• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೊರೊನಾ ನೆಪ, ಪ್ರಕೃತಿ ಹೊಸ ಬಟ್ಟೆ ಧರಿಸುತ್ತಿದ್ದಾಳೆ!!

Hanumantha Kamath Posted On March 25, 2020


  • Share On Facebook
  • Tweet It

ನನ್ನ ಜಾಗೃತ ಅಂಕಣದ ಎಲ್ಲಾ ಹಿತೈಷಿಗಳಿಗೆ ಯುಗಾದಿ ಹಬ್ಬದ ಶುಭಾಶಯಗಳು. ಹಳೆ ಸಂವತ್ಸರದ ಕೊನೆಯಲ್ಲಿ ಪ್ರಕೃತಿ ತನಗೆ ಬೇಕಾದ ಹಾಗೆ ನಮ್ಮನ್ನು ಅಲ್ಲಾಡಿಸಿ ಡಬ್ಬದಲ್ಲಿ ತುಂಬಿಸಿ ಮುಚ್ಚಳ ಹಾಕಿ ಬಂದ್ ಮಾಡಿದಂತೆ ಭಾಸವಾಗುತ್ತಿದೆ. ಸದ್ಯ ಹೊಸ ಸಂವತ್ಸರ ಇವತ್ತು ಕಾಲಿಟ್ಟಿದ್ದರೂ ನಾವು ಇನ್ನು ಮೂರು ವಾರ ಮನೆಯಿಂದ ಹೊರಗೆ ಕಾಲು ಹಾಕುವಂತಿಲ್ಲ. ಮನೆಯ ಹೊರಗೆ ಲಕ್ಷ್ಮಣ ರೇಖೆಯನ್ನು ನಮಗೆ ನಾವೇ ಎಳೆದುಕೊಂಡಿದ್ದೇವೆ. ರೇಖೆಯನ್ನು ದಾಟುವವರನ್ನು ಕೊರೋನಾ ಎತ್ತಿ ಲಂಕೆಗೆ ಅಲ್ಲ ಬೇರೆ ಲೋಕಕ್ಕೆ ಕರೆದುಕೊಂಡು ಹೋಗಲಿದೆ. ಕಣ್ಣಿಗೆ ಕಾಣದ ಒಂದು ವೈರಾಣು ಪ್ರಪಂಚವೀಡಿ ನಮ್ಮದೇ ಎಂದು ಬೀಗುತ್ತಿದ್ದವರನ್ನು ಕೂಡ ಮನೆಯ ಒಳಗೆ ಕೂಡಿ ಹಾಕಿದೆ. ಅದು ಪ್ರಕೃತಿಯ ತಾಕತ್ತು.

ಸಹಿಸುವಷ್ಟು ದೌರ್ಜನ್ಯವನ್ನು ಸಹಿಸುವ ಪ್ರಕೃತಿ ಒಂದು ಸಲ ಮಗ್ಗಲು ಬದಲಾಯಿಸಿ ಬಿಟ್ಟರೆ ದೇಶಕ್ಕೆ ದೇಶವೀಡಿ ಬಾಲ ಮಡಚಿ ಬಿಲದೊಳಗೆ ಇಡಬೇಕು, ಹಾಗೆ ಆಗುತ್ತದೆ. ಪ್ರಸ್ತುತ ಆಗಿರುವುದು ಕೂಡ ಅದೇ.
ನಾವು ರಿಪೇರಿ ಮಾಡಲಾಗದಷ್ಟು ಪ್ರಕೃತಿಯನ್ನು ಹಾಳು ಮಾಡಿಬಿಟ್ಟಿದ್ದೇವೆ. ವಾಯು ಮಾಲಿನ್ಯ ತುತ್ತತುದಿ ತಲುಪಿ ಆಗಿದೆ. ಅರಣ್ಯ ಸಂಪತ್ತು ಎಂದರೆ ಏನು ಎಂದು ಮುಂದಿನ ಪೀಳಿಗೆ ಕೇಳುವಂತಾಗಿದೆ. ನದಿಗಳನ್ನು ನಮ್ಮ ಸ್ವಾರ್ಥಕ್ಕಾಗಿ ಬರಡು ಮಾಡಿಬಿಟ್ಟಿದ್ದೇವೆ. ಕಾಡು ಪ್ರಾಣಿಗಳು ಮೂಕ ಭಾಷೆಯಲ್ಲಿಯೇ ಏನೋ ಹೇಳುತ್ತಾ ನಗರದೊಳಗೆ ಬಂದುಬಿಟ್ಟು ಪ್ರಾಣ ತ್ಯಜಿಸಿವೆ. ಸಮುದ್ರಗಳ ಜೀವಚರಗಳು ನಮ್ಮನ್ನು ಶಪಿಸುತ್ತಾ ಅವನತಿಯ ಅಂಚಿಗೆ ತೆರಳಿವೆ. ನಮ್ಮ ಈಗಿನ ಪೀಳಿಗೆ ಗುಬ್ಬಚ್ಚಿಗಳನ್ನು ಮತ್ತು ಮುಂದಿನ ಪೀಳಿಗೆ ಕಾಗೆಗಳನ್ನು ಪುಸ್ತಕಗಳಲ್ಲಿ ಮಾತ್ರ ನೋಡಬೇಕಿದೆ. ಪಶ್ಚಿಮ ಘಟ್ಟವೊಂದು ಇತ್ತು ಮತ್ತು ನಿತ್ಯ ಹರಿದ್ವರ್ಣದ ಕಾಡು ಎನ್ನುವ ಶಬ್ದವೇ ಚೆಂದ ಎನ್ನುವುದನ್ನು ಕವಿ ಪದ್ಯಗಳಲ್ಲಿ ಮಾತ್ರ ವರ್ಣಿಸಲಿದ್ದಾರೆ. ನಾವು ಯಾವುದನ್ನು ಬಿಟ್ಟಿಲ್ಲ. ಮನುಷ್ಯರನ್ನು ಬಿಟ್ಟು ಉಳಿದ ಎಲ್ಲವನ್ನು ತಿಂದು ಮುಗಿಸಿದ್ದೇವೆ. ಜಾಗತಿಕ ತಾಪಮಾನದ ಬಗ್ಗೆ ಕೋಟಿಗಟ್ಟಲೆ ಖರ್ಚು ಮಾಡಿ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ. ಆದರೆ ಮನೆಯ ಅಂಗಳದಲ್ಲಿ ಒಂದು ಗಿಡ ನೆಡಲು ನಮಗೆ ಸಮಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಗಂಟೆಗಟ್ಟಲೆ ಕಳೆಯುತ್ತೇವೆ. ಅದೇ ದಿನಕ್ಕೆ ಒಂದು ಸಲ ವಿಷ್ಣು ಸಹಸ್ರನಾಮವನ್ನು ಓದಲು ಪುರುಸೊತ್ತು ಇಲ್ಲ. ಅನೇಕರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ, ಜನ್ಮ ನೀಡಿದ ಅಮ್ಮ, ಅಪ್ಪನೊಂದಿಗೆ ಕೆಲವು ಗಂಟೆ ಮಾತನಾಡಿದ್ದೇ ಮೊನ್ನೆ ಜನತಾ ಕರ್ಪ್ಯೂ ಇದ್ದಾಗ ಎಂದರೆ ನಾವು ಎಲ್ಲಿ ತಲುಪಿದ್ದೇವೆ ಎಂದು ಊಹಿಸಿಕೊಳ್ಳಿ. ಸೂರ್ಯ ಮುಳುಗುತ್ತಿದ್ದಂತೆ ಮಕ್ಕಳನ್ನು ಕರೆದು ಕೈ ಕಾಲು ತೊಳೆದು ದೀಪ ಹಚ್ಚಿ ದೇವರ ಒಂದೆರಡು ಭಜನೆ ಹಾಡಿಸಿ, ಸ್ತೋತ್ರ ಪಠಣ ಮಾಡಿಸಿ ಮನೆಗಳಲ್ಲಿ ಸಕರಾತ್ಮಕ ಶಕ್ತಿಯನ್ನು ಹರಿಸುತ್ತಿದ್ದ ಅಮ್ಮಂದಿರಿಗೆ ಪುರುಸೊತ್ತು ಇಲ್ಲ. ಮನೆಯ ಹಿರಿಯರು ಈಗ ಒಂದೋ ಹಳ್ಳಿಯ ಮನೆಗಳಲ್ಲಿ ಅಥವಾ ವೃದ್ಧಾಶ್ರಮದಲ್ಲಿದ್ದಾರೆ.

