ಸಿಎಂ ಒಳಗೆ ಹಾಕ್ತೀನಿ ಎಂದ್ರೆ ಸುನೀಲು ನಾನಿದ್ದೀನಿ ಎಂದದ್ದೇ ರೋಚಕ!!
![](https://tulunadunews.com/wp-content/uploads/2020/04/PicsArt_04-10-08.46.23-960x640.png)
ನೀನು ಅತ್ತಾಗೆ ಮಾಡು, ನಾನು ಚಿವುಟಿದಾಗೆ ಮಾಡುತ್ತೇನೆ ಎನ್ನುವ ಗಾದೆ ಮಾತು ಇದೆ. ನೀನು ತಬ್ಲಿಘೀ ಸಮಾವೇಶದಲ್ಲಿ ಭಾಗವಹಿಸಿದವರ ವಿರುದ್ಧ ಏನು ಬೇಕಾದರೂ ಹೇಳಿಕೆ ಕೊಡು, ನಾನು ನನಗೆ ಏನೂ ಗೊತ್ತಿಲ್ಲದ ಹಾಗೆ ಇದ್ದು ಬಿಡುತ್ತೇನೆ. ಈ ಸಲ ವಿವಾದ ಮಾಡುವ ಜವಾಬ್ದಾರಿ ನಿಮ್ದು. ಒಟ್ಟಿನಲ್ಲಿ ರಾಜ್ಯ ಸರಕಾರವೀಡಿ ನರಸತ್ತ ಗಂಡಸಿನಂತೆ ಆಗಬಾರದು, ಅಷ್ಟೇ. ಇಂತಹ ಒಂದು ಮಾತುಕತೆ ಸಿಎಂ ಹಾಗೂ ರೇಣು, ಯತ್ನಾಳ್ ನಡುವೆ ಆಗಿದೆಯಾ ಎನ್ನುವುದು ಡೌಟು. ಯಾಕೆಂದರೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎನ್ನುವ ಆಟಕ್ಕಿಲ್ಲ ಲೆಕ್ಕಕ್ಕುಂಟು ಪೋಸ್ಟ್ ಹೊಂದಿರುವ ರೇಣುಕಾಚಾರ್ಯ ಹಾಗೂ ದಿನ ಬೆಳಗ್ಗೆ ಎದ್ದು ಯಾವ ವಿಷಯ ಮಾತನಾಡಿದ್ರೆ ಸುದ್ದಿಯಾಗುತ್ತದೆ ಎಂದು ಯೋಚಿಸುವ ಬಸವನಗೌಡ ಯತ್ನಾಳ್ ಇಬ್ಬರು ಸೇರಿ ತಬ್ಲೀಘಿಗಳನ್ನು ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದು ಮಾತನಾಡಿ ರೋಷಾವೇಶ ತೋರಿದ್ದಾರೆ. ತಬ್ಲೀಘಿಗಳನ್ನು ಕಂಡರೆ ಗುಂಡು ಹೊಡೆಯಬೇಕು ಎನ್ನುವ ಮಾತುಗಳನ್ನು ಆಡಿದ್ದಾರೆ. ಅದರಿಂದ ಉತ್ತೇಜಿತರಾದವರು ಸಿದ್ಧರಾಮಯ್ಯ. ಅವರು ಸಹಜವಾಗಿ ಇದರಿಂದ ಆಗುವ ರಾಜಕೀಯ ಲಾಭದ ಲೆಕ್ಕವನ್ನು ಹಾಕಿದ್ದಾರೆ. ರೇಣು ಹೇಳಿದ್ದ ಅಂದರೆ ಅದು ಯಡಿಯೂರಪ್ಪನವರೇ ಹೇಳಿದ ಹಾಗೆ. ಆದ್ದರಿಂದ ಯಡಿಯೂರಪ್ಪನವರು ಒಂದೋ ತಮ್ಮ ಶಿಷ್ಯನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಥವಾ ರೇಣು ಹೇಳಿದ್ದು ಸರಿ ಎಂದು ಒಪ್ಪಿಕೊಳ್ಳಬೇಕು ಎನ್ನುವ ಅರ್ಥದ ಮಾತುಗಳನ್ನು ಆಡಿದ್ದಾರೆ. ಈಗ ಇಲ್ಲಿರುವ ಪ್ರಶ್ನೆ ಏನೆಂದರೆ ಮುಖ್ಯಮಂತ್ರಿಯವರ ಬಳಿ ಒಂದು ಮಾತು ಕೇಳದೆ ರೇಣುಕಾಚಾರ್ಯ ಹೀಗೆ ಹೇಳಲು ಸಾಧ್ಯಾನಾ ಎನ್ನುವುದು. ಯಾಕೆಂದರೆ ಬೆಳಿಗ್ಗೆ ಎದ್ದು ಸುಸ್ಸು