370ರ ಕಲಂ ಹೊರತಾಗಿಯೂ ಮೋದಿ ಕಾಶ್ಮೀರ ಸ್ಥಿತಿ ಬದಲಾಯಿಸಬಲ್ಲರು: ಮೆಹಬೂಬಾ ಮುಫ್ತಿ
![](https://tulunadunews.com/wp-content/uploads/2017/11/modi.jpg)
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜನರ ಹಕ್ಕು 370 ಕಲಂ. ಅದನ್ನು ಹೊರತು ಪಡಿಸಿಯೂ ತಮಗಿರುವ ಅಭೂತಪೂರ್ವ ಜನಾದೇಶದಿಂದ ಮೋದಿ ಕಾಶ್ಮೀರದ ಸ್ಥಿತಿಯನ್ನು ಬದಲಾಯಿಸಬಹುದು ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಕಾಶ್ಮೀರದ ಸ್ವಾಯತ್ತತೆ ಕುರಿತು ಸರಣಿ ಟ್ವೀಟ್ ಮಾಡಿರುವ ಮುಫ್ತಿ ‘ಕಾಶ್ಮೀರದ ಭೌಗೋಳಿಕ ಸಾಂಸ್ಕೃತಿಕ ವಿಶೇಷದ ಲಾಭ ದೇಶ ಪಡೆಯಬೇಕು. ಇದರಿಂದ ಆರ್ಥಿಕ ಲಾಭ ಪಡೆಯಲು ಮುಂದಾಗಬೇಕು. ಮೋದಿ ಅವರಿಂದ ಕಾಶ್ಮೀರದ ಬದಲಾವಣೆ ಸಾಧ್ಯವಿದೆ ಎಂದು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
370ನೇ ಕಲಂ ಜಮ್ಮು ಕಾಶ್ಮೀರದ ಜನರಿಗೆ ಭಾರತ ನೀಡಿರುವ ಬದ್ಧತೆ. ಅದನ್ನು ಕಿತ್ತುಕೊಳ್ಳುವುದು ಸಲ್ಲ. ಅದರೊಂದಿಗೆ ಕೈ ಜೋಡಿಸಿ ಜಮ್ಮು ಮತ್ತು ಕಾಶ್ಮೀರದ ಬದಲಾವಣೆಗೆ ಮುನ್ನುಡಿ ಬರೆಯಬೇಕು ಎಂದು ಹೇಳಿದ್ದಾರೆ.
ಪ್ರಸ್ತುತ ಜಮ್ಮು ಕಾಶ್ಮೀರ ಸರಕಾರದ ಪಾಲುದಾರ ಬಿಜೆಪಿಯ ಕೆಲ ಶಾಸಕರು 370ನೇ ಕಲಂನ ವಿಶೇಷಾಧಿಕಾರವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದರು. ಆದ್ದರಿಂದ ಮುಫ್ತಿ ಈ ರೀತಿಯ ಟ್ವೀಟ್ ಗಳನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಕಾಶ್ಮೀರದ ಬಿಜೆಪಿ ವಕ್ತಾರ ಪ್ರೊ.ವೀರೇಂದ್ರ ಗುಪ್ತಾ ಇತ್ತೀಚೆಗೆ ‘370ನೇ ಕಲಂ ರದ್ದು ಪಡಿಸಬೇಕು. ಕಲಂ ನಿಂದ ಪ್ರತ್ಯೇಕವಾದಿಗಳಿಗೆ ಅನುಕೂಲವಾಗುತ್ತಿದೆ. ಅಲ್ಲದೇ ಭಾರತದ ವಿಭಜನೆಗೆ ಪೂರಕವಾಗುತ್ತಿದೆ. ವಿದೇಶಗಳು ಭಾರತದ ನೆಲದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡಿದಂತಾಗುತ್ತಿದೆ. ಆದ್ದರಿಂದ ಕೂಡಲೇ 370ನೇ ಕಲಂ ರದ್ದು ಪಡಿಸಬೇಕು. ರದ್ದುಪಡಿಸಲು ಇದು ಸಕಾಲ ಎಂದು ಹೇಳಿಕೆ ನೀಡಿದ್ದರು.
Leave A Reply