ಟೋಲ್ ವಿಷಯದಲ್ಲಿ ನಾವು ಬುದ್ಧಿವಂತರು ಎಂದು ಸಾಬೀತಾಯಿತಾ?
![](https://tulunadunews.com/wp-content/uploads/2022/11/hejmadi-toll.jpg)
ದಕ್ಷಿಣ ಕನ್ನಡ ಜಿಲ್ಲೆಯವರನ್ನು ಬುದ್ಧಿವಂತರು ಎಂದು ಯಾರು ಸುಮ್ಮನೆ ಹೇಳಿಲ್ಲ. ನಾವು ಅರ್ಹವಾಗಿಯೇ ಈ ಪಟ್ಟವನ್ನು ಗಳಿಸಿಕೊಂಡಿದ್ದೇವೆ. ಅದಕ್ಕಾಗಿಯೇ ಅನೇಕ ಉದಾಹರಣೆಗಳಿವೆ. ಅದಕ್ಕೆ ಈಗ ತಾಜಾ ಉದಾಹರಣೆ ಎಂದರೆ ಸುರತ್ಕಲ್ ಟೋಲ್ ಗೇಟನ್ನು ಅಲ್ಲಿಂದ ತೆಗೆದು ಹೆಜಮಾಡಿಯಲ್ಲಿ ವಿಲೀನ ಮಾಡಿದ್ದು. ಈಗ ಏನಾಯಿತು ಎಂದರೆ ಸುರತ್ಕಲ್ ನಲ್ಲಿ ಒಂದು ವಾಹನಕ್ಕೆ 40 ರೂಪಾಯಿ ಒಂದು ಸೈಡ್ ಹೋಗಲು ಕೊಡಬೇಕು ಎಂದಿದ್ದರೆ ಅದನ್ನು ಈಗ ಹೆಜಮಾಡಿಯಲ್ಲಿಯೂ ಕೊಡಬೇಕಾಗುತ್ತದೆ. ಅದರೊಂದಿಗೆ ಹೆಜಮಾಡಿಯಲ್ಲಿ ಈಗಾಗಲೇ ಕೊಡಬೇಕಾಗಿರುವ 60 ರೂಪಾಯಿ ಸೇರಿಸಿ ಅದೇ ಗಾಡಿಯವರು ನೂರು ರೂಪಾಯಿ ಕೊಡಬೇಕಾಗುತ್ತದೆ. 60+40=100 ನೀವು ಕೊಡಬೇಕಾಗಿರುವ ಒಟ್ಟು ಮೊತ್ತ. ಇದೀಗ ಈ ವಿಷಯ ವಿವಾದಕ್ಕೆ ತಿರುಗಿರುವುದು ಯಾಕೆಂದರೆ ಸುರತ್ಕಲ್ ಟೋಲ್ ಗೇಟನ್ನು ರದ್ದು ಮಾಡಬೇಕು ಎನ್ನುವುದು ಎಡಪಕ್ಷ ಮತ್ತು ಅವರೊಂದಿಗೆ ಸೇರಿಕೊಂಡು ಮೈಲೇಜ್ ಪಡೆದುಕೊಳ್ಳಲು ಹರಸಾಹಸಪಡುತ್ತಿರುವ ಕಾಂಗ್ರೆಸ್ಸಿನ ಮೂಲ ಆಗ್ರಹ. ಇರಲಿ. ಅವರು ಅದಕ್ಕಾಗಿ ಹೋರಾಟ ಮಾಡಿರುವುದು ತಪ್ಪಲ್ಲ. ಯಾಕೆಂದರೆ ಸುರತ್ಕಲ್ ಟೋಲ್ ಅನಧಿಕೃತ ಎಂದು ಸ್ವತ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಲೋಕಸಭೆಯಲ್ಲಿಯೂ ಹೇಳಿದ್ದಾರೆ. ಇಲ್ಲಿ ಬಂದಾಗ ಸಭೆಗಳಲ್ಲಿಯೂ ಹೇಳಿದ್ದಾರೆ. ಅದು ಈ ಹೋರಾಟಗಾರರ ಪ್ರಬಲ ಅಸ್ತ್ರ. ಈಗ ಅನಧಿಕೃತ ಟೋಲ್ ರದ್ದು ಮಾಡಿಸಲು ಹೋರಾಟಗಾರರು ಸುಮಾರು ಒಂದು ತಿಂಗಳು ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರು. ಅವರ ಪ್ರಯತ್ನಕ್ಕೆ ಕೊನೆಗೂ ಜಯ ಸಿಕ್ಕಿತ್ತು. ಜನಸಾಮಾನ್ಯರು ಇವರ ಹೋರಾಟದಿಂದ ಖುಷಿ ಕೂಡ ಪಟ್ಟರು. ಅಲ್ಲಿಗೆ ಹೋರಾಟ ಸಮಾಪ್ತಿ ಕೂಡ ಆದಂತೆ ಆಯಿತು. ಆದರೆ ಈಗ ಸುರತ್ಕಲ್ ಟೋಲ್ ಹೆಜಮಾಡಿಯಲ್ಲಿ ವಿಲೀನ ಮಾಡಿರುವುದರಿಂದ ಮತ್ತೆ ಹೋರಾಟದ ಕಿಚ್ಚು ಶುರುವಾಗಲಿದೆ. ಅದು ಹೇಗೆ ಎನ್ನುವುದನ್ನು ವಿವರಿಸುತ್ತೇನೆ.
