ವೃತ್ತದಿಂದ ಶುರುವಾದದ್ದು ಜನ್ಮಸ್ಥಾನದ ತನಕ ಬಂದು ನಿಂತಿದೆ!!
Posted On December 14, 2020
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಮತದಾರರ ಪೈಕಿ ಬಿಲ್ಲವರಿಗೆ ಅಗ್ರಸ್ಥಾನ. ಬಿಲ್ಲವರು ಭಾರತೀಯ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ನಡುವೆ ಹಂಚಿಹೋಗಿದ್ದಾರೆ. ಕಳೆದ ಬಾರಿ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಯ ವಿಚಾರವಾಗಿ ಕಾಂಗ್ರೆಸ್ ವಿವಾದ ಎಬ್ಬಿಸಿದಾಗ ಪಕ್ಷಾತೀತವಾಗಿ ಬಂಟ ಮತದಾರರು ಸಾರಾಸಗಟಾಗಿ ಬಿಜೆಪಿಗೆ ಮತ ಒತ್ತಿ ಬಂದಿದ್ದರು. ಇದೇ ಫಾರ್ಮುಲವನ್ನು ಬಳಸಿ ಮುಂದಿನ ಬಾರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಶಾಸಕ ಸ್ಥಾನ ಗಳಿಸಲು ಕಾಂಗ್ರೆಸ್ ಮುಂದಾಗಿದೆ. ಅದಕ್ಕಾಗಿ ಬಿಜೆಪಿ ನೇತೃತ್ವದ ಪಾಲಿಕೆ, ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಒಂದೇ ಹೊಡೆತಕ್ಕೆ ಅಡ್ಡಡ್ಡ ಮಲಗಿಸಲು ಕಾಂಗ್ರೆಸ್ ರಣತಂತ್ರ ಹೆಣೆಯುತ್ತಿದೆ. ಬೇಕಾದರೆ ಸೂಕ್ಷ್ಮವಾಗಿ ನೋಡಿ. ಇದೆಲ್ಲ ಆರಂಭವಾದದ್ದು ಬಿರುವೆರ್ ಕುಡ್ಲ ಎನ್ನುವ ಸಂಘಟನೆ ಲೇಡಿಹಿಲ್ ಪ್ರದೇಶದಲ್ಲಿರುವ ಒಂದು ವೃತ್ತವನ್ನು ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಬೇಕು ಎಂದು ಪಾಲಿಕೆಗೆ ಮನವಿ ಮಾಡಿದ್ದು.
ಬಹುಶ: ಆ ಕೆಲಸವನ್ನು ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಆಡಳಿತ ಅನುಷ್ಟಾನಕ್ಕೆ ತರಲು ತಯಾರಿ ಕೂಡ ನಡೆಸಿತ್ತು. ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ಇಟ್ಟ ನಂತರ ಜಿಲ್ಲೆಯಲ್ಲಿ ಬಿಲ್ಲವ ಮತಗಳ ಧ್ರುವಿಕರಣ ನಡೆದು ಬಿಟ್ಟರೆ ನಮ್ಮ ಗತಿ ಏನು? ಎಂದು ಕಾಂಗ್ರೆಸ್ ಆಲೋಚನೆಗೆ ಬಿತ್ತು. ಕಳೆದ ಅವಧಿಯ ಕಾಂಗ್ರೆಸ್ ಶಾಸಕರು ಮಾಡಿದ ತಪ್ಪನ್ನು ಈ ಬಾರಿ ಮಾಡಬಾರದು ಎಂದು ಕಾಂಗ್ರೆಸ್ ನಲ್ಲಿ ಮುಂದಿನ ಬಾರಿ ಶಾಸಕರಾಗಲು ಕನಸು ಕಾಣುತ್ತಿರುವ ಕೆಲವರು ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಚಿಂತನೆಗೆ ತೊಡಗಿದರು. ಆಗ ಅವರಿಗೆ ಹೊಳೆದದ್ದು ನಾವು ವೃತ್ತಕ್ಕಿಂತ ಏನಾದರೂ ದೊಡ್ಡ ವಿಷಯ ತೆಗೆದುಕೊಳ್ಳೋಣ. ಆ ನಂತರವೇ ಮಿಥುನ್ ರೈ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯನವರ ಹೆಸರು ಇಡಬೇಕು ಎಂದು ಹಟಕ್ಕೆ ಬಿದ್ದದ್ದು. ಇದೆರಡು ಆಗಿದ್ದರೆ ಬಿಜೆಪಿ ಹೇಗಾದರೂ ಮಾಡಿ ವಿಷಯವನ್ನು ದಡಕ್ಕೆ ಮುಟ್ಟಿಸಿ ಸಮಾಧಾನ ಪಡುತ್ತಿತ್ತೇನೋ. ಆದರೆ ಈ ನಡುವೆ ಕಾಂಗ್ರೆಸ್ಸಿನ ಒಳಗಿನ ಮಿಥುನ್ ರೈ ವಿರುದ್ಧದ ಮತ್ತೊಂದು ಗುಂಪು ಇನ್ನೊಂದು ವರಾತ ತೆಗೆದುಬಿಡ್ತು. ಅದೇನೆಂದರೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಿ. ಆ ನಿಲ್ದಾಣದಲ್ಲಿಯೇ ಪ್ರಥಮ ಬಾರಿ ಮಂಗಳೂರಿಗೆ ನಾರಾಯಣ ಗುರುಗಳು ಕಾಲಿಟ್ಟದ್ದು, ಆದ್ದರಿಂದ ಅವರದ್ದೇ ಹೆಸರು ಸೂಕ್ತ ಎಂದು ಹೇಳುತ್ತಾ ಬಂದರು. ಈ ವಿಷಯವನ್ನು ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಟಿ ಮಾಡಿ ಹೇಳಿದ ನಂತರ ಇಡೀ ಬಿಜೆಪಿ ಸಮೂಹ ಏಕಾಏಕಿ ಗೊಂದಲಕ್ಕೆ ಬಿದ್ದಿದೆ. ಯಾಕೆಂದರೆ ಒಂದೇ ಹೆಸರನ್ನು ಅಥವಾ ಒಂದೇ ಸಮುದಾಯಕ್ಕೆ ಸಂಬಂಧಪಟ್ಟಂತಹ ಹೆಸರುಗಳನ್ನು ಒಂದೇ ಜಿಲ್ಲೆಯಲ್ಲಿ ಇಡುತ್ತಾ ಹೋದರೆ ವಿಷಯ ಕಾನೂನಾತ್ಮಕವಾಗಿ ಜಟಿಲವಾಗುತ್ತಾ ಹೋಗುತ್ತದೆ. ಒಂದು ಸಲ ನ್ಯಾಯಾಲಯದ ಮೆಟ್ಟಿಲನ್ನು ವಿಘ್ನಸಂತೋಷಿಗಳಲ್ಲಿ ಯಾರಾದರೂ ಹತ್ತಿಬಿಟ್ಟರೆ ಮುಗಿಯಿತು. ಹೆಚ್ಚುಕಡಿಮೆ ಎರಡು ವರ್ಷಗಳ ಬಳಿಕ ಬರುವ ವಿಧಾನಸಭಾ ಚುನಾವಣೆಯ ಒಳಗೆ ತೀರ್ಪು ಹೊರಬರುವುದು ಕಷ್ಟ. ಒಂದು ವೇಳೆ ತೀರ್ಪು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಬಂದರೆ ಮುಗಿದೆ ಹೋಯಿತು ಬಿಜೆಪಿ ಮುಖಂಡರು ನೆಹರೂ (?) ಮೈದಾನದಲ್ಲಿ ಕಾಲು ಮೇಲೆ ತಲೆ ಕೆಳಗೆ ಮಾಡಿ ನೃತ್ಯ ಮಾಡಿದರೂ ಬಿಲ್ಲವ ಮತಗಳನ್ನು ಒಲಿಸಿಕೊಳ್ಳುವುದು ಕಷ್ಟ. ಒಂದು ವೇಳೆ ನ್ಯಾಯಾಲಯ ಸ್ಪಷ್ಟವಾಗಿ ಬಿಜೆಪಿ ಪರವಾಗಿ ಲಾಭವಾಗುವಂತಹ ತೀರ್ಪನ್ನು ಕೊಟ್ಟರೆ ಓಕೆ. ವಿರುದ್ಧವಾದ ತೀರ್ಪನ್ನು ಕೊಟ್ಟರೆ ಬಿಲ್ಲವರನ್ನು ಒಪ್ಪಿಸುವಲ್ಲಿ ಕನಿಷ್ಟ ಆರು ತಿಂಗಳು ವ್ಯಯವಾಗಲಿದೆ. ಆಗ ಚುನಾವಣೆ ಬಂದು ಹೋಗಿ ಬಿಟ್ಟರೆ ಕಾಂಗ್ರೆಸ್ಸಿಗೆ ಅದು ಸುಗ್ಗಿಯ ಕಾಲ.
ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿಯನ್ನು ತಳ್ಳಿ ಕಾಂಗ್ರೆಸ್ ಚೆಂದ ನೋಡುತ್ತಿದ್ದಂತೆ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಕೋಟಿ ಚೆನ್ನಯ್ಯರ ಮೂಲಜನ್ಮಸ್ಥಳದ ಬಗ್ಗೆ ವಿವಾದ ಎಬ್ಬಿಸಿದ್ದಾರೆ. ಪಡುಮಲೆ ಮತ್ತು ಗೆಜ್ಜೆಗಿರಿಯಲ್ಲಿ ಕೋಟಿಚೆನ್ನಯ್ಯರ ನಿಜವಾದ ಜನ್ಮಸ್ಥಾನ ಯಾವುದು ಎನ್ನುವುದರ ಬಗ್ಗೆ ಈಗ ವಿಚಾರ ಬಂದು ನಿಂತಿದೆ. ಕೆಲವು ಸಮಯದ ಹಿಂದೆ ಗೆಜ್ಜೆಗಿರಿಯಲ್ಲಿ ವೈಭವದ ಬ್ರಹ್ಮಕಲಶೋತ್ಸವ ಕೂಡ ನಡೆದಿತ್ತು. ಮುಂದಿನ ವರ್ಷ ಪಡುಮಲೆಯಲ್ಲಿ ಬ್ರಹ್ಮಕಲಶೋತ್ಸವ ಎಂದು ಹರಿಕೃಷ್ಣ ಘೋಷಣೆ ಮಾಡಿದ್ದಾರೆ. ಗೆಜ್ಜೆಗಿರಿಯ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸಿದ್ದವರಲ್ಲಿ ಕಾಂಗ್ರೆಸ್ ಮುಖಂಡರು ಇದ್ದರೆ ಪಡುಮಲೆಯಲ್ಲಿ ಬಿಜೆಪಿ ಮುಖಂಡ ಹರಿಕೃಷ್ಣರದ್ದೇ ಪಾರುಪತ್ಯ. ಹಾಗಾದರೆ ಈ ಬಾರಿ ಸ್ಪಷ್ಟವಾಗಿ ಬಿಲ್ಲವರು ಗೊಂದಲಕ್ಕೆ ಬೀಳುತ್ತಾರಾ? ಅಷ್ಟಕ್ಕೂ ಕೋಟಿ ಚೆನ್ನಯ್ಯರು ಕಾಲ್ಪನಿಕ ಶಕ್ತಿಗಳಲ್ಲ. ಅವರು ಈ ನೆಲದಲ್ಲಿ ಹುಟ್ಟಿ, ಬೆಳೆದ ದೈವಾಂಶ ಸಂಭೂತರು. ಅವರು ಪವಾಡ ಪುರುಷರು. ಅವರ ಜನ್ಮಸ್ಥಳದ ಬಗ್ಗೆ ವಿವಾದ ಹುಟ್ಟಲೇಬಾರದು. ಒಂದು ವೇಳೆ ಇದ್ದರೆ ಅದನ್ನು ಸಮಾಜದ ಹಿರಿಯರು ಕುಳಿತು ಬಗೆಹರಿಸಿಕೊಳ್ಳಬೇಕು. ಅದನ್ನು ಹೋಟೇಲುಗಳ ಸುದ್ದಿಗೋಷ್ಟಿಗಳಲ್ಲಿ ಜಗಜ್ಜಾಹೀರ ಮಾಡಬಾರದು. ಇನ್ನು ಈ ಒಟ್ಟು ವಿವಾದದಲ್ಲಿ 13 ಕೋಟಿಯಷ್ಟು ಭ್ರಷ್ಟಾಚಾರ ಕೂಡ ಆಗಿದೆ ಎನ್ನುವ ವಾಸನೆ ಮೂಗಿಗೆ ಬಡಿಯುತ್ತಿದೆ. ಕೋಟಿ ಚೆನ್ನಯ್ಯರ ಹೆಸರಿನಲ್ಲಿ ಹಣ ಮಾಡುವುದು ಬಿಡಿ, ಆ ಬಗ್ಗೆ ಯೋಚನೆ ಮಾಡಿದರೂ ಅಂತಹ ವ್ಯಕ್ತಿಗಳು ಮಣ್ಣು ತಿಂದು ನರಳಬೇಕಾದೀತು. ಯಾಕೋ ಬಿಲ್ಲವರ ಹೆಸರಿನಲ್ಲಿ ಮತ ಹೊಡೆಯಬೇಕೆನ್ನುವ ಕನಸು ಮೊದಲಿಗೆ ಯಾರಿಗೆ ಬಿತ್ತೋ. ಸದ್ಯ ಜನಾರ್ಧನ ಪೂಜಾರಿ ಸುದ್ದಿಗೋಷ್ಟಿ ಮಾಡಿ ಯಾರ ಕಡೆ ತೀರ್ಪು ಕೊಡುತ್ತಾರೆ ಎನ್ನುವುದನ್ನು ಕುದ್ರೋಳಿಯ ಅಂಗಳ ಕಾತರದಿಂದ ಕಾಯುತ್ತಿದೆ!
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply