• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೊಬೈಲಿನಲ್ಲಿ ವಿಡಿಯೋ ಡಿಲೀಟ್ ಮಾಡಲಿಲ್ಲ ಎಂದು ಪ್ರಪಂಚದಿಂದಲೇ ಡಿಲೀಟ್ ಮಾಡಿಬಿಟ್ರು!

Hanumantha Kamath Posted On January 4, 2018


  • Share On Facebook
  • Tweet It

ಒಂದು ಬ್ಯಾನರ್, ಒಂದು ಬಂಟಿಂಗ್, ಒಂದು ಫ್ಲೆಕ್ಸ್ ಒಬ್ಬ ವ್ಯಕ್ತಿಯ ಪ್ರಾಣಕ್ಕೆ ಸಮನಾಗಲು ಸಾಧ್ಯವೇ ಇಲ್ಲ. ಒಂದು ರಸ್ತೆಯಲ್ಲಿ ಒಂದು ಕೇಸರಿ ಬಾವುಟ ಒಂದು ಹಸಿರು ಬಾವುಟಗಿಂತ ಮೇಲೆ ಹಾರುತ್ತಿದ್ದರೆ ಅದರಿಂದ ಆ ಧರ್ಮ ದೊಡ್ಡದು, ಈ ಧರ್ಮ ಚಿಕ್ಕದು ಆಗುವುದಿಲ್ಲ. ಒಂದು ಧರ್ಮದ ಹಬ್ಬಕ್ಕೆ ಸೌಂಡ್ ಸಿಸ್ಟಮ್ ಜೋರು ಹಾಕಿದರೆ ಮತ್ತೊಂದು ಧರ್ಮದ ದೇವರು ಬೇಸರಗೊಳ್ಳುವುದಿಲ್ಲ. ಅಷ್ಟಕ್ಕೂ ಭಗವಂತ ಈ ಫ್ಲೆಕ್ಸ್, ಬಾವುಟ, ಬ್ಯಾನರ್, ಬಂಟಿಂಗ್ ಗಿಂತ ತುಂಬಾ ಎತ್ತರದಲ್ಲಿದ್ದಾನೆ ಮತ್ತು ಇವುಗಳ ಮೂಲಕ ಅವನಿಗೆ ಖುಷಿಪಡಿಸಲು ಸಾಧ್ಯವಿಲ್ಲ, ಅವನೇನಿದ್ದರೂ ಭಕ್ತಿಯಿಂದ ಮಾತ್ರ ಒಲಿಯುತ್ತಾನೆ ಎಂದು ಗೊತ್ತಾದ ದಿನ ಕಾಟಿಪಳ್ಳದಂತಹ ಪ್ರದೇಶದಲ್ಲಿ ದೀಪಕ್ ರಾವ್ ನಂತಹ ಯುವಕರ ನೆತ್ತರು ಇನ್ನೊಂದು ಧರ್ಮದ ಯುವಕರ ತಲವಾರಿಗೆ ಅಂಟಿಕೊಳ್ಳುವುದಿಲ್ಲ.

