ಮಾಸ್ಕ್ ಸಾವು-ಬದುಕಿನ ನಡುವಿನ ಪರದೆ ನೆನಪಿರಲಿ!!
![](https://tulunadunews.com/wp-content/uploads/2020/09/A-group-of-students-wearing-protective-masks-walk-outside-a-railway-station-amid-coronavirus-fears-in-Kochi-India-March-10-2020-Reuters-770x433-1.jpg)
ಮತ್ತೆ ಅಲ್ಲಲ್ಲಿ ಲೋಕಲ್ ಲಾಕ್ ಡೌನ್ ಆಗುತ್ತಾ ಎನ್ನುವ ಸುದ್ದಿಯನ್ನು ಬೆಳಿಗ್ಗೆ ವಾಹಿನಿಗಳು ಪ್ರಸಾರ ಮಾಡಿದ್ದವು. ವಿಷಯ ಇಷ್ಟೇ, ಪ್ರಧಾನಿ ನರೇಂದ್ರ ಮೋದಿಯವರು ಮೊನ್ನೆಯಷ್ಟೇ 9 ರಾಜ್ಯಗಳ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದಾರೆ. ಅದರಲ್ಲಿ ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣ ಮಾಡಲು ಏನು ಕ್ರಮ ತೆಗೆದುಕೊಳ್ಳಬೇಕೊ ಅದನ್ನು ತೆಗೆದುಕೊಳ್ಳಲು ಹೇಳಿದ್ದರು. ಕರ್ನಾಟಕ ರಾಷ್ಟ್ರದಲ್ಲಿಯೇ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎನ್ನುವುದು ಅಂಕಿಅಂಶಗಳಿಂದ ಪತ್ತೆಯಾಗಿದೆ. ಆದ್ದರಿಂದ ವಾರಾಂತ್ಯದಲ್ಲಿ ಎರಡು ದಿನ ಮತ್ತೆ ಲಾಕ್ ಡೌನ್ ಮಾಡಿದ್ರೆ ಹೇಗೆ ಎನ್ನುವುದು ಮುಖ್ಯಮಂತ್ರಿಯವರ ಮನಸ್ಸಿನಲ್ಲಿ ಇದೆಯಾ ಎನ್ನುವುದು ಈಗ ಪ್ರಶ್ನೆ. ಅದಕ್ಕೆ ಸರಿಯಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಜನರು ಮಾಸ್ಕ್ ಧರಿಸಬೇಕು, ಕೊರೋನಾ ಬಗ್ಗೆ ಸೂಕ್ತ ಎಚ್ಚರಿಕೆಯನ್ನು ತೆಗೆಯಬೇಕು ಎನ್ನುವ ಅರ್ಥದ ಮೇಸೆಜ್ ನೀಡಿದ್ದಾರೆ. ಆದರೆ ಮಾಸ್ಕ್ ಬಗ್ಗೆ ನಮ್ಮ ಜನರು ಎಚ್ಚರಿಕೆ ವಹಿಸುವುದನ್ನು ಯಾವಾಗಲೋ ಬಿಟ್ಟಾಗಿದೆ. ಯಾಕೆಂದರೆ ನಮಗೆ ಏನೂ ಆಗುವುದಿಲ್ಲ ಎನ್ನುವ ಭಂಡ ಧೈರ್ಯ. ಯಾವುದೇ ರೋಗಲಕ್ಷಣಗಳಿಲ್ಲದ ಸಂಸದ, ಕೇಂದ್ರ ಸಚಿವ ಸುರೇಶ್ ಅಂಗಡಿಯವರು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿ ವಾರದೊಳಗೆ ಹೇಗೆ ನಿಧನ ಹೊಂದಿದ್ದಾರೆ ಎನ್ನುವುದನ್ನು ಗಮನಿಸಬೇಕು. ನಮ್ಮಲ್ಲಿ ರೋಗಲಕ್ಷಣ ಇಲ್ಲದ ಕೊರೊನಾ ಸೋಂಕಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ನಮಗೆ ಏನೂ ಆಗುವುದಿಲ್ಲ ಎನ್ನುವ ಧೈರ್ಯ ಇರಲಿ, ಆದರೆ ಅದು ಭಂಡ ಧೈರ್ಯ ಆಗದಿರಲಿ. ಯಾಕೆಂದರೆ ನಿಮ್ಮ ಸೀನು ಕೂಡ ಹಲವು ಜನರಿಗೆ ಈ ಕಾಯಿಲೆಯನ್ನು ಹಂಚುವ ಸಾಧ್ಯತೆ ಬರಬಹುದು. ಒಂದು ವೇಳೆ ಅದರಿಂದ ನಾಲ್ಕು ಜನರ ಪ್ರಾಣಕ್ಕೆ ಸಂಚಕಾರ ಬರಬಹುದು. ನೀವು ಯಾರಿಗೆ ನಿಮ್ಮೊಳಗಿರುವ ಸೊಂಕನ್ನು ನಿಮಗೆ ಗೊತ್ತಿಲ್ಲದೆ ದಾಟಿಸಿಬಿಟ್ಟಿದ್ದಿರಿ ಎಂದು ನಿಮಗೆ ಗೊತ್ತಾಗುವುದಿಲ್ಲ. ಆದರೆ ಪರೋಕ್ಷವಾಗಿ ನೀವು ಯಾವುದೋ ವ್ಯಕ್ತಿಗಳ ಜೀವದೊಂದಿಗೆ ಆಟವಾಡಿರುತ್ತೀರಿ. ಆ ಸೋಂಕು ತಾಗಿಸಿಕೊಂಡವ ಒಳಗೆ ಬೇರೆ ಬೇರೆ ಕಾಯಿಲೆಗಳಿಂದ ನರಳುತ್ತಿದ್ದರೆ ಅವನು ಎಷ್ಟೇ ವಯಸ್ಸಿನವನೇ ಆಗಿರಲಿ ಸಾವು ಬಹುತೇಕ ನಿಶ್ಚಿತ. ನೀವು ಬಸ್ಸಿನಲ್ಲಿ ಹೋಗುವಾಗಲೋ ಅಥವಾ ಶಾಪಿಂಗ್ ಗೆ ಹೋಗುವಾಗ ನಿಮ್ಮ ಕೆಮ್ಮು, ಸೀನು ಅಥವಾ ಬೇರೆ ರೀತಿಯಲ್ಲಿ ಕೊರೋನಾ ಹರಡಿರಬಹುದು. ಕೊರೊನಾದಿಂದ ಸತ್ತ ವ್ಯಕ್ತಿ ಎಲ್ಲಿಂದ ಕೊರೋನಾ ತಗುಲಿಸಿಕೊಂಡ ಎಂದು ಎಷ್ಟೋ ಬಾರಿ ಗೊತ್ತಾಗುವುದಿಲ್ಲ. ಯಾಕೆಂದರೆ ಇದು ಬಹುತೇಕ ಸಮುದಾಯ ಹಂತಕ್ಕೆ ಬಂದಿರುವುದರಿಂದ ಪ್ರಾಥಮಿಕ ಸಂಪರ್ಕ, ದ್ವಿತೀಯ ಸಂಪರ್ಕ ಎಲ್ಲವನ್ನು ಹುಡುಕುವುದನ್ನು ನಮ್ಮ ಆರೋಗ್ಯ ಇಲಾಖೆಯವರು ಯಾವತ್ತೋ ಬಿಟ್ಟುಬಿಟ್ಟಿದ್ದಾರೆ. ಆದ್ದರಿಂದ ಏನು ಮಾಡಬೇಕು ಎಂದರೆ ಈ ಮಾಸ್ಕ್ ಬಗ್ಗೆ ಹೆದರಿಕೆ ಹುಟ್ಟಬೇಕಾದರೆ ದಂಡವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಸಿಟಿ ವ್ಯಾಪ್ತಿಯಲ್ಲಿ ಇನ್ನೂರು ರೂಪಾಯಿ ದಂಡ ಮತ್ತು ಗ್ರಾಮಾಂತರ ಭಾಗದಲ್ಲಿ 100 ರೂಪಾಯಿ ದಂಡ ಇದೆ. ಆದರೆ ಇಲ್ಲಿಯ ತನಕ ಎಷ್ಟು ಹಣ ಹೀಗೆ ವಸೂಲಿಯಾಗಿದೆ. ಹೀಗೆ ಟಾರ್ಗೆಟ್ ಒಂದನ್ನು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಗಳಿಗೆ ಕೊಡಬೇಕು. ಅವರು ಅದನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕು. ಸುಲಭದಲ್ಲಿಯೇ ನಿತ್ಯ ಸಾವಿರಾರು ರೂಪಾಯಿ ಸಂಗ್ರಹವಾಗುತ್ತದೆ.
