ಸಿಎಂ ಮರಾಠ ಪ್ರೇಮ, ಇಲ್ಲಿ ಐವನ್ ಕ್ರೈಸ್ತ ಪ್ರೀತಿ!!

ಬಸವ ಕಲ್ಯಾಣ, ಮಸ್ಕಿ, ಬೆಳಗಾಂ ಲೋಕಸಭೆಗಳನ್ನು ಗೆಲ್ಲಲು ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿದ ಹಾಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಪ ಚುನಾವಣೆಗಳು ಬಂದರೆ ಇಲ್ಲಿ ಬಿಲ್ಲವ, ಬಂಟ, ಕುಲಾಲ್, ಶೆಟ್ಟಿಗಾರ್, ಗಟ್ಟಿ ಹೀಗೆ ಬೇರೆ ಬೇರೆ ಪ್ರಾಧಿಕಾರ ಮಾಡಿ ಎಂದು ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್ ವ್ಯಂಗ್ಯವಾಗಿ ಯಡಿಯೂರಪ್ಪನವರನ್ನು ಟೀಕಿಸಿದ್ದಾರೆ. ಆದರೆ ಇಲ್ಲಿ ಅಂತಹುದು ಏನೂ ಮಾಡದಿದ್ದರೂ ಜನ ಭಾರತೀಯ ಜನತಾ ಪಾರ್ಟಿಗೆನೆ ಮತ ಕೊಡುತ್ತಾರೆ ಎಂದು ಖಾದರ್ ಸಾಹೇಬ್ರಿಗೆ ಗೊತ್ತಿಲ್ಲ. ಆದರೆ ಮುಂದಿನ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಐವನ್ ಡಿಸೋಜಾ ಮಾತ್ರ ತಮ್ಮ ಧರ್ಮದ ಜನರ ಮತಗಳನ್ನು ಸಾರಾಸಗಟಾಗಿ ತಮ್ಮ ಕಡೆ ಸೆಳೆಯುವ ಅದ್ಭುತ ಅವಕಾಶವೊಂದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ತಡ ಮಾಡದೇ ಸುದ್ದಿಗೋಷ್ಟಿ ಮಾಡಿಬಿಟ್ಟರು. ಕ್ರೈಸ್ತ ಸಮುದಾಯಕ್ಕೂ ಅಭಿವೃದ್ಧಿಗೆ ಅದು ಮಾಡಿ, ಇದು ಮಾಡಿ ಎಂದು ಹೇಳಿಬಿಟ್ಟರು. ಆದರೆ ಐವನ್ ಅವರೇ, ಸರಿಯಾಗಿ ನೋಡಿದರೆ ಕಾಂಗ್ರೆಸ್ಸಿನವರಿಗಿಂತ ಹೆಚ್ಚು ಅನುದಾನವನ್ನು ಅಲ್ಪಸಂಖ್ಯಾತರಿಗೆ ಯಾರಾದರೂ ನೀಡಿದ್ದಾರೆ ಎಂದರೆ ಅದು ಯಡಿಯೂರಪ್ಪ. ಸಿದ್ಧರಾಮಯ್ಯನವರು