• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರಿನಲ್ಲಿ ತುಘಲಕ್ ಆಡಳಿತ ನಡೆಸುವವರಿಗೆ ಈಗ ಪದ್ಮಶ್ರೀ ಪಡೆಯುವ ಕಾಲ!!

Hanumantha Kamath Posted On August 24, 2021
0


0
Shares
  • Share On Facebook
  • Tweet It

ಮಂಗಳೂರಿನ ಹೃದಯಭಾಗದಲ್ಲಿ ಮಹಾನ್ ಮೇಧಾವಿಯೊಬ್ಬರು ಕೊಟ್ಟಿರುವ ಸಲಹೆ ಅಥವಾ ಮಾಡಿರುವ ಎಡವಟ್ಟಿನಿಂದ ಏನು ಸಮಸ್ಯೆಯಾಗಿದೆ ಎನ್ನುವುದೇ ಈ ಜಾಗೃತ ಅಂಕಣದ ಕಥಾವಸ್ತು. ನಮ್ಮ ಸಿಟಿ ಬಸ್ಸುಗಳನ್ನು ಎಲ್ಲೆಲ್ಲೋ ನಿಲ್ಲಿಸಲು ಹೋಗಿ ಈಗ ಬಸ್ಸುಗಳು ಈ ಏರಿಯಾದಲ್ಲಿ ಆಮೆಗಳಿಗಿಂತಲೂ ನಿಧಾನವಾಗಿ ಚಲಿಸಬೇಕಾಗಿರುವ ಅನಿವಾರ್ಯ ಪರಿಸ್ಥಿತಿ ಯಾರಿಂದ ಬಂತು ಎನ್ನುವುದನ್ನು ನಾವೆಲ್ಲ ಸೇರಿ ಹುಡುಕಬೇಕಾಗಿದೆ. ಬಸ್ ಸ್ಟ್ಯಾಂಡ್ ಸರಿ ಮಾಡಲು ಹೋಗಿ ಬಸ್ಸುಗಳ ದಾರಿ ತಪ್ಪಿಸಿ ಈಗ ಉಳಿದ ವಾಹನಗಳು ಕೂಡ ಇರುವೆಗಳ ವೇಗದಲ್ಲಿ ಈ ಪ್ರದೇಶದಲ್ಲಿ ಸಂಚರಿಸುವ ಮೂಲಕ ನೀವು ಟ್ರಾಫಿಕ್ ಜಾಮ್ ನ ಅನುಭವ ಇಲ್ಲಿ ಅನುಭವಿಸಬಹುದು. ಮೊದಲಿಗೆ ಈ ಬಸ್ಸುಗಳ ವಿಷಯವನ್ನು ತೆಗೆದುಕೊಳ್ಳೋಣ.
ಗಡಿಯಾರ ಗೋಪುರದಿಂದ ಎಬಿ ಶೆಟ್ಟಿ ವೃತ್ತವನ್ನು ಹಾದು ಡಿಸಿ ಆಫೀಸಿನ ಎದುರಿಗೆ ಇರುವ ಹ್ಯಾಮಿಲ್ಟನ್ ವೃತ್ತವನ್ನು ಸುತ್ತು ಹಾಕಿ ರಾವ್ ಅಂಡ್ ರಾವ್ ಸರ್ಕಲ್ ನಿಂದ ಮತ್ತೆ ಗಡಿಯಾರ ಗೋಪುರದ ತನಕ ಈಗ ಏಕಮುಖ ರಸ್ತೆ ಅಥವಾ ಒನ್ ವೇ ಎನ್ನುವುದು ಈ ಭಾಗದಲ್ಲಿ ವಾಹನ ಹಿಡಿದುಕೊಂಡು ಬರುವವರಿಗೆ ಗೊತ್ತೆ ಇದೆ. ಈಗ ಬಸ್ಸುಗಳ ವಿಷಯಕ್ಕೆ ಬರೋಣ. ಈ ಕೊರೊನಾ ಗಡಿಬಿಡಿಯಲ್ಲಿ ನಮ್ಮ ಜಿಲ್ಲಾಡಳಿತ ಮಾಡಲು ಹೋಗಿರುವ ಮಹಾ ಸುಧಾರಣೆ ಎಂದರೆ ಈ ಸರ್ವಿಸ್ ಬಸ್ಸುಗಳೊಂದಿಗೆ ಸಿಟಿ ಬಸ್ಸುಗಳನ್ನು ಕೂಡ ಒಟ್ಟಿಗೆ ಹಾಕಿ ಚೌಚೌ ಭಾತ್ ಮಾಡಿರುವುದು. ಅದರೊಂದಿಗೆ ಯಾವುದೋ ಮಹಾನುಭಾವರ ಮಾತು ಕೇಳಿ ಪೊಲೀಸ್ ಕಮೀಷನರ್ ಕಚೇರಿ ಕಟ್ಟಡದ ಎದುರಿಗೆ ಕೆಲವೇ ಹೆಜ್ಜೆಗಳ ಅಂತರದಲ್ಲಿ ಒಂದು ಚರ್ಚ್ ಮತ್ತು ಮೆಸ್ಕಾಂ ಆಫೀಸ್ ಇದೆಯಲ್ಲ, ಅಲ್ಲೊಂದು ಗುಜರಿ ರಸ್ತೆ ಇದೆ. ಆ ರಸ್ತೆಯಲ್ಲಿ ಸರ್ವೀಸ್ ಬಸ್ಸುಗಳು ಒಳಗೆ ಹೋಗಿ ಬಸ್ ನಿಲ್ದಾಣದಲ್ಲಿ ತಮಗೆ ಬೇಕಾದ ಕಡೆ ನಿಲ್ಲುತ್ತಿದ್ದವು. ಇನ್ನು ಸಿಟಿ ಬಸ್ಸುಗಳು ಗಡಿಯಾರ ವೃತ್ತದಿಂದ ಎಬಿ ಶೆಟ್ಟಿ ಸರ್ಕಲ್ ಸುತ್ತು ಬಳಸಿ ಹ್ಯಾಮಿಲ್ಟನ್ ವೃತ್ತದ ಮುಂದಿರುವ ರಸ್ತೆಯಲ್ಲಿ ತಮಗೆ ನಿಗದಿಪಡಿಸಿದ ಕಡೆ ನಿಲ್ಲುತ್ತಿದ್ದವು. ಅಲ್ಲಿ ಸಿಟಿ ಬಸ್ಸುಗಳು ನಿಂತರೆ ಕೊರೊನಾ ಹಬ್ಬುತ್ತದೆ ಎಂದು ಅಂದುಕೊಂಡ ಜಿಲ್ಲಾಡಳಿತ ಸಿಟಿ ಬಸ್ಸುಗಳು ಕೂಡ ಸರ್ವೀಸ್ ಬಸ್ ನಿಲ್ದಾಣದ ಒಳಗೆ ಬರಬೇಕು ಎಂದು ಆದೇಶಿಸಿತು. ಇದೇ ಕಾಲಕ್ಕೆ ಕರೆಕ್ಟಾಗಿ ಹಿಂದೆ ಮಮೂಲಾಗಿ ಸರ್ವೀಸ್ ಬಸ್ಸುಗಳು ಬಸ್ ನಿಲ್ದಾಣದ ಒಳಗೆ ಬರುವ ರಸ್ತೆಯನ್ನು ಮುಚ್ಚಿಬಿಟ್ಟಿತು. ಇದರಿಂದ ಏನಾಯಿತು ಎಂದರೆ ಎಲ್ಲಾ ಬಸ್ಸುಗಳು ರಾವ್ ಅಂಡ್ ರಾವ್ ಸರ್ಕಲ್ ತನಕ ಬಂದು ಅಲ್ಲಿ ರೈಟ್ ತೆಗೆದು ಬಸ್ ನಿಲ್ದಾಣದ ಬಲಭಾಗದಲ್ಲಿ ಒಳಗೆ ಹೋಗಬೇಕಾಗುತ್ತದೆ. ಮೊದಲೇ ಸಿಟಿ ಬಸ್ಸುಗಳು ಹಿಂದಿನ ಜಾಗಗಳಲ್ಲಿ ನಿಲ್ಲುವುದಿಲ್ಲ ಎಂದು ಅಷ್ಟು ಜಾಗದಲ್ಲಿ ಈಗ ಪಾರ್ಕಿಂಗ್, ರಸ್ತೆಬದಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಹೀಗೆ ಮಾಡಿರುವುದರಿಂದ ಅಲ್ಲಿ ಕೂಡ ಬಸ್ಸುಗಳು ವೇಗವಾಗಿ ಹೋಗಲು ಆಗುವುದಿಲ್ಲ. ಇನ್ನು ಬಸ್ ನಿಲ್ದಾಣದಿಂದ ಹೊರಗೆ ಬರುವ ಬಸ್ಸುಗಳು ಲೇಡಿಗೋಶನ್ ಆಸ್ಪತ್ರೆಯ ಬಳಿಯಲ್ಲಿ ಎಡಕ್ಕೆ ತಿರುಗಿಸಿಯೇ ಮುಂದೆ ಹೋಗಬೇಕಾಗುತ್ತದೆ. ಯಾಕೆಂದರೆ ಪುರಭವನದ ಬಾಗಿಲಿನ ಕೆಲವೇ ಹೆಜ್ಜೆಗಳ ಅಂತರದಲ್ಲಿ ಮತ್ತೆ ಅಗೆಯಲಾಗಿದೆ. ಇದು ಅಗೆದು ತಿಂಗಳುಗಟ್ಟಲೆ ಆಗಿದ್ದು, ಅಲ್ಲಿ ಕೂಡ ನೇರವಾಗಿ ಬಸ್ಸುಗಳು ಚಲಿಸಲು ಸಾಧ್ಯವಿಲ್ಲ. ಆದ್ದರಿಂದ ಲೇಡಿಗೋಶನ್ ಎದುರು ಎಡಕ್ಕೆ ತಿರುಗುವಾಗ ಸೆಂಟ್ರಲ್ ಮಾರ್ಕೆಟಿನ ರಸ್ತೆಯಿಂದ ಲಿಂಕಿಂಗ್ ಟವರ್ಸ್ ದಾಟಿ ಮುಂದೆ ಬರುವ ವಾಹನಗಳು ಕೂಡ ಟ್ರಾಫಿಕ್ ಜಾಮಿಗೆ ಸಿಲುಕುತ್ತವೆ. ಒಟ್ಟಿನಲ್ಲಿ ಈ ಭಾಗದಲ್ಲಿ ಯಾವಾಗಲೂ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಇದೆ. ಇನ್ನು ಕೇಂದ್ರ ಮೈದಾನದ ಪೆವಿಲಿಯನ್ ಮತ್ತು ಚರ್ಚ್ ಮಧ್ಯೆ ಇರುವ ರಸ್ತೆಯನ್ನು ಮುಚ್ಚಿರುವುದರಿಂದ ಬಸ್ಸಿನ ಚಾಲಕರಿಗೆ ನಿಧಾನಗತಿಯ ಶಿಕ್ಷೆ ಮಾತ್ರವಲ್ಲ, ಈಗಾಗಲೇ ದುಬಾರಿಯಾಗಿರುವ ಡಿಸೀಲ್ ಬೆಲೆಯಿಂದಾಗಿ ನೇರವಾಗಿ ತಿನ್ನುವುದು ಸುತ್ತಿ ಬಳಸಿ ಬಾಯಿಗೆ ಹಾಕುವುದರಿಂದ ಆಗುವ ನಷ್ಟಕ್ಕೆ ಹೋಲಿಸಬಹುದು. ಇದರ ಅಗತ್ಯ ಇರಲಿಲ್ಲ ಎನ್ನುವುದು ನೂರಕ್ಕೆ ನೂರರಷ್ಟು ನಿಜ. ಇದರಿಂದ ಒಂದು ಟ್ರಿಪ್ ಕೂಡ ಕಟ್ ಮಾಡಬೇಕಾದ ಪರಿಸ್ಥಿತಿ ಮತ್ತು ಡಿಸೀಲ್ ಕೂಡ ಜಾಸ್ತಿ ವ್ಯಯಿಸುವಂತಹ ಅನಿವಾರ್ಯತೆ ಬಂದಿದೆ.
ಇದು ಯಾವುದೇ ಒಂದು ತುಘಲಕ್ ಸರಕಾರ ಮಾತ್ರ ಮಾಡಬಹುದಾದಂತಹ ನಿಯಮ ಎನ್ನಲು ಯಾವುದೇ ಅಂಜಿಕೆ ಇಲ್ಲ. ಈ ನಡುವೆ ಲೇಡಿಗೋಶನಿಗೆ ಯಾವುದಾದರೂ ಅಂಬ್ಯಲೆನ್ಸ್ ಬರುವುದಾದರೆ ಅದರಲ್ಲಿರುವ ರೋಗಿಯ ಜೀವ ದೇವರೇ ಕಾಪಾಡಬೇಕು. ಯಾವಾಗಲು ಆಸ್ಪತ್ರೆಗಳ ಆಸುಪಾಸಿನಲ್ಲಿ ವಾಹನ ದಟ್ಟಣೆ ಇರಬಾರದು. ಆದರೆ ಇಲ್ಲಿ ಏನೇನೋ ಮಾಡಲು ಹೋಗಿ ರೋಗಿಗಳ ಮನೆಯವರು ಜನಪ್ರತಿನಿಧಿಗಳನ್ನು ಶಪಿಸುವಂತಾಗಿದೆ. ಯಾವುದಾದರೂ ನಿಯಮಗಳನ್ನು ತರುವಾಗ ಜಿಲ್ಲಾಡಳಿತದವರು ಅಧಿಕಾರಿಗಳನ್ನು ಮತ್ತು ಇನೋವಾದಲ್ಲಿಯೇ ತಿರುಗುತ್ತಿರುವ ಜನಪ್ರತಿನಿಧಿಗಳನ್ನು ಮಾತ್ರ ಕೇಳುವುದಲ್ಲ. ಜನಸಾಮಾನ್ಯರು ಅದರಲ್ಲಿಯೂ ಬಸ್ ಚಾಲಕರು, ಹಿರಿಯ ಬಸ್ ಮಾಲೀಕರು ಮತ್ತು ಗ್ರೌಂಡ್ ಲೆವೆಲ್ಲಿನಲ್ಲಿ ಸುತ್ತಾಡುವ ಸಾಮಾಜಿಕ ಹೋರಾಟಗಾರರನ್ನು ಕೇಳಬೇಕು. ಇನ್ನು ಪೊಲೀಸ್ ಇಲಾಖೆಯಲ್ಲಿಯೂ ಸಾಕಷ್ಟು ಅನುಭವಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳಿದ್ದಾರೆ. ಅವರ ಅಭಿಪ್ರಾಯ ಪಡೆಯಬೇಕು. ಇದು ಬಿಟ್ಟು ಯಾರದ್ದೋ ಮಾತು ಕೇಳಿ ನಿಯಮ ತರಲು ಹೋದರೆ ಇವರನ್ನು ಸುಮ್ಮನೆ ಬಿಡುವುದಕ್ಕಿಂತ ಈ ನಿಯಮ ತಂದಿರುವುದರಿಂದ ಪದ್ಮಶ್ರೀ ಪ್ರಶಸ್ತಿಗೆ ದೆಹಲಿಗೆ ಹೆಸರು ಶಿಫಾರಸ್ಸು ಮಾಡಬೇಕು. ಯಾಕೆಂದರೆ ಅಂತವರ ತಲೆಗೆ ಏನಾದರೂ ಕೊಡಲೇಬೇಕು. ಇನ್ನು ಈ ನಿಯಮವನ್ನು ಜಾರಿಗೆ ತಂದಿರುವ ನಮ್ಮ ಜನಪ್ರತಿನಿಧಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಪಕ್ಷದಿಂದ ಗುರುತಿಸಬೇಕು!
0
Shares
  • Share On Facebook
  • Tweet It




Trending Now
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
Hanumantha Kamath July 30, 2025
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
Hanumantha Kamath July 29, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
  • Popular Posts

    • 1
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 2
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 3
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 4
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 5
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

  • Privacy Policy
  • Contact
© Tulunadu Infomedia.

Press enter/return to begin your search