ನಿಲ್ಲಿಸಿ ಗೆಲ್ಲಿಸುವಂತಹ ಯಾವುದೇ ಕ್ಷೇತ್ರ ಅವರಿಗೆ ಉಳಿದಿಲ್ಲ!
![](https://tulunadunews.com/wp-content/uploads/2023/10/IMG-20231009-WA0018-960x640.jpg)
ಕೋಳಿಯನ್ನು ಕೇಳಿ ಮಸಾಲೆ ರುಬ್ಬುವ ಅಗತ್ಯವಿಲ್ಲ ಎನ್ನುವ ಗಾದೆಯನ್ನು ಯಾರಾದರೂ ಡಿವಿ ಸದಾನಂದ ಗೌಡರಿಗೆ ತಕ್ಷಣ ಹೇಳಿಬಿಡುವುದು ಒಳ್ಳೆಯದು. ಇಲ್ಲದೇ ಹೋದರೆ ಜಾತ್ಯಾತೀತ ಜನತಾದಳದೊಂದಿಗೆ ಯಾವ ಗಮ್ ಹಾಕಿ ಭಾರತೀಯ ಜನತಾ ಪಾರ್ಟಿಯನ್ನು ಜೋಡಿಸಲು ಕೇಂದ್ರದಲ್ಲಿ ಪ್ರಯತ್ನ ನಡೆಸಲಾಗಿದೆಯೋ ಅಲ್ಲಿ ಸಮಸ್ಯೆಯಾಗುತ್ತದೆ. ನಮ್ಮ ಜೊತೆ ಸಮಾಲೋಚನೆ ನಡೆಸದೇ ಜೆಡಿಎಸ್ ಜೊತೆ ಮೈತ್ರಿ ಮಾಡಲಾಗಿದೆ. ಇದಕ್ಕೆ ಬಿಜೆಪಿಯ 75 ಶೇಕಡಾ ಜನರಿಗೆ ಸಹಮತಿಯಿಲ್ಲ ಎನ್ನುವ ಅರ್ಥದ ಮಾತುಗಳನ್ನು ಸದ್ದು ಆಡಿದ್ದಾರೆ. ಇದರಿಂದ ಪಕ್ಷಕ್ಕೆ ತೊಂದರೆಯಾಗುತ್ತದೆ. ಅವರಿಗೆ ಲೋಕಸಭೆಯಲ್ಲಿ ಇರುವುದು ಒಂದೇ ಸೀಟು. ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಬಿಜೆಪಿಗೆ ಲಾಭ ಇಲ್ಲ ಎನ್ನುವುದು ಡಿವಿ ಅಭಿಪ್ರಾಯ. ಹಾಗೆ ನೋಡುತ್ತಾ ಹೋದರೆ ಕಳೆದ ಹದಿನೈದು ವರ್ಷಗಳಿಂದ ಡಿವಿಯವರಿಂದ ಪಕ್ಷಕ್ಕೂ ಏನೂ ಲಾಭ ಇಲ್ಲ. ಅವರು ಶಾಸಕರಾಗಿದ್ದಾಗಲೂ ಏನೂ ಲಾಭ ಆಗಲಿಲ್ಲ. ನಂತರ ಅವರನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸಂಸದರನ್ನಾಗಿ ಮಾಡಲಾಯಿತು. ಅದರಿಂದ ಜಿಲ್ಲೆಗೂ, ಪಕ್ಷಕ್ಕೂ ಲಾಭ ಆಗಲಿಲ್ಲ. ಇನ್ನೊಮ್ಮೆ ಅಲ್ಲಿಯೇ ನಿಲ್ಲಿಸಿದರೆ ಸೋಲ್ತಾರೆ ಎಂದು ಪಕ್ಷದ ಹಿರಿಯರಿಗೆ ಅನಿಸಿತು. ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಶಿಫ್ಟ್ ಮಾಡಲಾಯಿತು. ಅಲ್ಲಿನ ಟರ್ಮ್ ಮುಗಿದ ಬಳಿಕ ಅಲ್ಲಿಯೇ ಟಿಕೆಟ್ ಕೊಟ್ಟರೆ ಸೋಲು ಗ್ಯಾರಂಟಿ ಎಂದು ಮತ್ತೊಮ್ಮೆ ಪಕ್ಷಕ್ಕೆ ಅನಿಸಿತು. ಮುಂದಿನ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ನಿಲ್ಲಿ ಎನ್ನಲಾಯಿತು. ಈಗ ಅಲ್ಲಿಯೂ ನಿಂತರೆ ಗೆಲ್ಲುವುದು ಕಷ್ಟ ಎನ್ನುವ ಪರಿಸ್ಥಿತಿ ಇದೆ. ಈಗ ಅವರಿಗೆ ನಿಲ್ಲಿಸಿ ಗೆಲ್ಲಿಸುವಂತಹ ಯಾವುದೇ ಕ್ಷೇತ್ರ ಉಳಿದಿಲ್ಲ. ಆದ್ದರಿಂದ ಅವರಿಗೆ ಸುಳ್ಯ ಅಥವಾ ಮಡಿಕೇರಿಯ ಬಸ್ ಟಿಕೆಟ್ ಕೊಟ್ಟು ಮನೆಗೆ ಕಳುಹಿಸೋಣ ಎನ್ನುವ ಯೋಚನೆ ಹೈಕಮಾಂಡಿಗೆ ಬಂದಿದೆ.
