• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜಿಯೋದವರಿಗೆ ಫ್ರೀಯಾಗಿ ನೆಲ ಬಿಟ್ಟುಕೊಡುವುದನ್ನು ನಿಲ್ಲಿಸಿ ಮೇಯರ್!!

Hanumantha Kamath Posted On August 30, 2021


  • Share On Facebook
  • Tweet It

ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುವ, ಬೃಹತ್ ಜಾಲಗಳನ್ನು ಹೊಂದಿರುವ, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಹೆಸರಿರುವ ಉದ್ಯಮಿಗಳ ಮೇಲೆ ಇರುವ ಪ್ರೀತಿ ಮಂಗಳೂರು ಮಹಾನಗರ ಪಾಲಿಕೆಗೆ ಬಡಪಾಯಿ ಗೂಡಂಗಡಿಯವರ ಮೇಲೆ ಇರುವುದಿಲ್ಲ. ರಾಷ್ಟ್ರೀಯ ಕಂಪೆನಿಗಳು ಉಚಿತವಾಗಿ ನಮ್ಮ ನಗರದ ಭೂಮಿಯನ್ನು ಯಥೇಚ್ಚವಾಗಿ ಬಳಸಬಹುದು. ಅದರಿಂದ ಕೋಟ್ಯಾಂತರ ರೂಪಾಯಿ ಲಾಭ ಕೂಡ ಗಳಿಸಬಹುದು. ಅದೇ ಗೂಡಂಗಡಿಯವರು ಬಾಡಿಗೆ ಬಾಕಿ ಇಟ್ಟರೆ ಪಾಲಿಕೆಯವರು ಅಂಗಡಿಗೆ ಒಂದು ಗತಿ ಕಾಣಿಸುತ್ತಾರೆ. ಇದು ಯಾಕೆ ಹೇಳಬೇಕಾಗಿದೆ ಎಂದರೆ ಈ ಜಿಯೋ ಕೇಬಲ್ ಸಹಿತ ಬೇರೆ ಬೇರೆ ಸಂಪರ್ಕ ಕ್ಷೇತ್ರದ ಸಂಸ್ಥೆಗಳು ಮಂಗಳೂರು ನಗರದಲ್ಲಿ ಕೇಬಲ್ ಎಳೆಯಬೇಕೆಂದರೆ ಅದಕ್ಕೆ ಇನ್ನು ಪಾಲಿಕೆಯ ಅನುಮತಿ ಅಗತ್ಯವಾಗಿದೆ. ನಂತರ ಆ ಅನುಮತಿ ಪತ್ರವನ್ನು ಮೆಸ್ಕಾಂ ಕಚೇರಿಗೆ ನೀಡಿ ನಂತರ ನೆಲದ ಕೆಳಗೆ ಅಥವಾ ಮೇಲೆ ವಯರ್ ಎಳೆಯಬಹುದಾಗಿದೆ.

