ಬರೆದದ್ದಕ್ಕೆ ಸಾರ್ಥಕಭಾವ ಬರುವುದೇ ಇಂತಹ ದಕ್ಷ ಅಧಿಕಾರಿಗಳ ಕ್ರಮದಿಂದ!!
Posted On March 14, 2020
ನಾನು ಮೊನ್ನೆ “ಮಣ್ಣಗುಡ್ಡೆಗೆ ಆಂಟೋನಿಯವರು ಬರಲ್ವಾ?” ಎನ್ನುವ ಜಾಗೃತ ಅಂಕಣವನ್ನು ಬರೆದಿದ್ದೆನಲ್ಲ. ಅದನ್ನು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆಯವರು ಓದಿದ್ದಾರೆ. ಅದರ ಬಳಿಕ ನನ್ನನ್ನು ಕರೆದು ಮಾತನಾಡಿಸಿದ್ದಾರೆ. ಹೊಸ ಆಯುಕ್ತರು ಪಾಲಿಕೆಯ ಬಂದಾಗ ತುಂಬಾ ನಿರೀಕ್ಷೆ ಇತ್ತು. ಆದರೆ ಏನೂ ಆಗಿಲ್ಲ ಎನ್ನುವ ಅರ್ಥದ ಮಾತುಗಳನ್ನು ಬರೆದಿದ್ದೆ. ಅದು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ನವರು ತೋರುತ್ತಿರುವ ನಿರ್ಲಕ್ಷ್ಯದಿಂದ ಸ್ವಚ್ಚತೆ ಆಗಿರದೇ ಇರುವುದರಿಂದ ನಿಯಮ ಉಲ್ಲಂಘನೆ ಮಾಡುತ್ತಿರುವ ಸಂಸ್ಥೆಯ ಮೇಲೆ ಮೂಗುದಾರ ತೂರಿಸುವ ಜವಾಬ್ದಾರಿಯನ್ನು ಆಯುಕ್ತರು ತೋರಿಸಬೇಕು ಎನ್ನುವ ಅರ್ಥದಲ್ಲಿ ಬರೆದದ್ದೇ ವಿನ: ಬೇರೆ ಏನೂ ಉದ್ದೇಶ ಇರಲಿಲ್ಲ. ಆ ಜಾಗೃತ ಅಂಕಣದ ಉದ್ದೇಶ ಮಾತ್ರ ಈಡೇರಿದೆ. ಆಯುಕ್ತರಾದ ಅಜಿತ್ ಹೆಗ್ಡೆಯವರು ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನ ಸಂಬಂಧಪಟ್ಟವರನ್ನು ಕರೆಸಿ ಕಠಿಣ ಮಾತುಗಳನ್ನು ಆಡಿದ್ದಾರೆ. ಬಿಲ್ ಪಾಸು ಮಾಡಲು ದಂಬಾಲು ಬೀಳುವವರು ಸ್ವಚ್ಚತೆಯ ವಿಷಯ ಬಂದಾಗ ಬೇಕಾಬಿಟ್ಟಿ ಕೆಲಸ ಮಾಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ಹಾಗೂ ಪರಿಸರ ಇಂಜಿನಿಯರ್ ಶಬರೀಶ್ ರೈ ಅವರನ್ನು ಕರೆದು “ಹನುಮಂತ್ ಕಾಮತ್ ಅವರ ಜೊತೆಗೆ ಹೋಗಿ ಎಲ್ಲೆಲ್ಲಿ ಸ್ವಚ್ಚತೆಯ ಬಗ್ಗೆ ಕೇರ್ ಲೆಸ್ ಮಾಡಲಾಗಿದೆಯೋ ಅಲ್ಲೆಲ್ಲ ತಕ್ಷಣ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರಿಂದ ಕೆಲಸ ಮಾಡಿ ವರದಿ ಕೊಡಿ” ಎಂದು ಸೂಚಿಸಿದ್ದಾರೆ. ನಾನು ಅಧಿಕಾರಿಗಳೊಂದಿಗೆ ಮಣ್ಣಗುಡ್ಡೆ ವಾರ್ಡ್ ಮತ್ತು ಪೋರ್ಟ್ ವಾರ್ಡಿಗೆ ತೆರಳಿ ಅವರಿಗೆ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದೆ. ಅಧಿಕಾರಿಗಳು ತಾವು ಇಚ್ಚಾಶಕ್ತಿ ತೋರಿಸಿದರೆ ಏನು ಮಾಡಬಹುದು ಎಂದು ಮತ್ತೆ ಸಾಬೀತು ಪಡಿಸಿದ್ದಾರೆ. ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನ ಸಿಬ್ಬಂದಿಗಳಿಂದ ಮರುದಿನ ಬೆಳ್ಳಂಬೆಳ್ಳಗೆ ಕೆಲಸ ಮಾಡಿ ಆ ಏರಿಯಾಗಳನ್ನು ಸ್ಚಚ್ಚಗೊಳಿಸಿದ್ದಾರೆ. ಅದರ ಫೋಟೋಗಳನ್ನು ಇವತ್ತು ಪೋಸ್ಟ್ ಮಾಡಿದ್ದೇನೆ.
