ಟಿಕೆಟ್ ಕೊಟ್ಟರೆ ಸಾಥ್ ಸಾಥ್ ಹೈ, ಇಲ್ಲದಿದ್ದರೆ ಹಮ್ ಆಪ್ ಕೇ ಹೇ ಕೋನ್!!
![](https://tulunadunews.com/wp-content/uploads/2023/04/WhatsApp-Image-2023-04-16-at-6.56.16-PM-960x640.jpeg)
ಗಂಡ ಹೆಂಡಿರ ಜಗಳ, ಉಂಡು ಮಲಗುವ ತನಕ ಎನ್ನುವ ಗಾದೆ ಮಾತಿದೆ. ಹಾಗೆ ಕೆಲವರ ಪಕ್ಷ ನಿಷ್ಟೆ ಟಿಕೆಟ್ ಕೊಡುವ ತನಕ ಎನ್ನುವುದು ರಾಜಕೀಯದ ಹೊಸ ಗಾದೆ. ಟಿಕೆಟ್ ಸಿಕ್ಕಿದರೆ ಪಕ್ಷ ನಿಷ್ಟೆ, ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಕೊಡಲಾಗಿದೆ, ಇದು ನಮ್ಮ ಪಕ್ಷದಲ್ಲಿ ಮಾತ್ರ ಸಾಧ್ಯ, ಇಲ್ಲಿ ಪಕ್ಷಸೇವೆಗೆ ಮನ್ನಣೆ ಹೀಗೆ ಮೊದಲೇ ರೆಡಿ ಮಾಡಿಟ್ಟುಕೊಂಡ ಗಾದೆಗಳು ಪುಖಾಂನುಪುಂಖವಾಗಿ ಹರಿದುಬರುತ್ತದೆ. ಅದೇ ಅವರಿಗೆ ಟಿಕೆಟ್ ಇಲ್ಲ ಎಂದು ಗೊತ್ತಾಗಲಿ, ಆಗ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಅನ್ಯಾಯವಾಗಿದೆ, ನಮ್ಮ ಪಕ್ಷ ಈಗ ಮೊದಲಿನಂತೆ ಇಲ್ಲ, ಪಕ್ಷ ಸೇವೆಗೆ ಇಲ್ಲಿ ಮನ್ನಣೆ ಇಲ್ಲ ಹೀಗೆ ಮಾತುಗಳು, ವಾಕ್ಯಗಳು ಆ ಕ್ಷಣದಲ್ಲಿ ಬದಲಾಗುತ್ತವೆ. ಕೆಲವರು ಭಾವೋದ್ರೇಕಕ್ಕೆ ಒಳಗಾಗಿ ಇಂತಹ ಮಾತುಗಳನ್ನು ಹೇಳಿ ನಂತರ ಒಬ್ಬರೇ ಕುಳಿತು ನನಗೆ ಪಕ್ಷ ಮೂರು ಸಲ ಶಾಸಕ ಮಾಡಿದೆ. ನನ್ನನ್ನು ಉಪಮುಖ್ಯಮಂತ್ರಿ, ಮಂತ್ರಿ ಮಾಡಿದೆ, ಸಾಕಷ್ಟು ಗಬರಲು ಅವಕಾಶ ನೀಡಿದೆ. ನಾನು ಭ್ರಷ್ಟಾಚಾರದ ಆರೋಪಕ್ಕೆ ತುತ್ತಾದಾಗಲೂ ನನ್ನ ಬೆನ್ನಿಗೆ ನಿಂತು ರಕ್ಷಿಸಿದೆ, ನನ್ನ ಕುಟುಂಬದವರಿಗೆ ಸರಕಾರದಲ್ಲಿ ಬೇರೆ ಬೇರೆ ಸ್ಥಾನಮಾನ ಕೊಟ್ಟಿದೆ. ಈಗ ಒಂದು ಸಲ ಟಿಕೆಟ್ ಕೊಟ್ಟಿಲ್ಲ ಎಂದ ಕೂಡಲೇ ನಾನು ಪಕ್ಷದ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಜ್ಞಾನೋದಯಕ್ಕೆ ಒಳಗಾಗುತ್ತಾರೆ. ಮರುದಿನ ಬೆಳಿಗ್ಗೆ ಮುಖ ತೊಳೆದು, ಕಣ್ಣಂಚಿನಲ್ಲಿರುವ ನೀರು ಕಾಣದಂತೆ ಸುದ್ದಿಗೋಷ್ಟಿಯಲ್ಲಿ ಕುಳಿತು ನಿನ್ನೆ ಆ ಕ್ಷಣದ ರಿಯಾಕ್ಷನ್ ಆಗಿತ್ತು. ನನ್ನ ಉದ್ದೇಶ ಅದು ಇರಲಿಲ್ಲ. ನಮ್ಮ ಒಮ್ಮತದ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ. ನಾನು ಕೂಡ ಅಭ್ಯರ್ಥಿಯ ಜೊತೆಗೆ ಮತಪ್ರಚಾರ ಮಾಡಲು ಬರುತ್ತೇನೆ ಎಂದು ಹೇಳಿ ದಾನಶೂರನ ಗೆಟಪ್ಪಿಗೆ ಬಂದು ಬಿಡುತ್ತಾರೆ. ಹಾಗಾದ್ರೆ ಹಿಂದಿನ ದಿನ ಹೇಳಿದ ಮಾತು ಎಲ್ಲಿಗೆ ಹೋಯಿತು?
ಇಂತವರ ಸಾಲಿನಲ್ಲಿ ಅಂಗಾರ, ರಘುಪತಿ ಭಟ್ ಅವರು ಸೇರಿದರೆ ಲಾಲಾಜಿ, ಸುಕುಮಾರ ಶೆಟ್ಟಿ ಸ್ವಲ್ಪ ಪರವಾಗಿಲ್ಲ ಎನಿಸುವ ಹಾಗೆ ಗಾಂಭಿರ್ಯ ಮೆರೆದಿದ್ದಾರೆ. ಆದರೆ ಇನ್ನು ಕೆಲವರು ಎಂಪಿ ಕುಮಾರಸ್ವಾಮಿ, ನೆಹರೂ ಓಲೇಕಾರ್ ತರದವರು ತಮ್ಮ ಹೆಸರು, ವರ್ಚಸ್ಸು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಮಣ್ಣುಮುಕ್ಕಿ ಹಾಳಾಗಿದ್ದರೂ ಟಿಕೆಟ್ ಬಯಸುತ್ತಿರುವುದು ವೈಯಕ್ತಿಕ ಸ್ವಾರ್ಥಕ್ಕೆ ವಿನ: ಬೇರೆ ಏನೂ ಅಲ್ಲ ಎಂದು ಅವರ ಆತ್ಮಸಾಕ್ಷಿಯಾದರೂ ಹೇಳಬೇಕಲ್ವಾ? ಯಾಕೆಂದರೆ ಈ ಬಾರಿ ಭಾರತೀಯ ಜನತಾ ಪಾರ್ಟಿ ಲೆಕ್ಕಕ್ಕಿಂತ ಹೆಚ್ಚು ಸರ್ವೇಗಳನ್ನು ಮಾಡಿದೆ. ಅಳೆದು ತೂಗಿ ಅಭ್ಯರ್ಥಿಗಳನ್ನು ಘೋಷಿಸಿದೆ. ಒಂದೆರಡು ಕಡೆ ಪಕ್ಷದ ಕಾರ್ಯಕರ್ತರಿಗೆ ಆಶ್ಚರ್ಯವಾಗುವಂತಹ ಅಭ್ಯರ್ಥಿಗಳು ಸಿಕ್ಕಿರಬಹುದು. ಉದಾಹರಣೆಗೆ ಪುತ್ತೂರು. ಆದರೆ ಪಕ್ಷದ ಲೆಕ್ಕಾಚಾರಗಳು