ಮಂಗಳೂರು ಹೊರವಲಯದ ಕಡಲ ತಡಿಯಲ್ಲಿ ತೀವ್ರಗೊಂಡ ಕಡಲ ಕೊರೆತ

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ವರುಣ ಮತ್ತೆ ಅಬ್ಬರಿಸಲು ಆರಂಭಿಸಿದ್ದಾನೆ. ಕಳೆದ 2 ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗದಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ ಗೊಂಡಿದೆ.
ಇನ್ನೊಂದೆಡೆ ಕಡಲ ರೌದ್ರ ನರ್ತನಕ್ಕೆ ಮಂಗಳೂರು ಹೊರವಲಯದ ಕಡಲ ತಡಿಯಲ್ಲಿ ಭಾರೀ ಕಡಲ ಕೊರೆತವಾಗುತ್ತಿದೆ. ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಕಡಬದ ಹೊಸ್ಮಠ ಸೇತುವೆ ಸತತ ಎಂಟನೇ ದಿನವೂ ಮುಳುಗಡೆಯಾಗುತ್ತಿದ್ದು, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ಭಕ್ತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಾಧಾರ ಸ್ನಾನ ಘಟ್ಟ 8ನೇ ದಿನವೂ ಮುಳುಗಡೆಯಾಗಿದೆ. ನಿನ್ನೆ ತಡರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿರುವ ತಾತ್ಕಾಲಿಕ ಮಾರುಕಟ್ಟೆಯ ಅಂಗಡಿಗಳಿಗೆ ಹಾನಿಯಾಗಿದೆ. ಅಂಗಡಿಗಳ ಮೇಲೆ ಹೊದಿಸಲಾಗಿದ್ದ ತಗಡಿನ ಶೀಟ್ ಗಳು ಭಾರೀ ಗಾಳಿಗೆ ಹಾರಿ ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಇನ್ನು ಮಂಗಳೂರು ನಗರದಲ್ಲೂ ಜಡಿಮಳೆ ಯಾಗುತ್ತಿದ್ದು ಜನರ ದಿನನಿತ್ಯದ ಕಾಯಕಕ್ಕೆ ತಡೆಯುಂಟು ಮಾಡಿದೆ. ಘಟ್ಟ ಪ್ರದೇಶ ಸೇರಿದಂತೆ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಅರಬ್ಬೀ ಸಮುದ್ರ ಅಬ್ಬರಿಸುತ್ತಿದ್ದು, ಕಡಲ ತೀರದಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಮಂಗಳೂರಿನ ಉಳ್ಳಾಲ, ಸೋಮೇಶ್ವರ ಪ್ರದೇಶಗಳಲ್ಲಿ ಭಾರೀ ಕಡಲ್ಕೊರೆತಕ್ಕೆ ಕಡಲ ತಡಿಯ ಮರಗಳು ಸಮುದ್ರ ಪಾಲಾಗಿವೆ ಮಂಗಳೂರು ಹೊರವಲಯದ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಕಡಲ ಕೊರೆತ ಜೋರಾಗಿದೆ. ಅಂತರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆ ನಡೆದ ಈ ಅತ್ಯಾಕರ್ಷಕ ಬೀಚ್ ಕಡಲ ಭಾರೀ ಅಲೆಗಳ ಹೊಡೆತಕ್ಕೆ ಒಳಗಾಗಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದ ಈ ಕಡಲ ಕಿನಾರೆಯ ನೂರಾರು ಮರಗಳು ಕಡಲ ಕೊರೆತಕ್ಕೆ ಸಿಲುಕಿ ಸಮದ್ರದ ಒಡಲು ಸೇರಿವೆ. ಮಂಗಳೂರು ಹೊರವಲಯದ ಸೋಮೇಶ್ವರದಲ್ಲಿಯೂ ಕಡಲಕೊರೆತ ತೀವ್ರಗೊಂಡಿದೆ. ಎರಡು ದಿನಗಳ ಹಿಂದೆ ಸೋಮೇಶ್ವರ ಕಡಲ ಕಿನಾರೆಯನ್ನು ಜಿಲ್ಲಾಡಳಿತ ಡೇಂಜರ್ ಝೋನ್ ಎಂದು ಘೋಷಿಸಿದೆ. ಉಳ್ಳಾಲದ ಕೈಕೊ, ಸುಭಾಷ್ ನಗರ ಸೇರಿದಂತೆ ಉಚ್ಚಿಲ ಪ್ರದೇಶದಲ್ಲಿ ಆಳೆತ್ತರದ ಕಲೆಗಳು ಏಳುತ್ತಿದ್ದು, ಕಡಲ ರೌದ್ರ ನರ್ತನ ಆರಂಭಿಸಿದೆ. ಸಮುದ್ರ ತೀರದ ಹಲವಾರು ಮರಗಳು ಸಮುದ್ರ ಪಾಲಾಗಿವೆ. ಕಲಡ ತೀರದಲ್ಲಿ ವಾಸಿಸುವ ನೂರಾರು ಕುಟುಂಬಗಳು ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ
Leave A Reply