• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮುಖ್ಯಮಂತ್ರಿಗಳೇ ನಮ್ಮದೂ ಒಂದು ಕನಸಿದೆ!

Chakravarthi Sulibele Posted On November 27, 2017


  • Share On Facebook
  • Tweet It

‘ಮದ್ಯಪಾನ ನಿಷೇಧವಂತೆ’ ಎಂಬ ಸುದ್ದಿ ಇದ್ದಕ್ಕಿದ್ದಂತೆ ಮಾಧ್ಯಮಗಳಲ್ಲಿ ಹರಡಿ ಸಾಕಷ್ಟು ಸದ್ದು ಮಾಡಿತು. ಅನೇಕರಿಗೆ ಪುಳಕವೆನಿಸಿದರೆ ಕೆಲವರಿಗೆ ನಡುಕವೂ ಶುರುವಾಗಿತ್ತು. ನನಗೂ ಒಂದು ಕನಸಿದೆ ಎನ್ನುವ ಸಿದ್ದರಾಮಯ್ಯನವರು ನಾಲ್ಕೂವರೆ ವರ್ಷ ಕನಸು ನನಸು ಮಾಡಬಹುದಾಗಿದ್ದ ಅವಕಾಶವನ್ನೆಲ್ಲ ಕಳೆದು ಕೊಂಡರೆಂಬುದೇ ದುರ್ದೈವ. ಆದರೆ ಚುನಾವಣೆಗೆ ಹೋಗುವ ಮುನ್ನವಾದರೂ ಹೆಂಡ ನಿಷೇಧ ಮಾಡುವ ಕನಸು ನನಸು ಮಾಡಿಬಿಟ್ಟಿದ್ದರೆ ರಾಜ್ಯ ಅವರಿಗೆ ಸದಾ ಋಣಿಯಾಗಿರುತ್ತಿತ್ತು.

ಮದ್ಯಪಾನ ನಿಷೇಧ ನಾವಂದುಕೊಂಡಷ್ಟು ಸಲೀಸಾ ಎನ್ನೋದು ಬಲುದೊಡ್ಡ ಪ್ರಶ್ನೆ. ಪ್ರತೀ ರಾಜ್ಯಕ್ಕೂ ಹೆಂಡದಿಂದ ಬರುವ ಆದಾಯ ಸಣ್ಣಪುಟ್ಟ ಮೊತ್ತವಲ್ಲ. 2010ರ ನಂತರ ಕರ್ನಾಟಕದಲ್ಲಿ ಹೆಂಡದ ಬಳಕೆ ಬಲು ತೀವ್ರವಾಗಿದೆ. ಸದ್ಯದ ಮಟ್ಟಿಗಂತೂ ಟಾಪ್ ಟೆನ್ ಪಟ್ಟಿಯಲ್ಲಿ ಅಗ್ರಣಿಯಾಗುವತ್ತ ನಾವು ದಾಪುಗಾಲಿಡುತ್ತಿದ್ದೇವೆ. 2010ರಲ್ಲಿ 530 ಲಕ್ಷ ಕಾರ್ಟನ್ ಡಬ್ಬಗಳಷ್ಟು ವಿಸ್ಕಿ, ಸ್ಕಾಚ್ ಮೊದಲಾದ ಭಾರತ ನಿರ್ಮಾತ ಆಲ್ಕೋಹಾಲ್ ಮಾರಾಟವಾಗುತ್ತಿದ್ದರೆ, 2015ರ ವೇಳೆಗೆ ಅದು 769 ಲಕ್ಷ ಕಾರ್ಟನ್ ಡಬ್ಬಿಗಳ ಮಿತಿ ದಾಟಿತ್ತು! ಸರ್ಕಾರದ ಒಟ್ಟೂ ಆದಾಯದ ಶೇಕಡಾ 20ರಷ್ಟು ಹೆಂಡ ಮಾರಾಟದಿಂದಲೇ ಬರುವಂಥದ್ದು. ಕೇರಳದ ಕೊಚಿಯಲ್ಲಿ ಸ್ಥಿತಗೊಂಡಿರುವ ಸೆಂಟರ್ ಫಾರ್ ಸೋಶಿಯೋ ಎಕಾನಾಮಿಕ್ ಅಂಡ್ ಎನ್ವಿರಾನ್ಮೆಂಟಲ್  ಸ್ಟಡೀಸ್ನ ಮುಖ್ಯಸ್ಥರಾದ ಕೆ.ಕೆ. ಜಾರ್ಜ್ ಮುಂದಿಟ್ಟಿರುವ ಮಾಹಿತಿ ನೋಡಿದರೆ ನೀವು ದಂಗಾಗಿಬಿಡುತ್ತೀರಿ.  ತಾಸ್ಮಾಕ್ನ ಒಂದು ವರ್ಷದ ಒಟ್ಟೂ ಹೆಂಡದ ವಹಿವಾಟು ಇಪ್ಪತ್ನಾಲ್ಕುವರೆ ಸಾವಿರ ಕೋಟಿಯಷ್ಟಾದರೆ ಅದರಲ್ಲಿ ಸರ್ಕಾರಿ ಬೊಕ್ಕಸಕ್ಕೆ ಸೇರಿದ್ದು ಸುಮಾರು ಇಪ್ಪತ್ತೆರಡು ಸಾವಿರ ಕೋಟಿ! ಕೇರಳ ಸರ್ಕಾರಿ ಹೆಂಡದ ವಿಭಾಗಗಳು ನಡೆಸಿದ ವಹಿವಾಟು ಸುಮಾರು ಎಂಟೂ ಮುಕ್ಕಾಲು ಸಾವಿರ ಕೋಟಿಯಷ್ಟಾದರೆ ಅದರಲ್ಲಿ ಬೊಕ್ಕಸಕ್ಕೆ ಸೇರಿದ ಆದಾಯ ಏಳೂ ಕಾಲು ಸಾವಿರ ಕೋಟಿಗಿಂತ ಹೆಚ್ಚು. ನೂರು ರೂಪಾಯಿಯ ಹೆಂಡ ಮಾರಾಟವಾದರೆ ಬೊಕ್ಕಸಕ್ಕೆ ಆರುನೂರು ರೂಪಾಯಿ ಆದಾಯ. ಅಂದರೆ ಆರುನೂರು ಪ್ರತಿಶತ ತೆರಿಗೆ! ಇಷ್ಟು ಲಾಭವಿರುವ ಮತ್ತೊಂದು ವ್ಯಾಪಾರ ಇರುವುದು ಖಂಡಿತ ಅನುಮಾನ. ಅದಕ್ಕೇ ಸರ್ಕಾರಕ್ಕೆ ಈ ವಿಷಚಕ್ರದಿಂದ ಹೊರಬರಲು ತಾನೇ ಇಚ್ಛಿಸಲಾರದು. ಆದಾಯ ಕಡಿಮೆಯಾಯಿತೆನಿಸಿದಾಗ ಕುಡಿಯುವ ಚಟ ಹೆಚ್ಚಾಗುವಂತೆ ನೋಡಿಕೊಂಡರಾಯ್ತು. ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ಹರಿದು ಬರುತ್ತದೆ.

ಬಡವರ ಉದ್ಧಾರವೆಂದೆಲ್ಲ ಬೊಗಳೆ ಕೊಚ್ಚುವ ಸರ್ಕಾರಗಳು ಹೆಂಡದ ಆದಾಯದಿಂದ ಬಜೆಟ್ಟನ್ನು ಪ್ರತೀ ವರ್ಷ ಮಂಡಿಸುತ್ತಾವಲ್ಲ; ಅದೇ ಅಸಹ್ಯಕರ. ಈ ಆದಾಯ ವೃದ್ಧಿಸುವಂತೆ ಮಾಡುವುದು ನಮ್ಮ ಗುರಿ ಎಂದು ನಿಶ್ಚಿತವಾಗಿ ಹೇಳುವುದಂತೂ ಸಹಿಸಲಸಾಧ್ಯವೇ ಸರಿ. ಧೂಮಪಾನ, ಮದ್ಯಪಾನಗಳು ಆರೋಗ್ಯಕ್ಕೆ ಹಾನಿಕರವೆಂದು ಎಲ್ಲೆಲ್ಲೂ ಜಾಹೀರಾತುಗಳು ರಾರಾಜಿಸುವಂತೆ ಹಾಕುವ ಸರ್ಕಾರಗಳು ತಾವೇ ಇದರ ಮಾರುಕಟ್ಟೆ ವೃದ್ಧಿಗೆ ನಿಲ್ಲುವುದು ನೈತಿಕ ಅಪರಾಧವಾಗುವುದಿಲ್ಲವಾ? ಶಾಲೆಯಲ್ಲಿ ಕುಡಿಯಬೇಡಿರೆಂದು ಮಕ್ಕಳಿಗೆ ಪಾಠ ಮಾಡಿಸುವ ಸರ್ಕಾರಗಳು ಅವರಪ್ಪಂದಿರಿಗೆ ಕುಡಿಯಲು ಪ್ರೇರಣೆ ಕೊಡುವಂತಹ ವ್ಯವಸ್ಥೆ ರೂಪಿಸಿಕೊಡುವುದು ಅದೆಷ್ಟು ಸರಿ? ಇಷ್ಟಕ್ಕೂ ಕುಡಿತಕ್ಕೆ ದಾಸರಾಗಿ ದುಡಿದ ಅಷ್ಟೂ ಹಣವನ್ನು ಶರಾಬು ಅಂಗಡಿಗೆ ತಂದು ಸುರಿಯೋದು ಬಡ ವರ್ಗದವರೇ. ಅವರು ಕುಡಿಯಲು ಸಾಧ್ಯವಾಗದಿರಲೆಂದೇ ತೆರಿಗೆ ಹಣವನ್ನು ಆರುನೂರು ಪಟ್ಟು ಹೆಚ್ಚಿಸಿರೋದು ಅಂತಾರೆ ಆದರೆ ಒಮ್ಮ ಕುಡಿತದ ರುಚಿ ಕಂಡವನು ಅದರಿಂದ ಹೊರ ಬರೋದುಂಟೇನು? ಆತ ದುಡಿದದ್ದಷ್ಟನ್ನೂ ಹೆಂಡದಂಗಡಿಗೆ ತಂದು ಸುರಿಯುತ್ತಾನೆ. ಮನೆಯಲ್ಲಿ ಹೆಂಡತಿ-ಮಕ್ಕಳು ಅರೆಹೊಟ್ಟೆಯವರಾಗುತ್ತಾರೆ. ನೆಮ್ಮದಿ ನಾಶವಾಗುತ್ತದೆ! ಪ್ರತೀ ಬಾರಿ ಹೆಂಡದ ಬೆಲೆ ಹೆಚ್ಚಾದಾಗಲೂ ಅವರ ಮನೆಗೆ ದಕ್ಕುವ ಆದಾಯದ ಪಾಲು ಕಡಿಮೆಯಾಗುತ್ತದೆ. ಹೀಗೆ ಬಡವರ ಮನೆಗಳನ್ನು ಧ್ವಂಸ ಮಾಡಿ ರಾಜ್ಯ ಸರ್ಕಾರ ಆದಾಯಗಳಿಸುವ ಚಿಂತನೆಯೇ ಕ್ರೂರವಾದುದು. ಸಿದ್ದರಾಮಯ್ಯನವರು ಬಡವರ ಉದ್ಧಾರಕ್ಕೆಂದು ಹತ್ತಾರು ಯೋಜನೆಗಳನ್ನು ಘೋಷಿಸುವ ಬದಲು ಮದ್ಯಪಾನ ನಿಷೇಧದ ಒಂದು ನಿರ್ಣಯ ಕೈಗೊಂಡರೆ ಸಾಕು; ಅನೇಕ ಮನೆಗಳು ಉದ್ಧಾರವಾಗುತ್ತವೆ. ನಿಮ್ಹಾನ್ಸ್ನ ಅಧ್ಯಯನವೊಂದು ಹೇಳುವ ಪ್ರಕಾರ ‘ಹೆಂಡ ಮಾರಾಟದಿಂದ ಬರುವ ಒಂದು ರೂಪಾಯಿ ಆದಾಯ, ಆರೋಗ್ಯದ ದೃಷ್ಟಿಯಿಂದ ಸರಕಾರಕ್ಕೆ ಎರಡು ರೂಪಾಯಿಗಳ ಹೊರೆ ಮತ್ತು ಉತ್ಪಾದಕ ಸಾಮಥ್ರ್ಯದಲ್ಲಿ ಕ್ಷೀಣತೆ ಕೂಡ!’ ಹೀಗಾಗಿ ಬೊಕ್ಕಸಕ್ಕೆ ಹಣ ಬರುವುದೆಂಬ ಒಂದೇ ದೃಷ್ಟಿಯಿಂದ ಹೆಂಡದ ವ್ಯಾಪಾರವನ್ನು ನೋಡದೇ ಅದರಿಂದಾಗುವ ಸಮಸ್ಯೆಗಳ ಕುರಿತಂತೆಯೂ ಅಧ್ಯಯನ ನಡೆಸಿ ಅದಕ್ಕೆ ತಿಲಾಂಜಲಿ ಇಡುವುದೇ ಒಳಿತು.

