• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಯಾರ ಕೃಪೆಯಿಂದ ರಿಕ್ರಿಯೇಷನ್ ಕ್ಲಬ್ ಗಳು ಮತ್ತೆ ಓಪನ್ ಆಗಿವೆ, ಗೊತ್ತಾ?

Hanumantha Kamath Posted On April 26, 2021
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ಮತ್ತೆ ಇಸ್ಪೀಟ್ ಕ್ಲಬ್ ಗಳು ಆರಂಭಗೊಂಡಿವೆ. ಅದನ್ನು ತಾಂತ್ರಿಕವಾಗಿ ರಿಕ್ರಿಯೇಷನ್ ಕ್ಲಬ್ ಗಳು ಎಂದು ಕರೆಯಲಾಗುತ್ತದೆ. ಡಾ.ಹರ್ಷಾ ಅವರು ಮಂಗಳೂರು ಪೊಲೀಸ್ ಕಮೀಷನರ್ ಆಗಿದ್ದಾಗ ಇದನ್ನೆಲ್ಲ ಬಂದ್ ಮಾಡಿಸಿದ್ದರು. ಹೊರ ನೋಟಕ್ಕೆ ರಿಕ್ರೀಯೇಷನ್ ಕ್ಲಬ್ ಎಂದು ನಾಮಕಾವಸ್ತೆ ಆಗಿದ್ದರೆ ಒಳಗೆ ಅವುಗಳು ಜುಗಾರಿಯ ಅಡ್ಡೆಗಳಾಗಿದ್ದವು. ರಿಕ್ರೀಯೇಷನ್ ಕ್ಲಬ್ ಎನ್ನುವುದು ಸುಸ್ತಾದ ಮನಸ್ಸುಗಳ ಮನೋರಂಜನೆಗೆ ಇರುವ ವ್ಯವಸ್ಥೆ ವಿನ: ಅಲ್ಲಿ ಹಣ ಇಟ್ಟು ಹಣ ಬಾಚುವ ವಹಿವಾಟು ಮಾಡುವಂತಿಲ್ಲ. ಆದರೆ ಬೆಳಿಗ್ಗೆ ರಮ್ಮಿ ಆಡುವವರು ಸಂಜೆಯಾಗುತ್ತಿದ್ದಂತೆ ಉಲಾಯಿ-ಪಿದಾಯಿ, ಪರೆಲ್ ನಂತಹ ಪಕ್ಕಾ ಹಣ ಹೊಳೆಯಾಗಿ ಹರಿಯುವಂತಹ ಆಟಗಳಿಗೆ ಈ ಕ್ಲಬ್ ಗಳು ತೆರೆಯುತ್ತಿದ್ದವು. ಆಟದಲ್ಲಿ ಗೆದ್ದವ ಕ್ಲಬ್ ನ ಮಾಲೀಕನಿಗೆ ಇಂತಿಷ್ಟು ಶೇಕಡಾ ಹಣವನ್ನು ನೀಡಬೇಕಾಗುತ್ತದೆ. ಇದು ಶುದ್ಧಾನುಶುದ್ಧ ಅಕ್ರಮ.

ಆದರೆ ಅಂದಾಜು ಎರಡು ವರ್ಷಗಳಿಂದ ಬಂದ್ ಆಗಿದ್ದ ಈ ಕ್ಲಬ್ ಗಳು ಈಗ ತೆರೆದಿರುವುದು ಪಕ್ಕಾ ರಾಜಕೀಯ ದಾಳ, ಪ್ರತಿದಾಳಗಳಿಗೆ ವೇದಿಕೆಯಾಗಿದೆ. ಈಗ ವಿಪಕ್ಷದಲ್ಲಿರುವ ಕಾಂಗ್ರೆಸ್ ಈ ರಿಕ್ರಿಯೇಷನ್ ಕ್ಲಬ್ ಗಳು ಆರಂಭವಾಗಿರುವುದು ಭಾರತೀಯ ಜನತಾ ಪಾರ್ಟಿಯ ಸರಕಾರ ಮತ್ತು ಇಲ್ಲಿನ ಶಾಸಕರು, ಸಂಸದರೇ ಕಾರಣ ಎನ್ನುವ ಆರೋಪ ಹಾಕುತ್ತಿದೆ. ಇಲ್ಲಿ ಎರಡು ವಿಷಯಗಳಿವೆ. ಮೊದಲನೇಯದಾಗಿ ಹರ್ಷಾ ಅವರು ಬಂದ್ ಮಾಡಿಸಿದ ನಂತರ ಕ್ಲಬ್ ಗಳ ಮಾಲೀಕರು ಹೈಕೋರ್ಟಿನಲ್ಲಿ ಈ ಬಗ್ಗೆ ದಾವೆ ಹೂಡಿದ್ದರು. ಅಲ್ಲಿ ವಾದ, ವಿವಾದ ನಡೆದು ಈಗ ರಿಕ್ರೀಯೇಷನ್ ಕ್ಲಬ್ ಗಳನ್ನು ತೆರೆಯಲು ಕೋರ್ಟ್ ಅನುಮತಿ ನೀಡಿದೆ. ಆದ್ದರಿಂದ ಅನುಮತಿ ಸಿಕ್ಕಿರುವುದು ಬಿಜೆಪಿ ಸರಕಾರದಿಂದ ಅಲ್ಲ ನ್ಯಾಯಾಲಯದಿಂದ ಎನ್ನುವುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು. ಅದರೊಂದಿಗೆ ಕಾಂಗ್ರೆಸ್ಸಿಗೆ ಈ ಕ್ಲಬ್ ಗಳ ಬಗ್ಗೆ ಅಸಮಾಧಾನ ಇದ್ರೆ ಅಲ್ಲಿ ಹಣದ ವ್ಯವಹಾರ ನಡೆಯುತ್ತಿದೆ ಎಂದು ತಿಳಿದಿದ್ದರೆ ಅದನ್ನು ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಅಂತಹ ಅವ್ಯವಹಾರಗಳನ್ನು ನಿಲ್ಲಿಸಬಹುದು. ಯಾಕೆಂದರೆ ರಿಕ್ರೀಯೇಷನ್ ಕ್ಲಬ್ ಹೆಸರಿನಲ್ಲಿ ಇಸ್ಪೀಟ್ ಕ್ಲಬ್ ಮಾಡಿ ಹಣ ಮಾಡಲು ಯಾರಾದರೂ ಹೊರಟರೆ ಅದು ತಪ್ಪು. ಇದರಿಂದ ಎಷ್ಟೋ ಕುಟುಂಬಗಳು ಬೀದಿಗೆ ಬೀಳುತ್ತವೆ. ಬೆಳಿಗ್ಗೆಯಿಂದ ಸಂಜೆಯ ತನಕ ದುಡಿಯುವ ಗಂಡಸರು ಸಂಜೆ ಕುಡಿದು ಈ ಕ್ಲಬ್ ಗಳಲ್ಲಿ ಆಡಿ ಹಣವನ್ನು ಕಳೆದುಕೊಳ್ಳುವುದರಿಂದ ಅಂತಹ ಮನೆಗಳಲ್ಲಿ ಹೆಂಗಸರು ನಿತ್ಯ ಇಂತಹ ಕ್ಲಬ್ ಗಳಿಗೆ ಹಿಡಿಶಾಪ ಹಾಕುತ್ತಿದ್ದರು. ಎಷ್ಟೋ ವಿದ್ಯಾರ್ಥಿಗಳು ಇಲ್ಲಿ ಆಡಿ ಅವರ ಅಮ್ಮಂದಿರ ಕಣ್ಣಲ್ಲಿ ನೀರು ತರಿಸುತ್ತಿದ್ದರು.

ಆದ್ದರಿಂದ ರಿಕ್ರೀಯೇಷನ್ ಕ್ಲಬ್ ಗಳ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕುವ ಅಗತ್ಯ ಇತ್ತು. ಆದರೆ ಕಳೆದ ಎರಡು ವರ್ಷಗಳಿಂದ ಇವು ಬಂದ್ ಆಗಿರುವುದರಿಂದ ಪೊಲೀಸ್ ಠಾಣೆಗಳಿಗೂ ತಿಂಗಳ ಕಪ್ಪಕ್ಕೆ ಹೊಡೆತ ಬಿದ್ದಿತ್ತು. ಈ ರಿಕ್ರೀಯೇಷನ್ ಕ್ಲಬ್ ಗಳು ಯಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇರುತ್ತವೆಯೋ ಅವುಗಳ ಮಾಲೀಕರು ಆಯಾ ಪೊಲೀಸ್ ಠಾಣೆಗಳಿಗೆ ನಿಗದಿಪಡಿಸಿದ ಹಣ ಕೊಡಬೇಕು. ಅದರಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಕೊಡಬೇಕು ಎನ್ನುವ ಲೆಕ್ಕ ಅಡಗಿರುತ್ತದೆ. ಆಗ ಪೊಲೀಸರು ಈ ಕ್ಲಬ್ ಗಳಲ್ಲಿ ಸಂಜೆ ಆಡುವ ಯಾವುದೇ ಆಟಕ್ಕೆ ಅಡ್ಡಿ ಬರುವುದಿಲ್ಲ. ಅಂದರ್-ಬಾಹರ್ ಆರಾಮವಾಗಿ ನಡೆಯುತ್ತದೆ. ಮೆಸೆ ಮಾಲೀಕನಿಗೆ ಸಿಗುತ್ತಾ ಹೋಗುತ್ತದೆ. ಆದರೆ ಈಗ ಏನಾಗಿದೆ ಎಂದರೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ರಾಜಕೀಯ ಲೇಪ ಕೊಟ್ಟು ಬರೆಯುವ ಬದಲು ಸತ್ಯಾಂಶ ತಿಳಿದು ಪೊಲೀಸ್ ಇಲಾಖೆಗೆ ಅಥವಾ ಪಾಲಿಕೆಯ ಕಮೀಷನರ್ ಅವರಿಗೆ ಮಾಹಿತಿ ಕೊಟ್ಟು ತಮ್ಮ ಉದ್ದೇಶ ಈಡೇರಿಸಬಹುದು.

