56 ಇಂಚಿನ ಎದೆ ಇದೆ, ನಿಮಗೆ ತಾಳ್ಮೆ ಇರಲಿ ಖಾದರ್!!
![](https://tulunadunews.com/wp-content/uploads/2020/06/GALWAN-INDIA-960x600.jpg)
ಚೀನಾದ ಒಳಗೆ ಕುದಿಯುತ್ತಿರುವ ಹಪಾಹಪಿ ಎಷ್ಟಿದೆ ಎಂದರೆ ಇಡೀ ಪ್ರಪಂಚವನ್ನು ತನ್ನ ಕಪಿಮುಷ್ಟಿಗೆ ತರಬೇಕು ಎಂದು ಅದು ಹಾತೊರೆಯುತ್ತಿದೆ. ವಿಶ್ವದಲ್ಲಿ ಈಗ ಪ್ರಬಲವಾಗಿರುವ ರಾಷ್ಟ್ರ ಅಮೇರಿಕಾ. ಅಮೇರಿಕಾವನ್ನು ಯುದ್ಧದಲ್ಲಿ ಸೋಲಿಸುವುದಕ್ಕೆ ಚೀನಾಕ್ಕೆ ಯಾವತ್ತೂ ಸಾಧ್ಯವಿಲ್ಲ. ಅದಕ್ಕಾಗಿ ಬಯೋ ವಾರ್ ಮೂಲಕ ಅಮೇರಿಕಾವನ್ನು ಅರ್ಧ ಮಲಗಿಸುವ ಕಾರ್ಯದಲ್ಲಿ ಚೀನಾ ತನ್ನ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಆದರೆ ಚೀನಾಗೆ ಟೆನ್ಷನ್ ನೀಡಿದ್ದು ಭಾರತ. ಕೊರೊನಾವನ್ನು ಬಳಸಿ ಅಮೇರಿಕಾವನ್ನು ಹೈರಾಣು ಮಾಡಿದ ಹಾಗೆ ನಮ್ಮದೇ ಪಕ್ಕದಲ್ಲಿರುವ ಭಾರತವನ್ನು ಯಾಕೆ ಮಾಡಲಾಗಿಲ್ಲ ಎಂದು ಚೀನಾ ತಲೆ ಚಚ್ಚಿಕೊಂಡಿತು. ನಾವೆಷ್ಟೇ ಪ್ರಯತ್ನ ಮಾಡಿದರೂ ಭಾರತ ಕೊರೊನಾದಿಂದ ಪಾರಾಗುತ್ತಿರುವುದು ನೋಡಿದ ಚೀನಾ ಆಡಳಿತಗಾರರು ಪರೋಕ್ಷವಾಗಿ ಗಡಿಯಲ್ಲಿ ತಗಾದೆ ತೆಗೆದುಬಿಟ್ಟರು. ಭಾರತದ ಸೈನಿಕರನ್ನು ಕೆಣಕಲು ಶುರು ಮಾಡಿದ ಚೀನಾ ಯೋಧರು ಅಲ್ಲಿ ಕೈ ಮಿಲಾಯಿಸುವ ಹಂತಕ್ಕೆ ಮುಟ್ಟಿದರು. ಇದು ಇತ್ತೀಚಿನ ವರ್ಷಗಳಲ್ಲಿ ಅನೇಕ ಸಲ ನಡೆದಿದೆ. ಚೀನಾ ಯೋಧರು ಭಾರತದ ಗಡಿಯೊಳಗೆ ಮಾವನ ಮನೆಗೆ ನಡೆದು ಬಂದಂತೆ ಬಂದಿದ್ದಾರೆ. ಅಂತವರನ್ನು ಭಾರತೀಯ ಯೋಧರು ಹಿಂದಕ್ಕೆ ಓಡಿಸಿದ್ದಾರೆ. ಬೈಗುಳ, ನಿಂದನೆ, ದೂಡಿ ಹಾಕುವುದು ಅಲ್ಲಿ ಕಾಮನ್ ಆಗಿತ್ತು. ಆದರೆ ಈ ಬಾರಿ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಎರಡೂ ಕಡೆ ಸಾವು, ನೋವು ಸಂಭವಿಸಿದೆ. ನಾವು ಹೆಮ್ಮೆಯ 20 ವೀರ ಯೋಧರನ್ನು ಕಳೆದುಕೊಂಡರೆ ಅವರ 43 ಸೈನಿಕರನ್ನು ಕೊಂದಿದ್ದೇವೆ. ಅಷ್ಟಕ್ಕೂ ಈ ಗಲಭೆ ಅಷ್ಟು ಗಂಭೀರ ರೂಪಕ್ಕೆ ಹೋಗಿರುವ ಬಗ್ಗೆ ತನಿಖೆ ನಡೆಯುತ್ತಿದೆ.
