ಕರ್ನಾಟಕದಲ್ಲಿ ಅಘೋಷಿತ ಬಂದ್ ಗೆ ಕರೆ ಕೊಟ್ಟಿರುವುದು ಕಣ್ಣಿಗೂ ಕಾಣದ ಒಂದು ವೈರಸ್. ಅದನ್ನು ಕರೋನಾ ಎಂದು ಕರೆಯಲಾಗುತ್ತಿರುವುದು ಒಂದನೇ ಕ್ಲಾಸಿನ ಮಗುವಿಗೂ ಚೆನ್ನಾಗಿ ಗೊತ್ತಿದೆ. ಅಷ್ಟರಮಟ್ಟಿಗೆ ಕರೋನಾ ಫೇಮಸ್. ಒಂದು ಸಾಮಾನ್ಯ ವೈರಸ್ ಇವತ್ತು ಇಡೀ ಕರ್ನಾಟಕವನ್ನು ಒಂದು ವಾರದ ರಜೆಗೆ ದೂಡಿದೆ. ಈ ರಜಾ ಸಮಯ ಅಗತ್ಯವಿತ್ತಾ ಎನ್ನುವುದು ಈಗ ಇರುವ ಪ್ರಶ್ನೆ. ಕರ್ನಾಟಕಕ್ಕೆ ಹೋಲಿಸಿದರೆ ಉತ್ತರಪ್ರದೇಶ ದೊಡ್ಡ ರಾಜ್ಯ. ಆದರೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವೈರಸ್ ವಿರುದ್ಧ ಹೇಗೆ ಸೆಟೆದು ನಿಂತಿದ್ದಾರೆ ಎಂದರೆ ಅದರ ಎದುರು ಮಂಡಿಯೂರಲ್ಲ ಎಂದು ನಿರ್ಧರಿಸಿಬಿಟ್ಟಿದ್ದಾರೆ. ಅವರು ನಿನ್ನೆ ಸುದ್ದಿಗೋಷ್ಟಿ ನಡೆಸಿ ಕರೋನಾ ವಿರುದ್ಧ ಉತ್ತರಪ್ರದೇಶ ಏನೆಲ್ಲಾ ಕ್ರಮ ಕೈಗೊಂಡಿದೆ. ಅದಕ್ಕೆ ಜನ ಹೇಗೆ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ. ಎಲ್ಲಿ ಕೂಡ ವಾರವೀಡಿ ಯುಪಿಯನ್ನು ಬಂದ್ ಮಾಡುತ್ತೇವೆ ಎಂದು ಹೇಳಿಲ್ಲ.
ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಯಾವುದೇ ಒಂದು ಶುಭ ಸಮಾರಂಭವನ್ನು ಮಾಡುವ ಮೊದಲು ಅದಕ್ಕೆ ತಿಂಗಳುಗಟ್ಟಲೆ ತಯಾರಿ ನಡೆಸಲಾಗುತ್ತದೆ. ಆಯಾ ಸಂವತ್ಸರದ ಪಂಚಾಂಗವನ್ನು ನೋಡಿ ಅದಕ್ಕೆ ಸರಿಯಾಗಿ ದಿನಾಂಕವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಏಕಾಏಕಿ ಸಮಾರಂಭವನ್ನು ಆಯೋಜಿಸುವುದನ್ನು ಸರಕಾರ ತಡೆಗಟ್ಟುವುದರಿಂದ ಒಂದು ಕುಟುಂಬ ತುಂಬಾ ತೊಂದರೆಯನ್ನು ಅನುಭವಿಸುತ್ತದೆ. ಜನರು ಕರೋನಾ ಹರಡದಂತೆ ತಡೆಯಲು ಏನು ಮಾಡಬೇಕು ಎಂದು ಜಾಗೃತಿ ಮೂಡಿಸಬೇಕಾಗಿರುವುದು ರಾಜ್ಯ ಸರಕಾರದ ಕರ್ತವ್ಯ. ತಮ್ಮನ್ನು, ಮನೆಯ ಮಕ್ಕಳನ್ನು, ಹಿರಿಯರನ್ನು ಹೇಗೆ ರಕ್ಷಿಸಬೇಕು ಎನ್ನುವುದು ಆಯಾ ಕುಟುಂಬದ ಜವಾಬ್ದಾರಿ ಇರುವವರನ್ನು ನೋಡಿಕೊಳ್ಳುತ್ತಾರೆ. ಕೆಮ್ಮು, ಸೀನು ಬಂದಾಗ ಅದಕ್ಕೆ ಕರವಸ್ತ್ರ ಅಡ್ಡ ಹಿಡಿದು ಸಾಂಕ್ರಾಮಿಕವಾಗಿ ಬೇರೆಯವರ ಮೇಲೆ ಸಿಂಪಡಣೆ ಆಗದಂತೆ ನೋಡಿಕೊಳ್ಳಬೇಕಾಗಿರುವುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ. ಅದನ್ನು ನಾಗರಿಕರು ಪಾಲಿಸಿದರೆ ಸಾಕು. ಆದರೆ ಅದಕ್ಕೆ ಸರಕಾರಗಳು ಏಕಾಏಕಿ ತಮ್ಮ ತಪ್ಪನ್ನು ಮುಚ್ಚಿಡಲು ಏನೇನೋ ಮಾಡಿದರೆ ಸರಿಯಾ? ಉದಾಹರಣೆಗೆ ರೈಲ್ವೆ ನಿಲ್ದಾಣದಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಾರೆ. ಬೇರೆ ಊರಿನಿಂದ ಬಂದವರನ್ನು ಬಾಗಿಲಿನಲ್ಲಿ ಪರೀಕ್ಷಿಸುವುದು ಯೋಗ್ಯ ಕ್ರಮ. ಆದರೆ ಜನ ಒಮ್ಮೆಲ್ಲೆ ಬಂದಾಗ ನಮಗೆ ವಿಮಾನ ನಿಲ್ದಾಣದಲ್ಲಿ ಮಾಡಿದ ಹಾಗೆ ಮಾಡಲು ಆಗಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದರೆ ಅದು ನಿರ್ಲಕ್ಷ್ಯ ಅಲ್ಲವೇ? ಅದಕ್ಕೆ ಜಿಲ್ಲಾಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೋ ನೋಡಬೇಕು. ಬೇಕಾದರೆ ರೈಲು ಬಂದಾಗ ಒಂದು ಅನೌನ್ಸಮೆಂಟ್ ಮಾಡಿ ಸಾಲಾಗಿ ಪ್ರಯಾಣಿಕರು ಬಾಗಿಲಿನಿಂದ ಹೊರ ಹೋಗಬೇಕು. ಅಲ್ಲಿ ಕರೋನಾ ಪರೀಕ್ಷೆ ನಡೆಸಲಾಗುತ್ತದೆ ಎಂದು ಘೋಷಿಸಿದರೆ ಜನ ಅರ್ಥ ಮಾಡಿಕೊಳ್ಳುತ್ತಾರೆ. ಅದಕ್ಕೆ ಬೇಕಾದರೆ ಹೆಚ್ಚುವರಿ ಜನರನ್ನು ನೇಮಿಸಬಹುದು.
ಇನ್ನು ಕರೋನಾ ಭೀತಿಯಲ್ಲಿ ಐಪಿಎಲ್ ಕ್ರೀಡಾಕೂಟವೇ ಮುಂದಕ್ಕೆ ಹೋಗಿದೆ. ಆದರೆ ಇವತ್ತು ಮಂಗಳೂರಿನ ನೆಹರೂ (?) ಮೈದಾನದಲ್ಲಿ ಸಿನೆಮಾದವರ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿತ್ತು. ಪೊಲೀಸ್ ಕಮೀಷನರ್ ಅವರ ಕಟ್ಟಡದ ಮಹಡಿಯಲ್ಲಿ ನಿಂತರೆ ಮ್ಯಾಚ್ ನೇರ ಕಾಣಬಹುದು. ಮುನ್ನೂರು ಮೀಟರ್ ದೂರದಲ್ಲಿ ಜಿಲ್ಲಾಧಿಕಾರಿ ಕಚೇರಿ ಇದೆ. ಆದರೂ ಪಂದ್ಯಾಟಗಳು ಆರಾಮವಾಗಿ ನಡೆದಿವೆ.
ಇನ್ನು ಪಬ್ ಬಂದ್ ಎನ್ನಲಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್ ಕಥೆ ಏನು? ಪಬ್ ಗಿಂತ ಹತ್ತಿರದಲ್ಲಿ ಕುಳಿತು ವೈನ್ ಶಾಪ್ ನಲ್ಲಿ ಕುಡಿಯುವವರಿದ್ದಾರೆ. ಇನ್ನು ಕೊನೆಯದಾಗಿ ಕರೋನಾ ಬಗ್ಗೆ ಜಾಗೃತಿ ಮೂಡಿಸುವ ನೆಪದಲ್ಲಿ ನಮ್ಮನ್ನು ಅಕ್ಷರಶ: ಹೆದರಿಸುತ್ತಿರುವುದು ನ್ಯೂಸ್ ಚಾನೆಲ್ ಗಳು. ಅದರಲ್ಲಿ ಟಿವಿ ಸ್ಕ್ರೀನ್ ಕೆಳಗೆ ಸಣ್ಣ ಒಂದು ಲೈನ್ ನಲ್ಲಿ ಜಾಗೃತಿ ವಾಕ್ಯ ಹೋಗುತ್ತಿದ್ದರೆ ಮುಕ್ಕಾಲು ಭಾಗ ಟಿವಿಯಲ್ಲಿ ಶ್ರೀರಾಮುಲು, ಸಿದ್ಧರಾಮಯ್ಯ ಕರೋನಾ ವಿಷಯದಲ್ಲಿ ಮಾಡಿದ ಜಟಾಪಟಿಯನ್ನೇ ತೋರಿಸಲಾಗುತ್ತದೆ. ನಾವು ಕರೋನಾ ಸಿರಿಯಲ್ ಯಾವಾಗ ಮುಗಿಯುತ್ತೆ ಎಂದು ಕಾಯುತ್ತಾ ಟಿವಿ ನೋಡುತ್ತಾ ಕುಳಿತುಕೊಂಡಿದ್ದೇವೆ!!
Leave A Reply