ಕೆಲವು ದಿನಗಳ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಅಕ್ಷಯ್ ಶ್ರೀಧರ್ ಅವರು ಬಿಜೈಯ ಇಂತಹ ಕ್ಲಬ್ ಒಂದರಲ್ಲಿ ಸಾಮಾಜಿಕ ಅಂತರ ಪಾಲಿಸದೇ ಜನರು ಗುಂಪು ಸೇರಿದ್ದಕ್ಕಾಗಿ ಎಲ್ಲರನ್ನು ಹೊರಗೆ ಕಳುಹಿಸಿ ಬೀಗ ಜಡಿದಿದ್ದಾರೆ. ಅದು ಬಿಜೆಪಿಯ ಪದಾಧಿಕಾರಿಯೊಬ್ಬರ ಕ್ಲಬ್ ಆಗಿತ್ತು ಎನ್ನುವುದು ಮಾಹಿತಿ. ಹೀಗೆ ಅಧಿಕಾರಿಗಳು ಆಗಾಗ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಾ ಇದ್ದರೆ ಇಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಯಬಹುದು. ಹೀಗೆ ಎಲ್ಲಿ ಅಕ್ರಮ ನಡೆಯುತ್ತಿದೆಯೋ ಅದನ್ನು ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವ ಹಕ್ಕು ಮತ್ತು ಕರ್ತವ್ಯ ಎಲ್ಲ ಸಭ್ಯ ಪ್ರಜೆಗಳಲ್ಲಿ ಇದೆ. ಅಷ್ಟಕ್ಕೂ ಎರಡು ವರ್ಷಗಳ ಹಿಂದೆ ಇದನ್ನು ನಿಲ್ಲಿಸಿದ್ದು ಕಾಂಗ್ರೆಸ್ ಅಲ್ಲ. ಈಗ ಶುರು ಮಾಡುತ್ತಿರುವುದು ಬಿಜೆಪಿ ಅಲ್ಲ. ಪೊಲೀಸ್ ಕಮೀಷನರ್ ನಿಲ್ಲಿಸಿದ್ರು. ಕೋರ್ಟ್ ತೆರೆಯಲು ಅನುಮತಿ ನೀಡಿತು ಅಷ್ಟೆ. ಯಾರಿಗಾದರೂ ಅನುಮಾನಗಳಿದ್ದರೆ ಈ ಬಗ್ಗೆ ವಿಚಾರಿಸಬಹುದು. ಈಗ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಹಣದ ಅವ್ಯವಹಾರ ಆಗಿರುವ ದೂರುಗಳು ಬಂದರೆ ಅಲ್ಲಿ ರೇಡ್ ಮಾಡಿಸಿ ಖಂಡಿತ ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಆದರೆ ಅವರ ಕೈಕೆಳಗಿನ ಅಧಿಕಾರಿಗಳು ಕೊಡು-ಕೊಳ್ಳುವಿಕೆಯ ವ್ಯವಹಾರದಲ್ಲಿ ಇದ್ದರೆ ಏನೂ ಮಾಡಲು ಆಗುವುದಿಲ್ಲ. ಒಟ್ಟಿನಲ್ಲಿ ನಮ್ಮ ಸಮಾಜ ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಆ ಕಣ್ಣೀರ ಹಣ ಯಾರನ್ನು ಉದ್ಧಾರ ಮಾಡಲಾರದು. ತಾಯಿ, ಹೆಂಡತಿ, ಸಹೋದರಿಯರ ಶಾಪದ ಹಣದಿಂದ ತಿಂದ ಅನ್ನ ಒಳಗೆ ವಿಷವಾಗುತ್ತದೆ. ಅಷ್ಟು ತಿಳಿದಿರಲಿ!

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Hanumantha Kamath May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Hanumantha Kamath May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ

  • Privacy Policy
  • Contact
© Tulunadu Infomedia.

Press enter/return to begin your search