ಯಡ್ಡಿ ಮನೆ ಮೇಲೆ ಕಲ್ಲು ಬಿಸಾಡಿದ್ದೇ ಆಶ್ಚರ್ಯ!!

ಯಡ್ಡಿಯವರನ್ನು ಭಾರತೀಯ ಜನತಾ ಪಾರ್ಟಿ ಸೈಡ್ ಲೈನ್ ಮಾಡಿದೆ ಎಂದು ಸಾಬೀತುಪಡಿಸಲು ಕಾಂಗ್ರೆಸ್ ಮುಖಂಡರು ಎಷ್ಟು ಪ್ರಯತ್ನಪಟ್ಟರೂ ಅದು ಫಲಪ್ರದವಾಗಲಿಲ್ಲ. ಯಾಕೆಂದರೆ ಯಡ್ಡಿಯನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ಕಾಂಗ್ರೆಸ್ ಸಾಬೀತುಪಡಿಸುವಲ್ಲಿ ಯಶಸ್ವಿಯಾದರೆ ಅದರಿಂದ ಲಿಂಗಾಯತರು ಬೇಸರಗೊಳ್ಳುತ್ತಾರೆ. ಅವರು ಬೇಸರಗೊಂಡರೆ ಕಾಂಗ್ರೆಸ್ ಪಕ್ಷದತ್ತ ವಾಲುತ್ತಾರೆ. ಒಮ್ಮೆ ಹಾಗೇ ಆದರೆ ಲಿಂಗಾಯಿತರ ಬೆಂಬಲದಿಂದ ಅಧಿಕಾರಕ್ಕೆ ಏರುತ್ತಿರುವ ಬಿಜೆಪಿಯ ಕಥೆ ಮುಗಿಯುತ್ತದೆ. ಅದನ್ನು ಬಳಸಿ ತಾವು ಬೇಳೆ ಬೇಯಿಸಿಕೊಳ್ಳಬಹುದು ಎಂದು ಡಿಕೆಶಿಯಿಂದ ಹಿಡಿದು ಸುರ್ಜೇವಾಲರ ತನಕ ಪ್ರತಿಯೊಬ್ಬರು ಎಷ್ಟು ಕೈ ಕಾಲು ಹೊಡೆದರೂ ಅದರಿಂದ ನಯಾಪೈಸೆಯ ಲಾಭ ಆಗುತ್ತಿಲ್ಲ. ಇಂತಹ ಐನಾತಿ ಸಮಯದಲ್ಲಿಯೇ ಬಿಜೆಪಿ ಮುಸ್ಲಿಮರ ಮೀಸಲಾತಿಯನ್ನು ಕಸಿದು ಅದನ್ನು ಲಿಂಗಾಯಿತರಿಗೆ ಮತ್ತು ಒಕ್ಕಲಿಗರಿಗೆ ಸಮನಾಗಿ ಹಂಚಿಬಿಟ್ಟಿತ್ತು. ಯಾವಾಗ ಮುಸ್ಲಿಮರಿಗೆ ಖಾಲಿ ಚೊಂಬು ಕೊಟ್ಟು ಅವರ ಪಾಯಸವನ್ನು ಬೇರೆ ಎರಡು ಜಾತಿಯವರಿಗೆ ಹಂಚಲಾಯಿತೋ ಸಿದ್ದು, ಡಿಕೆಶಿ ನಿದ್ರೆ ಎನ್ನುವ ಶಬ್ದವನ್ನೇ ಮರೆತುಬಿಟ್ಟರು. ಯಾಕೆಂದರೆ ಈ ಮಾಸ್ಟರ್ ಸ್ಟ್ರೋಕ್ ಹೇಗಿತ್ತು ಎಂದರೆ ಬೊಬ್ಬೆ ಹೊಡೆಯಲೂ ಆಗದೇ, ಮೌನವಾಗಿ ಕುಳಿತುಕೊಳ್ಳಲು ಆಗದೇ ಬಾಯಿಗೆ ಕೈ ಅಡ್ಡ ಇಟ್ಟು ಡಿಕೆಶಿ, ಸಿದ್ದು ಬಾತ್ ರೂಂನಲ್ಲಿ ಅತ್ತದ್ದೇ ಅತ್ತದ್ದು. ಆದರೆ ಬರೀ ಅತ್ತರೇ ಬಿಜೆಪಿ ವಿಧಾನಸೌಧದ ಮೂರನೇ ಮಹಡಿಯ ಕೀಲಿಕೈಯನ್ನು ಬಿಜೆಪಿ ತನ್ನಲ್ಲೇ ಇಟ್ಟುಕೊಂಡು ಬಿಡುತ್ತದೆ ಎಂದು ಅಂದುಕೊಂಡ ಇವರು ಸುರ್ಜೇವಾಲರ ಬಳಿ ಈ ಬಗ್ಗೆ ಅವಲತ್ತುಕೊಂಡರು. ಇಂತದೇ ಸಮಯವನ್ನು ಕಾಯುತ್ತಿದ್ದ ಸುರ್ಜೇವಾಲರು ಈಗ ಒಂದು ಹಕ್ಕಿಗೆ ಎರಡು ಕಲ್ಲು ಹೊಡೆಯೋಣ ಎಂದುಬಿಟ್ಟರು. ಒಂದು ಕಲ್ಲಿಗೆ ಎರಡು ಹಕ್ಕಿ ಕೇಳಿದ್ದೇವೆ. ಆದರೆ ಎರಡು ಕಲ್ಲಿಗೆ ಒಂದು ಹಕ್ಕಿ ಏನು ಎಂದು ಇವರಿಬ್ಬರಿಗೆ ಅರ್ಥವಾಗಲಿಲ್ಲ. ಅದನ್ನು ವಿವರಿಸಿದ ಸುರ್ಜೇವಾಲರು ” ಈಗ ಒಂದು ಕಡೆಯಿಂದ ಬಂಜಾರ ಸಮುದಾಯದವರು ಯಡ್ಡಿ ಮನೆಗೆ ಕಲ್ಲು ಹೊಡೆಯುವಂತೆ ಮಾಡೋಣ. ಇನ್ನೊಂದು ಕಡೆಯಿಂದ ಬಿಜೆಪಿಯವರೇ ಯಡ್ಡಿ ಮನೆಗೆ ಕಲ್ಲು ಹೊಡೆದರು ಎಂದು ಹೇಳೋಣ” ಎಂದು ಐಡಿಯಾ ಕೊಟ್ಟರು. ಅದರ ನಂತರ ರಂಗಕ್ಕೆ ಇಳಿದ ಸಿದ್ದು, ಡಿಕೆಶಿ ತಮ್ಮದೇ ಒರಗೆಯ ಮುಖಂಡರನ್ನು ಕರೆದು ಜನರನ್ನು ಸೆಟ್ ಮಾಡಲು ಹೇಳಿದರು. ಕಾಂಗ್ರೆಸ್ಸಿನ ಮಾಜಿ ಶಾಸಕರ ಪಿಎಗಳು ಇದಕ್ಕೆ ಕೈ ಜೋಡಿಸಿದರು. ಶಿಕಾರಿಪುರದಲ್ಲಿರುವ ಯಡ್ಡಿ ಮನೆಗೆ ಕಲ್ಲು ಬಿಸಾಡಲಾಯಿತು.
ಅಲ್ಲಿ ಕಲ್ಲು ಬೀಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಬೆಂಗಳೂರಿನಲ್ಲಿ ಲೀಟರ್ ಗಟ್ಟಲೆ ಕಣ್ಣೀರು ಸುರಿಸಲು ಆರಂಭಿಸಿದರು. ಪಾಪ, ಯಡ್ಡಿಯವರಿಗೆ ಹೀಗಾಗಬಾರದಿತ್ತು ಎಂದು ನಾಟಕ ಮಾಡಿದರು. ಆದರೆ ರಾಜಕೀಯದಲ್ಲಿ ಇವರಿಗಿಂತ ಹೆಚ್ಚು ನೀರು ಕುಡಿದಿರುವ ಯಡ್ಡಿ ಮಾತ್ರ ಕಲ್ಲು ಹೊಡೆದವರದ್ದು ತಪ್ಪಿಲ್ಲ. ಯಾರನ್ನೂ ಬಂಧಿಸಬೇಡಿ ಎಂದು ಹೇಳಿಬಿಟ್ಟರು. ಇದರಿಂದ ಯೋಚನೆಗೆ ಬಿದ್ದ ಕಾಂಗ್ರೆಸ್ಸಿಗರು ಕಲ್ಲುಗಳನ್ನು ಬಿಸಾಡಿದವರೇ ಬಿಜೆಪಿಗರು ಎಂದು ಎರಡನೇ ಗೂಗ್ಲಿ ಹಾಕಲು ಹೊರಟರು. ಇತ್ತ ಬಿಜೆಪಿ ಮುಖಂಡರು ಕಲ್ಲು ಬಿಸಾಡಿದವರು ಕಾಂಗ್ರೆಸ್ಸಿಗರು ಎಂದರು. ಆದರೆ ಯಡ್ಡಿಜಿ ಮಾತ್ರ ಕಲ್ಲು ಬಿಸಾಡಿದವರು ಕಾಂಗ್ರೆಸ್ಸಿಗರು ಎನ್ನುವ ಮಾಹಿತಿ ಇಲ್ಲ. ಬಹುಶ: ತಪ್ಪು ಮಾಹಿತಿಯಿಂದ ಬಂಜಾರ ಸಮುದಾಯದವರು ಹೀಗೆ ಮಾಡಿರಬಹುದು. ಅವರೊಂದಿಗೆ ಮಾತನಾಡಿ ಸರಿ ಮಾಡುತ್ತೇನೆ ಎಂದುಬಿಟ್ಟರು. ಒಬ್ಬ ಪ್ರಬುದ್ಧ ರಾಜಕಾರಣಿ ಎಂದರೆ ಹೇಗಿರಬೇಕು ಎಂದು ತೋರಿಸಿಕೊಟ್ಟರು. ಬಾಣಲೆಯಲ್ಲಿ ಎಣ್ಣೆ ಬಿಸಿಯಾಗುವ ಮೊದಲೇ ಹಪ್ಪಳ ಬಿಟ್ಟರೆ ಅವನನ್ನು ಉತ್ತಮ ಬಾಣಸಿಗ ಎನ್ನುವುದಿಲ್ಲ. ಕಾಂಗ್ರೆಸ್ಸಿಗರ ಪರಿಸ್ಥಿತಿ ಕೂಡ ಹೀಗೆಯೇ. ಏನೋ ಮಾಡಲು ಹೋಗಿ ಎಣ್ಣೆಯನ್ನೇ ಮೈ ಮೇಲೆ ಸುರಿದುಕೊಳ್ಳುತ್ತಿದ್ದಾರೆ ಬಿಟ್ಟರೆ ಅದರಿಂದ ಹಪ್ಪಳ, ಸಂಡಿಗೆ ಹುರಿಯುವಲ್ಲಿ ಯಶಸ್ವಿಯಾಗುತ್ತಿಲ್ಲ.