ಏನಿದ್ದರೂ ಅಲ್ಪಸಂಖ್ಯಾತರ ಮೊಣಕೈಗೆ ಬೆಣ್ಣೆ ಹಚ್ಚಿ ಅವರ ಮತಗಳನ್ನು ಮಾತ್ರ ಪಡೆದುಕೊಂಡರೇ ವಿನ: ಏನೂ ಪ್ರಯೋಜನ ಮಾಡಲಿಲ್ಲ. ಆದರೆ ಯಡಿಯೂರಪ್ಪನವರು ಸರಿ ಇದ್ದಾಗ ಅಲ್ಪಸಂಖ್ಯಾತರಿಗೆ ತುಂಬಾ ಸಹಾಯ ಮಾಡಿದ್ದಾರೆ. ಆದರೆ ಪಾಪ, ಅವರು ಈಗ ಹಿಂದಿನ ಯಡಿಯೂರಪ್ಪನವರಾಗಿ ಉಳಿದಿಲ್ಲ. ಯಾರದ್ದೋ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಆ ಕಾರಣದಿಂದ ಏನೇನೋ ಅಸಹ್ಯಕ್ಕೆ ಕೈ ಹಾಕುತ್ತಿದ್ದಾರೆ. ಆದ್ದರಿಂದ ಈಗ ಸಿಕ್ಕಿಬಿದ್ದಿದ್ದಾರೆ. ಈಗ ಮರಾಠರ ಪರ ರಾಜ್ಯ ಸರಕಾರ ಸುರಿಸುತ್ತಿರುವ ಮೊಸಳೆ ಕಣ್ಣೀರಿಗೆ ಲಿಂಗಾಯಿತರು ರಾಜ್ಯ ಸರಕಾರದ ವಿರುದ್ಧದ ಹೋಗಬಾರದು ಎಂದು ಅವರಿಗೊಂದು ಬೇರೆಯದ್ದೇ ಪ್ರಾಧಿಕಾರ ಮಾಡುವ ಮಾತನಾಡುತ್ತಿದ್ದಾರೆ. ಹಾಗಂತ ಇದು ಯಡಿಯೂರಪ್ಪನವರ ಹೊಸ ಪ್ಲಾನ್ ಏನೂ ಅಲ್ಲ. ಇದು 44 ವರ್ಷಗಳಿಂದ ಕರ್ನಾಟಕವನ್ನು ಆಳುತ್ತಿರುವ ವಿವಿಧ ರಾಜ್ಯ ಸರಕಾರದ ಮುಂದಿದ್ದ ಬೇಡಿಕೆ. ಹಿಂದಿನ ಕಾಂಗ್ರೆಸ್ ಸರಕಾರಗಳು ಮಾಡಿರಲಿಲ್ಲ. ಈಗ ಇವರು ಮಾಡುತ್ತಿದ್ದಾರೆ. ಇದರಿಂದ ಯಡಿಯೂರಪ್ಪನವರಿಗೆ ಲಾಭವಾಗುತ್ತೋ ಬಿಡುತ್ತೋ. ಆದರೆ ಒಂದು ಹೇಳಿಕೆ ಒಳಗೊಳಗೆ ಲೀಕ್ ಮಾಡಬಹುದು. ಅದೇನೆಂದರೆ “ನಮಗೆ ಏಕೋ ಮನಸ್ಸಿದೆ. ಕೆಲವರು ಬಿಡುತ್ತಿಲ್ಲ. ನಮಗೆ ಮತ ನೀಡಿ. ನಾವು ನಿಮ್ಮ ಕೈ ಬಿಡಲ್ಲ” ಎನ್ನುವ ಸಂದೇಶ ಮಾತ್ರ ಮರಾಠರಿಗೆ ಕೊಡುವಲ್ಲಿ ಬಿಎಸ್ ವೈ ಮತ್ತು ಮಗ ಯಶಸ್ವಿಯಾಗಲಿದ್ದಾರೆ.
