PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ…

ರಾಷ್ಟ್ರೀಯ ತನಿಖಾ ದಳ (ಎನ್ ಐಎ) ತಂಡದ ವಕೀಲರು ಎನ್ ಐಎ ವಿಶೇಷ ನ್ಯಾಯಾಲಯದಲ್ಲಿ ನೀಡಿರುವ ಮಾಹಿತಿಯಲ್ಲಿ ಆತಂಕಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಎನ್ ಐಎ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಅವರು ಬಂಧಿಸಿರುವ ಪಿಎಫ್ ಐ ಕಾರ್ಯಕರ್ತರನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಸುಮಾರು 950 ಹಿಂದೂ ಮುಖಂಡರನ್ನು ಟಾರ್ಗೆಟ್ ಮಾಡುವ ಪಟ್ಟಿ ಸಿದ್ಧವಾಗಿದೆ. ಆದ್ದರಿಂದ ಬಂಧಿಸಲ್ಪಡುವ ಯಾವುದೇ ಪಿಎಫ್ ಐ ಕಾರ್ಯಕರ್ತನಿಗೆ ಜಾಮೀನು ನೀಡುವುದಕ್ಕೆ ಎನ್ ಐಎ ತೀವ್ರ ಆಕ್ಷೇಪ ಸಲ್ಲಿಸಿದೆ.
ಈ ವಿಷಯ ಇನ್ನಷ್ಟು ಮುನ್ನಲೆಗೆ ಬರಲು ಕಾರಣ, ಮೇ 21 ರಂದು ಸುಪ್ರೀಂ ಕೋರ್ಟ್ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಶ್ರೀನಿವಾಸನ್ ಕೊಲೆಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವ ವಿಷಯದಲ್ಲಿ ವಿಚಾರಣೆ ನಡೆಯುವಾಗ, ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ” ಒಬ್ಬನೇ ವ್ಯಕ್ತಿ ಕೊಲೆಯಾಗಿರುವುದು. ಅದಕ್ಕೆ ಎಷ್ಟು ಮಂದಿಯನ್ನು ಜೈಲಿಗೆ ಹಾಕುತ್ತೀರಿ” ಎಂದು ಕೇಳಿದೆ.
ಈ ವಿಷಯದಲ್ಲಿ ದೇಶದ ಆಟರ್ನಿ ಜನರಲ್ ಆಫ್ ಇಂಡಿಯಾ (ಎಎಸ್ ಜಿ) ರಾಜಾ ತಾಕರೆ ಅವರು ಆಕ್ಷೇಪ ವ್ಯಕ್ತಪಡಿಸಿ ತಮ್ಮ ವಾದದಲ್ಲಿ “ಪಿಎಫ್ ಐ ಬಳಿ ಹಿಂದೂ ಮುಖಂಡರನ್ನು ಟಾರ್ಗೆಟ್ ಮಾಡುವ ಹಿಟ್ ಲಿಸ್ಟ್ ತಯಾರಾಗಿದೆ. ಇದು ಕೇವಲ ಒಂದು ಕೊಲೆಯ ವಿಷಯ ಮಾತ್ರವಲ್ಲ, ಇದರ ಹಿಂದೆ ಬಹಳ ದೊಡ್ಡ ಪಿತೂರಿ ಕೂಡ ನಡೆಯುತ್ತಿದೆ. ಪಿಎಫ್ ಐ ಮುಖಂಡರಾದ ಯಾಹ್ಯಾ ತಂಗಳ್ ಹಾಗೂ ಅಬ್ದುಲ್ ರಾವುಫ್ ಅವರಿಗೆ ಆರ್ ಎಸ್ ಎಸ್ ಮುಖಂಡ ಶ್ರೀನಿವಾಸನ್ ಕೊಲೆಯ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವ ವಿಷಯ ಮಾತ್ರವಲ್ಲ, ಬಹಳ ದೊಡ್ಡ ವ್ಯಾಪ್ತಿಯಲ್ಲಿ ಈ ಪ್ರಕರಣವನ್ನು ನೋಡಬೇಕು” ಎಂದು ಮನವಿ ಮಾಡಿದರು.