2ಆದರೆ ಹೀಗೆ ಮದ್ಯಪಾನ ನಿಷೇಧ ಏಕಾಕಿ ಮಾಡಬಹುದೇ? 2017-18ರ ಬಜೆಟ್ನ ಮುಖ್ಯಾಂಶಗಳನ್ನು ಅವಲೋಕಿಸಿದರೆ ಮೇಲ್ನೋಟಕ್ಕೆ ಕಾಣುವ ಕೆಲವು ಅಂಶಗಳಿವೆ. ಬಜೆಟ್ನ ಪ್ರಕಾರ ಒಟ್ಟೂ ಖರ್ಚು ಒಂದು ಲಕ್ಷ ಎಂಭತ್ತಾರು ಸಾವಿರ ಕೋಟಿ ರೂಪಾಯಿ. ಆದಾಯ ಸುಮಾರು ಒಂದು ಲಕ್ಷ ನಲವತ್ತೈದು ಸಾವಿರ ಕೋಟಿ ರೂಪಾಯಿಯಷ್ಟು. ಅಂದರೆ ಆದಾಯಕ್ಕಿಂತ ಖರ್ಚು ಹೆಚ್ಚು. ಈ ಅಂತರವನ್ನು ತುಂಬಿಸಿಕೊಳ್ಳಲು ಸಾಲ ತೆಗೆದುಕೊಳ್ಳಬೇಕು. ಅಂತರ ಹೆಚ್ಚಾದಷ್ಟೂ ಸಾಲದ ಪ್ರಮಾಣ ಹೆಚ್ಚುತ್ತಲೇ ಸಾಗುತ್ತದೆ. ಹೀಗಾಗಿ ಆದಾಯ ಮತ್ತು ವೆಚ್ಚದ ನಡುವಿನ ಅಂತರ ತಗ್ಗಿಸಲು ಒಂದೋ ಅನವಶ್ಯಕ ಸರಕಾರಿ ವೆಚ್ಚಗಳನ್ನು ತಗ್ಗಿಸಬೇಕು ಅಥವಾ ಆದಾಯವನ್ನು ಹಿಗ್ಗಿಸಬೇಕು. ಸಂಪಾದನೆಯನ್ನು ಹೆಚ್ಚಿಸುವ ಯಾವುದೇ ವ್ಯಾಪಾರದ ಮಾರ್ಗಗಳೂ ಆದಾಯವನ್ನು ಖಾತ್ರಿಗೊಳಿಸಲಾರವು. ಕೃಷಿಯಾದರೆ ಮಳೆಯಾಧಾರಿತ, ಉತ್ಪಾದಕ ಕಾರ್ಖಾನೆಗಳಾದರೆ ವಿನಿಮಯ ದರದ ಮೇಲೆ ಮತ್ತು ಮಾರುಕಟ್ಟೆಯ ಮೇಲೆ ಅವಲಂಬಿತ. ಹೊಸ ಪ್ರಯೋಗಗಳೂ ತಕ್ಷಣಕ್ಕೆ ಭರವಸೆ ನೀಡಬಲ್ಲವಂತೂ ಅಲ್ಲ. ಹೀಗಾಗಿ ಹಣಗಳಿಸುವ ಪಾರಂಪರಿಕ ವಿಧಾನ ಒಂದೇ. ‘ಹೆಂಡ ಮಾರಾಟ’

ಕಳೆದ ವರ್ಷ ಅಬಕಾರಿ ವಿಭಾಗದಿಂದ ಬೊಕ್ಕಸಕ್ಕೆ ಬಂದ ಆದಾಯ ಸುಮಾರು ಹದಿನಾರು ಸಾವಿರ ಕೋಟಿ ರೂಪಾಯಿ. ಈ ವರ್ಷ ಅದನ್ನು ಹದಿನೆಂಟು ಸಾವಿರ ಕೋಟಿಗೇರಿಸಬೇಕೆಂಬುದು ಅಬಕಾರಿ ಇಲಾಖೆಯವರ ಸಂಕಲ್ಪ! ಪ್ರತೀ ವರ್ಷ ಸುಮಾರು ಒಂದು ಸಾವಿರ ಕೋಟಿಯಷ್ಟು ಆದಾಯ ವೃದ್ಧಿ ಆಗುತ್ತಲೇ ಇದೆ, ಈ ಬಾರಿ ಅದನ್ನು ದ್ವಿಗುಣಗೊಳಿಸುವ ಸಾಹಸಕ್ಕೆ ಕೈ ಹಾಕಿದೆ ಸರ್ಕಾರ ಅಷ್ಟೇ. ಈ ಆದಾಯವನ್ನು ಲೆಕ್ಕದಲ್ಲಿ ತೋರಿಸಿ ತಮ್ಮೆಲ್ಲ ಖಯಾಲಿಗಳಿಗೆ ಅದನ್ನು ಬಳಸುವ ಉದ್ದೇಶ ಅವರದ್ದು. ಖಯಾಲಿಗಳಿಗೆ ಎನ್ನುವಾಗ ನಾನು ಬಲು ಎಚ್ಚರಿಕೆಯಿಂದ ಈ ಪದ ಬಳಕೆ ಮಾಡುತ್ತಿದ್ದೇನೆ. ಬಜೆಟ್ನಲ್ಲಿ ಎರಡು ಬಗೆಯ ಖರ್ಚುಗಳ ವಿಂಗಡಣೆ ಮಾಡಲಾಗುತ್ತದೆ. ಮೊದಲನೆಯದು ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಮತ್ತೊಂದು ರೆವಿನ್ಯೂ ಎಕ್ಸ್ಪೆಂಡಿಚರ್. ಸಬ್ಸಿಡಿ ಮತ್ತು ನೌಕರರಿಗೆ ಕೊಡುವ ಸಂಬಳವೂ ಸೇರಿದಂತೆ ಆಡಳಿತ ವೆಚ್ಚವೆಲ್ಲದರ ಒಟ್ಟೂ ಮೊತ್ತ ರೆವಿನ್ಯೂ ಖರ್ಚು. ನಮ್ಮ ಒಟ್ಟಾರೆ ಬಜೆಟ್ನಲ್ಲಿ ಇದಕ್ಕಾಗಿ ಮೀಸಲಿಟ್ಟ ಹಣ ಒಂದೂವರೆ ಲಕ್ಷ ಕೋಟಿ ರೂಪಾಯಿ. ನಾವು ತೆರಿಗೆಯ ಮೂಲಕ ಸಂಗ್ರಹಿಸಿದ ಹಣವೆಲ್ಲ ಇದಕ್ಕಾಗಿಯೇ ವಿನಿಯೋಗವಾಗಿಬಿಡುತ್ತದೆ. ಇನ್ನು ಹಳೆಯ ಸಾಲ ತೀರಿಸಲು, ಬಡ್ಡಿ ಕಟ್ಟಲು, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣವೇ ಮೊದಲಾದ  ರಾಜ್ಯದ ಆಸ್ತಿ ವೃದ್ಧಿಸುವ ಚಟುವಟಿಕೆಗಳಿಗಾಗಿ ಮಾಡುವ ಕ್ಯಾಪಿಟಲ್ ಎಕ್ಸ್ಪೆಂಡಿಚರ್ಗೆ ಹಣವೇ ಇಲ್ಲ. ಅದಕ್ಕಾಗಿ ಮತ್ತೆ ಸಾಲ ತೆಗೆದುಕೊಳ್ಳಬೇಕು. ನಮ್ಮನ್ನಾಳುವ ರಾಜಕಾರಣಿಗಳೆಲ್ಲ ತಾವು ಅನವಶ್ಯಕ ಖರ್ಚು ಕಡಿಮೆ ಮಾಡಿ ರೆವಿನ್ಯೂ ಖರ್ಚನ್ನು ಉಳಿಸಿ ಅದನ್ನು ಕ್ಯಾಪಿಟಲ್ ಖರ್ಚಾಗಿ ಪರಿವರ್ತಿಸುವ ಛಾತಿ ತೋರಬಲ್ಲರೇನು? ತಮ್ಮ ಸಂಬಳ, ಸಿಗುವ ಸವಲತ್ತುಗಳನ್ನೆಲ್ಲ ಕಡಿತಗೊಳಿಸಿ ರಾಜ್ಯದ ಆಸ್ತಿ ವೃದ್ಧಿಸುವ ಪ್ರಯತ್ನದಲ್ಲಿ ಕೈಜೋಡಿಸಬಲ್ಲರೇನು? ಅಂತಹ ರಾಜಕಾರಣಿಗಳು ಮಾತ್ರ ಮದ್ಯ ನಿಷೇಧದಂತಹ ಸಾಹಸಕ್ಕೆ ಕೈ ಹಾಕಬಲ್ಲರು. ಏಕೆಂದರೆ ಹೆಂಡ ಮಾರಾಟದಿಂದ ಬಂದ ಅಷ್ಟೂ ಹಣ ರೆವಿನ್ಯೂ ಎಕ್ಸ್ಪೆಂಡಿಚರ್ ಆಗಿಯೇ ಬಳಕೆಯಾಗೋದು.