ಅತ್ತ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರದ್ದು ಮಾತ್ರ ಅತಿರೇಕದ ವರ್ತನೆ. ಇಲ್ಲಿ ಯಡ್ಡಿಜಿ ಬೆಳಗಾಂ ಗೆಲ್ಲಲು ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಲು ಹೊರಟರೆ ಮಹಾ ಡಿಸಿಎಂ ಬೆಳಗಾಂ ಮತ್ತು ಕಾರವಾರವೇ ನಮ್ಮದು ಎಂದು ಹೇಳುವ ಉದ್ದಟತನ ತೋರುತ್ತಿದ್ದಾರೆ. ನಾವು ಅತ್ಯಾಸೆಯ ಯಡ್ಯೂರಪ್ಪನವರನ್ನೇ ಸಹಿಸುವುದು ಕಷ್ಟವಾಗಿರುವಾಗ ಅಜಿತ್ ಪವಾರ್ ಗೆ ಅದ್ಯಾವ ರೀತಿಯಲ್ಲಿ ಅಟ್ಟಿಸಿಕೊಂಡು ಹೊಡೆಯಬೇಕು ಎನ್ನುವುದನ್ನು ಕನ್ನಡಿಗರೇ ಹೇಳಬೇಕು. ಸರಿಯಾಗಿ ನೋಡಿದರೆ ಈಗೀಗ ಯಡ್ಯೂರಪ್ಪನವರು ಮಾಗಿದ ಪ್ರಬುದ್ಧ ರಾಜಕಾರಣಿಯಂತೆ ವರ್ತಿಸಬೇಕಿತ್ತು. ಆದರೆ ಆಗುತ್ತಿರುವುದೇ ಬೇರೆ. ಇವರ ಹುಚ್ಚಾಟಕ್ಕೆ ಬ್ರೇಕ್ ಹಾಕಲು ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಇಳಿದರೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಮರಾಠರ ಬಗ್ಗೆ ಸಿಎಂಗೆ ನಿಜವಾಗಿಯೂ ಕಳಕಳಿಯಿದ್ದರೆ ಅದನ್ನು ಈ ಪ್ರಾಧಿಕಾರದ್ದು ಮಾಡಿ ನಾಟಕ ಮಾಡುವ ಬದಲಿಗೆ ಅವರಲ್ಲಿ ಬಡವರಿಗೆ ಸೂಕ್ತ ಉದ್ಯೋಗ, ಶಿಕ್ಷಣ, ಆರೋಗ್ಯ ಸೇವೆ ಮಾಡಲು ವ್ಯವಸ್ಥೆ ಮಾಡಬಹುದಿತ್ತು. ಇಲ್ಲಿ ಪ್ರಾಧಿಕಾರ ಮಾಡುವ ಉದ್ದೇಶ ಎಂದರೆ ಮರಾಠರಲ್ಲಿಯೇ ಪ್ರಭಾವಿಗೆ ಅಧ್ಯಕ್ಷ ಮಾಡುವುದು ಮತ್ತು ಅವನ ಹೆಗಲಿಗೆ ಎಲ್ಲರ ಹೊಣೆ ನೀಡಿ ವೋಟ್ ಸಿಗುವಂತೆ ಮಾಡುವುದು.
ಇನ್ನು ಖಾದರ್ ಸುದ್ದಿಗೋಷ್ಟಿ ಮಾಡಿ ಮಂಗಳೂರು ಸಿಸಿಬಿ ಇನ್ಸಪೆಕ್ಟರ್ ಗಳಾದ ಶಿವಪ್ರಸಾದ್ ಹಾಗೂ ಕಬ್ಬಳ್ ರಾಜ ವರ್ಗಾವಣೆಯಾಗಿರುವ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ. ಅದರಲ್ಲಿ ಇವರಿಗೆ ಆಪತ್ತು ಯಾಕೆ ಎನ್ನುವುದು ಅರ್ಥವಾಗುತ್ತಿಲ್ಲ. ಶಿವಪ್ರಸಾದ್ ಈ ಡ್ರಗ್ಸ್ ಪ್ರಕರಣದಲ್ಲಿ ಸರಿಯಾದ ತನಿಖೆ ಮಾಡದೆ ಕೇಸ್ ದಡ ಸೇರಿಸುವುದರಲ್ಲಿ ಯಶಸ್ವಿಯಾಗದೇ ಇರುವುದು ಕೂಡ ವರ್ಗಾವಣೆಗೆ ಕಾರಣವಾಗಿರಬಹುದು. ಇನ್ನು ಇವರ ವರ್ಗಾವಣೆ ಇವತ್ತು ನಿನ್ನೆ ನಡೆದದ್ದಲ್ಲ. ಎರಡು ತಿಂಗಳ ಹಿಂದೆ ನಡೆಯಬೇಕಾಗಿತ್ತು. ಆದರೆ ಡ್ರಗ್ಸ್ ವಿಷಯ ರಾಜ್ಯದಲ್ಲಿ ದೊಡ್ಡ ರೀತಿಯಲ್ಲಿ ಸದ್ದು ಮಾಡಿದ ಕಾರಣ ಅದರ ಮಧ್ಯದಲ್ಲಿ ವರ್ಗಾವಣೆ ಮಾಡಿದರೆ ಬೇರೆ ಸಂದೇಶ ಹೋಗುವ ಸಾಧ್ಯತೆ ಇತ್ತು. ಜನಪ್ರತಿನಿಧಿಗಳ ಹಸ್ತಕ್ಷೇಪದ ಸುಳ್ಳು ಸುದ್ದಿ ಪುಕಾರು ಹಬ್ಬುವ ಸಾಧ್ಯತೆ ಇತ್ತು. ಆದ್ದರಿಂದ ಮಾಡಿರಲಿಲ್ಲ. ಇನ್ನು ಕಬ್ಬಳರಾಜ್ ಅವರ ಮೇಲೆ ಅನೇಕ ಭ್ರಷ್ಟಾಚಾರದ ಆರೋಪಗಳೂ ಇದ್ದವು, ಆ ಬಗ್ಗೆ ಮೇಲಾಧಿಕಾರಿಗಳ ಬಳಿ ಸಾಕ್ಷ್ಯವೂ ಇತ್ತು. ಹಾಗಿರುವಾಗ ಎತ್ತಂಗಡಿಯಾಗಿರುವವರು ವಿವಾದಕ್ಕೆ ಅತೀತರಲ್ಲ. ಹಾಗೆ ನೋಡಿದರೆ ಉತ್ತಮ, ದಕ್ಷ ಅಧಿಕಾರಿಗಳನ್ನು ವಿನಾಕಾರಣ ಎತ್ತಂಗಡಿ ಮಾಡಿದ್ದರಲ್ಲಿ ಕಾಂಗ್ರೆಸ್ಸಿಗೆ ದೊಡ್ಡ ಇತಿಹಾಸವೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ದಕ್ಷ ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದ ಪಂಕಜ್ ಕುಮಾರ್ ಪಾಂಡೆಯವರು ತಮ್ಮ ಮಾತು ಕೇಳಿಲ್ಲ ಎಂದು ಕಾಂಗ್ರೆಸ್ ಹಿಂಬಾಲಕರೇ ಹಟ ಹಿಡಿದು ಎತ್ತಂಗಡಿ ಮಾಡಿಸಿ ಹೆಮ್ಮೆ ಪಟ್ಟುಕೊಂಡಿದ್ದರು. ಪಾಲಿಕೆಯ ದಕ್ಷ ಕಮೀಷನರ್ ಆಗಿದ್ದ ಹೆಪ್ಸಿಬಾ ರಾಣಿಯವರನ್ನು ಎತ್ತಂಗಡಿ ಮಾಡಿದ್ದು ಹೇಗೆಂದು ಎಲ್ಲರಿಗೂ ಗೊತ್ತಿದೆ. ಸಿದ್ಧರಾಮಯ್ಯನವರನ್ನು ಮಂಗಳೂರು ಏರ್ ಪೋರ್ಟ್ ಲಾಂಜ್ ನಲ್ಲಿ ಸುತ್ತುವರೆದು ಎತ್ತಂಗಡಿ ಮಾಡಿಸಿ ಹಟ ಸಾಧಿಸಿದ್ದು ಇದೇ ಕಾಂಗ್ರೆಸ್ಸಿಗರು. ಈಗ ಇವರೇ ಬಿಜೆಪಿಗೆ ಬುದ್ಧಿ ಹೇಳುವ ಲೆವೆಲ್ಲಿಗೆ ಬಂದಿದ್ದಾರೆ!
Leave A Reply