ಡಿಕೆಶಿ ಉರುಳಿಸಿರುವ ದಾಳ ನೋಡಿ ಸಿದ್ಧು ಟೆನ್ಷನ್!!
Posted On July 6, 2021

ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಒಪ್ಪಿಗೆ ಎನ್ನುವ ಆಂಗ್ಲಭಾಷೆಯ ಗಾದೆಯೊಂದನ್ನು ನೀವು ಕೇಳಿರಬಹುದು. ಚುನಾವಣೆ ಎನ್ನುವುದನ್ನು ಯುದ್ಧವೆಂದೇ ತೆಗೆದುಕೊಳ್ಳುವುದಾದರೆ ಅದರಲ್ಲಿ ದಂಡನಾಯಕ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ಉಳಿದವರು ಒಪ್ಪಲೇಬೇಕು. ಆದರೆ ಚುನಾವಣೆಗೆ ಬಹುತೇಕ ಒಂದೂಮುಕ್ಕಾಲು ವರ್ಷ ಇರುವ ಈ ಕಾಲಘಟ್ಟದಲ್ಲಿ ಕಾಂಗ್ರೆಸ್ಸಿನ ರಾಜ್ಯದ ದಂಡನಾಯಕ ಡಿಕೆಶಿ ತಮ್ಮ ಎದುರಾಳಿ ಭಾರತೀಯ ಜನತಾ ಪಾರ್ಟಿಯ ವಿರುದ್ಧ ಏನೇನು ಬಾಣ ಬಿಡಲು ಸಾಧ್ಯವಿದೆಯೋ ಆ ಎಲ್ಲ ಅಸ್ತ್ರಗಳನ್ನು ತಮ್ಮ ಭತ್ತಳಿಕೆಯಲ್ಲಿ ಸಂಗ್ರಹಿಸಲು ತಯಾರು ಮಾಡಿಕೊಳ್ಳುತ್ತಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಅವರು ಎರಡು ವರ್ಷಗಳ ಹಿಂದೆ ಕಾಂಗ್ರೆಸ್ಸನ್ನು ಬಿಟ್ಟುಹೋಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾದವರತ್ತ ಹಸಿರು ಬಾವುಟವನ್ನು ತೋರಿಸುತ್ತಿರುತ್ತಿರುವುದು. ಕಾಂಗ್ರೆಸ್ಸಿನಿಂದ ಆವತ್ತು ಎದ್ದು ಹೋದವರಲ್ಲಿ ಒಂದಿಬ್ಬರನ್ನು ಬಿಟ್ಟರೆ ಬಹುತೇಕರಲ್ಲಿ ಅಸಮಾಧಾನದ ಹೊಗೆ ಎದೆಯಲ್ಲಿ ಇದೆ. ಅದು ರಮೇಶ್ ಜಾರಕಿಹೊಳೆಯಿಂದ ಹಿಡಿದು ಸೋಮಶೇಖರ್ ತನಕ ಎಲ್ಲರಲ್ಲಿಯೂ ಇದೆ. ಎಂಟಿಬಿ ಇರಬಹುದು, ಮುನಿರತ್ನ ಇರಬಹುದು, ಕಮಟಳ್ಳಿ ಇರಬಹುದು, ಕೊನೆಗೆ ಬಿಸಿ ಪಾಟೀಲ್ ಕೂಡ ಜೋರಾಗಿ ಕರೆದರೆ ಸೀದಾ ಬಂದು ಕಾಂಗ್ರೆಸ್ ಪಾಳಯದಲ್ಲಿ ನಿಂತಾರು ಎನ್ನುವ ಭಾವನೆ ಡಿಕೆಶಿಗೆ ಇದೆ.
