24*7*365 ದಿನವೂ ಬಿಜೆಪಿ ಕಾರ್ಪೋರೇಟರ್ ನಿಮ್ಮ ಕೈಗೆ ಸಿಗಲಿದ್ದಾರೆ, ವಿಸಿಟಿಂಗ್ ಕಾರ್ಡ್ ಇದೆ ತಾನೆ!!
Posted On November 15, 2019
ಬಹುಶ: ಲೆಕ್ಕಕ್ಕಿಂತ ಹೆಚ್ಚು ಬಹುಮತ ಬಂದಿರುವುದರಿಂದ ಇನ್ನು ಮುಂದಿನ ಐದು ವರ್ಷ ಮಂಗಳೂರು ಸ್ವರ್ಗ ಆಗುವುದರಲ್ಲಿ ಸಂಶಯವಿಲ್ಲ. ಜನ ಎರಡೂ ಕೈ ಒಟ್ಟಿಗೆ ಮಾಡಿ ಎಷ್ಟೇ ಸೀಟು ಬೇಕು ಬಾಚಿಕೊಳ್ಳಿ ಎಂದು ಮೊಗೆದು ಬಿಜೆಪಿ ತೆಕ್ಕೆಗೆ ಒಟ್ಟು 44 ಸೀಟು ಹಾಕಿದ್ದಾರೆ. ಇದು ನಿಜಕ್ಕೂ ಅದ್ಭುತ ಗೆಲುವು. ಅದರೊಂದಿಗೆ ಇನ್ನು ಅಭಿವೃದ್ಧಿ ಕಾರ್ಯ ವೇಗ ಪಡೆದುಕೊಳ್ಳಲಿದೆ. ಯಾಕೆಂದರೆ ಇನ್ನು ಅಭಿವೃದ್ಧಿ ಆಗದಿದ್ದರೆ ಯಾರನ್ನು ದೂರುವ ಆಗಿಲ್ಲ. ದೂರಲು ಎದುರಾಳಿ ಯಾರು ಇಲ್ಲ. ಇಡೀ ಮೈದಾನದಲ್ಲಿ ಎದುರಾಳಿಯೇ ಇಲ್ಲದ ರೀತಿಯಲ್ಲಿ ಬಿಜೆಪಿ ಕೇಂದ್ರದಿಂದ ಪಾಲಿಕೆ ತನಕ ಆಡುವ ಹೊತ್ತಿದು. ಬಹುಶ: ಮಂಗಳೂರಿಗರ ಇತಿಹಾಸದಲ್ಲಿ ಇಂತಹ ಅವಕಾಶ ಯಾವತ್ತೂ ಸಿಕ್ಕಿಲ್ಲ. ಇನ್ನು ಅಭಿವೃದ್ಧಿ ಆಗದಿದ್ದರೆ ಬಿಜೆಪಿಯಿಂದ ಅವರ ಯಾವ ಜನಪ್ರತಿನಿಧಿ ಕೂಡ ಯಾರನ್ನು ಟೀಕೆ ಮಾಡದ ವ್ಯವಸ್ಥೆಯನ್ನು ಮತದಾರ ನೀಡಿದ್ದಾನೆ.
ಈ ಬಾರಿ ಜನ ಬಿಜೆಪಿಯನ್ನು ನಿರೀಕ್ಷೆಗಿಂತ ಹೆಚ್ಚೆ ನಂಬಲು ಕಾರಣ ಆ ವಿಸಿಟಿಂಗ್ ಕಾರ್ಡ್. ನಿಮ್ಮ ಮನೆ ಬಾಗಿಲಿಗೆ ಬಂದ ಬಿಜೆಪಿ ಅಭ್ಯರ್ಥಿ ವೋಟ್ ಕೇಳುತ್ತಾ ಏನೇ ಸಮಸ್ಯೆಯಾದರೂ ಒಂದು ವಿಸಿಟಿಂಗ್ ಕೊಟ್ಟು ಇದಕ್ಕೆ ಕರೆ ಮಾಡಿ ಹೇಳಿ ಎಂದು ತಮ್ಮ ಫೋನ್ ನಂಬ್ರ ಕೊಟ್ಟಿರುವುದು ನಿಮಗೆ ನೆನಪಿರಬಹುದು. ಅದರಲ್ಲಿ ದಿನದ 24 ಗಂಟೆ, ವಾರದ ಏಳು ದಿನ, ವರ್ಷದ 365 ದಿನ ಯಾವಾಗ ನೀವು ಫೋನ್ ಮಾಡಿದರೂ ಬಿಜೆಪಿಯಿಂದ ಗೆದ್ದಿರುವ ಕಾರ್ಪೋರೇಟರ್ ನಿಮ್ಮ ಫೋನ್ ತೆಗೆಯಬೇಕು. ತೆಗೆಯುವುದು ಮಾತ್ರವಲ್ಲ, ಸಮಸ್ಯೆಗೆ ಸ್ಪಂದಿಸಬೇಕು, ಕೇವಲ ಕೇಳಿ ಆಯಿತು ಎನ್ನುವುದಲ್ಲ, ಅದನ್ನು ಬಗೆಹರಿಸಬೇಕು. ಇಷ್ಟು ಮಾಡದಿದ್ರೆ ಅದು ಬಿಜೆಪಿಗೆ ಮುಂದಿನ ದಿನಗಳಲ್ಲಿ ದೊಡ್ಡ ಮೈನಸ್ ಆಗಲಿದೆ. ಯಾಕೆಂದರೆ ಗೆಲ್ಲುವ ಮೊದಲು ಬೇಕಾದರೆ ಸೂರ್ಯ, ಚಂದ್ರನನ್ನು ತಂದು ನಿಮ್ಮ ಅಂಗಳದಲ್ಲಿ ನಿಲ್ಲಿಸುತ್ತೇವೆ ಎಂದು ಪ್ರತಿಯೊಂದು ರಾಜಕೀಯ ಪಕ್ಷದ ಅಭ್ಯರ್ಥಿಗಳು ಹೇಳುತ್ತಾರೆ. ಆದರೆ ಗೆದ್ದ ಬಳಿಕ ನಾವು ಸಮಸ್ಯೆ ಆಗಿದೆ ಎಂದರೆ ಈಗ ಅಲ್ಲಿದ್ದೇನೆ, ಈಗ ಇಲ್ಲಿದ್ದೇನೆ ಎಂದು ಹೇಳಿ ಜಾರುತ್ತಾರೆ ವಿನ: ಅದನ್ನು ಪರಿಹರಿಸಲು ಹೋಗುವುದಿಲ್ಲ. ಬೆರಳೆಣಿಕೆಯ ಕಾರ್ಪೋರೇಟರ್ ಗಳು ಜನರ ಮಧ್ಯೆಯೇ ಇರುತ್ತಾರೆ ವಿನ: ಹೆಚ್ಚಿನವರು ಗೆದ್ದ ಮೇಲೆ ಕೈಗೆ ಸಿಗುವುದು ಅಪರೂಪ. ಆದರೆ ಈ ಬಾರಿ ವಿಸಿಟಿಂಗ್ ಕಾರ್ಡ್ ಕೊಟ್ಟು ಯಾವಾಗ ಬೇಕಾದರೂ ಕಾಲ್ ಮಾಡಿ ಎಂದಿರುವುದರಿಂದ ಜನರಿಗೆ ವಿಶ್ವಾಸ ಹೆಚ್ಚಿಗೆ ಬಂದಿರಬಹುದು.
ಇನ್ನು ಶನಿವಾರ ವಿಜಯೋತ್ಸವ ಎಲ್ಲಾ ಮುಗಿದ ಮೇಲೆ ನಿಜವಾದ ಆಟ ಶುರುವಾಗುವುದು. ನಾನು ಹೊಸ ಕಾರ್ಪೋರೇಟರ್ ಗಳಿಗೆ ಕೊಡುವ ಸಲಹೆ ಏನೆಂದರೆ ಸೋಮವಾರ ಪಾಲಿಕೆಗೆ ಹೋಗಿ ಮೊದಲಿಗೆ ನಿಮ್ಮ ಜೆಇ ಯಾರು ಎಂದು ನೋಡಿ. ಜೆಇ ಎಂದರೆ ಜ್ಯೂನಿಯರ್ ಇಂಜಿನಿಯರ್. ನೀವು ಗೆದ್ದ ಬಳಿಕ ಮಾಡಬೇಕಾದ ಮೊದಲ ಕಾರ್ಯ ನಿಮ್ಮ ವಾರ್ಡುಗಳ ರಸ್ತೆ ಗುಂಡಿಗಳನ್ನು ಮುಚ್ಚುವುದು. ಅದಕ್ಕಾಗಿ ಈಗಾಗಲೇ ಅನುದಾನ ಸ್ಯಾಂಕ್ಷನ್ ಆಗಿರುತ್ತದೆ. ಆದ್ದರಿಂದ ಕೆಲಸ ಯಾವಾಗ ಪ್ರಾರಂಭವಾಗುತ್ತದೆ ಎಂದು ಜೆಇಗೆ ಕೇಳಿ. ಅಲ್ಲಿ ಕೆಲಸ ಆಗುವಾಗ ನಿಂತು ನೋಡಿ. ಕಳಪೆ ಆಗದಂತೆ ನೋಡಿಕೊಳ್ಳಿ. ಕಾರ್ಪೋರೇಟರ್ ಆಗುವುದು ಬಿಲ್ಡರ್ ಗಳ ಅಭಿವೃದ್ಧಿಗಾಗಿ, ಕಾಮಗಾರಿಗಳ ಕಮೀಷನ್ ಗೆ, ತ್ಯಾಜ್ಯ ಸಂಗ್ರಹ ಗುತ್ತಿಗೆದಾರರ ಪರ ಇರುವುದಕ್ಕೆ ಎಂದು ಸಾಬೀತುಪಡಿಸಲು ಹೋಗಬೇಡಿ.
