ಕರಾವಳಿಯ ಸಂತರಿಗೆ ಜೈ!
![](https://tulunadunews.com/wp-content/uploads/2023/07/WhatsApp-Image-2023-07-03-at-13.49.15-960x640.jpeg)
ಸಂತರು ಅಥವಾ ಮಠಗಳು ಇರುವುದು ತಮ್ಮ ಜಾತಿ ಬಾಂಧವರಿಗೆ ಮೀಸಲಾತಿ ಕೊಡಿಸಲು ಮಾತ್ರ ಅಲ್ಲ ಎನ್ನುವುದನ್ನು ಯಾರೂ ಮರೆಯಬಾರದು. ನಮ್ಮ ದೇಶದಲ್ಲಿ ಇರುವ ಅಸಂಖ್ಯಾತ ಜಾತಿಗಳಲ್ಲಿ ಪ್ರತಿಯೊಂದು ಜಾತಿಗೆ ಎಂಬಂತೆ ಒಂದೊಂದು ಮಠಗಳಿವೆ. ಆ ಮಠಗಳ ಸ್ವಾಮೀಜಿಗಳು ತಾವು ಕೇವಲ ತಮ್ಮ ಮಠಗಳ ಅನುಯಾಯಿಗಳಿಗೆ, ಜಾತಿಯವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸಲು ಮಾತ್ರ ಇರುವುದು ಎಂದು ಅಂದುಕೊಂಡರೆ ಹಿಂದೂ ಧರ್ಮಕ್ಕೆ ಅದಕ್ಕಿಂತ ದೊಡ್ಡ ಅಪಾಯ ಬೇರೆ ಇಲ್ಲ. ಸಂತರು ತಮ್ಮ ಸುತ್ತಲೂ ಜಾತಿಯ ಪರದೆ ಕಟ್ಟಿ ಅದರೊಳಗೆ ಮಾತ್ರ ತಮ್ಮನ್ನು ಇಟ್ಟುಕೊಳ್ಳುವುದರಿಂದ ತೊಂದರೆ ತಪ್ಪಿದ್ದಲ್ಲ. ಕೇಸರಿಯನ್ನು ಧರಿಸಿ, ಸರ್ವಸಂಗ ಪರಿತ್ಯಾಗಿಗಳಾಗಿರುವ ಸ್ವಾಮಿಗಳು ಈಗೀಗ ಮಾಡುವ ಹೋರಾಟಗಳು ಕೇವಲ ಜಾತಿಗೆ ಸೀಮಿತವಾಗಿರುವುದು ಕಣ್ಣಿಗೆ ಸ್ವಷ್ಟವಾಗಿ ಕಾಣಿಸುತ್ತಿದೆ. ತಮ್ಮ ಜಾತಿಗೆ ಸರಕಾರದಿಂದ ಅಪಾಯ ಬಂದಾಗ ಅಥವಾ ಸಿಗಬೇಕೆಂದು ಅಂದುಕೊಂಡಿರುವ ಸೌಲಭ್ಯಗಳಲ್ಲಿ ಕೊರತೆ ಉಂಟಾದಾಗ ಬೀದಿಗಿಳಿಯುವುದು, ಹೋರಾಟ ಮಾಡುವುದು, ಪ್ರತಿಭಟನೆ ಮಾಡುವುದು, ಡೆಡ್ ಲೈನ್ ಕೊಡುವುದು, ಸಿಎಂ ಭೇಟಿಯಾಗುವುದು ಹೀಗೆ ನಡೆಯುತ್ತಾ ಇರುತ್ತದೆ. ಆದರೆ ಜಾತಿಯನ್ನು ಮೀರಿದ ಧರ್ಮ ಎಂಬುದು ಇದೆಯಲ್ಲ, ಅದರ ರಕ್ಷಣೆಗಾಗಿ ಕೂಡ ತಮ್ಮಿಂದಾಗುವ ಕೆಲಸವನ್ನು ಕೂಡ ಈ ಸ್ವಾಮೀಜಿಯವರು ಮಾಡಬೇಕಾಗುತ್ತದೆ. ಧರ್ಮ ರಕ್ಷಣೆಯ ವಿಷಯದಲ್ಲಿಯೂ ಜನಜಾಗೃತಿಯನ್ನು ಮೂಡಿಸಲು ಬಹಿರಂಗವಾಗಿ ಕಾಣಿಸಿಕೊಳ್ಳಬೇಕಾಗಿದೆ. ಇದು ಇಂದು ತುರ್ತಾಗಿ ಆಗಬೇಕಾದ ಕಾರ್ಯವಾಗಿದೆ.
ಕಾಯ್ದೆ ಹಿಂದಕ್ಕೆ ಪಡೆದುಕೊಂಡರೆ ಯಾರಿಗೆ ನಷ್ಟ!