ನನ್ನ ಧರ್ಮ ಶ್ರೇಷ್ಟ, ನಾನು ನನ್ನ ದೇವರನ್ನು ಖುಷಿಪಡಿಸಲು ಹೆಚ್ಚು ಬ್ಯಾನರ್, ಬಂಟಿಂಗ್ ಕಟ್ಟುತ್ತೇನೆ ಎಂದು ಹೊರಡುವ ಯುವಕರು ದೇವರನ್ನು ಒಲಿಸಲು ಅದೇ ಸರಿಯಾದ ಮಾರ್ಗ ಎಂದು ಎಲ್ಲಿಯ ತನಕ ಅಂದುಕೊಳ್ಳುತ್ತಾರೋ ಅಲ್ಲಿಯ ತನಕ ಈ ವಿವಾದಗಳು ನಡೆಯುತ್ತಲೇ ಇರುತ್ತವೆ. ನಿನ್ನೆ ಒಂದು ವಾಹಿನಿಯಲ್ಲಿ ನಿರೂಪಕರು ವಿಶ್ವಹಿಂದೂ ಪರಿಷತ್ ನ ಮುಖಂಡರೊಬ್ಬರಿಗೆ ಪ್ರಶ್ನೆ ಮಾಡುತ್ತಾ ಈದ್ ಮಿಲಾದ್ ಸಂದರ್ಭದಂದು ಬಂಟಿಂಗ್, ಬ್ಯಾನರ್ ವಿವಾದದಿಂದ ಈ ಕೊಲೆಯಾಗಿದೆಯಾ ಎಂದು ಕೇಳಿದಾಗ ಅಂತಹ ಗಲಾಟೆಗಳು ನಮ್ಮ ಜಿಲ್ಲೆಯಲ್ಲಿ ವರ್ಷಕ್ಕೆ ನೂರಾರು ಆಗುತ್ತದೆ ಎಂದು ಅವರು ಉತ್ತರಿಸಿದ್ದರು. ಹಾಗಾದರೆ ಕರಾವಳಿ ಎತ್ತ ಸಾಗುತ್ತಿದೆ. ಅದರ ಅರ್ಥ ಯಾವ ಧರ್ಮದ ಯುವಕರೇ ಆಗಿರಲಿ ಎಲ್ಲೋ ನಮ್ಮ ಯುವಕರ ಮನಸ್ಸುಗಳು ನನ್ನ ಧರ್ಮ ಶ್ರೇಷ್ಟ, ಅವನ ಧರ್ಮ ಶ್ರೇಷ್ಟವಲ್ಲ ಎನ್ನುವ ಹಪಾಹಪಿಗೆ ಬಿದ್ದಿರುವುದು ಸ್ಪಷ್ಟ. ಈ ಮನಸ್ಥಿತಿಯಿಂದ ಎರಡೂ ಧರ್ಮಗಳ ಯುವಕರನ್ನು ಮೇಲೆ ಎತ್ತಬೇಕಿದೆ ಇಲ್ಲದಿದ್ದರೆ ದೀಪಕ್ ರಾವ್ ನಂತಹ ಅಮಾಯಕ ಯುವಕರು ಮಸಣದಲ್ಲಿ ಮಣ್ಣಾಗುತ್ತಾರೆ.