ಇದೊಂದು ರೀತಿಯಲ್ಲಿ ನಿಮಗೆ ಅಗ್ನಿ ಪರೀಕ್ಷೆ. ಕೆಲಸ ಮಾಡಿದವರನ್ನು ಮಾತ್ರ ಜನ ಆಯ್ಕೆ ಮಾಡುತ್ತಾರೆ. ಕೆಲವೊಮ್ಮೆ ಕೆಲಸ ಮಾಡಿಯೂ ಗೆಲ್ಲದ ಉದಾಹರಣೆಗಳಿವೆ. ಆದರೆ ಕೆಲಸ ಮಾಡಿ ಸೋತರೂ ಮನಸ್ಸಿಗೆ ತೃಪ್ತಿ ಇರಬೇಕು. ಇದ್ದಷ್ಟು ದಿನ ಉಂಡು, ತಿಂದು, ಗಾಡಿಗಳನ್ನು ಖರೀದಿಸಿ, ಮನೆ ಕಟ್ಟಿಸಿ, ಸೇಫ್ ಆದೆ ಎಂದು ಅನಿಸಿಕೊಳ್ಳಬಾರದು. ಗೆಲ್ಲುವ ಮೊದಲು ಬೈಟ್ ಕಾಫಿ ಕುಡಿತ್ತಿದ್ದವರು ಗೆದ್ದ ಬಳಿಕ ಕೆಲವು ತಿಂಗಳುಗಳಲ್ಲಿ ವಾರಕ್ಕೆ ಮೂರು ದಿನ ಹೆಂಡತಿ, ಮಕ್ಕಳನ್ನು ಕರೆದುಕೊಂಡು ಫೋಶ್ ಹೋಟೆಲುಗಳಲ್ಲಿ ಹಣ ಪೋಲು ಮಾಡಿದ್ದನ್ನು ಈ ಸಮಾಜ ನೋಡಿದೆ. ಅಂತವರು ಈ ಬಾರಿ ಬಿಜೆಪಿಯಲ್ಲಿ ಇದ್ದರೂ ಗೆದ್ದಿಲ್ಲ. ಆದ್ದರಿಂದ ಜನ ಎಲ್ಲವನ್ನು ಎಚ್ಚರಿಕೆಯಿಂದ ಗಮನಿಸಿರುತ್ತಾರೆ. ಕೆಲಸ ಮಾಡಿ, ಇಲ್ಲದಿದ್ದರೆ!
ಇದೊಂದು ರೀತಿಯಲ್ಲಿ ನಿಮಗೆ ಅಗ್ನಿ ಪರೀಕ್ಷೆ. ಕೆಲಸ ಮಾಡಿದವರನ್ನು ಮಾತ್ರ ಜನ ಆಯ್ಕೆ ಮಾಡುತ್ತಾರೆ. ಕೆಲವೊಮ್ಮೆ ಕೆಲಸ ಮಾಡಿಯೂ ಗೆಲ್ಲದ ಉದಾಹರಣೆಗಳಿವೆ. ಆದರೆ ಕೆಲಸ ಮಾಡಿ ಸೋತರೂ ಮನಸ್ಸಿಗೆ ತೃಪ್ತಿ ಇರಬೇಕು. ಇದ್ದಷ್ಟು ದಿನ ಉಂಡು, ತಿಂದು, ಗಾಡಿಗಳನ್ನು ಖರೀದಿಸಿ, ಮನೆ ಕಟ್ಟಿಸಿ, ಸೇಫ್ ಆದೆ ಎಂದು ಅನಿಸಿಕೊಳ್ಳಬಾರದು. ಗೆಲ್ಲುವ ಮೊದಲು ಬೈಟ್ ಕಾಫಿ ಕುಡಿತ್ತಿದ್ದವರು ಗೆದ್ದ ಬಳಿಕ ಕೆಲವು ತಿಂಗಳುಗಳಲ್ಲಿ ವಾರಕ್ಕೆ ಮೂರು ದಿನ ಹೆಂಡತಿ, ಮಕ್ಕಳನ್ನು ಕರೆದುಕೊಂಡು ಫೋಶ್ ಹೋಟೆಲುಗಳಲ್ಲಿ ಹಣ ಪೋಲು ಮಾಡಿದ್ದನ್ನು ಈ ಸಮಾಜ ನೋಡಿದೆ. ಅಂತವರು ಈ ಬಾರಿ ಬಿಜೆಪಿಯಲ್ಲಿ ಇದ್ದರೂ ಗೆದ್ದಿಲ್ಲ. ಆದ್ದರಿಂದ ಜನ ಎಲ್ಲವನ್ನು ಎಚ್ಚರಿಕೆಯಿಂದ ಗಮನಿಸಿರುತ್ತಾರೆ. ಕೆಲಸ ಮಾಡಿ, ಇಲ್ಲದಿದ್ದರೆ!
- Advertisement -
Trending Now
ಪ್ರೀತಿ ಅದ್ಭುತವು ಹೌದು ಭಯಾನಕವು ಹೌದು!
April 23, 2024
ನಕ್ಸಲರನ್ನು ಬೆಂಬಲಿಸಿ ಮಾತನಾಡುವ ಪರಿಸ್ಥಿತಿ ಬಂತಲ್ಲ ಇವರಿಗೆ!
April 19, 2024
Leave A Reply