ಮಾಡಬೇಕಾ, ಬೇಡ್ವಾ ಎಂದು ಸಿಎಂ ಅವರನ್ನು ಕೇಳಿಯೇ ಮಾಡುವ ಇವರುಗಳು ಇಂತಹ ಗುಂಡುತುಂಡಿನ ಹೇಳಿಕೆಯನ್ನು ಕೊಡುತ್ತಾರೆ ಎಂದರೆ ಅದರ ಹಿಂದೆ ಸಿಎಂ ಪ್ರೇರಣೆ ಇರಬೇಕು. ಸಾಮಾನ್ಯವಾಗಿ ಇಂತಹ ವಿಷಯ ಬಂದಾಗ ಎದ್ದು ನಿಂತು ಮುಸ್ಲಿಮರ ವಿರುದ್ಧ ಬೆಂಕಿ ಕಾರುವುದು ಅನಂತ ಕುಮಾರ್ ಹೆಗ್ಡೆ. ಆದರೆ ಕೊರೊನಾ ಮತ್ತು ತಬ್ಲೀಘಿಗಳು ಇಷ್ಟು ಸದ್ದು ಮಾಡುವಾಗ ಅನಂತು ಒಂದು ಹೇಳಿಕೆಯನ್ನು ಕೂಡ ದೆಹಲಿ ಸಮಾವೇಶದ ವಿರುದ್ಧ ಕೊಟ್ಟಿಲ್ಲ ಎಂದರೆ ಎಲ್ಲರಿಗೂ ಪರಮಾಶ್ಚರ್ಯವಾಗಿದೆ. ಯಾಕೆಂದರೆ ಇಂತಹ ಅವಕಾಶವನ್ನು ಅನಂತು ಹೆಗ್ಡೆ ಬಿಟ್ಟ ಉದಾಹರಣೆಗಳಿಲ್ಲ.
![](https://tulunadunews.com/wp-content/uploads/2020/04/IMG-20200410-WA0003-380x381.jpg)
ಈ ಬಾರಿ ಇದನ್ನು ಬಳಸಿಕೊಂಡದ್ದು ಕಾರ್ಕಳದ ಸುನೀಲ್ ಕುಮಾರ್. ಸಿಎಂ “ಹೀಗೆ ಹೇಳಿಕೆ ಕೊಡಬೇಡ್ರಿ, ಒಳಗೆ ಹಾಕಿಸ್ತೇನೆ” ಎಂದು ಆವಾಜ್ ಹಾಕುತ್ತಿದ್ದರೆ ಇತ್ತ ಹೇಳಿಕೆ ಕೊಡ್ರಿ, ನಿಮ್ಮ ಹಿಂದೆ ನಾನಿದ್ದೇನೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದು ಸುನೀಲ್. ಕರಾವಳಿಯ ಎರಡು ಜಿಲ್ಲೆಗಳಲ್ಲಿ ಇವತ್ತು ಹದಿಮೂರರಲ್ಲಿ ಹನ್ನೆರಡು ಶಾಸಕರು ಬಿಜೆಪಿಯಿಂದ ಗೆದ್ದಿದ್ದಾರೆ ಎಂದರೆ ಅದಕ್ಕೆ ಕಾರಣ ಹಿಂದೂತ್ವ. ಸುನೀಲ್ ನಂತವರು ಇವತ್ತು ಮೂರನೇ ಬಾರಿ ಶಾಸಕರಾಗಲು ಕಾರಣ ಕೂಡ ಅವರು ಚುನಾವಣೆ ಹತ್ತಿರ ಬರುವಾಗ ಹೆಗಲ ಮೇಲೆ ಏರಿಸುವ ಕೇಸರಿ ಶಾಲು. ಘಟ್ಟದ ಮೇಲಿರುವ ಶಾಸಕರು ಅಗತ್ಯ ಬಿದ್ದರೆ ಊಸರವಳ್ಳಿಯಂತೆ ಬಣ್ಣ ಬದಲಾಯಿಸಿಕೊಂಡು ಬಿಟ್ಟಾರು. ಆದರೆ ಕರಾವಳಿಯಲ್ಲಿ ಹಾಗೆ ಮಾಡಿದರೆ ಮುಂದಿನ ಬಾರಿ ಅಲ್ಲಿ ಶಾಸಕನೇ ಬದಲಾಗಿ ಬಿಡುತ್ತಾನೆ. “ನಮ್ಮ ಕ್ಷೇತ್ರದಲ್ಲಿ 40% ಮುಸ್ಲಿಮರು ಕಣ್ರೀ, ಹಾಗೆ ಹೇಳಿಕೆ ಕೊಡುವಾಗ ಹಿಂದೆ ಮುಂದೆ ನೋಡಬೇಕಾಗುತ್ತದೆ ಎಂದು” ಹೇಳುವ ಕೆಲವು ಬಿಜೆಪಿ ಶಾಸಕರು ಬುಡಕ್ಕೆ ಬೆಂಕಿ ಬಿದ್ದಾಗ ನಾವೇ ಹಿಂದೂತ್ವ, ಹಿಂದೂತ್ವವೇ ನಾವು ಎಂದು ಹೇಳದಿದ್ದರೆ ಜನರೇ ಛೀ ಎಂದು ಮಾತನಾಡಿಕೊಳ್ಳುತ್ತಾರೆ.