ಇನ್ನು ಎಎಸ್ ಜಿ ತಾಕರೆ ಅವರು ಮುಂದುವರೆದು ” ಆರೋಪಿ ತಂಗಳ್ ಆತನ ವಕೀಲರು ಹೇಳಿದಂತೆ ಕೇವಲ ಪ್ರತಿಭಟನಾಕಾರನಲ್ಲ, ಆತ ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ಕೂಡ ಆಗಿದ್ದಾನೆ” ಎಂದು ತಿಳಿಸಿದರು. ಆಪ್ರೋವರ್ ಒಬ್ಬರ ಒಪ್ಪಿತ ದಾಖಲೆಯಲ್ಲಿರುವ ಮಾಹಿತಿಯನ್ನು ಹೇಳಿದ ತಾಕರೆಯವರು ಪಿಎಫ್ ಐ ಕಾರ್ಯಕರ್ತ ಸುಬೈರ್ ಕೊಲೆಯಾದಾಗ, ಪಿಎಫ್ ಐ ಪ್ರತೀಕಾರದ ಕ್ರಮವಾಗಿ ಹಿಂದೂ ಮುಖಂಡನೊಬ್ಬನ ಹತ್ಯೆಗಾಗಿ ಏಳು ತಂಡಗಳನ್ನು ರಚಿಸಿತ್ತು. ಅದರಲ್ಲಿ ತಂಗಳ್ ಹಾಗೂ ರಾವೂಫ್ ಕೂಡ ತಂಡವೊಂದರ ಸದಸ್ಯರಾಗಿದ್ದು, ಆ ತಂಡವೇ ಶ್ರೀನಿವಾಸ್ ಹತ್ಯೆಯ ಸಂಚು ನಡೆಸಿತ್ತು. ಸುಬೈರ್ ಶವ ಇಟ್ಟಿದ್ದ ಆಸ್ಪತ್ರೆಯ ಹೊರಗೆ ಅಷ್ಟೂ ರಣತಂತ್ರಗಳು ನಡೆದಿದ್ದು, ಅದು ಜಾರಿಗೆ ಬಂದಿದೆ. ತಂಗಳ್ ಈ ಹಿಂದೆನೂ ಕೇರಳ ಹೈಕೋರ್ಟಿನ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ” ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಓಕಾ ಅವರು “ತಂಗಳ್ ಹಾಗೂ ಇತರ ಆರೋಪಿಗಳು ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಹೇಗೆ ಸಾಬೀತುಪಡಿಸುತ್ತೀರಿ. ” ಈ ವ್ಯಕ್ತಿಗಳು ಎಲ್ಲಿಯೋ ಕುಳಿತುಕೊಂಡಿದ್ದರೆ, ಅವರನ್ನೇ ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಗೆ ಹೇಳಲು ಸಾಧ್ಯ?” ಎಂದು ಪ್ರಶ್ನಿಸಿದರು. “ಇನ್ನು ಒಬ್ಬ ಮಾತ್ರ ಕೊಲೆಯಾಗಿದ್ದಾನೆ” ಎಂದು ಹೇಳಿದರು.
ಒಟ್ಟಿನಲ್ಲಿ ಈ ಪ್ರಕರಣದಿಂದ ಒಂದೊಂದು ವಿಷಯ ಸ್ಪಷ್ಟವಾಗಿದೆ. ಎನ್ ಐಎ ಬಳಿ ಪಿಎಫ್ ಐ ಸಿದ್ಧಪಡಿಸಿದ ಹಿಟ್ ಲಿಸ್ಟ್ ಇದ್ದು, ಅದರಲ್ಲಿ 950 ಹಿಂದೂ ಮುಖಂಡರ ಹೆಸರು ಇದೆ.