ಬೇರೆಯದ್ದೇ ಆಗಿರುತ್ತವೆ. ಈಗ ಪುತ್ತೂರಿನಲ್ಲಿ ಗೌಡರನ್ನು ತೆಗೆದು ಬ್ರಾಹ್ಮಣರಿಗೆ ಕೊಟ್ಟರು ಎಂಂದು ಇಟ್ಟುಕೊಳ್ಳೋಣ. ಆಗ ಜಿಲ್ಲೆಯಲ್ಲಿ ಈಗಾಗಲೇ ಬ್ರಾಹ್ಮಣ ಕೋಟಾದಲ್ಲಿ ಅಭ್ಯರ್ಥಿ ಇದ್ದಾರೆ. ಅವರು ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರನ್ನು ಅಲ್ಲಿ ಬದಲಾಯಿಸುವ ಅಗತ್ಯವೇ ಇಲ್ಲ. ಅವರು ಸುಲಭದಲ್ಲಿ ಗೆದ್ದುಬಿಡುತ್ತಾರೆ. ಹೀಗಿರುವಾಗ ಸುಮ್ಮನೆ ರಿಸ್ಕ್ ತೆಗೆದುಕೊಳ್ಳಲು ಪಕ್ಷ ಕೂಡ ಹೋಗುವುದಿಲ್ಲ. ಇನ್ನು ಪುತ್ತೂರಿನಲ್ಲಿ ಗೌಡರನ್ನು ಅಥವಾ ಒಕ್ಕಲಿಗರನ್ನು ತೆಗೆದು ಬೇರೆಯವರಿಗೆ ಕೊಟ್ಟರೂ ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲಿ ನಿರ್ಣಾಯಕರಾಗಿರುವ ಆ ಸಮುದಾಯ ಏನು ಮಾಡುತ್ತದೆ ಎಂದು ಕೂಡ ಬಿಜೆಪಿ ನೋಡುತ್ತದೆ. ಹಾಗಿರುವಾಗ ಎಲ್ಲವನ್ನು ಹೈಕಮಾಂಡ್ ನೋಡಬೇಕಾಗಿದೆ. ಹಾಗಾದ್ರೆ ಇದೇ ಲಾಜಿಕ್ ಅನ್ನು ಉಡುಪಿ ಜಿಲ್ಲೆಯಲ್ಲಿ ಅನ್ವಯಿಸಬಹುದಿತ್ತಲ್ಲ ಎನ್ನುವ ಪ್ರಶ್ನೆ ಕೂಡ ಉದ್ಭವಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿಯಲ್ಲಿ ವ್ಯತ್ಯಾಸ ಇರುವುದೇ ಇಲ್ಲಿ. ಎರಡು ಜಿಲ್ಲೆಯಲ್ಲಿ ಕನಿಷ್ಟ ಒಂದಾದರೂ ಮೊಗವೀರ, ಒಕ್ಕಲಿಗರಿಗೆ ಕೊಡುವ ಸಂಪ್ರದಾಯ ಬಿಜೆಪಿಯಲ್ಲಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಇರುವುದೇ ಐದು ವಿಧಾನಸಭಾ ಕ್ಷೇತ್ರಗಳು. ಇಲ್ಲಿಗಿಂತ ಪ್ರಬಲ ಮೊಗವೀರ ಅಭ್ಯರ್ಥಿ ಅಲ್ಲಿದ್ದಾರೆ. ಅದರೊಂದಿಗೆ ಲಾಲಾಜಿ ವರ್ಚಸ್ಸು ಕಳೆದುಕೊಂಡಿದ್ದಾರೆ. ಹಾಲಾಡಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅಲ್ಲಿ ಹಾಲಾಡಿಯವರದ್ದೇ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಹಾಲಾಡಿ ಗೆಲ್ಲಿಸಿಕೊಂಡು ಬರುತ್ತಾರೆ. ಇಲ್ಲಿ ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕೊಟ್ಟಿರುವುದು ಮೊಗವೀರ ಸಮುದಾಯದ ಅಭ್ಯರ್ಥಿಗೆ. ಅವರನ್ನು ಎದುರಿಸಲು ಒಬ್ಬ ಮೊಗವೀರ ಅಭ್ಯರ್ಥಿ ಬಿಜೆಪಿಗೆ ಬೇಕು. ಆ ಅಭ್ಯರ್ಥಿಗೆ ಎಲ್ಲಾ ರೀತಿಯ ಬಲ ಬೇಕು. ಅಲ್ಲಿ ಮೊಗವೀರರಿಗೆ ಕೊಟ್ಟಾಗ ಸಹಜವಾಗಿ ಬಂಟ ಕೋಟಾ ಒಂದು ಎಕ್ಸಟ್ರಾ ಉಳಿಯುತ್ತದೆ. ಅದನ್ನು ಗುರ್ಮೆ ತುಂಬಿಸುವ ಅವಕಾಶ ಪಡೆದಿದ್ದಾರೆ. ಆದ್ದರಿಂದ ಎಷ್ಟೇ ಜಾತಿ ರಾಜಕೀಯ ನೋಡಬಾರದು ಎಂದು ಬಿಜೆಪಿ ಕಾರ್ಯಕರ್ತರು ಅಂದುಕೊಂಡರೂ ಈ ದಶಕದ ರಾಜಕಾರಣ ಅದಕ್ಕೆ ಅವಕಾಶ ಕೊಡುವುದಿಲ್ಲ. ಆದರೆ ಸವದಿಯವರು ಮಾತ್ರ ಆಪರೇಶನ್ ಕಮಲದಲ್ಲಿ ಬಿಜೆಪಿಯನ್ನು ನಂಬಿ ಬಂದ ಮಹೇಶ್ ಕುಮಟಳ್ಳಿಯವರಿಗೆ ಕೊಡದೇ ತನಗೆ ಕೊಡಿ ಎಂದು ಹಟ ಹಿಡಿದಿರುವುದು ಸರಿಯಲ್ಲ. ಯಾಕೆಂದರೆ ಆಗ ಪಕ್ಷ ನಂಬಿಕೆ ದ್ರೋಹ ಮಾಡಿದ ಹಾಗೆ ಆಗುತ್ತದೆ. ಹಾಗಂತ ಸವದಿಯನ್ನು ಪಕ್ಷ ಕೈ ಬಿಟ್ಟಿರಲಿಲ್ಲ. ವಿಧಾನಪರಿಷತ್ ಗೆ ಆಯ್ಕೆ ಮಾಡಿತ್ತು. ಉಪಮುಖ್ಯಮಂತ್ರಿ ಸ್ಥಾನ ಕೊಟ್ಟಿತ್ತು. ಇಷ್ಟೆಲ್ಲಾ ಆದರೂ ಅವರು ಬಿಜೆಪಿಯನ್ನು ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ಸಿನಲ್ಲಿ ಹೋಗಿ ಮುಂದಿನ ಬಾರಿ ಅಧಿಕಾರಕ್ಕೆ ಕಾಂಗ್ರೆಸ್ ಬಂದಾಗ ತಮ್ಮ ಅಥಣಿ ಕ್ಷೇತ್ರಕ್ಕೆ ಅನುದಾನ ಕೇಳಿದ್ದೇನೆ ಎಂದಿದ್ದಾರೆ. ಮತದಾರ ಮೂರ್ಖ ಎಂದುಕೊಂಡು ವಾಹಿನಿಗಳ ಎದುರು ನಿಂತಿದ್ದಾರೆ!
Leave A Reply