ENARADA NEWS AND WEBCASTಹೆಂಡದ ಮಾರಾಟ ನಿಲ್ಲಿಸೋದು ಏಕಾಕಿ ನಡೆಯಬಹುದಾದ ಪ್ರಕ್ರಿಯೆಯಲ್ಲ. ಹಂತಹಂತವಾಗಿ ಅದನ್ನು ಜಾರಿಗೆ ತರಬೇಕು. ಹಳ್ಳಿಗಳಲ್ಲಿನ ಮಾರಾಟ ಮೊದಲು ನಿಲ್ಲಿಸಿ ಆನಂತರ ಪಟ್ಟಣಗಳಿಗೆ ವ್ಯಾಪಿಸಬೇಕು. ಹೊಸ ಹೆಂಡ ಮಾರಾಟದ ಲೈಸನ್ಸ್ ಕೊಡುವುದನ್ನು ನಿಲ್ಲಿಸಬೇಕು. ಹೋಟೆಲ್, ಬಾರ್ ಮತ್ತು ಕ್ಲಬ್ಗಳಲ್ಲೂ ದೊರೆಯದಂತೆ ನಿರ್ಬಂಧ ಹೇರಬೇಕು. ಇದು ಲಿಕ್ಕರ್  ಲಾಬಿಯಲ್ಲಿ ತಳಮಳವನ್ನು ಸೃಷ್ಟಿಸುತ್ತದೆ ನಿಜ ಆದರೆ ನಿಶ್ಚಿತ ರಾಜಕೀಯ ಇಚ್ಛಾಶಕ್ತಿ ಇದ್ದರೆ ಅದನ್ನು ಸಂಭಾಳಿಸುವುದು ಬಲು ದೊಡ್ಡ ಸಂಗತಿಯೇನಲ್ಲ. ಈ ಹೊತ್ತಿನಲ್ಲಿ ರಾಜಸ್ವದ ಕೊರತೆಯೇನಾಗುವುದೋ ಅದನ್ನು ಭಿನ್ನ ಭಿನ್ನ ಮಾರ್ಗಗಳಿಂದ ತುಂಬುವ ಪ್ರಯಾಸ ಆಗಬೇಕು. ಮೊದಲ ಹಂತದಲ್ಲಿಯೇ ಎಲ್ಲ ಆಯ್ಕೆಯಾದ ಪ್ರಜಾ ಪ್ರತಿನಿಧಿಗಳು ತಮ್ಮ ಒಂದು ವರ್ಷದ ಸಂಬಳವನ್ನು ತ್ಯಾಗ ಮಾಡಲಿ. ಸರಕಾರದಿಂದ ಸಿಗುವ ಸವಲತ್ತುಗಳನ್ನು ಒಂದು ವರ್ಷ ಬಳಸದೇ ಸ್ವಂತ ಪರಿಹಾರ ಹುಡುಕಿಕೊಳ್ಳಲಿ. ಅನಗತ್ಯ ಸಬ್ಸಿಡಿ ಎಲ್ಲೆಲ್ಲಿ ಪೋಲಾಗುತ್ತಿದೆಯೋ ಅದಕ್ಕೊಂದು ಬೇಲಿ ಹಾಕುವ ಪ್ರಯತ್ನ ಬಲವಾಗಿ ಮಾಡಲಿ. ಸುಮ್ಮನೆ ನಿಮ್ಮ ಮಾಹಿತಿಗಿರಲೆಂದು ಹೇಳುತ್ತಿದ್ದೇನೆ, ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಯೋಜನೆಯಾದ ‘ಅನ್ನ ಭಾಗ್ಯ’ಕ್ಕೆ ಪ್ರತೀವರ್ಷ ಸರಕಾರ ತೆಗೆದಿಡುತ್ತಿರುವ ಹಣ ಸುಮಾರು ನಾಲ್ಕುವರೆ ಸಾವಿರ ಕೋಟಿ ರೂಪಾಯಿ. ಈ ಯೋಜನೆ ಹಾಳೆಯ ಮೇಲೆ ಎಷ್ಟು ಚೆನ್ನಾಗಿ ರೂಪಿಸಲ್ಪಟ್ಟಿದೆಯೋ ಪ್ರತ್ಯಕ್ಷ ಆಚರಣೆಯಲ್ಲಿ ಅಷ್ಟೇ ಸೋತಿದೆ. ಜೊತೆಗೆ ಈ ನೆಪದಲ್ಲಿ ಹೆಚ್ಚು ಕಡಿಮೆ ಉಚಿತ ಅಕ್ಕಿಯನ್ನು ಮನೆಗೊಯ್ಯುವ ಕೂಲಿ ಕಾರ್ಮಿಕ ಉಳಿದಷ್ಟೂ ಹಣವನ್ನು ಹೆಂಡದಂಗಡಿಗೇ ಸುರಿಯೋದು. ಅಬಕಾರಿ ಅಧಿಕಾರಿಗಳು ಈ ಬಾರಿ ಆದಾಯದ ಗುರಿಯನ್ನು ದ್ವಿಗುಣಗೊಳಿಸಬೇಕೆಂಬ ಸಂಕಲ್ಪ ಮಾಡುತ್ತಾರಲ್ಲ; ಇದೇ ಆಧಾರದ ಮೇಲೇ. ಒಂದು ಕೈಯಿಂದ ಬಡವನಿಗೆ ಕೊಟ್ಟು, ಮತ್ತೊಂದು ಕೈಯಿಂದ ಅದನ್ನು ಕಸಿಯುವ ಬದಲು ಆಲ್ಕೋಹಾಲನ್ನು ನಿಷೇಧಿಸಿ, ಅನ್ನ ಭಾಗ್ಯವನ್ನು ಹಿಂಪಡೆದುಬಿಡಿ. ದುಡಿಮೆಯ ದುಡ್ಡಿನಲ್ಲಿ ಹೆಮ್ಮೆಯಿಂದ ಉಣ್ಣುವ ಆತ ನೆಮ್ಮದಿಯಿಂದಲೂ ಬದುಕುತ್ತಾನೆ. ಬಿಹಾರದಲ್ಲಿ ಕುಡಿತ ನಿಷೇಧಕ್ಕೆ ಒಂದು ವರ್ಷವಾದಾಗ ಅನೇಕ ತಾಯಂದಿರು ತಮ್ಮ ಮನೆಗಳಲ್ಲಿ ಆನಂದದ ವಾತಾವರಣ ಇರುವುದನ್ನು ಕೊಂಡಾಡಿದ್ದರು. ಈ ವಾತಾವರಣ ಮತ್ತೆ ದುಡಿಮೆಗೆ ಪ್ರೇರಣೆ. ಅದು ರಾಜ್ಯದ ಉತ್ಪನ್ನವನ್ನು ಹೆಚ್ಚಿಸುತ್ತದೆ. ಜನರ ಆರೋಗ್ಯದಲ್ಲೂ ಸಾಕಷ್ಟು ಬದಲಾವಣೆ ಬರುವುದರಿಂದ ಅದು ರಾಜ್ಯದ ಆರೋಗ್ಯ ವೃದ್ಧಿಯನ್ನು ದಾಖಲಿಸುತ್ತದೆ.

ಹಾಗಂತ ಇಲ್ಲಗೆ ಎಲ್ಲವೂ ಮುಗಿಯುವುದಿಲ್ಲ. ಏಕಾಕಿ ಆದಾಯದಲ್ಲಿ 18 ಸಾವಿರ ಕೋಟಿ ಕೊರತೆಯಾಗಿಬಿಟ್ಟರೆ, ಕೈ ಕಟ್ಟಿ ಹಾಕಿದಂತಾಗಿಬಿಡುತ್ತದೆ. 1996ರಲ್ಲಿ ಮದ್ಯಪಾನ ನಿಷೇಧ ಜಾರಿಗೆ ತಂದಿದ್ದ ಹರ್ಯಾಣ ಎರಡೇ ವರ್ಷದಲ್ಲಿ ಅದನ್ನು ಮರಳಿ ಪಡೆದಿತ್ತು. 1995ರಲ್ಲಿ ನಿಷೇಧ ಹೇರಿದ್ದ ಆಂಧ್ರ ಬಲು ಬೇಗ ಅದನ್ನು ಹಿಂಪಡೆಯಿತು. 2015ರಲ್ಲಿ ಮಿಜ಼ೋರಾಂ 17 ವರ್ಷಗಳ ನಿಷೇಧಕ್ಕೆ ತಿಲಾಂಜಲಿ ಇಟ್ಟಿತ್ತು. ಎಲ್ಲಕ್ಕೂ ಕಾರಣ ಆದಾಯದಲ್ಲಿ ಕೊರತೆ. ಆದರೆ ಜಿಎಸ್ಟಿಯ ಕಾರಣದಿಂದಾಗಿ ಕರ್ನಾಟಕ, ಬಿಹಾರದಂತಹ ರಾಜ್ಯಗಳಿಗೆ ವರದಾನವಾಗಲಿದೆಯೆಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ. ಹಾಗಾಗಲಿಲ್ಲವೆಂದರೂ ಬಲು ದೊಡ್ಡ ನಷ್ಟವೇನಿಲ್ಲ. ಕರ್ನಾಟಕಕ್ಕೆ ಸಮುದ್ರ ತೀರವಿದೆ. ಮಂಗಳೂರು-ಉಡುಪಿಗಳ ನಡುವೆ ಹಾರ್ಡ್‌ವೇರ್ ಪ್ಯಾಕರ್ಸ್  ಹೂಡಿಕೆ ಮಾಡಿಸುವ ಸವಾಲು ಸ್ವೀಕರಿಸಿದರೆ; ಚಿತ್ರದುರ್ಗದಲ್ಲಿ ಹೇಗಿದ್ದರೂ ರಕ್ಷಣಾ ಇಲಾಖೆ ಬಲು ದೊಡ್ಡ ಜಾಗವನ್ನು ತನಗಾಗಿ ಕಾದಿಟ್ಟುಕೊಂಡಿದೆ. ನಾವು ಸ್ವಲ್ಪ ಮುಂಚೆಯೇ ಆಲೋಚಿಸಿ ಮೇಕ್ ಇನ್ ಇಂಡಿಯಾದಡಿಯಲ್ಲಿ ರಕ್ಷಣಾ ವಸ್ತುಗಳ ತಯಾರಿಕೆಗೆ ಬೇಕಾದ ಪೂರಕ ತಯಾರಿಕೆ ಮಾಡಿಕೊಂಡು ಹೂಡಿಕೆಗೆ ಆಹ್ವಾನ ಕೊಟ್ಟರೆ ಲಾಭವೇ. ಡಿಆರ್ಡಿಓ, ಇಸ್ರೋ, ಐಐಎಸ್ಸಿ, ಸಿಎಫ್ಟಿಆರ್ಐ ಗಳೆಲ್ಲ ಇದೇ ನೆಲದಲ್ಲಿರೋದರಿಂದ ನಮ್ಮ ವಿಶ್ವಾಸಾರ್ಹತೆ ಬಲು ಜೋರಾಗಿದೆ. ಅದನ್ನು ನಗದೀಕರಿಸಿಕೊಳ್ಳುವ ತೀವ್ರಮತಿ ಬೇಕಾಗಿದೆ. ಬಹುಶಃ ನಾಯಕರಿಗೆ ಆಲ್ಕೋಹಾಲಿನ ಅಮಲಿಳಿದರೆ ಈ ಯೋಚನೆಗಳು ಶುರುವಾಗಬಹುದೇನೋ? ಖಂಡಿತ ಹೌದು. ಒಮ್ಮೆ ರಾಜ್ಯದ ಬೊಕ್ಕಸಕ್ಕೆ ಆದಾಯ ಕಡಿಮೆಯಾಯಿತೆಂದರೆ  ಅದನ್ನು ತುಂಬಿಸುವ ಹೊಸಹೊಸ ಉತ್ಪಾದಕ ಯೋಜನೆಗಳು ರೂಪುಗೊಳ್ಳುತ್ತವೆ. ಈ ಬಗೆಯ ಯೋಜನೆಗಳು ಉದ್ಯೋಗವನ್ನು ಹೆಚ್ಚಿಸುತ್ತವೆ. ಬೇಡಿ ತಿನ್ನುವವರು ಕಡಿಮೆಯಾಗಿ ಸ್ವಾಭಿಮಾನದ ಕಲರವ ಮೊಳಗಲಾರಂಭಿಸುತ್ತದೆ.

4ಸಿದ್ದರಾಮಯ್ಯನವರು ಮದ್ಯಪಾನ ನಿಷೇಧದ ವದಂತಿ ಹಬ್ಬಿಸಿದಷ್ಟೇ ಧೈರ್ಯವಾಗಿ ನಿಷೇಧವನ್ನೂ ಮಾಡಿ ನಮ್ಮ ಕನಸಿನ ಕರ್ನಾಟಕ ನಿರ್ಮಾಣಿಸುವರೇ? ಅಥವಾ ಅಧಿಕಾರಕ್ಕೇರಿದ 24 ಗಂಟೆಗಳಲ್ಲಿ ವೈದ್ಯ ವಿರೋಧಿ ಕಾನೂನನ್ನು ತಡೆಹಿಡಿಯುವೆನೆಂದ ಯಡ್ಯೂರಪ್ಪನವರು ಈ ವಿಚಾರವಾಗಿಯೂ ಅಷ್ಟೇ ಬಲವಾದ ನಿಲುವನ್ನು ಘೋಷಿಸುವರೇ? ಆಳುವವರಿಗೆ ಪ್ರಜೆಗಳು ಮುಂದೊಡ್ಡಬೇಕಾದ ಸವಾಲು ಇಂಥದ್ದೇ ಇರಬೇಕು. ಆಗಲೇ ನಿರ್ಮಾಣವಾಗೋದು ಬಲಿಷ್ಠ ಕರ್ನಾಟಕ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Chakravarthi Sulibele May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Chakravarthi Sulibele May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search