ಯಾವ ಧರ್ಮ ಕೂಡ ಹಿಂಸೆಯನ್ನು ಬಯಸುವುದಿಲ್ಲ. ಆದರೆ ಕೆಲವು ಧರ್ಮಗಳ ಕೆಲವು ಯುವಕರು ಅದನ್ನು ಓದಿಯೇ ಇಲ್ಲ. ಅವರು ಓದಿದ್ದು ತಮ್ಮ ಧರ್ಮದವರನ್ನು ಬಿಟ್ಟು ಬೇರೆಯವರನ್ನು ಬದುಕಲು ಬಿಡಬಾರದು ಎಂದು ಯಾರೋ ತಲೆ ಸರಿ ಇಲ್ಲದವ ಹೇಳಿದ ಹೇಳಿಕೆ ಸಾಮಾಜಿಕ ತಾಣಗಳಲ್ಲಿ ಮಾತ್ರ ಓದಿದ್ದು. ಇವತ್ತಿನ ದಿನಗಳಲ್ಲಿ ನಮ್ಮ ಯುವಕರು ವಾಟ್ಸಪ್, ಫೇಸ್ ಬುಕ್ ತೆರೆದು ಓದುವಷ್ಟು ಸಮಯದ ಕಾಲಾಂಶವನ್ನಾದರೂ ತಮ್ಮ ಧರ್ಮ ಗ್ರಂಥಗಳನ್ನು ತೆರೆದು ಓದಿದ್ದರೆ ಹಿಂಸೆಯಿಂದ ಧರ್ಮ ಬೆಳೆಯುವುದಿಲ್ಲ ಎಂದು ಗೊತ್ತಾಗುತ್ತಿತ್ತು. ಒಂದು ವೇಳೆ ಕೊಲ್ಲುವುದಕ್ಕಾಗಿ ಹುಟ್ಟಿರುವವರಾದರೆ ನಮ್ಮ ದೇಶದ ಗಡಿಯಲ್ಲಿ ನಿಂತು ಶತ್ರುದೇಶದ ಭಯೋತ್ಪಾದಕರನ್ನು, ಕಪಟ ಸೈನಿಕರನ್ನು ಕೊಂದು ಶೌರ್ಯ ಮೆರೆಯಬಹುದಲ್ಲ. ಅದು ಬಿಟ್ಟು ಒಬ್ಬನನ್ನು ಅಡ್ಡ ಹಾಕಿ ನಾಲ್ಕು ಜನ ತಲವಾರು ಹಿಡಿದು ಅಡ್ಡಾದಿಡ್ಡಿ ಬೀಸಿ ಅವನು ಸಾಯುವ ತನಕ ಕೊಚ್ಚಿ ಹಾಕುತ್ತಾರೆಂದರೆ ಅದನ್ನು ಪೌರುಷ ಎನ್ನುತ್ತಾರಾ? ಅಷ್ಟಕ್ಕೂ ದೀಪಕ್ ರಾವ್ ಒಸಾಮಾ ಬಿನ್ ಲಾಡನ್ ಅಲ್ಲ, ದಾವೂದ್ ಇಬ್ರಾಹಿಂ ಅಲ್ಲ, ಚೋಟಾ ಶಕೀಲ್ ಅಲ್ಲ, ಹೋಗಲಿ ಝಾಕೀರ್ ನೈಕ್ ಕೂಡ ಅಲ್ಲ. ಇವನನ್ನು ಕೊಲ್ಲುವುದರಿಂದ ಏನೂ ಸಾಧಿಸಿದಂತೆ ಆಗುವುದಿಲ್ಲ. ಹೆಚ್ಚೆಂದರೆ ನಾವು ಹಿಂದೂ ಯುವಕನನ್ನು ಕೊಂದದಕ್ಕೆ ನಮಗೆ ಯಾವುದೋ ದೇಶದಿಂದ ಆರ್ಥಿಕ ಸಂಪನ್ಮೂಲ ಬರುತ್ತದೆ ಎಂದು ಅವರು ಅಂದುಕೊಂಡಿರಬಹುದು, ಅಷ್ಟೆ. ಯಾವುದೋ ರಾಷ್ಟ್ರದಲ್ಲಿ ಕುಳಿತ ಕೊಬ್ಬಿದ ಗೂಳಿಗಳು ಒಂದಿಷ್ಟು ಎಂಜಿಲು ಬಿಸಾಡಿ ಹಿಂದೂಗಳನ್ನು ಕೊಲ್ಲಿಸಿ ತಮಾಷೆ ನೋಡುವುದಕ್ಕೆ ಇಲ್ಲಿನ ಗಾಂಜಾ ಗಿರಾಕಿಗಳು ಬಳಕೆಯಾಗುತ್ತಿದ್ದಾರೆ. ಒಂದು ಬೈಕ್, ಎರಡು ಜೊತೆ ಬಟ್ಟೆ, ಒಂದು ಶೂ, ಒಂದು ಸೆಂಟ್ ಬಾಟಲಿಯೊಂದಿಗೆ ಸ್ವಲ್ಪ ಚಿಲ್ಲರೆ ಕೊಟ್ಟು ಹಿಂದೂ ಹುಡುಗರ ಹತ್ಯೆಗೆ ಮುಹೂರ್ತ ಇಡುವ ಯಾವುದೋ ತೋಳವನ್ನು ನಂಬಿ ಮತಾಂಧ ಯುವಕರು ಧರ್ಮದ ಅಮಲನ್ನು ತಲೆಗೆ ಏರಿಸಿ ಹೊರಟು ಬಿಟುತ್ತಾರೆ. ಅವರಿಗೆ ಆ ದಿನ ಯಾರು ಸಿಕ್ಕಿದರೂ ಆಗುತ್ತದೆ. ಜನವರಿ 3 ರಂದು ದೀಪಕ್ ರಾವ್ ಸಿಕ್ಕಿದ ಅಷ್ಟೇ. ದೀಪಕ ರಾವ್ ನನ್ನು ಕೊಲ್ಲುವ ಮೊದಲು ಅವನ ಹಿನ್ನಲೆ ಗಮನಿಸಿದರೂ ಅವನನ್ನು ಕೊಲ್ಲಲು ಹಂತಕರಿಗೆ ಮನಸ್ಸು ಬರುತ್ತಿರಲಿಲ್ಲವೇನೋ. ಓರ್ವ ಕಿವುಡ, ಮೂಗ ಸಹೋದರ ಮತ್ತು ವಿಧವೆ ತಾಯಿಯನ್ನು ಸಾಕುತ್ತಾ ಮನೆಯ ಲೋನ್ ಕಟ್ಟುತ್ತಾ, ಮನೆಯ ಖರ್ಚಿಗೆ ಹಣ ಕೊಡುತ್ತಾ ನಂತರ ಸಂಘ, ಸಂಸ್ಥೆಗಳಲ್ಲಿ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದ ದೀಪಕ್ ರಾವ್ ನನ್ನು ಕೊಂದ ಬಳಿಕ ಹಂತಕರಿಗೆ ಸಿಕ್ಕಿದ್ದೇನು? ಆ ಬಂಟಿಂಗ್ ಅಥವಾ ಬ್ಯಾನರ್ ವಿವಾದಕ್ಕೆ ಜಯ ಸಿಕ್ಕಿದ ಹಾಗೆ ಆಯಿತಾ? ಅಷ್ಟಕ್ಕೂ ದೀಪಕ್ ಆ ಗಲಾಟೆಯಲ್ಲಿ ಇರಲಿಲ್ಲ. ಅವನು ಇವರು ಮಾಡುವ ದೊಂಬಿಯನ್ನು ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದ. ಅದನ್ನು ಡಿಲೀಟ್ ಮಾಡಲಿಲ್ಲ ಎನ್ನುವ ಕಾರಣಕ್ಕೆ ಅವನನ್ನೇ ಈ ಪ್ರಪಂಚದಿಂದ ಪಾಪಿಗಳು ಡಿಲೀಟ್ ಮಾಡಿಬಿಟ್ಟಿದ್ದಾರೆ.