ಇನ್ನು ಅಂಗಡಿಗಳ ಹೊರಗೆ ಸ್ಯಾನಿಟೈಝರ್ ಸ್ಟ್ಯಾಂಡ್ ಇಡಬೇಕು ಎನ್ನುವ ನಿಯಮ ಇದೆ. ಎಷ್ಟು ಅಂಗಡಿಗಳಲ್ಲಿ ಇದೆ. ಅವರಿಗೂ ದಂಡ ವಿಧಿಸಬೇಕು. ಪಕ್ಕದ ರಸ್ತೆಯ ಅಂಗಡಿಯವನಿಗೆ ದಂಡ ಬಿದ್ದಿದೆ ಎಂದು ಗೊತ್ತಾದರೆ ಇವನು ಕೂಡ ಜಾಗೃತಗೊಳ್ಳುತ್ತಾನೆ. ಇನ್ನು ನಮ್ಮ ಬಸ್ಸಿನಲ್ಲಿ ಎಷ್ಟು ಮಂದಿ ಮಾಸ್ಕ್ ಹಾಕಿ ಕುಳಿತುಕೊಂಡಿರುತ್ತಾರೆ. ಬಹಳ ಕಡಿಮೆ ಜನ. ನೀವು ಬೇಕಾದರೆ ಕೇರಳದ ಬಸ್ಸುಗಳಲ್ಲಿ ನೋಡಿ. ಅಲ್ಲಿ ಬಸ್ ಬಾಗಿಲಲ್ಲಿ ನಿಲ್ಲುವ ಕಂಡಕ್ಟರ್ ಮುಖಕ್ಕೆ ಮಾಸ್ಕ್ ಹಾಕಿಯೇ ನಿಂತಿರುತ್ತಾರೆ. ಯಾರಾದರೂ ಪ್ರಯಾಣಿಕ ಒಳಪ್ರವೇಶಿಸುವಾಗ ಮಾಸ್ಕ್ ಹಾಕದಿದ್ದರೆ ಅಥವಾ ಸರಿಯಾಗಿ ಹಾಕದಿದ್ದರೆ ಕಂಡಕ್ಟರ್ ಕೂಡಲೇ ಎಚ್ಚರಿಸುತ್ತಾರೆ. ಅದರಿಂದ ಅಲ್ಲಿ ಜಾಗೃತಿ ಪ್ರಮಾಣ ಜಾಸ್ತಿ ಇರುತ್ತದೆ. ಇದನ್ನು ತಲಪಾಡಿಯಲ್ಲಿಯೇ ನೀವು ಗಮನಿಸಬಹುದು. ತಲಪಾಡಿಯಿಂದ ಮಂಜೇಶ್ವರ ಕಡೆ ಹೋಗುವ ಎಲ್ಲಾ ಬಸ್ಸುಗಳಲ್ಲಿ ಇದನ್ನು ಪಾಲಿಸಲಾಗುತ್ತದೆ. ಇದು ಕಾಸರಗೋಡುವಿನ ವಿಷಯ ಮಾತ್ರವಲ್ಲ, ಆ ರಾಜ್ಯದ ಎಲ್ಲ ಕಡೆ ಇಂತಹುದೇ ವ್ಯವಸ್ಥೆ ಇದೆ. ಆದ್ದರಿಂದ ಕೇರಳದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಕಡಿಮೆ ಇದೆ.
ನಮ್ಮ ಪಾಲಿಕೆಯ ಆರೋಗ್ಯ ವಿಭಾಗ, ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗಳಲ್ಲಿ ಕೇವಲ ಏನಾಗುತ್ತಿದೆ ಎಂದರೆ ಎಷ್ಟು ಕೊರೋನಾ ಸೋಂಕಿತರು ಪತ್ತೆಯಾದರು, ಅದರಲ್ಲಿ ಸಾರಿ( ಕ್ಷಮಿಸು ಅಲ್ಲ), ಇಲಿ(ಪ್ರಾಣಿ ಅಲ್ಲ) ಎಷ್ಟು? ಸತ್ತವರು ಎಷ್ಟು? ಹೀಗೆ ಅಂಕಿಅಂಶ ದಾಖಲಿಸುವುದು ಮಾತ್ರ ನಡೆಯುತ್ತದೆ ವಿನ: ಮುಂಜಾಗ್ರತೆ ಕ್ರಮ ಏನು ತೆಗೆದುಕೊಳ್ಳಲಾಗಿದೆ ಎಂದು ಅವರಿಗೆ ಮಾತ್ರ ಗೊತ್ತು. ನಿತ್ಯ ಸರಾಸರಿ ಮುನ್ನೂರು ಜನರಿಗೆ ಸೊಂಕು ತಗಲುತ್ತಿದೆ. ಅದರ ಅರ್ಧದಷ್ಟು ಜನ ಗುಣಮುಖರಾಗುತ್ತಿದ್ದಾರೆ. ಹಾಗೆ ನಮ್ಮ ಜಿಲ್ಲೆಯಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 500 ದಾಟಿದೆ. ಮಾಸ್ಕ್ ಎನ್ನುವ ಪರದೆ ನಮ್ಮ ಸಾವು-ಬದುಕಿನ ನಡುವೆ ಇದೆ. ಮರೆಯದಿರಿ!
Leave A Reply