ಮೇಲ್ನೋಟಕ್ಕೆ ಒಂದು ಸ್ಪಷ್ಟ. ಭಾರತ ತನ್ನ ಚೀನಾ ಗಡಿ ಸಮೀಪ ಭವಿಷ್ಯದಲ್ಲಿ ಯುದ್ಧ ನಡೆದರೆ ಯಾವ ರೀತಿಯ ವೇದಿಕೆ ಸಜ್ಜಾಗಬೇಕೊ ಅದನ್ನು ಮಾಡಿಕೊಳ್ಳುತ್ತಿದೆ. ಅದನ್ನು ನರೇಂದ್ರ ಮೋದಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಮಾಡಲು ಶುರು ಮಾಡಿದ್ದಾರೆ. ಮಾಡಬೇಡಿ ಎಂದು ವಿನಂತಿಸುವ ನೈತಿಕತೆ ಚೀನಾದಿಂದ ಬರಲು ಸಾಧ್ಯವಿಲ್ಲ. ಆದರೆ ನಮ್ಮನ್ನು ಕೆಣಕಲು ಅದು ಈ ಕೊರೊನಾ ಸಮಯವನ್ನು ಬಳಸಿದೆ. ಸೈನಿಕರಲ್ಲಿಯೂ ಕೆಲವರಿಗೆ ಕೋವಿಡ್ 19 ಪಾಸಿಟಿವ್ ಬಂದ ಕಾರಣ ನಾವು ಕೂಡ ಈ ಯುದ್ಧೋನ್ಮಾದ ಸ್ಥಿತಿಯಲ್ಲಿ ಇರಲಿಲ್ಲ. ಇದನ್ನು ಬಳಸಿಯೇ ಚೀನಾ ಯುದ್ಧದ ಗೆಟಪ್ಪಿಗೆ ಬಂದಿರುವುದು.
ಆದರೆ ಇಂತಹ ಸಂದರ್ಭದಲ್ಲಿ ಒಂದು ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಏನು ಮಾಡಬೇಕಿತ್ತು. ಕೇಂದ್ರದ ಎನ್ ಡಿಎ ಸರಕಾರ ತೆಗೆದುಕೊಳ್ಳುವ ಪ್ರತಿ ನಿರ್ಧಾರವನ್ನು ಬೆಂಬಲಿಸುತ್ತೇವೆ ಎಂದು ಬಹಿರಂಗವಾಗಿ ಹೇಳಬೇಕಾಗಿತ್ತು. ಆದರೆ ಅತ್ತ ಯುದ್ಧದ ಕಾರ್ಮೋಡ ದಟ್ಟವಾಗುತ್ತಿದ್ದಂತೆ ಇಬ್ಬರು ಕಾಂಗ್ರೆಸ್ ನಾಯಕರು ಎದ್ದು ನಿಂತರು. ರಾಷ್ಟ್ರಮಟ್ಟದಲ್ಲಿ ರಾಹುಲ್. ದಕ್ಷಿಣ ಕನ್ನಡ ಜಿಲ್ಲಾಮಟ್ಟದಲ್ಲಿ ರಾಹುಲ್ ಸೋದರ ಖಾದರ್ ಮಾತನಾಡಲು ಶುರು ಮಾಡಿದರು. ಮೋದಿ ಮೌನ ಮುರಿಯಲಿ ಎಂದು ರಾಹುಲ್ ವಿನ್ಸಿ ಹೇಳಿದರೆ, 56 ಇಂಚಿನ ಎದೆಗಾರಿಕೆಯವರು ಎಲ್ಲಿ ಹೋದರು ಎಂದು ಖಾದರ್ ವ್ಯಂಗ್ಯ ಮಾಡಿದರು. ಇಲ್ಲಿ ನಾನು ಯುಟಿ ಖಾದರ್ ಅವರಿಗೆ ಕೇಳುವ ಮೊದಲ ಪ್ರಶ್ನೆ. ಚೀನಾ ಗಡಿಯಿಂದ ಒಂದು ಕಲ್ಲು ಇತ್ತ ಬಂದ ಕೂಡಲೇ ಮೋದಿ ಸಂಸತ್ತಿನ ಹೊರಗೆ ನಿಂತು “ಆಕ್ರಮಣ್” ಎಂದು ಕೂಗಬೇಕಿತ್ತಾ? ಇದೇನು ತೆಲುಗು ಪಿಕ್ಚರಾ? ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ, ನಿಜ. ಅದಕ್ಕೆ ಪ್ರತಿಯಾಗಿ ಅವರ 43 ಸೈನಿಕರನ್ನು ಕೊಂದಿದ್ದೇವೆ. ಇದೆಲ್ಲ ಆಗಿ ಕೆಲವೇ ಗಂಟೆಗಳಾಗಿವೆ.
ಮೋದಿ ತಕ್ಷಣ ದೆಹಲಿಯಿಂದ ಚೀನಾ ಗಡಿಗೆ ಹಾರಿ ಬಂದು ಅಲ್ಲಿ ಯೋಧರ ಸಮವಸ್ತ್ರ ಧರಿಸಿ ಗನ್ ಹಿಡಿದು ಶೂಟ್ ಮಾಡಿ ಚೀನಿ ಸೈನಿಕರನ್ನು ಕೊಲ್ಲಬೇಕಾ? ಏನು ಮಾತನಾಡುತ್ತೀರಿ ಖಾದರ್ ಸಾಹೇಬ್ರೆ. ನೀವು ಕಾನೂನು ಪದವೀಧರರು. ನಿಮ್ಮ ಕ್ಷೇತ್ರದ ಒಂಭತ್ತು ಕೆರೆಯ ನೂರಾರು ಮನೆಗಳನ್ನು ವಿಲೇವಾರಿ ಮಾಡಲು ನಿಮಗೆ ಒಂದೂವರೆ ದಶಕ ಸಾಕಾಗಲಿಲ್ಲ. ಹಾಗಿರುವಾಗ ನೀವು ಚೀನಾ ಗಡಿಯಲ್ಲಿ ಯುದ್ಧದ ಕಾರ್ಮೋಡ ಎಂದು ಟಿವಿಯಲ್ಲಿ ನೋಡಿದ ತಕ್ಷಣ ಕಾಂಗ್ರೆಸ್ ಕಚೇರಿಗೆ ಓಡಿ ಬಂದು ಸುದ್ದಿಗೋಷ್ಟಿ ಮಾಡಿ 56 ಇಂಚಿನ ಮೋದಿ ಎಲ್ಲಿ ಎನ್ನುತ್ತಿರಲ್ಲ. ಇನ್ನು ನಿಮ್ಮದೆ ಹಿರಿಯಣ್ಣ ರಾಹುಲ್, ಮೋದಿ ಮೌನ ಮುರಿಯಬೇಕು ಎನ್ನುತ್ತಾರೆ. “ಅಮ್ಮಾ, ಇವತ್ತು ಅಡುಗೆಗೆ ಏನು ಮಾಡಿದ್ದೀಯಾ?” ಎಂದು ಮಗ ತಾಯಿಗೆ ಕೇಳಿದ್ದಷ್ಟೇ ಸುಲಭವಾಗಿ ಯುದ್ಧ ಮಾಡ್ತಿರಾ ಮೋದಿ ಎಂದು ಕೇಳುವುದು ಸಾಧ್ಯನಾ ರಾಹುಲ. ಇನ್ನು ಯುದ್ಧದ ವಿಷಯಗಳನ್ನು ಮೋದಿ ಒಬ್ಬರೇ ತೆಗೆದುಕೊಳ್ಳಲು ಆಗಲ್ಲ. ಅದಕ್ಕೆ ವಿವಿಧ ಸೇನಾಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ಮಾಡಬೇಕಾಗುತ್ತದೆ. ಅದರ ನಂತರ ಗೃಹಸಚಿವರೊಂದಿಗೆ, ರಕ್ಷಣಾ ಸಚಿವರೊಂದಿಗೆ, ವಿತ್ತ ಸಚಿವರೊಂದಿಗೆ ಮಾತನಾಡಿ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ. ಅದು ಬಿಟ್ಟು “ಬನ್ನಿ, ಪಕ್ಕದ್ಮನೆಯ ಚೀನಿಯವನು ಗಲಾಟೆ ಮಾಡುತ್ತಿದ್ದಾನೆ, ಅವನಿಗೆ ಸ್ವಲ್ಪ ಹೊಡೆದು ಬಂದು ಬಿಡೋಣ” ಎಂದು ಮೋದಿ ಹೇಳಲು ಆಗುತ್ತಾ?
1971 ರಲ್ಲಿ ಪಾಕಿಸ್ತಾನದ ವಿರುದ್ಧ ಬಾಂಗ್ಲಾ ವಿಮೋಚನಾ ಯುದ್ಧವನ್ನು ನಡೆಸಿದ ಭಾರತದ ದಿಟ್ಟ ನಿರ್ಧಾರದ ಬಗ್ಗೆ ಮುಂದೊಮ್ಮೆ ಸಂಸತ್ತಿನಲ್ಲಿ ಅಟಲ್ ವಾಜಪೇಯಿಯವರು ಇಂದಿರಾ ನಿರ್ಧಾರವನ್ನು ಶ್ಲಾಘಿಸಿದ್ದರು. ಇಂದಿರಾ ಅವರನ್ನು ದುರ್ಗೆಗೆ ಹೋಲಿಸಿದ್ದು ಇದೇ ಕಾರಣಕ್ಕೆ. ಆದರೆ ಸೋನಿಯಾ (?) ಮೋದಿ ಮಾತನಾಡಲಿ, ಸರ್ವ ಪಕ್ಷ ಸಭೆ ಕರೆದು ಅಭಿಪ್ರಾಯ ಕೇಳಲಿ ಎಂದು ಹಟ ಹಿಡಿದಿದ್ದಾರೆ. ಅದಕ್ಕೆ ಸರಿಯಾಗಿ ಶುಕ್ರವಾರ ಮೋದಿ ಸರ್ವ ಪಕ್ಷ ಸಭೆಯನ್ನು ಕರೆದಿದ್ದಾರೆ. ಅದರಲ್ಲಿ ದೇವೆಗೌಡರು ಭಾಗವಹಿಸಿದರೆ ಒಂದು ಡೈಲಾಗ್ ಗ್ಯಾರಂಟಿ ಇರುತ್ತದೆ. ಅದೇನೆಂದರೆ ” ಮೋದಿಗೆ ಯುದ್ಧ ಮಾಡಲು ನಾನೇ ಹೇಳಿದ್ದು”
ಇವರ ರಾಜಕೀಯ ಏನೇ ಇರಲಿ. 1962 ರಲ್ಲಿ ಇಂಡೋ- ಚೀನಾ ಯುದ್ಧ ಆದಾಗ ಅಕ್ಷಯ್ ಚೆನ್ ವನ್ನು ಚೀನಾ ವಶಪಡಿಸಿಕೊಂಡಿತ್ತು. ಈಗ ಯುದ್ಧವಾದರೆ ನಮ್ಮ ಯೋಧರು ಆ ಪ್ರದೇಶವನ್ನು ಮತ್ತೆ ಭಾರತಕ್ಕೆ ಮರಳಿ ತರುವ ಎಲ್ಲಾ ಸಾಮರ್ತ್ಯ ಹೊಂದಿದ್ದಾರೆ. ಅದು ಆಗಲಿ ಎಂದು ದೇಶಭಕ್ತನಾಗಿ ನಿರೀಕ್ಷೆ.
Leave A Reply