ಸುಧಾಕರ್ ಹಾಗೂ ಶ್ರೀರಾಮುಲು ಎದುರು ಮುಂದಿನ ಚುನಾವಣೆಯಲ್ಲಿ ತಮ್ಮ ಜಿಲ್ಲೆಯಿಂದ ಎಷ್ಟು ಮಂದಿಯನ್ನು ಆರಿಸಿಕೊಂಡು ಬರುತ್ತಾರೆ ಎನ್ನುವ ಸವಾಲು ಇದ್ದೇ ಇದೆ. ಶ್ರೀರಾಮುಲು ಆ ಭಾಗದಿಂದ ಹೆಚ್ಚೆಚ್ಚು ಬಿಜೆಪಿ ಶಾಸಕರನ್ನು ಗೆಲ್ಲಿಸಿಕೊಂಡು ಬಂದರೆ ಸುಧಾಕರ್ ಮಂಕಾಗಲಿದ್ದಾರೆ. ಹೀಗೆಲ್ಲ ಇರುವಾಗ ಮುಂದಿನ ಬಾರಿ ನಮ್ಮದೇ ಸರಕಾರ ಬರೋದು, ಬಂದುಬಿಡಿ, ನನ್ನ ಸಿಎಂಗಿರಿಯಲ್ಲಿ ನಿಮಗೆ ಮಂತ್ರಿಸ್ಥಾನ ಪಕ್ಕಾ ಎಂದು ಬರೆದುಕೊಟ್ಟರೆ ಆ ಹದಿನಾಲ್ಕು ಜನ ಕೂಡ ಕಾಂಗ್ರೆಸ್ಸಿಗೆ ಘರ್ ವಾಪ್ಸಿ ಮಾಡಲು ಹೆಚ್ಚು ಹೊತ್ತು ಬೇಕಾಗಿಲ್ಲ. ಅದಕ್ಕೆ ರಮೇಶ್ ಸಾರಥ್ಯ ವಹಿಸಿಕೊಂಡರೆ ಮುಗಿಯಿತು. ಮುಂದಿನ ಬಾರಿ ಕಾಂಗ್ರೆಸ್ ಸರಕಾರ ಬಂದರೆ ನೀವೆ ನೋಡಿ ಡಿಸಿಎಂ ಎಂದರೆ ರಮೇಶ್ ಅಷ್ಟು ಮಂದಿಯನ್ನು ಎತ್ತಾಕಿಕೊಂಡು ಡಿಕೆಶಿ ಮನೆ ಸದಾಶಿವನಗರದ ಅಂಗಳದಲ್ಲಿ ಲ್ಯಾಂಡ್ ಆಗಬಲ್ಲರು. ಇನ್ನು ಬಿಜೆಪಿಗೆ ಬಂದು ಗೆದ್ದಿರುವ ಅಷ್ಟು ಮಂತ್ರಿಗಳು ತಮ್ಮ ಸ್ವವರ್ಚಸ್ಸಿನಿಂದ ಗೆದ್ದಿದ್ದಾರೆ ಬಿಟ್ಟರೆ ಅವರು ಗೆದ್ದಕಡೆ ಬಿಜೆಪಿಗೆ ಸ್ವಂತ ನೆಲೆ ಕಷ್ಟ. ಆದ್ದರಿಂದ ಮುಂದಿನ ಬಾರಿ ಇದೇ ಜನ ಮತ್ತೆ ಕಾಂಗ್ರೆಸ್ಸಿನಿಂದ ನಿಂತುಕೊಂಡರೆ ಸೋಲುವ ಸಾಧ್ಯತೆ ಬಹಳ ಕಡಿಮೆ. ಇದೆಲ್ಲ ಗೊತ್ತಿದ್ದೇ ಡಿಕೆಶಿ ಸತೀಶ್ ಮೂಲಕ ರಮೇಶ್ ಜೊತೆ ಮಾತನಾಡಿದ್ದಾರೆ. ನೀವು ಡಿಸಿಎಂ ಸ್ಥಾನ ಕೇಳಿ ನೋಡಿ, ಕೊಡದಿದ್ದರೆ ಯುದ್ಧಕ್ಕೆ ಪಾಂಚಜನ್ಯ ಊದುವ ಮೊದಲೇ ನಮ್ಮ ಕಡೆ ಬಂದುಬಿಡಿ ಎನ್ನುವ ಸಂದೇಶ ಈ ಕಡೆಯಿಂದ ಹೋಗಿದೆ. ಮುಂದಿನ ಬಾರಿ ಅಧಿಕಾರಕ್ಕೆ ಬರಲು ಏನೂ ಬೇಕಾದರೂ ಮಾಡಿ ಎನ್ನುವ ವೀಳ್ಯ ಜನಪಥ್ 10 ರಲ್ಲಿ ಸಿಕ್ಕಿರುವುದರಿಂದ ಡಿಕೆಶಿ ಈ ಧೈರ್ಯ ತೆಗೆದುಕೊಂಡಿರುವುದು. ಆದರೆ ಆವತ್ತು ಕುಮಾರಸ್ವಾಮಿಯವರನ್ನು ಅಧಿಕಾರದಿಂದ ಕೆಳಗೆ ಇಳಿಸಿ ಡಿಕೆಶಿಯನ್ನು ಪರೋಕ್ಷವಾಗಿ ವೀಕ್ ಮಾಡಬೇಕೆಂಬ ಹಟದಲ್ಲಿದ್ದ ಸಿದ್ಧು ತಮ್ಮದೇ ಶಿಷ್ಯರು ಇತ್ತಲಿಂದ ಅತ್ತ ಹೋಗಲು ಅಡ್ಡಿಬಂದಿರಲಿಲ್ಲ. ಅವರು ಮನಸ್ಸು ಮಾಡಿದಿದ್ದರೆ ದೊಡ್ಡ ಗೌಡ್ರಿಗೆ ಹೇಳಿ ತಮ್ಮ ಶಿಷ್ಯಂದಿರ ಕೆಲಸಗಳು ಆಗುವ ರೀತಿಯಲ್ಲಿ ಮಾಡಿ ಅವರನ್ನೆಲ್ಲ ತಮ್ಮದೇ ಪಕ್ಷದಲ್ಲಿ ಉಳಿಸಬಹುದಿತ್ತು. ಆದರೆ ದೇವೆಗೌಡರ ಮುಂದೆ ಅಂಗಲಾಚಲು ತಯಾರಿಲ್ಲದ ಸಿದ್ಧು ಸರಕಾರವೇ ಬೀಳಲಿ, ಕುಮಾರನಿಗೆ ಬುದ್ಧಿ ಬರಲಿ, ನೀವು ಅತ್ತ ಕಡೆ ಹೋಗಿ ಎಂದು ಅನುಮತಿ ನೀಡಿದ್ದರು. ಈಗ ಅವರೇನೋ ಈ ಕಡೆ ಬರೋದು ಓಕೆ, ಆದರೆ ಈ ಕಡೆ ಬರುವಾಗ ಸಹಜವಾಗಿ ಪಕ್ಷ ಬಲಿಷ್ಟವಾಗುತ್ತೆ. ಅಧಿಕಾರಕ್ಕೆ ಬಂದರೂ ಬರಬಹುದು. ಆಗ ಸಹಜವಾಗಿ ಪಕ್ಷದ ರಾಜ್ಯಾಧ್ಯಕ್ಷರೇ ಮುಖ್ಯಮಂತ್ರಿ ಆಗಲಿ ಎಂದು ದೆಹಲಿಯಿಂದ ಕವರ್ ಬಂದರೆ ತಮ್ಮ ಸಿಎಂ ಆಗುವ ಇಚ್ಚೆ ಮುಗಿಯಲಿದೆ ಎಂದು ಸಿದ್ಧುವಿಗೆ ಗೊತ್ತಿದೆ. ಇದೇ ತಮ್ಮ ಕೊನೆಯ ಚುನಾವಣೆ ಎಂದು ಬಾದಾಮಿಯಲ್ಲಿ ಅತ್ತು ಕರೆದು ಅತ್ಯಂತ ಕನಿಷ್ಟ ಅಂತರದಿಂದ ಗೆದ್ದ ಸಿದ್ಧುವಿಗೆ ಈ ಬಾರಿ ಜನರ ನಾಡಿಮಿಡಿತ ಸಿಕ್ಕಿದೆ. ಒಂದು ಕೈ ನೋಡೋಣ ಎನ್ನುವ ಆಸೆ ಗರಿಕೆದರಿದೆ.
