ಎಲ್ಲಾ ಕಡೆ ಈಗ ಎರಡೇ ಸುದ್ದಿ. ಒಂದು ವ್ಯಾಕ್ಸಿನ್ ಮತ್ತೊಂದು ಸಿಡಿ. ಮಾಧ್ಯಮಗಳನ್ನು ನೋಡಿದರೂ ಅಲ್ಲಿ ಸಿಗುವುದು ಇದೇ ಎರಡು ವಿಷಯಗಳು. ಸಿಡಿಯಿಂದ ರಾಜಕೀಯ ವ್ಯವಸ್ಥೆ ಹಾಳಾಗುತ್ತಿದ್ದರೆ ವ್ಯಾಕ್ಸಿನ್ ನಿಂದ ನಮ್ಮ ದೇಹದೊಳಗೆ ರಕ್ಷಣೆಗೆ ಇನ್ನಷ್ಟು ಬಲ ಬರುತ್ತದೆ. ಇನ್ನು ಒಂದು ರೀತಿಯ ಹೆಮ್ಮೆಯ ವಿಷಯ ಎಂದರೆ ನಮ್ಮ ರಾಷ್ಟ್ರದಲ್ಲಿ ಉತ್ಪಾದನೆಯಾಗಿರುವ ಲಸಿಕೆಯನ್ನು ಪ್ರಪಂಚದಲ್ಲಿ ಅದೆಷ್ಟೋ ರಾಷ್ಟ್ರಗಳು ನಮ್ಮಿಂದ ವಿನಂತಿಸಿ ಪಡೆದುಕೊಳ್ಳುತ್ತಿವೆ. ಕೊರೊನಾ ಉತ್ಪಾದನೆ ಆಗಲು ಚೀನಾ ಕಾರಣವಾದರೆ ಅದಕ್ಕೆ ನಿಯಂತ್ರಣ ಹೇರಲು ವ್ಯಾಕ್ಸಿನ್ ಹುಡುಕಿದ್ದು ನಮ್ಮ ಭಾರತ ಎನ್ನುವುದೇ ಖುಷಿ. ನಾವು ಯಾವಾಗಲೂ ಈ ನಿಟ್ಟಿನಲ್ಲಿ ವಿಶ್ವಗುರು ಎನ್ನುವುದನ್ನು ಸಾಬೀತುಪಡಿಸಿದ್ದೇವೆ. ಅನೇಕ ರಾಷ್ಟ್ರಗಳಲ್ಲಿ ನಮ್ಮಿಂದ ಲಸಿಕೆ ಪಡೆದುಕೊಂಡ ಬಳಿಕ ನಮ್ಮ ಪ್ರಧಾನಿ ನರೇಂದ್ರ ಮೋದಿಜಿಯವರ ಫೋಟೋಗಳನ್ನು ಹೋರ್ಡಿಂಗ್ಸ್ ಗಳಲ್ಲಿ ಬಳಸಿ “ಥ್ಯಾಂಕ್ಸ್ ಟು ಮೋದಿ” ಎಂದು ಧನ್ಯವಾದಗಳನ್ನು ಅರ್ಪಿಸಿದ ಉದಾಹರಣೆಗಳು ಇವೆ. ಇನ್ನು ಕೆಲವು ಕಡೆ ಲಸಿಕೆಗಳ ಪೆಟ್ಟಿಗೆಗಳಿಗೆ ಪೂಜೆ ಮಾಡಿ ತಮ್ಮ ರಾಷ್ಟ್ರದ ಒಳಗೆ ಬರಮಾಡಿಕೊಂಡ ಉದಾಹರಣೆಗಳು ಕೂಡ ಇವೆ. ಇನ್ನು ಕೆಲವು ಕಡೆ ನೇರವಾಗಿ ಅಲ್ಲಿನ ರಾಷ್ಟ್ರದ ಪ್ರಮುಖರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯವರನ್ನು ಜೀವ ಉಳಿಸಲು ಸಂಜೀವಿನಿಯನ್ನು ಕಳುಹಿಸಿಕೊಟ್ಟ ಭಗವಂತ ಎನ್ನುವ ಅರ್ಥದ ಮಾತುಗಳನ್ನು ಬರೆದಿದ್ದಾರೆ. ಒಟ್ಟಿನಲ್ಲಿ ಚೀನಾದಲ್ಲಿ ಉತ್ಪಾದಿಸಿದ ಲಸಿಕೆಗಳಿಗಿಂತ ಭಾರತದ ಲಸಿಕೆಯ ಮೇಲೆ ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಏನೋ ಭರವಸೆ. ಆದರೆ ನಮ್ಮದೇ ಪಕ್ಕದ ಎಡಬಿಡಂಗಿ ದೇಶ ಪಾಕಿಸ್ತಾನ ಮಾತ್ರ ಚೀನಾದ ಬೂಟು ನೆಕ್ಕಲು ತನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದೆ. ಪಾಕಿಸ್ತಾನ ಕೂಡ ಭಾರತದ ಪ್ರಧಾನಿ ಕಾರ್ಯಾಲಯಕ್ಕೆ ಧಮ್ಮಯ್ಯ ಹಾಕಿ ಲಸಿಕೆ ಕಳುಹಿಸಿ ಕೊಡುವಂತೆ ಅಂಗಲಾಚಿ ಬೇಡಿಕೊಂಡಿತ್ತು. ಪಾಕಿಸ್ತಾನಕ್ಕೆ ಲಸಿಕೆ ಕೊಟ್ಟರೆ ಕೆಲವು ಟೀಕೆಗಳು ಬರಬಹುದು ಎಂದು ಕೇಂದ್ರ ಸರಕಾರಕ್ಕೆ ಗೊತ್ತಿತ್ತು. ಆದರೆ ಅಂತಹ ವಿರೋಧ ಬಂದಿರಲಿಲ್ಲ. ಯಾಕೆಂದರೆ ಇದು ಜೀವದ ಪ್ರಶ್ನೆ. ಇನ್ನು ವಿರೋಧ ಮಾಡಬೇಕಾದವರೇ ಅಧಿಕಾರದಲ್ಲಿದ್ದಾರೆ. ಆದ್ದರಿಂದ ವಿರೋಧ ಹೇಗೆ ಬರುತ್ತದೆ. ಒಟ್ಟಿನಲ್ಲಿ ಪಾಕಿಸ್ತಾನಕ್ಕೆ ಲಸಿಕೆ ಕಳುಹಿಸಿಕೊಡಲಾಯಿತು. ಅಲ್ಲಿ ಲಿಸಿಕೆ ಹೋಗಿ ತಲುಪಿತು. ಅದರ ಬಳಿಕ ಬಡ ದೇಶದ ಪ್ರಧಾನಿ ಇಮ್ರಾನ್ ಖಾನ್ ಕೋವಿಡ್ ವಿರುದ್ಧದ ಲಿಸಿಕೆ ತೆಗೆದುಕೊಂಡ. ಅದರ ಫೋಟೋ ಕೂಡ ಎಲ್ಲಾ ಕಡೆ ಬಂತು. ಲಸಿಕೆ ತೆಗೆದುಕೊಂಡ ಎರಡು ದಿನಗಳ ಬಳಿಕ ಇಮ್ರಾನ್ ಖಾನ್ ಗೆ ಕೊರೊನಾ ಪಾಸಿಟಿವ್ ಆಗಿದೆ. ಅದು ಕೂಡ ವೈರಲ್ ಆಗಿದೆ. ಕೆಲವರು ಇಮ್ರಾನ್ ಖಾನ್ ಭಾರತದ ಲಿಸಿಕೆಯನ್ನು ತೆಗೆದುಕೊಂಡ ಪರಿಣಾಮವಾಗಿ ಕೊರೊನಾ ಬಂದಿತ್ತು ಎಂದು ವ್ಯಂಗ್ಯವಾಗಿ ಹೇಳಲು ಶುರು ಮಾಡಿದರು. ಮೋದಿ ಒಳ್ಳೆಯದ್ದನ್ನು ಮಾಡಿದಾಗ ಅದನ್ನು ಪೋಸ್ಟರ್ ಮಾಡಿ ಅವರ ಅಭಿಮಾನಿಗಳು ವೈರಲ್ ಮಾಡುತ್ತಾರೆ. ಅದು ಎಷ್ಟು ಜನರಿಗೆ ತಲುಪುತ್ತದೆಯೋ ಗೊತ್ತಿಲ್ಲ. ಆದರೆ ಅವರ ಬಗ್ಗೆ ಇರುವ ನೆಗೆಟಿವ್ ವಿಷಯಗಳು ಮಾತ್ರ ಅತೀ ವೇಗದಲ್ಲಿ ಸಂಚರಿಸುತ್ತವೆ. ಇದು ಕೂಡ ಒಂದಷ್ಟರ ಮಟ್ಟಿಗೆ ಹಾಗೆ ಆಯಿತು. ಅದನ್ನು ನೋಡಿದ ನಮ್ಮ ಜನರಿಗೆ ಕೋವಿಡ್ ಲಸಿಕೆಯ ಮೇಲೆ ವಿಶ್ವಾಸ ಕಡಿಮೆ ಆಗುತ್ತೆ ಎನ್ನುವ ಕುತಂತ್ರಿಗಳ ಷಡ್ಯಂತ್ರ ಮಾತ್ರ ಫಲಿಸಲಿಲ್ಲ. ಜನ ಕೊವಿಡ್ ಲಸಿಕೆಯ ಬಗ್ಗೆ ವಿಶ್ವಾಸ ಕಳೆದುಕೊಳ್ಳಲೇ ಇಲ್ಲ. ಇಲ್ಲಿ ನಿಮಗೆ ಗೊತ್ತೆ ಇರಬೇಕಾದ ಮುಖ್ಯ ವಿಚಾರ ಎಂದರೆ ಇಮ್ರಾನ್ ಖಾನ್ ತೆಗೆದುಕೊಂಡಿರುವುದು ಭಾರತದ ಲಸಿಕೆ ಅಲ್ಲ. ಅದು ಅಪ್ಪಟ ಚೀನಾ ನಿರ್ಮಾಣದ್ದು.
ಬಕೆಟ್ ಹಿಡಿಯುವುದರಲ್ಲಿ ನಿಸ್ಸೀಮರಾಗಿರುವ ಇಮ್ರಾನ್ ಖಾನ್ ಚೀನಾದವರನ್ನು ಖುಷಿ ಮಾಡುವುದಕ್ಕಾಗಿ ಚೀನಾ ಲಸಿಕೆಯನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ ತಾನು ನಿಮ್ಮ ಪರ ಎಂದು ಚೀನಾದ ದೊರೆಗಳಿಗೆ ವಿಷಯ ಮುಟ್ಟಿಸಿದ್ದಾರೆ. ಬಡತನದ ಬೇಗೆಯಲ್ಲಿ ಬಳಲುತ್ತಿರುವ ಪಾಕಿಸ್ತಾನಕ್ಕೆ ಚೀನಾ ಬಿಸಾಡುವ ಬಿಸ್ಕಿಟ್ ಮಾತ್ರ ಗತಿಯಾಗಿದೆ. ಅದಕ್ಕಾಗಿ ಅದನ್ನು ಕಾಯುತ್ತಾ ಕುಳಿತಿರುವ ಇಮ್ರಾನ್ ಖಾನ್ ಚೀನಾದ ಲಸಿಕೆಯೇ ಬೆಸ್ಟ್ ಎಂದು ತೋರಿಸಲು ಹೋಗಿ ಚೀನಾ ಮರ್ಯಾದೆಯನ್ನು ತಾನೆ ತೆಗೆದಿದ್ದಾರೆ. ಚೀನಾ ಲಸಿಕೆಯ ಹಣೆಬರಹ ಈಗ ಎಲ್ಲರಿಗೂ ಗೊತ್ತಾಗಿದೆ. ಪ್ರಪಂಚದ ಎರಡನೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ಸರಿಯಾಗಿ ನೋಡಿದರೆ ಪಾಕಿಸ್ತಾನಕ್ಕೆ ಲಸಿಕೆ ಕಳುಹಿಸಿಕೊಡಬೇಕಾಗಿರಲಿಲ್ಲ. ಆದರೆ ಅಲ್ಲಿನ ಆಡಳಿತದವರ ಮುಖ ನೋಡಿ ಲಸಿಕೆ ಕೊಟ್ಟಿದ್ದಲ್ಲ. ಅಲ್ಲಿನ ವೃದ್ಧರ, ಹಿರಿಯ ಜೀವಗಳ ಮೇಲೆ ಮಾನವ ಸಹಜ ಕರುಣೆಯಿಂದ ಕೊಟ್ಟಿರುವುದು. ಆದರೆ ಇಮ್ರಾನ್ ಖಾನ್ ನಂತವರಿಗೆ ಭಾರತದ ಲಸಿಕೆ ಕಳಪೆ ಎಂದು ತೋರಿಸುವ ಉಮ್ಮೇದು ಇತ್ತಲ್ಲ. ಅವರು ಇಂತಹ ಕೀಳುಮಟ್ಟಕ್ಕೆ ಇಳಿದು ಭಾರತದ ಇಮೇಜ್ ಹಾಳು ಮಾಡಲು ಯತ್ನಿಸಿದ್ದಾರೆ. ಆದರೆ ಯಾವಾಗ ಇಮ್ರಾನ್ ಖಾನ್ ತೆಗೆದುಕೊಂಡ ಲಸಿಕೆ ಚೀನಾದ್ದು ಎಂದು ಎಲ್ಲರಿಗೂ ಗೊತ್ತಾಯಿತೋ, ಚೀನಾ ಹಣೆಬರಹವೇ ಇಷ್ಟು ಎಂದು ಅನಿಸಿದೆ!!
- Advertisement -
Trending Now
ಪ್ರೀತಿ ಅದ್ಭುತವು ಹೌದು ಭಯಾನಕವು ಹೌದು!
Hanumantha Kamath
April 23, 2024
Leave A Reply