ಕಾಶ್ಮೀರಕ್ಕೆ ಉದ್ಯೋಗಕ್ಕೆಂದು ಹೋದವರು ಹೇಗೆ ಕಲ್ಲು ತೂರಾಟಗಾರರಾಗಿ ಬದಲಾಗುತ್ತಿದ್ದಾರೆ ನೋಡಿ!
![](https://tulunadunews.com/wp-content/uploads/2018/06/stone.jpg)
ಒಂದೆಡೆ ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗಿದೆ. ಮತ್ತೊಂದೆಡೆ ಭಾರತೀಯ ಭದ್ರತಾ ಸಿಬ್ಬಂದಿ ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದಾರೆ. ವಿವಿಧ ಪಕ್ಷಗಳು ಮುಂದೆ ಚುನಾವಣೆ ನಿರೀಕ್ಷೆಯಲ್ಲಿದ್ದಾರೆ. ಇದೆಲ್ಲದರ ನಡುವೆ ಮೆಲ್ಲಗೆ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಹುನ್ನಾರವೊಂದು ಬಯಲಾಗಿದೆ.
ಹೌದು, ಉತ್ತರ ಪ್ರದೇಶದಿಂದ ಉದ್ಯೋಗಕ್ಕೆಂದು ಜಮ್ಮು-ಕಾಶ್ಮಿರಕ್ಕೆ ಹೋದವರು ಅಲ್ಲಿ ಪ್ರತ್ಯೇಕತವಾದಿಗಳ ಉಪಟಳದಿಂದ ಕಲ್ಲು ತೂರಾಟಗಾರರಾಗಿ ಬಯಲಾಗಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಈ ಕುರಿತು ಪೊಲೀಸ್ ನಿರ್ದೇಶಕ ಒ.ಪಿ.ಸಿಂಗ್ ಮಾಹಿತಿ ನೀಡಿದ್ದು, ಉತ್ತರ ಪ್ರದೇಶದ ಭಾಗ್ಪತ್ ಹಾಗೂ ಸಹರಾನ್ಪುರ ಜಿಲ್ಲೆಯಿಂದ ಕಾಶ್ಮೀರಕ್ಕೆ ಉದ್ಯೋಗಕ್ಕೆಂದು ಅರಸಿ ಬಂದಿದ್ದ ಆರು ಯುವಕರು ಈಗ ಕಲ್ಲು ತೂರಾಟಗಾರರಾಗಿ ಮಾರ್ಪಾಡಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸುಮಾರು 20 ಸಾವಿರ ಸಂಬಳ ಸಿಗುತ್ತದೆ ಎಂದು ತಿಳಿದ ಯುವಕರು ಪುಲ್ವಾಮಾದಲ್ಲಿ ಕೆಲಸಕ್ಕೆ ಸೇರಿದ್ದಾರೆ. ಆದರೆ ಅಲ್ಲಿ ಇವರಿಗೆ ವಾಹನ ತೊಳೆಯಲು ಸೇರಿ ಹಲವು ಕೌಶಲವೇ ಬೇಕಾದ ಕೆಲಸ ಹಚ್ಚಿದ್ದಾರೆ. ಅಲ್ಲದೆ ಕಲ್ಲು ತೂರಾಟ ಮಾಡುವ ಕುರಿತು ತರಬೇತಿ ನೀಡಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಾಗ ಈ ಯುವಕರನ್ನು ಛೂ ಬಿಟ್ಟು ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ಮಾಡಲು ಬಿಟ್ಟಿದ್ದಾರೆ. ಆಗ ಭದ್ರತಾ ಸಿಬ್ಬಂದಿ ಮರುದಾಳಿ ಮಾಡಿದ್ದಾಗ ಇವರು ಯಾರದ್ದೋ ಮನೆಯಲ್ಲಿ ಅಡಗಿದ್ದು, ಆಗ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿದ್ದಾರೆ. ಈ ಕುರಿತು ವಿಚಾರಣೆ ನಡೆಸಿದಾಗ ಇವರು ಉತ್ತರ ಪ್ರದೇಶದವರೆಂದೂ, ಉದ್ಯೋಗಕ್ಕೆ ಇಲ್ಲಿ ಬಂದಿದ್ದು, ಈಗ ಕಲ್ಲು ತೂರಾಟಗಾರರಾಗಿ ಮಾರ್ಪಾಡಾಗಿದ್ದಾರೆ ಎಂದೂ ತಿಳಿದುಬಂದಿದೆ.
ಈ ಕುರಿತು ಕೂಲಂಕಷವಾಗಿ ತನಿಖೆ ಮಾಡಲಾಗುವುದು ಎಂದು ಡಿಜಿಪಿ ತಿಳಿಸಿದ್ದಾರೆ. ಆದರೆ ಪ್ರತ್ಯೇಕತವಾದಿಗಳ ಈ ಉಪಟಳದಿಂದ ಇನ್ನೂ ಎಷ್ಟು ಯುವಕರು ಹೀಗೆ ಬಲಿಯಾಗಬೇಕೋ, ಎಷ್ಟು ಜನ ಇವರ ದಾಳಕ್ಕೆ ಸಿಲುಕಿ ನರಳಾಡಬೇಕೋ?
Leave A Reply