ಹೇಳಿ, ಕೇಳಿ ಯಡ್ಡಿ ಸದ್ಯದ ಮಟ್ಟಿಗೆ ಪಕ್ಷಾತೀತವಾಗಿ ಲಿಂಗಾಯತರ ಸರ್ವೋಚ್ಚ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಷ್ಟು ವರ್ಚಸ್ಸಿನ ನಾಯಕರು ಯಾವ ಪಕ್ಷದಲ್ಲಿಯೂ ಇಲ್ಲ. ಇನ್ನು ಯಡ್ಡಿ ಇರುವ ತನಕ ಲಿಂಗಾಯತರು ಬಿಜೆಪಿಯನ್ನು ಬಿಟ್ಟು ಕದಲುವುದು ಕಷ್ಟ. ಒಮ್ಮೆ ಬಿಜೆಪಿಯಿಂದ ಹೊರಗೆ ಹೋಗಿ ಕೆಜೆಪಿ ಎನ್ನುವ ಪಕ್ಷ ಕಟ್ಟಿದ್ದರು ಎನ್ನುವುದು ಬಿಟ್ಟರೆ ರಾಜ್ಯದ ಕಾರ್ಯಕರ್ತರು ಅವರ ವಿರುದ್ಧ ಅಪಸ್ವರ ಎತ್ತುವಂತಹ ಪ್ರಸಂಗ ಇಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾಳು ಯಡ್ಡಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅಗ್ರಗಣ್ಯ ನಾಯಕ. ಮೀಸಲಾತಿಯ ವಿಷಯದಲ್ಲಿ ಲಿಂಗಾಯತರಿಗೆ ಅವರ ಪಾಲಿನ ಒಂದಿಷ್ಟು ಹೆಚ್ಚಿನ ಹಕ್ಕು ಕೊಡಿಸಿ ಸಮಾಧಾನ ಕೂಡ ಮಾಡಿದ್ದಾರೆ. ಇದರಿಂದ ಅಧಿಕಾರಕ್ಕೆ ಬರುವ ಅಕಾಂಕ್ಷೆಯನ್ನು ಕಳೆದುಕೊಂಡಿರುವ ಕಾಂಗ್ರೆಸ್ಸಿಗರು ಈಗ ಕಲ್ಲು ಬಿಸಾಡುವ ಡ್ರಾಮ ಮಾಡಿದ್ದಾರೆ. ಅದನ್ನು ಬಂಜಾರ ಸಮುದಾಯದವರ ಹಣೆಗೆ ಕಟ್ಟಿದ್ದಾರೆ. ಬಂಜಾರ ಸಮುದಾಯದವರು ಮುಗ್ಧರು. ಶ್ರಮಜೀವಿಗಳು. ಅವರು ಸುಮ್ಮಸುಮ್ಮನೆ ಕಲ್ಲು ಬಿಸಾಡಿ ಅಶಾಂತಿ ಸೃಷ್ಟಿಸುವವರಲ್ಲ. ಅವರನ್ನು ಬಳಸಿ ಆಟ ಆಡಲು ನೋಡುತ್ತಿರುವ ಕಾಂಗ್ರೆಸ್ ಈಗ ಸದ್ಯ ಗೊಂಲದಲ್ಲಿದೆ. ಇನ್ನು ಮುಸ್ಲಿಮರಿಗೆ ಆರ್ಥಿಕವಾಗಿ ಹಿಂದುಳಿದವರ ಕೋಟಾದಲ್ಲಿ ಹಾಕಿರುವುದರಿಂದ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣ ಹೀಗೆ ಬೇರೆ ವರ್ಗದವರು ಕೋಪಗೊಳ್ಳುತ್ತಾರೆ ಎನ್ನುವ ಕಾಂಗ್ರೆಸ್ ನಿರೀಕ್ಷೆ ಕೂಡ ಹುಸಿಯಾಗಿದೆ!
Leave A Reply