ವಿಫಲ ಕೇಂದ್ರ ಸಚಿವ ಎನ್ನುವ ಇಮೇಜ್!
ಮೊದಲು ಇವರು ಏನಾದರೂ ಸಾಧನೆ ಮಾಡಿ ಗುಡ್ಡೆ ಹಾಕುತ್ತಾರೆ ಎನ್ನುವ ಭರವಸೆಯಿಂದ ಇವರಿಗೆ ಅತ್ಯಂತ ಪ್ರಮುಖ ಖಾತೆ ರೈಲ್ವೆ ಕೊಡಲಾಗಿತ್ತು. ರೈಲ್ವೆ ಸಚಿವರಾದ ಕೆಲವೇ ದಿನಗಳಲ್ಲಿ ಇವರು ಮಾಡಿದ ಕೆಲಸ ಕೇಂದ್ರದ ಮುಖಂಡರಿಗೆ ಗೊತ್ತಾಗಿ ಹೋಯಿತು. ಕೊನೆಗೆ ಆಟಕ್ಕಿಲ್ಲದ ಖಾತೆ ಕೊಟ್ಟು ಕೊನೆಗೆ ಅದನ್ನು ಕೂಡ ಕಿತ್ತುಕೊಂಡು ಈಗ ಬೆಂಗಳೂರಿನಲ್ಲಿಯೇ ಇದ್ದು ಬಿಡಿ ಎಂದು ಕಳುಹಿಸಿಕೊಡಲಾಗಿದೆ. ಒಂದಷ್ಟರ ಮಟ್ಟಿಗೆ ಡಿವಿ ಕಳೆದ 15 ವರ್ಷಗಳಿಂದ ಪಕ್ಷಕ್ಕೆ ಭಾರವೇ ಆಗಿದ್ದಾರೆ. ಆದರೂ ಏನೋ ಆವತ್ತಿನಿಂದ ಇದ್ದಾರೆ ಎನ್ನುವ ಕಾರಣಕ್ಕೆ ಎಲ್ಲಿಯಾದರೂ ಒಂದು ಸ್ಥಾನ ಕೊಟ್ಟು ಉಳಿಸಲಾಗಿದೆ. ಪುತ್ತೂರಿನಿಂದ ಬೆಂಗಳೂರು ಉತ್ತರದ ತನಕ, ಶಾಸಕನಿಂದ ಸಂಸದ, ಸಿಎಂ, ಕೇಂದ್ರ ಸಚಿವ ಎಲ್ಲವನ್ನು ಡಿವಿ ಪಡೆದುಕೊಂಡದ್ದು ಕೇವಲ ಪಕ್ಷದ ಭಿಕ್ಷೆಯೇ ಹೊರತು ಸ್ವಯೋಗ್ಯತೆಯಿಂದ ಅಲ್ಲ. ಒಂದು ವೇಳೆ ಅವರಿಗೆ ತಮ್ಮ ಸ್ಥಾನಮಾನದಿಂದ ಪಕ್ಷಕ್ಕೆ ತುಂಬಾ ಲಾಭವಾಗಿದೆ ಎಂದು ಅನಿಸಿದರೆ ಹೇಳಿಬಿಡಲಿ.