ಇದಕ್ಕಾಗಿ ನಾನು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಅವರನ್ನು ಅಭಿನಂದಿಸುತ್ತೇನೆ. ಪ್ರತಿ ತಿಂಗಳು ಎರಡೂ ಕಾಲು ಕೋಟಿಯನ್ನು ನಮ್ಮ ತೆರಿಗೆ ಹಣದಿಂದ ಪಾವತಿಸಿ 50 ಲಕ್ಷದಷ್ಟೂ ಕೆಲಸ ಆಗದೇ ಇದ್ದಾಗ ನನ್ನಂತವರ ಮನಸ್ಸಿಗೆ ನೋವಾಗುವುದು ಸಹಜ. ಯಾಕೆಂದರೆ ನಗರದ ಜನರು ಕೊಡುವ ತೆರಿಗೆ ಹಣದಿಂದಲೇ ಆಂಟೋನಿ ವೇಸ್ಟ್ ನವರಿಗೆ ಹಣ ಕೊಡುವುದು ಮತ್ತು ತೆರಿಗೆಯ ಹಣದಿಂದಲೇ ಅಧಿಕಾರಿಗಳಿಗೆ ಸಂಬಳ ಹೋಗುವುದು. ಆದರೆ ಜನ ಬೊಬ್ಬೆ ಹೊಡೆಯಲ್ಲ ಎನ್ನುವ ಏಕೈಕ ಕಾರಣದಿಂದ ಬೇಕಾಬಿಟ್ಟಿ ಕೆಲಸ ನಡೆದರೆ ಅದನ್ನು ನಾನಾದರೂ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಲು ಆಗುತ್ತಾ? ಇನ್ನು ಆಂಟೋನಿಯವರಿಗೆ ಒಂದು ಮೀಟರ್ ಅಗಲದ ತೋಡುಗಳನ್ನು ಸ್ವಚ್ಚತೆ ಮಾಡುವ ಬಗ್ಗೆ ಸೂಚನೆ ಇದೆ. ಆದರೆ ಅದನ್ನು ಅವರು ಮಾಡುತ್ತಲೇ ಇರಲಿಲ್ಲ. ಇವತ್ತು ನಾನು ತೋರಿಸುತ್ತಿರುವ ಫೋಟೋಗಳಲ್ಲಿ ಅಂತಹ ಒಂದು ಮೀಟರ್ ಅಗಲದ ಚರಂಡಿಗಳನ್ನು ಕೂಡ ಕ್ಲೀನ್ ಮಾಡಿದ್ದಾರೆ.
ಒಂದಂತೂ ನಿಜ. ಇದು ಕೇವಲ ನಾನು ಜಾಗೃತ ಅಂಕಣದಲ್ಲಿ ಬರೆದು ಫೋಟೋಗಳನ್ನು ಹಾಕಿದ ದಿನ ಮಾತ್ರ ಸ್ವಚ್ಚತೆ ಬಗ್ಗೆ ಕ್ರಮ ತೆಗೆದುಕೊಳ್ಳುವುದಲ್ಲ. ಉಳಿದ ಸಮಯದಲ್ಲಿಯೂ ಆಂಟೋನಿ ವೇಸ್ಟ್ ನವರು ತಮ್ಮ ಕರ್ತವ್ಯವನ್ನು ಮಾಡಬೇಕು. ಹಾಗೇ ಅಧಿಕಾರಿಗಳು ಕೂಡ ಎಚ್ಚರಿಕೆ ವಹಿಸಬೇಕು. ಇವತ್ತು ಮಣ್ಣಗುಡ್ಡೆ ವಾರ್ಡ್ ಹಾಗೂ ಪೋರ್ಟ್ ವಾರ್ಡಿನ ಬೆಂಬೂ ಬಝಾರ್, ಓಲ್ಡ್ ಪೋರ್ಟ್ ಏರಿಯಾಗಳನ್ನು ನೋಡುವಾಗ ಸಮಾಧಾನ ಎನಿಸುತ್ತದೆ. ಅದಕ್ಕೆ ಕಾರಣ ಸ್ವಚ್ಚತೆ. ಇದು ಎಲ್ಲಾ ಅರವತ್ತು ವಾರ್ಡುಗಳಲ್ಲಿ ಕೂಡ ನಡೆಯಬೇಕು. ಆಗ ಮಾತ್ರ ನಾವು ಕಸಕರ ಕೊಟ್ಟದ್ದಕ್ಕೆ ಸಾರ್ಥಕವಾಗುತ್ತದೆ!!
- Advertisement -
Trending Now
ಪ್ರೀತಿ ಅದ್ಭುತವು ಹೌದು ಭಯಾನಕವು ಹೌದು!
April 23, 2024
ನಕ್ಸಲರನ್ನು ಬೆಂಬಲಿಸಿ ಮಾತನಾಡುವ ಪರಿಸ್ಥಿತಿ ಬಂತಲ್ಲ ಇವರಿಗೆ!
April 19, 2024
Leave A Reply