ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
Posted On January 14, 2025

ಇತ್ತೀಚೆಗೆ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಗುತ್ತಿಗೆದಾರ ಮೊಹಮ್ಮದ್ ಮಜಹರ್ ಅವರು, ತಾವು ಮಾಡಿದ ಕಾಮಗಾರಿಗೆ ಹಣ ಬಿಡುಗಡೆ ಆಗದ ಹಿನ್ನಲೆ ಮುಖ್ಯಮಂತ್ರಿಗೆ ಹಣ ಬಿಡುಗಡೆ ಕೋರಿ ಪತ್ರ ಬರೆದಿದ್ದರು. ಮಾಡಿದ ಕಾಮಗಾರಿಗೆ ನಗರಸಭೆಯವರು ಹಣ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದರು. ಇದರ ನಂತರ ಈಗ ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಶನ್ ನಿಂದ ದಯಾಮರಣ ಪತ್ರ ಬರೆಯಲಾಗಿದೆ.
ರಾಜ್ಯ ಸರಕಾರದಿಂದ ಸುಮಾರು 350 ಕೋಟಿ ರೂ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದ್ದು, ಕಳೆದ ಒಂದು ವರ್ಷದಿಂದ ಸರಕಾರಕ್ಕೆ ಮನವಿ ಮಾಡಿದ್ದರೂ, ಬಿಡುಗಡೆ ಮಾಡದ ಹಿನ್ನಲೆಯಲ್ಲಿ ಇದೀಗ ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಶನ್ ಅಧ್ಯಕ್ಷ ವಸಂತ ಬಂಗೇರಾ ಅವರು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ, ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಕಳೆದ ವರ್ಷ ಬಾಕಿ ಬಿಲ್ ಬಿಡುಗಡೆ ಮಾಡುವಂತೆ ವೆಂಡರ್ಸ್ ಪ್ರತಿಭಟನೆ ನಡೆಸಿದ್ದರು. ಅನೇಕ ವೆಂಡರ್ಸ್ ಕಷ್ಟದಲ್ಲಿದ್ದಾರೆ. ಇದನ್ನೇ ಆಶ್ರಯಿಸಿಕೊಂಡಿರುವ ಸಾಕಷ್ಟು ಜನ ಈಗಾಗಲೇ ಕೆಲಸ ಕಳೆದುಕೊಂಡಿದ್ದಾರೆ. ಯಾರಾದರೂ ಅಕ್ರಮ ಮಾಡಿದ್ದರೆ ಅವರ ವಿರುದ್ಧ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲಿ. ಅದನ್ನು ಬಿಟ್ಟು ಎಲ್ಲರ ಬಿಲ್ ಪಾವತಿ ಮಾಡದಿರುವುದು ಸರಿಯಲ್ಲ ಎಂದು ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಶನ್ ಅಧ್ಯಕ್ಷ ವಸಂತ ಬಂಗೇರಾ ಪತ್ರ ಬರೆದಿದ್ದಾರೆ.
ರಾಜ್ಯ ಸರಕಾರದಲ್ಲಿ ಹಣದ ಕೊರತೆ ಇದೆಯೋ ಅಥವಾ ಗುತ್ತಿಗೆದಾರರು ಅಕ್ರಮ ಮಾಡಿದ್ದಾರೆ ಎಂದು ಹಣ ಬಿಡುಗಡೆಗೆ ಮೀನಾಮೇಶ ಎಣಿಸಲಾಗುತ್ತಿದೆಯೋ ಅಥವಾ ಇಲ್ಲಿ ಗುತ್ತಿಗೆದಾರರನ್ನು ಸತಾಯಿಸುವ ಉದ್ದೇಶ ಇದೆಯೋ ಎನ್ನುವುದರ ಬಗ್ಗೆ ಯಾವುದೋ ಒಂದು ನಿರ್ಧಾರಕ್ಕೆ ಬರಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಇದರಿಂದ ನ್ಯಾಯಯುತವಾಗಿ ಕಾಮಗಾರಿಗಳನ್ನು ಮಾಡುವವರು ಕೂಡ ಸಂಕಷ್ಟದಲ್ಲಿ ಬಿದ್ದಿದ್ದಾರೆ ಎನ್ನುವುದು ನೂರಕ್ಕೆ ನೂರರಷ್ಟು ನಿಜ.
- Advertisement -
Trending Now
ಕಾಶಿಯಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಗಂಗಾಸ್ನಾನ
March 15, 2025
ಮಲ್ಟಿಪ್ಲೆಕ್ಸ್ ಟಿಕೆಟ್ ದರ ಗರಿಷ್ಟ 200 ರೂಗೆ ಫಿಕ್ಸ್ ಯಾವಾಗ?
March 14, 2025
Leave A Reply