ಮೊದಲನೇಯದಾಗಿ ಸುರತ್ಕಲ್ ಟೋಲ್ ನಲ್ಲಿ ಕೆಎ 19 ಗಾಡಿಗಳಿಗೆ ಟೋಲ್ ನಿಂದ ವಿನಾಯಿತಿ ಇತ್ತು. ಅವರು ಒಂದು ರೂಪಾಯಿ ಕೂಡ ಕೊಡಬೇಕಾಗಿರಲಿಲ್ಲ. ಕೆ 19 ಹೊಂದಿರುವ ಬಸ್ಸಿನವರು ಮತ್ತು ವಾಣಿಜ್ಯದ ವಾಹನಗಳು ಕೊಡಬೇಕಾಗುತ್ತಿತ್ತು. ಆದರೆ ಉಳಿದವರು ಕೊಡಬೇಕಾಗಿರಲಿಲ್ಲ. ಈಗ ಏನಾಗಿದೆ ಎಂದರೆ ಕೆಎ 19 ಗಾಡಿಯವರು ಉಡುಪಿಗೆ ಹೋಗಬೇಕಾದರೆ ಅಲ್ಲಿಯ ಹಣವನ್ನು ಹೇಗೂ ಕೊಡಲೇಬೇಕು. ಅದರ ಸಮಸ್ಯೆ ಇಲ್ಲ. ಆದರೆ ಇಲ್ಲಿಯದ್ದು ಕೂಡ ಸೇರಿಸಿಯೇ ಕೊಡಬೇಕಾಗುತ್ತದೆ. ಇದರಿಂದ ಕೆಎ 19 ನವರಿಗೆ ಈ ಹೋರಾಟದಿಂದ ಆಗಿರುವುದು ಅಪ್ಪಟ ನಷ್ಟ ಮಾತ್ರ.
ಯಾವುದೇ ಒಂದು ಟೋಲ್ ಗೇಟಿನಲ್ಲಿ ಇಂತಿಂತಹ ವಾಹನಗಳಿಗೆ ವಿನಾಯಿತಿ ಎನ್ನುವುದು ಇರುವುದಿಲ್ಲ. ಟೋಲ್ ಎಂದರೆ ಕೊಡಲೇಬೇಕು. ಆದರೆ ಹೆಜಮಾಡಿ ಟೋಲ್ ಆದ ಬಳಿಕ ಕೆಎ 19 ನವರು ಎರಡೆರಡು ಕಡೆ ಕೊಡಬೇಕಾಗುವುದರಿಂದ ಇಲ್ಲಿ ಕೊಡುವ ಅವಶ್ಯಕತೆ ಇಲ್ಲ ಎನ್ನುವ ಐತಿಹಾಸಿಕ ನಿಯಮವನ್ನು ಜಾರಿಗೆ ತರಲಾಯಿತು. ಹೀಗೆ ವಿನಾಯಿತಿ ಇರುವ ದೇಶದ ಏಕೈಕ ಟೋಲ್ ಎಂದರೆ ಸುರತ್ಕಲ್. ಇದರ ಹಿಂದೆ ಕೂಡ ಹೋರಾಟಗಾರರ ಪರಿಶ್ರಮ ಇದೆ. ಆದರೆ ಈಗ ಈ ಹೋರಾಟದಿಂದ ಇದ್ದ ಒಂದು ಸೌಲಭ್ಯ ಕೂಡ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಹಿಂದೆ ಮಂಗಳೂರಿನವರು ಉಡುಪಿಗೆ ಹೋಗುವಾಗ ಹೆಜಮಾಡಿಯಲ್ಲಿ ಹಣ ಕೊಟ್ಟರೆ ಸಾಕಿತ್ತು. ಈಗ ಅವರು ಸುರತ್ಕಲ್ ಮತ್ತು ಹೆಜಮಾಡಿಯ ಹಣವನ್ನು ಹೆಜಮಾಡಿಯಲ್ಲಿ ಕಟ್ಟಬೇಕು. ಅದೇ ರೀತಿ ಉಡುಪಿಯವರು ಕೂಡ ಮೂಲ್ಕಿಯ ತನಕ ಬರುವುದಿದ್ದರೆ ಹೆಜಮಾಡಿಯ ಟೋಲ್ ನಲ್ಲಿ ಆ ಟೋಲಿನ ಹಣ ಕಟ್ಟಿದ್ದರೆ ಸಾಕಿತ್ತು. ಈಗ ಅವರು ಕೇವಲ ಮೂಲ್ಕಿಗೆ ಬರುವುದಿದ್ದರೂ ಸುರತ್ಕಲ್ ಟೋಲ್ ಹಣವನ್ನು ಹೆಜಮಾಡಿಯ ಟೋಲ್ ದರದೊಂದಿಗೆ ಕಟ್ಟಬೇಕು. ಹಾಗಾದರೆ ಸುರತ್ಕಲ್ ಟೋಲ್ ರದ್ದತಿಯಿಂದ ಆಗಿರುವ ಲಾಭ ಕೆಲವು ಬಸ್ಸಿನವರಿಗೆ ಮತ್ತು ಸುರತ್ಕಲ್ ನಿಂದ ಹೆಜಮಾಡಿಯ ಒಳಗೆ ಓಡಾಡುವ ಕೆಲವು ಗೂಡ್ಸ್ ವಾಹನಗಳಿಗೆ ಮಾತ್ರ. ಇಲ್ಲಿಯ ತನಕ ಭಾರತೀಯ ಜನತಾ ಪಾರ್ಟಿಯವರು ಏನು ಹೇಳುತ್ತಿದ್ದರು ಎಂದರೆ ಸುರತ್ಕಲ್ ಟೋಲ್ ಹಾಕಿದ್ದು ಆಗ ಕೇಂದ್ರ ಭೂ ಸಾರಿಗೆ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್. ಈಗ ಎನ್ ಡಿಎ ಸರಕಾರದಲ್ಲಿ ಅದೇ ಇಲಾಖೆಯ ಸಚಿವರಾಗಿರುವ ನಿತಿನ್ ಗಡ್ಕರಿಯವರು ಅದನ್ನು ತೆಗೆದರು ಎಂದು ಹೇಳುತ್ತಾ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು. ಯಾರು ಹಾಕಿರಲಿ, ಯಾರೇ ತೆಗೆದಿರಲಿ. ಈಗ ವಿಷಯ ಮತ್ತೆ ಅಲ್ಲಿಯೇ ಬಂದು ನಿಂತಿರುವುದು ಮಾತ್ರವಲ್ಲ. ಮತ್ತೇ ಕೆಎ 19 ಗಾಡಿಯವರು ಫ್ರಿಡ್ಜ್ ನಿಂದ ನೇರ ಬಿಸಿನೀರಿನ ಹಂಡೆಗೆ ಬಿದ್ದ ಹಾಗೆ ಆಗಿದೆ. ಜನ ಈಗ ಸುರತ್ಕಲ್ ಟೋಲ್ ಹೋದದ್ದಕ್ಕೆ ಖುಷಿ ಪಡಬೇಕೋ ಅಥವಾ ಕೊಡದೇ ಇದ್ದ ಹಣವನ್ನು ಹೆಜಮಾಡಿಯಲ್ಲಿ ಕೊಡುವಂತೆ ಮಾಡಿದ ಪ್ರತಿಭಟನಾಕಾರರ ವಿರುದ್ಧ ಬೇಸರ ವ್ಯಕ್ತಪಡಿಸಬೇಕೋ ಎಂದು ಗೊತ್ತಾಗದೇ ಗೊಂದಲಕ್ಕೆ ಬಿದ್ದಿದ್ದಾರೆ. ಇನ್ನು ಈ ಹೋರಾಟ ಹೆಜಮಾಡಿಯಲ್ಲಿ ಶಿಫ್ಟ್ ಆಗಲಿದೆ. ಅಲ್ಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ನಿರಾಳರಾಗುವಂತಾಗಿದೆ. ಕೆ ಎ 19 ನವರು ತಲೆಕೆರೆದುಕೊಳ್ಳುತ್ತಿದ್ದಾರೆ!
Leave A Reply