ಕಾಂಗ್ರೆಸ್ ಪಕ್ಷದ ಸರಕಾರ ಬಂದ ನಂತರ ಅವರು ಈ ಹಿಂದೆ ಭಾರತೀಯ ಜನತಾ ಪಾರ್ಟಿ ಸರಕಾರ ಜಾರಿಗೆ ತಂದಿದ್ದ ಸಂಪೂರ್ಣ ಗೋಹತ್ಯಾ ನಿಷೇಧ, ಮತಾಂತರ ನಿಷೇಧ ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನು ಆರಂಭಿಸಿ ಆಗಿದೆ. ಈಗಾಗಲೇ ಕೆಬಿನೆಟ್ ನಲ್ಲಿ ಈ ಕುರಿತು ಒಪ್ಪಿಗೆ ಪಡೆದುಕೊಂಡಾಗಿದೆ. ಇನ್ನೇನಿದ್ದರೂ ಸದನದಲ್ಲಿ ಮಂಡಿಸಿ ಅದನ್ನು ಮಂಜೂರು ಮಾಡಿಸಿಕೊಂಡರೆ ಹಿಂದೂ ಧರ್ಮದ ವಿಷಯದಲ್ಲಿ ಬಹಳ ದೊಡ್ಡ ಸವಾಲುಗಳು ಹಿಂದೂಗಳ ಮುಂದೆ ಉದ್ಭವವಾಗಲಿದೆ. ಯಾಕೆಂದರೆ ಗೋವು ಗೋಮಾಂಸ ಭಕ್ಷಕರಿಗೆ ಬಹಳ ಪ್ರಿಯವಾದ ಖಾದ್ಯ ಆಗಿರಬಹುದು. ಆದರೆ ಸನಾತನ ಸಮಾಜ ಗೋವನ್ನು ಯಾವತ್ತು ಒಂದು ಆಹಾರದ ದೃಷ್ಟಿಯಿಂದ ನೋಡಿಲ್ಲ. ನಮಗೇನಿದ್ದರೂ ಅದು ಗೋಮಾತೆ. ಪೂಜ್ಯನೀಯ ದೇವತೆಯಾಗಿಯೇ ನಮ್ಮ ಮನಸ್ಸಿನಲ್ಲಿ ಇರುವ ಜೀವ. ಈಗ ಸಂಪೂರ್ಣ ಗೋಹತ್ಯಾ ನಿಷೇಧವನ್ನು ಜಾರಿಗೆ ತಂದರೆ ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದನ್ನು ನಾವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಇನ್ನು ಮತಾಂತರದ ವಿಷಯವನ್ನು ತೆಗೆದುಕೊಳ್ಳೋಣ. ಒಂದು ಕಾಲವಿತ್ತು. ಆಗ ಹಿಂದೂ ಧರ್ಮದಲ್ಲಿ ಇದ್ದ ಕೆಲವು ಪದ್ಧತಿಗಳಿಂದ ಬೇರೆ ಮತದವರು ಹಿಂದೂಗಳನ್ನು ತಮ್ಮ ಧರ್ಮಕ್ಕೆ ಸೆಳೆಯಲು ಸುಲಭವಾದ ದಾರಿಗಳಿದ್ದವು. ನಮಗೆ ನಮ್ಮ ಧರ್ಮದವರಿಂದ ಸಹಾಯ ಸಿಗಲಿಲ್ಲ ಎಂದು ಹೋದವರು ತುಂಬಾ ಜನರಿದ್ದಾರೆ. ಕಾಲಾಂತರದಲ್ಲಿ ಮದುವೆಗಾಗಿ ಮತಾಂತರ ಆಗುವುದು ಕೂಡ ನಡೆಯಲು ಶುರುವಾಯಿತು. ಇನ್ನೊಂದೆಡೆ ಹಣದ ಆಮಿಷಕ್ಕಾಗಿಯೂ ಮತಾಂತರದ ಪ್ರಕ್ರಿಯೆಗಳು ನಡೆಯಲು ಆರಂಭವಾಯಿತು. ಇತ್ತೀಚೆಗೆ ಜಿಹಾದಿಗಳು ಏನೇನೊ ಕಾರಣಗಳಿಗಾಗಿ ಮತಾಂತರ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮತಾಂತರಗಳು ನಮ್ಮ ರಾಜ್ಯದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಸಂತರು ಏನು ಮಾಡಬೇಕು.
ಕರಾವಳಿಯ ಸಂತರಿಗೆ ಜೈ!
ಒಂದು ಸಮಾಧಾನದ ವಿಷಯ ಏನೆಂದರೆ ಈ ಎರಡು ವಿಷಯಗಳಲ್ಲಿ ಕರಾವಳಿಯ ಸಂತರು ಒಗಟ್ಟಾಗಿ ತಮ್ಮ ಧ್ವನಿಯನ್ನು ಎತ್ತಿರುವುದು. ಕರಾವಳಿಯ ಬಹುತೇಕ ಸಂತರು ಮಂಗಳೂರಿನಲ್ಲಿ ಒಂದು ಸುದ್ದಿಗೋಷ್ಟಿಯನ್ನು ಮಾಡಿ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಒಂದು ವೇಳೆ ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯಾ ನಿಷೇಧ ಕಾಯ್ದೆಯನ್ನು ಹಿಂದಕ್ಕೆ ಪಡೆದುಕೊಂಡರೆ ತಾವು ಅಮರಣಾಂತ ಉಪವಾಸ ಮಾಡುವುದಾಗಿ ಸರಕಾರಕ್ಕೆ ಎಚ್ಚರಿಸಿದ್ದಾರೆ. ರಾಜ್ಯದ ಬೇರೆ ಸಂತರಿಗೆ ಹೋಲಿಸಿದರೆ ಕರಾವಳಿಯ ಸಂತರಲ್ಲಿ ಒಂದು ವೈಶಿಷ್ಟ್ಯವಿದೆ. ಕರಾವಳಿಯ ಸಂತರು ಯಾವತ್ತೂ ಒಂದು ಜಾತಿಗೆ ಸೀಮಿತವಾಗಿ ಮಠವನ್ನು ಸ್ಥಾಪಿಸಿಲ್ಲ. ಪ್ರತಿ ಸಂತರಿಗೂ ಒಂದೊಂದು ಜಾತಿ ಇದ್ದರೂ ಯಾವ ಸಂತರೂ ಇಂತಹ ಜಾತಿಯ ಸ್ವಾಮೀಜಿಯಾಗಿ ಗುರುತಿಸಿಕೊಂಡಿಲ್ಲ. ತಮ್ಮ ಜಾತಿಗೆ ಮೀಸಲಾತಿ ಕೊಡಿಸಿ, ಸೌಲಭ್ಯ ಕೊಡಿಸಿ ಎಂದು ಇವರು ಯಾವತ್ತು ಬೀದಿಗೆ ಇಳಿಯಲಿಲ್ಲ. ಯಾರಿಗಾದರೂ ಗುರುತಿಸಿಕೊಳ್ಳುವ ಅಸೆ ಇದ್ದರೂ ಅಥವಾ ಇಟ್ಟುಕೊಂಡಿದ್ದರೂ ಇಲ್ಲಿನ ಜನ ಅದಕ್ಕೆ ನೀರೇರೆದು ಪೋಷಿಸಿಲ್ಲ. ಆದ್ದರಿಂದ ಇಲ್ಲಿನ ಸಂತರು ಇವತ್ತಿಗೂ ಧರ್ಮಕ್ಕೆ ಅಪಾಯ ಬಂದಾಗ ತಕ್ಷಣ ಹೋರಾಟಕ್ಕೆ ಇಳಿಯುತ್ತಾರೆ. ಇದು ನಿಜವಾದ ಸ್ವಾಮೀಜಿಯವರ ತತ್ವವಾಗಿದೆ. ಇದನ್ನು ರಾಜ್ಯದ ಬೇರೆ ಸ್ವಾಮೀಜಿಯವರು ಕೂಡ ಅನುಸರಿಸಬೇಕು. ಅದು ಬಿಟ್ಟು ಧರ್ಮಕ್ಕಿಂತ ಜಾತಿ ಮುಖ್ಯ ಎಂದು ಕೂತರೆ ಅದು ಹಿಂದು ಧರ್ಮಕ್ಕೆ ಅಪಾಯದ ಕರೆಗಂಟೆ. ರಾಜ್ಯದ ಎಲ್ಲಾ ಸಂತರು ಒಗ್ಗಟ್ಟಾಗಿ ಬೀದಿಗೆ ಇಳಿದರೆ ರಾಜ್ಯ ಸರಕಾರ ಕೂಡ ಏನೂ ಮಾಡಲಾಗುವುದಿಲ್ಲ. ಬಾಯಿ ಮುಚ್ಚಿ ಈ ಎರಡೂ ಕಾಯ್ದೆಗಳನ್ನು ಮುಟ್ಟಲು ಹೋಗುವುದಿಲ್ಲ ಎಂದು ಹೇಳಿಬಿಡಬಹುದು. ಅದು ಬಿಟ್ಟು ನಾವು ಬಹುಸಂಖ್ಯಾತರಾಗಿದ್ದರೂ ಜಾತಿಗಳಲ್ಲಿ ಹಂಚಿಹೋಗಿರುವುದರಿಂದ, ಇಂತಹ ವಿಷಯಗಳಲ್ಲಿ ಸ್ವಾಮೀಜಿಯವರು ಬೃಹತ್ ಆಂದೋಲನ ಇಳಿಯದಿದ್ದರೆ ಕಷ್ಟ, ಕಷ್ಟ!
Leave A Reply