ದಾವೂದ್ ಆಸ್ತಿ ಹರಾಜಿಗೆ ದಿನ ಫಿಕ್ಸ್!
![](https://tulunadunews.com/wp-content/uploads/2023/12/dawood-ibrahim1-17.jpg)
ಕುಖ್ಯಾತ ಭೂಗತ ಪಾತಕಿ, ಕ್ರಿಮಿನಲ್ ದಾವೂದ್ ಇಬ್ರಾಹಿಂನ ಮುಂಬೈ ಮತ್ತು ರತ್ನಗಿರಿಯಲ್ಲಿರುವ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಹರಾಜಿಗೆ ಇಡಲಾಗಿದೆ. 2024 ರ ಜನವರಿ 5 ರಂದು ಕೇಂದ್ರ ಸರಕಾರ ಈ ಆಸ್ತಿಗಳನ್ನು ಹರಾಜಿನ ಮೂಲಕ ಮಾರಾಟ ಮಾಡಲಿದೆ.
ಒಂದು ವೇಳೆ ದಾವೂದ್ ಇನ್ನೂ ಬದುಕಿದ್ದರೆ ಅವನಿಗೆ ಇದೊಂದು ಶಾಕ್ ಆಗಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ವಿಷಪ್ರಾಶನದ ಮೂಲಕ ದಾವೂದ್ ಮೃತನಾಗಿದ್ದಾನೆ ಎನ್ನುವ ವಿಚಾರವನ್ನು ಅಲ್ಲಿಯ ಪತ್ರಕರ್ತರೊಬ್ಬರು ನೀಡಿದ ಸುಳಿವಿನ ಮೇರೆಗೆ ಭಾರತೀಯ ಮಾಧ್ಯಮಗಳು ಅದನ್ನು ಬಹಿರಂಗಗೊಳಿಸಿದ್ದರು. ಆದರೆ ಆ ಸುದ್ದಿ ಇನ್ನು ಕೂಡ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆ ಸುದ್ದಿ ನಿಜವೋ, ಅಲ್ಲವೋ ಎನ್ನುವುದು ಜನವರಿ 5 ಕ್ಕೆ ತಿಳಿಯಲಿದೆ. ಒಂದು ವೇಳೆ ಆತ ಸತ್ತಿದ್ದರೆ ಈ ಏಲಂ ವಿಷಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಸಂಚಲನ ಮೂಡದೇ ವಿಷಯ ಅಲ್ಲಿಗೆ ಮುಕ್ತಾಯವಾಗಬಹುದು. ಒಂದು ವೇಳೆ ಆತ ಬದುಕಿದ್ದರೆ ಆತ ಏನಾದರೂ ಒಂದು ಕ್ರಮ ತೆಗೆದುಕೊಂಡೇ ಕೊಳ್ಳುತ್ತಾನೆ. ಅದನ್ನು ರಾ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದೆ. ದಾವೂದ್ ಏನಾದರೂ ಒಂದು ತಪ್ಪು ಮಾಡಲಿ ಎಂದು ಅಂತರಾಷ್ಟ್ರೀಯ ತನಿಖಾ ಸಂಸ್ಥೆಗಳು ಕೂಡ ಕಾಯುತ್ತಿವೆ.
ಈಗ ಜನವರಿ 5 ರಂದು ಹರಾಜಿಗೆ ಇಟ್ಟಿರುವ ಆಸ್ತಿಗಳಲ್ಲಿ ದಾವೂದ್ ಹುಟ್ಟಿದ ರತ್ನಗಿರಿ ಜಿಲ್ಲೆಯ ಖೇಡಾ ತಾಲೂಕಿನಲ್ಲಿ ಆತನ ಬಂಗ್ಲೆ ಮತ್ತು ವಿಶಾಲ ಮಾವಿನ ತೋಪು ಕೂಡ ಇದೆ. 2017 ರಲ್ಲಿ ದಾವೂದ್ ಮಾಲೀಕತ್ವದ ದಕ್ಷಿಣ ಮುಂಬೈನಲ್ಲಿದ್ದ ಹೋಟೇಲ್, ರೂಂಗಳನ್ನು, ಅತಿಥಿ ಗೃಹವನ್ನು ಎನ್ ಡಿಎ ನೇತೃತ್ವದ ಕೇಂದ್ರ ಸರಕಾರ ಹರಾಜಿನ ಮೂಲಕ ಮಾರಿತ್ತು ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.
Leave A Reply