ಡಿವಿ 2006 ರಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರು. 2008 ರಲ್ಲಿ ಬಿಜೆಪಿ ಚುನಾವಣೆಗೆ ಹೋದಾಗ 110 ಸೀಟುಗಳನ್ನು ಪಕ್ಷ ಪಡೆದುಕೊಂಡಿರಬಹುದು. ಆದರೆ ಅದಕ್ಕೂ ಡಿವಿ ಸದಾನಂದ ಗೌಡರ ಅಧ್ಯಕ್ಷತೆಗೂ ಏನೂ ಸಂಬಂಧವಿಲ್ಲ. ಯಡ್ಡಿಗೆ ಕುಮಾರಣ್ಣ ಸಿಎಂ ಸ್ಥಾನ ಕೊಡದೆ ಮೋಸ ಮಾಡಿದರು ಎನ್ನುವ ಕಾರಣ ನಂತರ ಯಡ್ಡಿ ಏಳು ದಿನ ಸಿಎಂ ಆದದ್ದು ಎಲ್ಲವನ್ನು ಗಮನಿಸಿದ ಮತದಾರ 2008 ರಲ್ಲಿ 110 ಸೀಟು ಬಿಜೆಪಿಗೆ ಕೊಟ್ಟಿದ್ದ. ಒಟ್ಟಿನಲ್ಲಿ ಡಿವಿ ಏನೂ ಮಾಡದಿದ್ದರೂ ಶಾಸಕನಿಂದ ಕೇಂದ್ರ ರೈಲ್ವೆ ಮಂತ್ರಿಯ ತನಕ ಎಲ್ಲವನ್ನು ಅನುಭವಿಸಿದರು. ಅದರ ನಡುವೆ ಏನೇನೋ ಆಯಿತು. ಅದು ಪ್ರಪಂಚಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಗೊತ್ತಾಯಿತು. ಇಂತಹ ಡಿವಿ ಜೆಡಿಎಸ್ ಮೈತ್ರಿ ಬಗ್ಗೆ ರಾಜ್ಯ ನಾಯಕರ ಬಳಿ ಕೇಳಬೇಕಿತ್ತು ಎನ್ನುತ್ತಿದ್ದಾರೆ. ಯಾವ ವ್ಯಕ್ತಿ ಎಲ್ಲಿ ಒಂದು ಅವಧಿ ಮುಗಿಸಿದಾಗ ಮತ್ತೆ ಅಲ್ಲಿಯೇ ಗೆಲ್ಲುವ ಲಕ್ಷಣ ಇಲ್ಲದೆ ರಾಜಕೀಯ ಮಾಡುತ್ತಿರುವಾಗ ಅಂತವರು ಪಕ್ಷದ ಭಿಕ್ಷೆಯಲ್ಲಿ ಇದ್ದಾರೆ ಹೊರತು ಇಂತವರನ್ನು ಕೇಳಿ ಪಕ್ಷ ನಡೆಸಲಾಗುವುದಿಲ್ಲ ಎನ್ನುವುದು ಇವರಿಗೆ ನೆನಪಿದ್ದರೆ ಸಾಕು.
ರಾಜ್ಯದ ಸೋಲಿಗೆ ನಿಮ್ಮವರೇ ಕಾರಣ ಅಲ್ವಾ ಡಿವಿ!
ಇನ್ನು ಪಕ್ಷದ ರಾಜ್ಯಾಧ್ಯಕ್ಷರು ನಿಷ್ಕ್ರೀಯರಾಗಿದ್ದಾರೆ ಎಂದು ಡಿವಿ ಮೂದಲಿಸಿದ್ದಾರೆ. ಮೇನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಲು ಯಾರು ಕಾರಣ ಎನ್ನುವುದು ಡಿವಿಗೆ ಆಂತರಿಕವಾಗಿಯೂ ಗೊತ್ತಿಲ್ಲದಿದ್ದರೆ ಅವರ ರಾಜಕೀಯ ಅನುಭವವನ್ನು ಕಸದ ಬುಟ್ಟಿಗೆ ಬಿಸಾಡುವುದು ಒಳ್ಳೆಯದು. ನಳಿನ್ ಅವರು ರಾಜ್ಯಾಧ್ಯಕ್ಷರಾಗಿದ್ದಾಗ ನಡೆದ ಬಹುತೇಕ ಎಲ್ಲಾ ಉಪಚುನಾವಣೆಗಳನ್ನು ಪಕ್ಷ ಗೆದ್ದಿದೆ. ಗ್ರಾಮ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಗೆದ್ದಿದ್ದಾರೆ. ಇನ್ನು ಒಬ್ಬ ರಾಜ್ಯಾಧ್ಯಕ್ಷರಾಗಿ ನಳಿನ್ ರಾಜ್ಯಾದ್ಯಂತ ಅತೀ ಹೆಚ್ಚು ಬಾರಿ ಪ್ರತಿ ಜಿಲ್ಲೆಗೂ ಭೇಟಿ ನೀಡಿದ ಇತಿಹಾಸ ಇದೆ. ನಳಿನ್ ಅವರ ಪಕ್ಷದ ಕೆಲಸಕಾರ್ಯಗಳ ಬಗ್ಗೆ ಕೇಂದ್ರದ ಮುಖಂಡರಿಗೆ ಮೆಚ್ಚುಗೆ ಇದೆ. ಆದರೆ ಅಧಿಕಾರ ಎಂಬ ಮಾಯಾಂಗನೆಯಿಂದ ದೂರವಾಗುವ ಭೀತಿಯಲ್ಲಿ ವಿರಹ ವೇದನೆಯನ್ನು ಆರು ತಿಂಗಳು ಇರುವಾಗಲೇ ಅನುಭವಿಸುತ್ತಿರುವ ಡಿವಿ ಮೈಯೆಲ್ಲ ಪರಚಿಕೊಳ್ಳುತ್ತಿದ್ದಾರೆ!
Leave A Reply