ಇನ್ನು ದೀಪಕ್ ರಾವ್ ಕಟ್ಟಾ ಕೋಮುವಾದಿಯಾ? ಹಾಗೆ ಹೇಳಲು ಯಾವುದೇ ಕಾರಣಗಳಿಲ್ಲ. ಅವನು ಕೆಲಸ ಮಾಡುತ್ತಿದ್ದದ್ದೇ ಮುಸ್ಲಿಮರ ಹತ್ತಿರ. ಒಂದು ವೇಳೆ ಅವನು ಮುಸ್ಲಿಮರನ್ನು ನಖಾಶಿಖಾಂತ ದ್ವೇಷಿಸುತ್ತಿದ್ದರೆ ಅವನು ಖಂಡಿತಾ ಅವರ ಕೆಲಸವೂ ಬೇಡಾ, ಸಂಬಳವೂ ಬೇಡಾ ಎಂದು ಹಿಂದೂಗಳ ಹತ್ತಿರವೇ ಕೆಲಸಕ್ಕೆ ಸೇರುತ್ತಿದ್ದ. ಆದರೆ ದೀಪಕ್ ರಾವ್ ಹಾಗೆ ಮಾಡಿರಲಿಲ್ಲ. ಅದಕ್ಕಿಂತ ಹೆಚ್ಚು ಇವನನ್ನು ಕೆಲಸಕ್ಕೆ ಇಟ್ಟುಕೊಳ್ಳಬೇಡಿ, ಅವನು ಹಿಂದೂ ಎಂದು ಗೊತ್ತಿಲ್ವಾ ನಿಮಗೆ ಎಂದು ದೀಪಕ ರಾವ್ ನ ಅಂಗಡಿ ಮಾಲೀಕನಿಗೆ ಮತಾಂಧರು ಜೋರು ಮಾಡಿ ಒತ್ತಡ ಹಾಕಿದಾಗಲೂ ಒಬ್ಬ ಒಳ್ಳೆಯ ಕೆಲಸಗಾರನನ್ನು ನಾನು ಕಳೆದುಕೊಳ್ಳುವುದಿಲ್ಲ ಎಂದು ಮಾಲೀಕರು ಹೇಳಿದ್ದರಂತೆ. ಈಗ ಇಡೀ ಊರು ದೀಪಕ್ ರಾವ್ ನನ್ನು ಕಳೆದುಕೊಂಡು ಬಿಟ್ಟಿದೆ. ಧರ್ಮಗಳು ನಮ್ಮ ನಮ್ಮ ಮನೆಯ ಅಂಗಳಗಳನ್ನು ಬಿಟ್ಟು ಬೀದಿಗೆ ಬಂದರೆ ಹೀಗೆ ಆಗುವುದು. ಒಂದೋ ನಾವು ಸರಿಯಾಗಬೇಕು ಅಥವಾ ನಮ್ಮನ್ನು ಯಾರಾದರೂ ಸರಿ ಮಾಡಬೇಕು. ಇಲ್ಲದಿದ್ದರೆ ಹುಡುಗಿಯರನ್ನು ಪುಸಲಾಯಿಸಿ ಎತ್ತಾಕಿಕೊಂಡು ಹೋಗುವುದು, ಅಮಾಯಕರನ್ನು ಹೀಗೆ ನಡು ಮಧ್ಯಾಹ್ನ ಸೂರ್ಯ ಮೇಲೆ ನೋಡುತ್ತಿರುವಾಗಲೇ ಕೊಚ್ಚಿ ಹಾಕುವುದು ನಡೆಯುತ್ತಲೇ ಇರುತ್ತದೆ. ಕರಾವಳಿ ಹೀಗೆ ತನ್ನ ಮಣ್ಣಲ್ಲಿ ಮಣ್ಣಾದವರನ್ನು ಅಪ್ಪಿಕೊಂಡು ಕಂಬನಿ ಮಿಡಿಯುತ್ತದೆ!

  • Share On Facebook
  • Tweet It


- Advertisement -


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Hanumantha Kamath June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Hanumantha Kamath June 24, 2022
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search