ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Posted On February 4, 2026
0
ಭಾರತೀಯ ಜನತಾ ಪಕ್ಷದ (ಬಿಜೆಪಿ)ತಮಿಳುನಾಡು ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು, ಚುನಾವಣಾ ಸಂಬಂಧಿತ ಕೆಲಸಕ್ಕಾಗಿ ಆರು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ನೀಡಲಾಗಿದ್ದರೂ, ವೈಯಕ್ತಿಕ ಕಾರಣಗಳಿಂದಾಗಿ ಆ ಹೊಣೆಗಾರಿಕೆಯನ್ನು ಈಗ ತಕ್ಷಣ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಮಿಳುನಾಡು ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಅವರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.
ಮಂಗಳವಾರ ಕೋಯಂಬತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಣ್ಣಾಮಲೈ, ತಮ್ಮ ತಂದೆ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಜೊತೆಯಲ್ಲೇ ಇರುವ ಅಗತ್ಯವಿದ್ದು, ಈ ಕಾರಣದಿಂದಾಗಿ ಪ್ರಸ್ತುತ ಕ್ಷೇತ್ರ ಮಟ್ಟದ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ನೀಡುವ ಯಾವುದೇ ಕೆಲಸವನ್ನಾದರೂ ತಾವು ನಿರ್ವಹಿಸುವುದಾಗಿ ಭರವಸೆ ನೀಡಿದರು.
ತಮ್ಮನ್ನು ‘ಪೆಂಗ್ವಿನ್’ ಎಂದು ಟೀಕಿಸಿದ ಕುರಿತು ಪ್ರತಿಕ್ರಿಯಿಸಿದ ಅವರು,
“ಕೆಲವೊಮ್ಮೆ ಒಬ್ಬಂಟಿ ಪೆಂಗ್ವಿನ್ ಆಗಿರುವುದು ತಪ್ಪಲ್ಲ” ಎಂದು ಹೇಳಿದರು.
ಬಿಜೆಪಿ ಹಾಗೂ ಅದರ ಕಾರ್ಯಕರ್ತರ ಮುಖ್ಯ ಗುರಿ ರಾಜ್ಯದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಗೆಲುವನ್ನು ಖಚಿತಪಡಿಸುವುದೇ ಆಗಿದೆ ಎಂದು ಅಣ್ಣಾಮಲೈ ಹೇಳಿದರು.
ಟಿವಿಕೆ ನಾಯಕ ವಿಜಯ್ ಅವರು ಬಿಜೆಪಿಯನ್ನು ‘ಎಂಪ್ಟಿ ಎಂಜಿನ್’ ಎಂದು ಕರೆದಿರುವುದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದ ಅಣ್ಣಾಮಲೈ,
“ಟಿವಿಕೆಗೆ ಎಂಜಿನ್ ಇದೆಯೇ ಇಲ್ಲವೇ ಎಂಬುದನ್ನೇ ಮೊದಲು ನೋಡಬೇಕು. ಟಿವಿಕೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಮಾತ್ರ ಅದಕ್ಕೆ ಎಂಜಿನ್ ಇದೆ ಎಂದು ಹೇಳಬಹುದು” ಎಂದು ವ್ಯಂಗ್ಯವಾಡಿದರು.
ಡಿಎಂಕೆ ಸರ್ಕಾರ ಹಲವು ಯೋಜನೆಗಳಿಗೆ ಸಬ್ಸಿಡಿ ನೀಡುತ್ತಿದೆ. ಆದರೆ ಕೈಗಾರಿಕೆಗಳಿಗೆ ವಿದ್ಯುತ್ ದರದಲ್ಲಿ ಸಬ್ಸಿಡಿ ನೀಡಲು ಏಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದ ಅಣ್ಣಾಮಲೈ,
ಇಂತಹ ನೀತಿಯ ಕಾರಣದಿಂದಲೇ ತಮಿಳುನಾಡಿನ ಅನೇಕ ಕೈಗಾರಿಕೆಗಳು ವಿದ್ಯುತ್ ಸಬ್ಸಿಡಿ ನೀಡುವ ಇತರೆ ರಾಜ್ಯಗಳಿಗೆ ಹೂಡಿಕೆ ಸ್ಥಳಾಂತರಿಸುತ್ತಿವೆ ಎಂದು ಆರೋಪಿಸಿದರು.
ರಾಜ್ಯ ಬಜೆಟ್ನಲ್ಲಿ ಬಂಡವಾಳ ವೆಚ್ಚಕ್ಕೆ (ಕ್ಯಾಪಿಟಲ್ ಎಕ್ಸ್ಪೆಂಡಿಚರ್) ಸಮರ್ಪಕ ಅನುದಾನ ನೀಡಲಾಗಿಲ್ಲ, ಆದರೆ ಕೇಂದ್ರ ಸರ್ಕಾರವು ಬಂಡವಾಳ ವೆಚ್ಚದ ಹಂಚಿಕೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದೆ ಎಂದು ಅವರು ಹೇಳಿದರು.
ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ ಯೋಜನೆಗಳನ್ನು ತಮಿಳುನಾಡು ಸಮರ್ಪಕವಾಗಿ ಬಳಸಿಕೊಂಡು ರಾಜ್ಯದ ಯುವಜನರಿಗೆ ಉದ್ಯೋಗ ಸೃಷ್ಟಿಸಬೇಕು ಎಂದು ಅಣ್ಣಾಮಲೈ ಆಗ್ರಹಿಸಿದರು.