ಇನ್ನು ಪುತ್ತೂರು ಶಾಸಕರು ಕೂಡ ನಮ್ಮ ಹಿಂದೂ ಹುಡುಗರ ತಂಟೆಗೆ ಹೋಗಬೇಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರಾದರೂ ಸುನೀಲ್ ಟ್ವಿಟರ್ ಒಂದಿಷ್ಟು ಸದ್ದು ಮಾಡಿರುವುದು ನಿಜ. ಇಲ್ಲಿ ಮುಂದಿನ ಬಾರಿ ಹನ್ನೆರಡು ಜನ ಮತ್ತೆ ಗೆಲ್ಲಬೇಕಾದರೆ ಕೊನೆಯಲ್ಲಿ ದೋಣಿಯಲ್ಲಿ ಕೈ ಹಿಡಿದು ನಡೆಸುವ ಹುಟ್ಟು ಹಿಂದೂತ್ವವೇ ಆಗಬೇಕಾಗಿದೆ. ಆದ್ದರಿಂದ ಯಡಿಯೂರಪ್ಪ ಏನೇ ಹೇಳಲಿ ನಾವು ನಮ್ಮ ಸೇಫ್ಟಿ ನೋಡೋಣ ಎಂದು ಸುನೀಲ್ ಈ ಉಭಯ ಜಿಲ್ಲೆಗಳ ಎಲ್ಲ ಶಾಸಕರ ಪರವಾಗಿ ಹೇಳಿಕೆ ಕೊಟ್ಟು ಎಲ್ಲರನ್ನು ದಡ ಸೇರಿಸಿದ್ದಾರೆ. ಇನ್ನು ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ಈ ವಿಷಯದಲ್ಲಿ ಬಾಯಿ ಮುಚ್ಚಿಸಿ ಅವರನ್ನು ಯುವಕರ ದೃಷ್ಟಿಯಲ್ಲಿ ವಿಲನ್ ಮಾಡುವ ಪ್ರಯತ್ನ ನಡೆದಿರಬಹುದೇನೋ. ಆದರೆ ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಹಾಗೆ ಹೇಳಿರುವುದು ಅವರ ದೃಷ್ಟಿಯಲ್ಲಿ ಸಹಿ. ಸುನೀಲ್ ಕುಮಾರ್ ಹೇಳಿದ್ದು ಅವರ ಮೂಗಿನ ನೇರಕ್ಕೆ ಸರಿ ಎನ್ನುವವರಿದ್ದಾರೆ. ಒಂದಂತೂ ನಿಜ, ಕರ್ನಾಟಕದ ಮೋಸ್ಟ್ ಎಲಿಜಬೆಲ್ ಸಿಎಂ ಕ್ಯಾಂಡಿಟೇಟ್ ಸುರೇಶ್ ಕುಮಾರ್ ಅವರಲ್ಲಿ ಯಾವುದೇ ವಿಷಯ ತೆಗೆದುಕೊಂಡರೂ ಸಾಕಷ್ಟು ಜ್ಞಾನವಿದೆ. ಅಧ್ಯಯನಶೀಲತೆ ಇದೆ ಮತ್ತು ಯೋಚನಾ ಸಾಮರ್ತ್ಯ ಇದೆ. ಆದರೆ ಕೊನೆಗೆ ಯುವಕರ ಕಣ್ಮಣಿಯಾಗುವುದು ಮಾತ್ರ ಹೀಗೆ ಹೊಡಿ ಬಡಿ ಹೇಳಿಕೆ ಕೊಡುವ ರೇಣು, ಯತ್ನಾಳ್ ಹಾಗೂ ಸುನೀಲು!!
- Advertisement -
Leave A Reply