ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ |ಮುಂದಿನ ತಿಂಗಳು ಬಜೆಟ್ ಮಂಡನೆ ಸಾಧ್ಯತೆ
ಮಂಗಳೂರು ಮಹಾನರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಪೂರ್ಣಗೊಂಡು ಫೆ. 27ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ. ಸದ್ಯಕ್ಕೆ ಚುನಾವಣೆ ನಡೆಯುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ.
ಕೆಲವು ವಾರಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಮಾರ್ಚ್ ತಿಂಗಳಲ್ಲಿ ಸ್ಥಳೀಯ ಚುನಾವಣೆಯ ಪ್ರಸ್ತಾವ ಮಾಡಿದ್ದರು. ಆದರೆ ಪೂರಕ ತಯಾರಿ ಇನ್ನೂ ಆರಂಭಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ. ಇನ್ನೇನು ಚುನಾವಣೆ ದಿನಾಂಕ ನಿಗದಿ ಆಗಬೇಕು. ವಾರ್ಡ್ ಮೀಸಲಾತಿ ಪ್ರಕಟಗೊಳ್ಳಬೇಕು. ಬಳಿಕ ನಾಮಪತ್ರ ಸಲ್ಲಿಕೆ, ಪ್ರಚಾರ ಸೇರಿದಂತೆ ಈ ಪ್ರಕ್ರಿಯೆ ನಡೆಯಲು ಇನ್ನೂ ಕೆಲವು ತಿಂಗಳು ಬೇಕು.
ಸದ್ಯದ ಮಾಹಿತಿಯ ಪ್ರಕಾರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರಕಾರದಿಂದ ಜನಗಣತಿ ಕಾರ್ಯ ನಡೆಯಲಿದೆ. ಇದೇ ಸಮಯ ದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯೂ ಆಗಲಿದ್ದು, ಈ ವೇಳೆ ಚುನಾವಣೆ ನಡೆಯು ವುದು ಅನುಮಾನ ಎನ್ನಲಾಗಿದೆ. ಬಳಿಕ ಮಳೆಗಾಲ ಆರಂಭ ಆಗಲಿದ್ದು, ಈ ವೇಳೆಯೂ ಚುನಾವಣೆ ಘೋಷಣೆಯಾಗದು. ಏನಿದ್ದರೂ, ಸಪ್ಟೆಂಬರ್, ಅಕ್ಟೋ ಬರ್ ವೇಳೆ ಚುನಾವಣೆಗೆ ಕಾಲ ಕೂಡಿ ಬರಬಹುದು ಎಂದು ಅಂದಾಜಿಸಲಾಗಿದೆ.
ಮಂಗಳೂರು ಪಾಲಿಕೆಯ ಕೊನೆಯ ಮೇಯರ್ ಮನೋಜ್ ಕುಮಾರ್ ಅವರ ಆಡಳಿತಾವಧಿ 2025ರ ಫೆ. 27ರಂದು ಪೂರ್ಣಗೊಂಡಿತ್ತು. ಇದಾದ ವಾರದ ಬಳಿಕ ನೂತನ ಆಡಳಿತಾಧಿಕಾರಿಯನ್ನಾಗಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ರಮೇಶ್ ಡಿ.ಎಸ್. ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶಿಸಿತ್ತು. ಬಳಿಕ ನಿರ್ಧಾರದಿಂದ ಹಿಂದೆ ಸರಿದು ದ.ಕ. ಜಿಲ್ಲಾಧಿಕಾರಿಗಳನ್ನು ಆಡಳಿತಾಧಿಕಾರಿಯಾಗಿ . ನೇಮಕ ಮಾಡಲಾಗಿದ್ದು, ಈಗಲೂ ಮುಂದುವರಿದಿ ದ್ದಾರೆ. ಪಾಲಿಕೆಯಲ್ಲಿ ಜನ ಪ್ರತಿನಿಧಿಗಳಿಲ್ಲದೆ, ಜನರ ಹಲವು ಸಮಸ್ಯೆ ಈಡೇರುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕ ವಲಯ ದಲ್ಲಿ ಕೇಳಿಬರುತ್ತಿದೆ. ಪಾಲಿಕೆ ಚುನಾವಣೆ ನಡೆಯದೆ ಜನಪ್ರತಿನಿಧಿಗಳು ಇರದ ಕಾರಣ ಸಾರ್ವಜನಿಕರು ಯಾರಲ್ಲಿ ದೂರು -ದುಮ್ಮಾನ ಹೇಳುವುದು ಎಂಬ ಗೊಂದಲದಲ್ಲಿದ್ದರು. ಸದ್ಯ ಜಿಲ್ಲಾಧಿಕಾರಿ ಗಳು ಕಳೆದ ಎರಡು ತಿಂಗಳಿನಿಂದ ಫೋನ್-ಇನ್ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಕೆಲ ನಾಗರಿಕರಿಗೆ ಅಹವಾಲು ಹೇಳಲು ವೇದಿಕೆ ಸಿಕ್ಕಂತಾಗಿದೆ.
ಈ ಬಾರಿಯ ಬಜೆಟ್ ಕುರಿತಂತೆ ಈಗಾಗಲೇ ಪಾಲಿಕೆ ಮುಖ್ಯ ಕಚೇರಿ ಮತ್ತು ಸುರತ್ಕಲ್ ವಲಯ ಕಚೇರಿಗಳಲ್ಲಿ ಜನಾಭಿಪ್ರಾಯ ಸಂಗ್ರಹ ಸಭೆ ನಡೆದಿದೆ. ಈ ಕುರಿತು ಅಧಿಕಾರಿಗಳ ಮಟ್ಟದಲ್ಲಿಯೂ ಕೆಲವು ಸುತ್ತಿನ ಸಭೆ ನಡೆದಿದೆ. ಮುಂದಿನ ತಿಂಗಳು ರಾಜ್ಯ ಬಜೆಟ್ ಇದ್ದು, ಇದಾದ ಬಳಿಕ ಮಂಗಳೂರು ಪಾಲಿಕೆ ಬಜೆಟ್ ಕೂಡ ಮಂಡನೆಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯೀ ಸಮಿತಿ ಅಧ್ಯಕ್ಷರು ಬಜೆಟ್ ಮಂಡಿಸುತ್ತಾರೆ. ಆದರೆ ಈ ಬಾರಿ ಜನಪ್ರತಿನಿಧಿಗಳ ಆಡಳಿತ ಇಲ್ಲದ ಕಾರಣ, ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿಗಳೇ ಬಜೆಟ್ ಮಂಡಿಸಲಿದ್ದಾರೆ.