ಈ ಹಂತದಲ್ಲಿ ಡಿಕೆಶಿ ಆಡುತ್ತಿರುವ ಆಟ ನೋಡಿ ಅವರು ದಂಗಾಗಿದ್ದಾರೆ. ಆದ್ದರಿಂದ ಪ್ರಳಯವಾದರೂ ಪಕ್ಷ ಬಿಟ್ಟು ಹೋದವರನ್ನು ಸೇರಿಸಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಮಾಧ್ಯಮದೆದುರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ನೈತಿಕವಾಗಿ ನೋಡುವುದಾದರೆ ಸಿದ್ಧು ಮಾಡುತ್ತಿರುವುದು ನೂರಕ್ಕೆ ನೂರು ಸರಿ. ಮಾತೃಪಕ್ಷಕ್ಕೆ ಗುಡ್ ಬಾಯಿ ಹೇಳಿ ಮಂತ್ರಿ ಸ್ಥಾನಕ್ಕಾಗಿ ವಿರೋಧಪಕ್ಷದವರ ಜೊತೆ ಕೈಜೋಡಿಸುವುದು ಶುದ್ಧ ರಾಜಕಾರಣ ಅಲ್ಲ. ಯಾಕೆಂದರೆ ತಮ್ಮನ್ನು ಬೆಂಬಲಿಸಿದ ಪಕ್ಷದಿಂದ ಗೆದ್ದು ವರ್ಷದೊಳಗೆ ಎದ್ದು ಹೋಗಿ ವಿರೋಧಿ ಪಾಳಯದಲ್ಲಿ ನಿಂತು ನಗಲು ಇದೇನೂ ಗ್ರಾಮಪಂಚಾಯತ್ ಚುನಾವಣೆಯೂ ಅಲ್ಲ. ಆದ್ದರಿಂದ ತಮ್ಮನ್ನು ಅಣಕಿಸುವ ಆಟ ಆಡಿದವರು ಅಲ್ಲಿಯೇ ಏನಾದರೂ ಆಗಿ ಕೊಳೆಯಲಿ, ಇಲ್ಲಿ ಬಂದು ಡಿಕೆಶಿಯನ್ನು ಸಿಎಂ ಮಾಡಲು ಸಹಕರಿಸುವುದು ಬೇಡಾ ಎಂದು ಸಿದ್ಧು ಶಾಪ ಹಾಕುತ್ತಲೂ ಇರಬಹುದು. ಆದರೆ ಮುಂದಿನ ಚುನಾವಣೆಯಲ್ಲಿ ಒಂದೊಂದು ಸೀಟ್ ಕೂಡ ಮುಖ್ಯ ಎಂದು ಅಂದುಕೊಂಡಿರುವ ಡಿಕೆಶಿ ದುರ್ಬೀನು ಹಿಡಿದುಕೊಂಡು ಹೊರಟಿದ್ದಾರೆ. ಆಟ ಕುತೂಹಲಕಾರಿಯಾಗಿದೆ!!
- Advertisement -
Trending Now
“ನಾನು ಪಾಳೇಗಾರ ಅಲ್ಲ, ಕ್ಷೇತ್ರದ ಕಾವಲುಗಾರ!“ -ವೇದವ್ಯಾಸ ಕಾಮತ್ ಕಿಡಿ
February 17, 2025
Leave A Reply