ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
ನಾವು ಮನೆಗಳಲ್ಲಿ ನಾಯಿಗಳನ್ನು ಸಾಕುವುದು ಸಾಮಾನ್ಯ. ಒಂದಿಷ್ಟು ಅನುಕೂಲಸ್ಥರು ಉತ್ತಮ ತಳಿಯ ನಾಯಿಗಳನ್ನು ಸಾಕುತ್ತಾ, ಅದನ್ನು ಬಹಳ ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಾ ನಾಯಿ ಪ್ರೀತಿಯನ್ನು ತೋರಿಸಿದರೆ, ಜನಸಾಮಾನ್ಯರು ತಮ್ಮದೇ ಮಟ್ಟದಲ್ಲಿ ನಾಯಿಗಳನ್ನು ಸಾಕುವವರೂ ಇದ್ದಾರೆ. ಇಂತಹ ನಾಯಿಗಳು ನಮ್ಮ ರಕ್ಷಣೆಗೆ ಇರಲಿ, ಕಳ್ಳಕಾಕರು ಬರುವಾಗ ಬೊಗಳಿ ನಮಗೆ ಎಚ್ಚರಿಕೆ ಕೊಡಲಿ ಎನ್ನುವ ನಿರೀಕ್ಷೆಯೂ ಇರುತ್ತದೆ. ಇನ್ನು ಹಲವು ಬಾರಿ ಮನೆಯವರು ಒಳಗೆ ಇರುವಾಗ ಯಾರಾದರೂ ಅಪರಿಚಿತರು ಮನೆಯ ಗೇಟಿನ ಬಳಿ ಬಂದರೆ ಈ ನಾಯಿಗಳು ಬೊಗಳುವ ಮೂಲಕ ಮನೆಯೊಡತಿಗೆ ಸಿಗ್ನಲ್ ಕೊಡುತ್ತವೆ. ಆಗ ಮನೆಯ ಒಳಗಿದ್ದವರು ಹೊರಗೆ ಬಂದು ನಾಯಿಗೆ ಬೊಗಳದೇ ಇರಲು ತಮ್ಮದೇ ಶೈಲಿಯಲ್ಲಿ ಸೂಚನೆ ಕೊಟ್ಟು ಅತಿಥಿಗಳನ್ನು ಮನೆಯ ಒಳಗೆ ಕರೆ ತರುತ್ತೇವೆ. ಅದನ್ನು ಮೀಟರ್ ರೀಡಿಂಗ್ ಗಾಗಿ ಬರುವ ಸಾಮಾನ್ಯ ನೌಕರರ ವಿಷಯದಲ್ಲಿಯೂ ನಾವು ಅಷ್ಟೇ ಕಾಳಜಿಯನ್ನು ವಹಿಸುವ ಅಗತ್ಯ ಇದೆ.
ಮೆಸ್ಕಾಂ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವ್ಯಕ್ತಿ ಮೇಲೆ ಸಾಕು ನಾಯಿ ದಾಳಿ ಮಾಡಿದ ಘಟನೆ ನಡೆದಿದ್ದು, ದಾಳಿಗೊಳಗಾದ ವ್ಯಕ್ತಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ತಾಲೂಕಿನ ಮೂಲೂರು ಇರಾ ನಿವಾಸಿ ಸಂಪತ್ ಎಂಬುವವರ ಮೇಲೆ ನಾಯಿ ದಾಳಿ ಮಾಡಿದೆ.
ಅವರು ಮೆಸ್ಕಾಂ ಇಲಾಖೆಯ ಹೊರಗುತ್ತಿಗೆಯಲ್ಲಿ ಸೂಪರ್ ವೈಸರ್ ವೃತ್ತಿಯಲ್ಲಿದ್ದಾರೆ. ಆದರೆ ಕಳೆದ ಹತ್ತು ತಿಂಗಳಿನಿಂದ ಮೀಟರ್ ರೀಡಿಂಗ್ ಮಾಡುವ ಸಿಬ್ಬಂದಿ ಇಲ್ಲದೇ ಇರುವ ಕಾರಣಕ್ಕಾಗಿ ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯತ್ ಕೈತ್ರೋಡಿ ಕ್ವಾಟರ್ಸ್ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಮೀಟರ್ ರೀಡಿಂಗ್ ಕೆಲಸ ಮಾಡುತ್ತಿದ್ದರು. ಸೋಮವಾರ ಕೈತ್ರೋಡಿ ಎಂಬಲ್ಲಿ ಮನೆಯೊಂದರ ಮೀಟರ್ ರೀಡಿಂಗ್ ಮಾಡಿ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಬೈಕ್ ನ ಬಳಿ ತೆರಳುತ್ತಿದ್ದಂತೆ ಮನೆಯಂಗಳದಲ್ಲಿದ್ದ ನಾಯಿಯೊಂದು ಸಂಕೋಲೆಯನ್ನು ತುಂಡರಿಸಿ ಬಂದು ದಾಳಿ ಮಾಡಿದೆ.
ಸಂಪತ್ ಅವರ ಬಲ ಕೈ ಹಾಗೂ ಕಾಲಿಗೆ ಬಲವಾದ ಗಾಯವಾಗಿದ್ದು, ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಆದಷ್ಟು ನಾಗರಿಕರು ತಮ್ಮ ಮನೆಗೆ ಮೀಟರ್ ರೀಡಿಂಗ್ ಹೀಗೆ ಯಾವುದೇ ಕೆಲಸಕ್ಕೆ ಬರುವ ಹೊರಗುತ್ತಿಗೆಯ ಬಡಪಾಯಿ ನೌಕರರ ಮೇಲೆ ಮನೆಯ ನಾಯಿ ದಾಳಿ ಮಾಡದಂತೆ ಎಚ್ಚರಿಕೆ ಕ್ರಮ ತೆಗೆದುಕೊಂಡರೆ ನಿಜಕ್ಕೂ ಅದೊಂದು ಮಾನವೀಯ ಕಾಳಜಿ ಎಂದು ಕರೆಸಿಕೊಳ್ಳುತ್ತದೆ.









