ರಾಜ್ಯದಲ್ಲಿ ಕಾಂಗ್ರೆಸ್ ಬಿತ್ತು, ಬಿಜೆಪಿ ಗೆಲ್ಲಲು ಕಾರಣಗಳಿವೆ ಹತ್ತು
Posted On May 18, 2018
![](https://tulunadunews.com/wp-content/uploads/2018/05/pti5_17_2018_000063b.jpg)
ಕರ್ನಾಟಕ ರಾಜಕೀಯ ದೇಶಾದ್ಯಂತ ಸದ್ದು ಮಾಡುತ್ತಿದೆ. ಎಲ್ಲೆಲ್ಲೂ, ಎಂತ ಘಟಾನುಘಟಿಗಳ ಬಾಯಲ್ಲೂ ರಾಜ್ಯದ ರಾಜಕೀಯದ ಮಾತುಗಳೇ ಕೇಳಿಬರುತ್ತಿವೆ. ಆದಾಗ್ಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಂದೆ ಹಲವು ಸವಾಲುಗಳು ಇವೆ ಎಂಬುದನ್ನು ಯಡಿಯೂರಪ್ಪನವರು ಮರೆಯಬಾರದು. ಅತ್ತ ಆ ಭಾಗ್ಯ, ಈ ಭಾಗ್ಯ ಕೊಟ್ಟೆ ಎಂದು ಬೀಗುತ್ತಿದ್ದ ಸಿದ್ದರಾಮಯ್ಯನವರೇ ಚಾಮುಂಡೇಶ್ವರಿಯಲ್ಲಿ ಸೋತು ಮುಖ ಒಣಗಿಸಿಕೊಂಡು ತಿರುಗಾಡುತ್ತಿದ್ದಾರೆ. ಜೆಡಿಎಸ್ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂಬುದು ಸಹ ಅಷ್ಟೇ ದಿಟ.
![](https://tulunadunews.com/wp-content/uploads/2018/05/pti5_17_2018_000062b.jpg)
ಹಾಗಾದರೆ ರಾಜ್ಯದಲ್ಲಿ ಕಮಲ ಅರಳಲು ಕಾರಣವೇನು? ಯಾಕೆ ತುಂಬ ಜನ ಬಿಜೆಪಿಯನ್ನೇ ಗೆಲ್ಲಿಸಿದರು? ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾರಣಗಳೇನು? ಯಾವ ಕಾರಣಕ್ಕಾಗಿ ಬಿಜೆಪಿ ಗೆದ್ದಿತು? ಎಂಬ ತರಹೇವಾರಿ ಪ್ರಶ್ನೆಗಳು ಜನರನ್ನು ಕಾಡುತ್ತಿರಬಹುದು. ಅಂತಹ ಪ್ರಶ್ನೆಗಳಿಗೆ ಉತ್ತರವಾಗಿ ಇಲ್ಲಿ ಹತ್ತು ಅಂಶಗಳನ್ನು ನೀಡಲಾಗಿದೆ.
- ರಾಜ್ಯದಲ್ಲಿ ಬಿಜೆಪಿಗೆ ಜನ ಬೆಂಬಲಿಸಲು ಮೊದಲನೇ ಕಾರಣವೆಂದರೆ ಆಡಳಿತ ವಿರೋಧಿ ಅಲೆ. ಸಿದ್ದರಾಮಯ್ಯನವರು ಸೀಮಿತ ಸಮುದಾಯಕ್ಕಾಗಿ ಯೋಜನೆ ಜಾರಿಗೊಳಿಸಿದ್ದು, ಸರ್ಕಾರದ ಹಲವು ಹಗರಣ, ಅಧಿಕಾರಿಗಳ ವರ್ಗಾವಣೆ ಸೇರಿ ಹಲವು ಕಾರಣಗಳಿಂದ ಜನ ಬಿಜೆಪಿಗೆ ಮತ ಹಾಕಿದರು ಎಂಬುದರಲ್ಲಿ ಸಂಶಯವಿಲ್ಲ.
- ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಹಿಂದೂಗಳ ನಿರ್ಲಕ್ಷ್ಯವೂ ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಹನುಮ ಜಯಂತಿಗೆ ಅಡ್ಡಿ, ಗಣೇಶ ಚತುರ್ಥಿಗೆ ನಿಯಮ, 22 ಹಿಂದೂಗಳ ಹತ್ಯೆಯಾದರೂ ಕ್ರಮ ಕೈಗೊಳ್ಳದಿರುವುದು ಹಾಗೂ ಬಿಜೆಪಿಯ ಹಿಂದುತ್ವದ ಮಂತ್ರದಿಂದ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆಯಾಯಿತು.
- ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಡೆಸಿದ ಸಾಲು ಸಾಲು ರ್ಯಾಲಿಗಳು, ರಾಜ್ಯ ಸರ್ಕಾರದ ವೈಫಲ್ಯ ಎತ್ತಿ ತೋರಿಸಿದ್ದು, ಮೋದಿ ಅಲೆಯಿಂದ ಬಿಜೆಪಿಗೆ ಗೆಲುವು ನಿರಾಯಾಸವಾಗಿ ಲಭಿಸಿತು.
- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು, ಯೋಜನೆಗಳು ರಾಜ್ಯದಲ್ಲೂ ಜನ ಬಿಜೆಪಿಯನ್ನು ಬೆಂಬಲಿಸುವಂತೆ ಆಯಿತು.
- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತ್ಯೇಕ ಲಿಂಗಾಯತ ಧರ್ಮದ ಪರ ನಿಂತಿರುವುದು ಸಹ ಬಿಜೆಪಿಗೆ ವರದಾನವಾಯಿತು. ಮೋದಿ ಪರ ಒಲವಿದ್ದ ಯುವ ಲಿಂಗಾಯತರು ಸಿದ್ದರಾಮಯ್ಯರನ್ನು ಮಕಾಡೆ ಮಲಗಿಸಿದರು. ಅದೇ ಕಾರಣಕ್ಕೆ ಲಿಂಗಾಯತರು ಜಾಸ್ತಿ ಇರುವ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿತು.
- ಫೈರ್ ಬ್ರ್ಯಾಂಡ್ ಮುಖ್ಯಮಂತ್ರಿ ಎಂದೇ ಖ್ಯಾತಿಯಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಕರ್ನಾಟಕದಲ್ಲಿ ನಡೆಸಿದ ಸಾಲು ರ್ಯಾಲಿ, ಸಮಾವೇಶಗಳಿಂದ ರಾಜ್ಯದಲ್ಲಿ ಕಮಲ ಅರಳಲು ಸಹಕಾರಿಯಾಯಿತು.
- ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಹಿಂದುತ್ವ ಮುನ್ನೆಲೆಗೆ ಬಂತು. ಆದರೆ, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯನವರ ಡೋಂಗಿ ಹಿಂದುತ್ವವನ್ನು ಜನ ನಂಬದೆ, ಬಿಜೆಪಿಯನ್ನು ಬೆಂಬಲಿಸಿದರು.
- ರಾಜ್ಯದಲ್ಲಿ ಈ ಬಾರಿ ಯಡಿಯೂರಪ್ಪನವರ ವರ್ಚಸ್ಸು, ಸುರೇಶ್ ಕುಮಾರ್ ಅವರಂತಹ ನಾಯಕರ ಬೆಂಬಲ, ವಿರೋಧ ಪಕ್ಷದಲ್ಲಿ ಹಲವು ವಿಚಾರಗಳ ಪ್ರಸ್ತಾಪ, ಮಹದಾಯಿ ವಿಚಾರದಲ್ಲಿ ಬಿಜೆಪಿ ನಡೆಸಿದ ಪ್ರಯತ್ನಗಳೂ ಕಮಲ ಅರಳಲು ಬೆನ್ನೆಲುಬಾದವು.
- ಐದು ವರ್ಷ ರಾಜ್ಯವಾಳಿದ ಸಿದ್ದರಾಮಯ್ಯನವರು ಕಾನೂನು ಸುವ್ಯವಸ್ಥೆಯನ್ನೇ ಕಾಪಾಡಲಿಲ್ಲ. ಕರಾವಳಿ ಹೊತ್ತಿ ಉರಿಯಿತು, ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆಯಾಯಿತು, ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದರು. 22 ಹಿಂದೂಗಳ ಹತ್ಯೆಯಾಯಿತು. ಆದರೂ ಸಿದ್ದರಾಮಯ್ಯನವರು ಮಗುಮ್ಮಾಗಿದ್ದದ್ದು ಬಿಜೆಪಿ ಗೆಲುವಿಗೆ ಸಹಕಾರಿಯಾಯಿತು.
- ಮೇಲಾಗಿ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇದೆ. ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಅಲ್ಲದೆ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ಎಲ್ಲ ಕಾರಣಗಳು ರಾಜ್ಯದಲ್ಲಿ ಜನ ಬಿಜೆಪಿಯನ್ನು ನಂಬಿ, ಮತ ಹಾಕಲು ಕಾರಣವಾದವು.
- Advertisement -
Trending Now
ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿಯ ತಾಯಿ ನಿಧನ
July 20, 2024
ಶಾಸಕ ಡಾ. ಭರತ್ ಶೆಟ್ಟಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ
July 20, 2024
Leave A Reply