ಹಿಂದೆ ಮೆಸ್ಕಾಂ ಎನ್ ಒಸಿ ಕೊಡಬೇಕಿತ್ತು. ಸರಿಯಾಗಿ ನೋಡಿದರೆ ಅದು ತಪ್ಪು ನಿಯಮ. ಪಾಲಿಕೆಗೆ ಆದಾಯ ಬರುವ ಮೂಲವನ್ನು ಪಾಲಿಕೆ ಇಲ್ಲಿಯವರೆಗೆ ಬಳಸಲೇ ಇರುತ್ತಿರಲಿಲ್ಲ. ಈ ಬಗ್ಗೆ ನಾನು ಬಜೆಟ್ ಪೂರ್ವ ಸಭೆಯಲ್ಲಿ ಇವರು ಸಾರ್ವಜನಿಕರೊಂದಿಗೆ ಪಾಲಿಕೆಯ ಮೇಯರ್ ಹಾಗೂ ಸ್ಥಾಯಿ ಸಮಿತಿಗಳು ಏನು ಅಭಿಪ್ರಾಯ ಕೇಳುವ ಕಾಟಾಚಾರ ಮಾಡುತ್ತಾರೆ ಅದರಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ಮೂರು ಬಾರಿ ಮತ್ತು ಭಾರತೀಯ ಜನತಾ ಪಾರ್ಟಿ ಆಳ್ವಿಕೆಯ ಎರಡು ಬಾರಿ ಕೂಡ ಹೇಳಿದ್ದೇನೆ. ನನ್ನ ಜಾಗೃತ ಅಂಕಣದಲ್ಲಿ ಕೂಡ ಬರೆದಿದ್ದೇನೆ. ಇಲ್ಲಿ ಪಾಲಿಕೆ ಹೇಗೆ ಆದಾಯ ತಂದುಕೊಳ್ಳಬಹುದು ಎಂದು ಹೇಳುತ್ತೇನೆ. ಈಗ ಯಾವುದೇ ಟೆಲಿಫೋನ್ ಕೇಬಲ್ ಸಂಸ್ಥೆಯವರು ತಮ್ಮ ಭೂಗತ ವೈಯರ್ ಗಳನ್ನು ಹಾಕಲು ನಮ್ಮ ನಗರ ವ್ಯಾಪ್ತಿಯ ಭೂಮಿಯನ್ನು ಅಗೆಯುತ್ತಾರೆ ಎಂದು ಇಟ್ಟುಕೊಳ್ಳೋಣ. ಇದೇನು ಗುಪ್ತವಾಗಿ ನಡೆಯುವ ವಿಷಯವಲ್ಲ. ಇದನ್ನು ನೀವು ಮಂಗಳೂರು ನಗರದ ಎಷ್ಟೋ ಪ್ರದೇಶಗಳಲ್ಲಿ ನೋಡಬಹುದು. ಇವರು ಅಗೆದ ನಂತರ ಅದನ್ನು ಮತ್ತೆ ಹಾಗೆ ಎಂದಿನಂತೆ ಹಿಂದೆ ಹೇಗೆ ಇತ್ತೋ ಹಾಗೆ ಪ್ಯಾಚ್ ಅಪ್ ಮಾಡಿಕೊಡಬೇಕಾಗುತ್ತದೆ. ಅದಕ್ಕೆ ಪಾಲಿಕೆಯಿಂದ ಎಷ್ಟು ದರ ನಿಗದಿಪಡಿಸಲಾಗಿದೆಯೋ ಅಷ್ಟು ಹಣವನ್ನು ಆ ಕಂಪೆನಿಯವರು ಕಟ್ಟುತ್ತಾರೆ. ಅಲ್ಲಿಗೆ ಅವರಿಗೂ, ಪಾಲಿಕೆಗೂ ಇರುವ ಸಂಬಂಧ ಮುಕ್ತಾಯವಾಗುತ್ತದೆ. ಅದರ ನಂತರ ಆ ಕಂಪೆನಿ ಇರುವ ತನಕವೂ ಉಚಿತವಾಗಿ ನಮ್ಮ ಭೂಮಿಯ ಕೆಳಗೆ ಹಾಕಿರುವ ಅವರ ಕೇಬಲ್ ಗಳು ಅವರಿಗಾಗಿ ಕೆಲಸ ಮಾಡುತ್ತಾ ಇರುತ್ತವೆ. ಇದರಿಂದ ಕಂಪನಿಗಳಿಗೆ ಆದಾಯ ನಿರಂತರ ಹರಿದು ಬರುತ್ತಾ ಇರುತ್ತದೆ. ಆದರೆ ಪಾಲಿಕೆಗೆ ಏನು ಸಿಗುತ್ತದೆ? ಏನೂ ಇಲ್ಲ. ನಾವು ನಮ್ಮ ನೆಲದೊಳಗೆ ಪ್ರಖ್ಯಾತ ಕಂಪೆನಿ ಜಿಯೋ, ಏರ್ ಟೆಲ್ ಕೇಬಲ್ ಗಳು ಇವೆ ಎನ್ನುವುದಕ್ಕೆ ಹೆಮ್ಮೆ ಪಟ್ಟುಕೊಳ್ಳಲು ಆಗುತ್ತಾ? ಅಥವಾ ಆ ಕೇಬಲ್ ಗಳನ್ನು ಎಳೆದಿರುವುದರಿಂದ ನಮ್ಮ ನಗರದ ಘನತೆ ಹೆಚ್ಚಾಗುತ್ತಾ? ಏನೂ ಇಲ್ಲ. ಅದರ ಬದಲು ಈ ಬಹುರಾಷ್ಟ್ರೀಯ ಕಂಪೆನಿಗಳು ಎಳೆಯುವ ಕೇಬಲ್ ಗಳಿಗೆ ಇಂತಿಷ್ಟು ಮೀಟರ್ ಗಳಿಗೆ ಇಷ್ಟು ಎಂದು ದರ ನಿಗದಿ ಮಾಡಿಬಿಡಬೇಕು. ಆಗುವುದಿಲ್ಲ ಎಂದರೆ ನಮ್ಮ ನೆಲದ ಮೇಲೆ ನಿಮಗೆ ಅಧಿಕಾರ ಕೊಡಲು ಸಾಧ್ಯ ಇಲ್ಲ. ಅಗೆಯಲು ಅನುಮತಿ ನಿರಾಕರಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿಬಿಡಬೇಕು. ಅದರಿಂದ ಏನಾಗುತ್ತದೆ ಎಂದರೆ ಬಾಲಮುದುಡಿ, ಬಾಯಿ ಮುಚ್ಚಿ ನಾವು ಹೇಳಿದ ಬೆಲೆ ಕೊಟ್ಟು ನೆಲ ಅಗೆಯಲು ಅನುಮತಿ ಪಡೆದುಕೊಳ್ಳುತ್ತಾರೆ ಮತ್ತು ಪ್ರತಿ ತಿಂಗಳು ನಿಗದಿಪಡಿಸಿದ ಸಮಯದೊಳಗೆ ಶುಲ್ಕ ಕಟ್ಟುತ್ತಾರೆ. ಹಾಗಂತ ನಮ್ಮ ಅಧಿಕಾರಿಗಳು ಅಲ್ಲಿ ಕೂಡ ಗೋಲ್ ಮಾಲ್ ಮಾಡುವ ಸಾಧ್ಯತೆಗಳು ಇಲ್ಲದಿಲ್ಲ. ಉದಾಹರಣೆಗೆ ನೂರುಮೀಟರ್ ಕೇಬಲ್ ಹಾಕಿಸಿ ನಾಲ್ವತ್ತು ಎಂದು ದಾಖಲೆಗಳಲ್ಲಿ ಲೆಕ್ಕ ತೋರಿಸಿ ಭ್ರಷ್ಟಾಚಾರ ಮಾಡಿದರೂ ಮಾಡಬಹುದು. ಹಾಗಂತ ನಾವು ಸೀನಿಕರಾಗುವುದು ಬೇಡಾ. ಪಾಲಿಕೆಯಲ್ಲಿ ಈಗ ಯುವ ಐಎಎಸ್ ಶ್ರೇಣಿಯ ಅಧಿಕಾರಿ ಆಯುಕ್ತರಾಗಿದ್ದಾರೆ. ಅವರು ತಮ್ಮ ಜ್ಞಾನವನ್ನು ಬಳಸಬೇಕು. ಬಂದ ಹಣವನ್ನು ಖರ್ಚು ಮಾಡುವುದು ಮಾತ್ರ ಅಧಿಕಾರಿಯ ಕೆಲಸ ಅಲ್ಲ, ಪಾಲಿಕೆಗೆ ಹೆಚ್ಚಿನ ಆದಾಯ ಬರುವಂತೆ ಮಾಡುವುದು ಮತ್ತು ಆದಾಯ ಸೋರಿ ಹೋಗದಂತೆ ನೋಡಿಕೊಳ್ಳುವುದು ಕೂಡ ಅತ್ಯಗತ್ಯ. ಅದಕ್ಕಾಗಿ ಬೇಕಾಗಿರುವುದು ಇಚ್ಚಾಶಕ್ತಿ. ಕೇವಲ ಐಎಎಸ್ ಎಂದು ತಲೆಯಲ್ಲಿ ಇದ್ದರೆ ಸಾಕಾಗುವುದಿಲ್ಲ. ನಗರದ ಹಿತ ಕಾಪಾಡುವ ಜೊತೆಗೆ ಪಾಲಿಕೆಗೆ ಆದಾಯ ಬರುವಂತೆ ಮಾಡಬೇಕು. ಇದೇನೂ ದೊಡ್ಡ ತಲೆಕೆಡಿಸುವ ಕಾರ್ಯ ಅಲ್ಲ. ನಾವು ನಮ್ಮ ನೆಲವನ್ನು ನೀವು ಉಪಯೋಗಿಸಲು ಇಂತಿಷ್ಟು ಚಾರ್ಜ್ ಮಾಡುತ್ತೇವೆ ಎಂದು ಕಂಪೆನಿಗಳಿಗೆ ಲಿಖಿತವಾಗಿ ಬರೆದು ಕಳುಹಿಸಿದರೆ ಸಾಕು. ಅವರ ಅಧಿಕಾರಿಗಳೊಂದಿಗೆ ಸಭೆಗಳನ್ನು ಮಾಡಿ ಮುಗಿಸಿದರೆ ಓಕೆ. ಇದೇನು ತಿಂಗಳು ತಿಂಗಳು ಮಾಡಬೇಕಾದ ಸಭೆಗಳು ಅಲ್ಲ. ಒಮ್ಮೆ ರೂಪುರೇಶೆ ಸಿದ್ಧಪಡಿಸಿದರೆ ಸಾಕು. ನಂತರ ಅದು ಹಾಗೆ ಮುಂದುವರೆಯುತ್ತಲೇ ಇರುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಅರವತ್ತು ವಾರ್ಡುಗಳಿವೆ. ನೂರಾರು ಕಿಲೋ ವ್ಯಾಪ್ತಿಯ ಕೇಬಲ್ ಹಾಕುವ ಅವಕಾಶವಿದೆ. ಅದರಿಂದ ಬರುವ ಆದಾಯ ಕೂಡ ಕಡಿಮೆ ಏನಲ್ಲ. ಇನ್ನು ನೆಲದ ಮೇಲೆ ಕಂಬಕ್ಕೆ ಕೂಡ ಕಟ್ಟಿ ಕೇಬಲ್ ಹಾಕುವ ಪ್ರಕ್ರಿಯೆ ಶುರುವಾಗುತ್ತಿದೆ. ಅದಕ್ಕೆ ಶುಲ್ಕ ತೆಗೆದುಕೊಳ್ಳುವುದು ಮಾತ್ರವಲ್ಲ, ಈಗ ಹಾಕಿರುವ ಓವರ್ ಹೆಡ್ ಕೇಬಲ್ ವಯರ್ ಗಳಿಗೂ, ಅಂಡರ್ ಗ್ರೌಂಡ್ ಕೇಬಲ್ ಗಳಿಗೂ ಶುಲ್ಕ ನಿಗದಿಪಡಿಸಿ ವಸೂಲಿ ಮಾಡಲು ಆರಂಭಿಸಬೇಕು. ಇದರಿಂದ ಪಾಲಿಕೆಯ ಆದಾಯ ಹೆಚ್ಚಾಗುತ್ತದೆ. ಅಭಿವೃದ್ಧಿ ಕೆಲಸಗಳಿಗೆ ಬಳಕೆಯಾಗುತ್ತದೆ. ಆಗುತ್ತಾ ನೋಡಬೇಕು. ಪಾಲಿಕೆಯಲ್ಲಿ ಈಗ ಇರುವ ಮೇಯರ್ ಪ್ರೇಮಾನಂದ ಶೆಟ್ಟಿಯವರು ಐದನೇ ಅವಧಿಗೆ ಪಾಲಿಕೆಯಲ್ಲಿ ಸದಸ್ಯರಾಗಿ ಈಗ ಮೇಯರ್ ಕೂಡ ಆಗಿದ್ದಾರೆ. ಅವರು ಈ ಪಾಲಿಕೆಯ ನಿಯಮಗಳ ಬಗ್ಗೆ ಸಾಕಷ್ಟು ಜ್ಞಾನ ಉಳ್ಳವರು ಎಂದು ಅವರನ್ನು ಬಹಿರಂಗ ವೇದಿಕೆಯಲ್ಲಿ ಶಾಸಕರು ಹೊಗಳುತ್ತಾ ಇರುತ್ತಾರೆ. ಈಗ ಮೇಯರ್ ಜ್ಞಾನ ಕೂಡ ಬಳಕೆಯಾಗಲಿ. ಸುಮ್ಮನೆ ಅನುಭವಿ, ಬುದ್ಧಿವಂತ ಎಂದು ಇದ್ದರೆ ಸಾಕಾಗುವುದಿಲ್ಲ. ಆ ಅನುಭವ, ಬುದ್ಧಿವಂತಿಕೆ ಬಳಕೆಯಾಗಬೇಕು. ಇಲ್ಲದಿದ್ದರೆ ಬಿಜೆಪಿಯಲ್ಲಿ ಇಷ್ಟು ಅತೀ ಬುದ್ಧಿವಂತ ತಲೆಗಳು ಇದ್ದು ಏನು ಪ್ರಯೋಜನ!

  • Share On Facebook
  • Tweet It


- Advertisement -


Trending Now
ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
Hanumantha Kamath September 25, 2023
ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
Hanumantha Kamath September 22, 2023
Leave A Reply

  • Recent Posts

    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
    • ಈ ಬಾರಿ ಮಹಿಷ ದಸರಾ ಯಾಕೆ ನಡೆಯಬೇಕು!
    • ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!
  • Popular Posts

    • 1
      ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • 2
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search