಕ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಮೂರ್ತಿಗಳಿಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ರೂಪುರೇಶೆಗಳ ನೆಪ ಹೇಳಿಕೊಂಡು, ಯಾವುದೇ ಪರ್ಯಾಯ ದಾರಿಗಳನ್ನು ತೋರಿಸದೇ ಜನರನ್ನು ಕತ್ತಲೆಯಲ್ಲಿ ಇಟ್ಟಿದ್ದೇವು. ಆದರೆ ನಾವು ಸೂಕ್ತ ನಿಯಮಾವಳಿಗಳನ್ನು ರೂಪಿಸಿ ಇದಕ್ಕೆ ಪರಿಹಾರ ಕಾಣಿಸಲಿದ್ದೇವೆ. ನಾವು ಪರಿಸರ ಸ್ನೇಹಿ ಪರ್ಯಾಯವನ್ನು ಅವಿಷ್ಕರಿಸುವ ದಾರಿಯಲ್ಲಿ ಇದ್ದೇವೆ. ಸದ್ಯ ಪಿಒಪಿ ತಯಾರಿ, ಪ್ರದರ್ಶನ ಮತ್ತು ಮಾರಾಟ ನ್ಯಾಯಾಲಯದ ನಿಯಮಾವಳಿಗಳ ಮೂಲಕವೇ ಊರ್ಜಿತದಲ್ಲಿವೆ ” ಎಂದು ಅವರು ಹೇಳಿದರು.
ಸಂಸ್ಕೃತಿ ಸಚಿವರ ಪ್ರಕಾರ ದೇವೇಂದ್ರ ಪಡ್ನವೀಸ್ ನೇತೃತ್ವದ ಮಹಾಯುತಿ ಸರಕಾರ ಗಣೇಶೋತ್ಸವದ ಯಾವುದೇ ವೈಭವಕ್ಕೂ ಸಕರಾತ್ಮಕವಾಗಿ ಸ್ಪಂದಿಸಲಿದೆ. ಅದು ಪೊಲೀಸ್ ಸುರಕ್ಷತೆ, ಮೂಲಭೂತ ಅವಶ್ಯಕತೆ ಮತ್ತು ಆರ್ಥಿಕ ಬೆಂಬಲವೂ ಸೇರಿದಂತೆ ಪ್ರತಿಯೊಂದಕ್ಕೂ ಸರಕಾರದ ಸಂಪೂರ್ಣ ಸಹಕಾರ ಸಿಗಲಿದೆ ಎಂದು ಹೇಳಿದರು.
ಅದರೊಂದಿಗೆ ಮುಖ್ಯವಾಗಿ ಸಚಿವರು ಒತ್ತಿ ಹೇಳಿದ ಸಂಗತಿ ಏನೆಂದರೆ ಗಣಪತಿಯನ್ನು ಪ್ರತಿಷ್ಠಾಪಿಸುವ ಮಂಡಲಗಳು ನಮ್ಮ ಸೈನಿಕರ ತ್ಯಾಗಗಳನ್ನು ಬಿಂಬಿಸುವ, ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಜನರಿಗೆ ತಿಳಿಸುವ, ಆಪರೇಶನ್ ಸಿಂಧೂರ ಮತ್ತು ನಮ್ಮ ನಾಯಕರ ಶ್ರೇಷ್ಠತೆಯನ್ನು ಜನರಿಗೆ ತಿಳಿಸುವ ಕೆಲಸಗಳನ್ನು ಮಾಡಬೇಕು ಎಂದು ಸಚಿವರು ತಿಳಿಸಿದರು.
ಸಚಿವ ಶೇಲರ್ ” ಗಣೇಶೋತ್ಸವ ನಮ್ಮ ಸಾಮಾಜಿಕ ಜಾಗೃತಿ, ಪರಿಸರ ಜವಾಬ್ದಾರಿ ಮತ್ತು ಸಂಭ್ರಮದ ಗರಿಮೆಯನ್ನು ತೋರಿಸಲಿದೆ” ಎಂದು ತಿಳಿಸಿದರು. ಈ ಬಾರಿಯ ಗಣೇಶೋತ್ಸವ ಅಗಸ್ಟ್ 26 ರಿಂದ ಆರಂಭವಾಗಲಿದೆ. “ನಾವು ನಮ್ಮ ಸನಾತನ ಸಂಸ್ಕೃತಿಯ ಬೇರುಗಳನ್ನು ದೇಶಾದ್ಯಂತ ಹಾಗೂ ಜಗತ್ತಿನಾದ್ಯಂತ ಪಸರಿಸಲು ಕಟಿಬದ್ಧರಿದ್ದೇವೆ. ಕೆಲವರು ನ್ಯಾಯಾಲಯವನ್ನು ಇದರಲ್ಲಿ ಮಧ್ಯ ತಂದು ಉತ್ಸವಗಳ ಆಚರಣೆಯಲ್ಲಿ ವಿಘ್ನ ತರುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಸಚಿವರು ಹೇಳಿದರು.
1893 ರಲ್ಲಿ ಬಾಲ ಗಂಗಾಧರ ತಿಲಕರು ಪುಣೆಯ ಕಸಬಪೀಠ ಏರಿಯಾದಲ್ಲಿರುವ ಶ್ರೀ ಕಸಬ ಗಣಪತಿ ಸಾರ್ವಜನಿಕ ಗಣೇಶೋತ್ಸವ ಮಂಡಲ ಹಾಗೂ ಮುಂಬೈಯ ಗಿರಗಾಮ್ ನಲ್ಲಿರುವ ಖಾಡಿಲಕರ್ ರಸ್ತೆಯ ಶ್ರೀ ಸಾರ್ವಜನಿಕ ಗಣೇಶೋತ್ಸವದಿಂದ ಸ್ವಾತಂತ್ರ್ಯ ಹೋರಾಟದ ಹೊಸ ಮಜಲನ್ನು ಆರಂಭಿಸಿದ ತಿಲಕರು ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿದ್ದರು. ಅಲ್ಲಿಂದ ಅದು ನಿಧಾನವಾಗಿ ಮುಂಬೈ ಹಾಗೂ ಪುಣೆಯ ವಿವಿಧ ಪ್ರದೇಶಗಳಿಗೆ ಹರಡಿತ್ತು.