ಇದಕ್ಕೆಲ್ಲಾ ಏನು ಪರಿಹಾರ ಎಂದು ಮಹಾನಗರಗಳಲ್ಲಿ ಸಂವಾದಗಳನ್ನು ಏರ್ಪಡಿಸಲಾಗುತ್ತದೆ. ಅಧ್ಯಯನ ಪ್ರಬಂಧಗಳನ್ನು ಮಂಡಿಸಲಾಗುತ್ತದೆ. ಎಲ್ಲವನ್ನು ಕೇಳಿದ ನಾಲ್ಕು ಜನಪ್ರತಿನಿಧಿಗಳು, ಆರು ಬುದ್ಧಿಜೀವಿಗಳು, ಹತ್ತು ಚಿಂತಕರು ಪಂಚತಾರಾ ಹೋಟೇಲಿನಿಂದ ತರಿಸಿದ ಭಕ್ಷಭೋಜ್ಯಗಳನ್ನು ತಿಂದು ಕಾರಿನಲ್ಲಿ ಕುಳಿತು ತಮ್ಮ ಬಂಗ್ಲೆಗಳಿಗೆ ಹಿಂತಿರುಗುತ್ತಾರೆ. ಅದಕ್ಕೆ ಇವರಿಂದ ಏನು ಆಗಲ್ಲ ಎಂದು ಅಂದುಕೊಂಡ ಪ್ರಕೃತಿ ದೇವಿ ತನ್ನಲ್ಲಿದ್ದ ಪರಿಹಾರವನ್ನು ಜನರ ಮುಂದೆ ಇಟ್ಟಿದ್ದಾಳೆ. ನೀವು ಮೂರು ವಾರ ಮನೆಯಿಂದ ಹೊರಗೆ ಬರಬೇಡಿ ಎಂದು ಸೂಕ್ಷ್ಮವಾಗಿ ಹೇಳಿದ್ದಾಳೆ. ಅದೇ ಒಂದು ವೇಳೆ ಯಾವುದೋ ದಿನ ರಾತ್ರಿ ಎಂಟು ಗಂಟೆಗೆ ಮೋದಿ ಕ್ಯಾಮೆರಾಗಳ ಮುಂದೆ ಬಂದು “ನಾಳೆಯಿಂದ ಪ್ರಕೃತಿಯನ್ನು ಉಳಿಸೋಣ, ಮೂರು ವಾರ ಹೊರಗೆ ಬರಬೇಡಿ” ಎಂದರೆ ಜನರು ಇವರಿಗೇನಾಗಿದೆ ಮಾರ್ರೆ ಎಂದು ಆಡಿಕೊಳ್ಳುತ್ತಿದ್ದರು. ಆದರೆ ಈಗ ಹೊರಗೆ ಬರಬೇಡಿ, ಬಂದರೆ ಪುನ: ಒಳಗೆ ಹೋಗುತ್ತಿರೋ ಅಥವಾ ನೇರವಾಗಿ ಮೇಲಕ್ಕೆ ಹೋಗುತ್ತಿರೋ ನೀವೆ ನಿರ್ಧರಿಸಿ ಎಂದು ಪ್ರಕೃತಿ ಹೇಳಿದೆ. ಕೊರೊನಾ ವೈರಾಣು ಒಂದು ನೆಪ. ಪ್ರಕೃತಿ ತನ್ನ ಪೊರೆ ಕಳಚುವ ಅವಧಿ ಇದು. ಅದರ ಬಳಿ ಎಲ್ಲಾ ರೀತಿಯ ಪರಿಹಾರ ಇದೆ. ನಾವು ಅರ್ಥ ಮಾಡಿಕೊಂಡಿಲ್ಲ, ಅಷ್ಟೇ!

  • Share On Facebook
  • Tweet It


- Advertisement -


Trending Now
ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
Hanumantha Kamath July 5, 2022
ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
Hanumantha Kamath July 4, 2022
Leave A Reply

  • Recent Posts

    • ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
  • Popular Posts

    • 1
      ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • 2
      ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • 3
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 4
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 5
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search