ರಾಜಕಾರಣಿಯಾಗುವವರಿಗಾಗಿ ರಾಜ್ಯದಲ್ಲಿ ರಾಜಕೀಯ ಕಾಲೇಜು ತೆರೆಯುವ ಚಿಂತನೆ!

ಯುವಕ, ಯುವತಿಯರು ಯಾವುದಾದರೂ ಕ್ಷೇತ್ರವನ್ನು ಆಯ್ಕೆ ಮಾಡುವಾಗ ಅದಕ್ಕೆ ಸಂಬಂಧಿಸಿದ ಶಿಕ್ಷಣ ಪಡೆಯಲು ಅಂತಹ ತರಬೇತಿಯನ್ನು ಕೊಡುವಂತಹ ಶಿಕ್ಷಣ ಸಂಸ್ಥೆಗಳನ್ನು ಸೇರುತ್ತಾರೆ. ಅದು ಇಂಜಿನಿಯರಿಂಗ್ ನಿಂದ ಫ್ಯಾಶನ್ ಕ್ಷೇತ್ರವನ್ನು ಸೇರಿಕೊಂಡು ಏರೋನೋಟಿಕ್ಸ್ ತನಕ ಪ್ರತಿ ಕ್ಷೇತ್ರಕ್ಕೂ ಶಿಕ್ಷಣ ಸಂಸ್ಥೆಗಳಿವೆ. ಆದರೆ ದೇಶವನ್ನು ಆಳುವವರಿಗಾಗಿಯೇ, ಇಷ್ಟು ದೊಡ್ಡ ಕ್ಷೇತ್ರವನ್ನು ಸೇರುವವರಿಗಾಗಿ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳು ಇಲ್ಲದಿರುವುದು ಮಾತ್ರ ಸೋಜಿಗ. ರಾಜಕೀಯ ಕ್ಷೇತ್ರಕ್ಕೆ ಸೇರುವವರಿಗಾಗಿ ಯಾವುದೇ ಪೂರ್ವಾಪರ ಕೋರ್ಸ್ ಗಳು ಇಲ್ಲದೇ ಇರುವುದರಿಂದ ದೇಶದಲ್ಲಿ ಉತ್ತಮ ರಾಜಕಾರಣಿಗಳ ಕೊರತೆ ಇದೆಯೇ ಎನ್ನುವ ಪ್ರಶ್ನೆಗೆ ಸೂಕ್ತ ಉತ್ತರ ಇಲ್ಲವಾದರೂ ರಾಜಕೀಯ ಸೇರುವವರಿಗಾಗಿಯೇ ಪ್ರತ್ಯೇಕ ಕಾಲೇಜುಗಳ ಅಗತ್ಯ ಇರುವುದು ನಿಜ.
ರಾಜಕಾರಣ ಉದ್ಯೋಗ ಅಲ್ಲ ಎಂದು ರಾಜಕಾರಣಿಗಳು ಎಷ್ಟೇ ಹೇಳಿಕೊಂಡರೂ ಇವತ್ತಿನ ಕಾಲದಲ್ಲಿ ಸಕ್ರಿಯ ರಾಜಕಾರಣದಲ್ಲಿ ಇರುವವರಿಗೆ ಅದು ಉದ್ಯೋಗವೇ ಆಗಿ ಹೋಗಿದೆ. ಒಂದು ವೇಳೆ ಉದ್ಯೋಗ ಅಲ್ಲ ಎಂದು ಅಂದುಕೊಂಡರೂ ಪೂರ್ವ ತರಬೇತಿ ಪಡೆದುಕೊಂಡು ಆ ಕ್ಷೇತ್ರಕ್ಕೆ ಕಾಲಿಟ್ಟರೆ ಅದರಿಂದ ಅವರಿಗೂ, ನಾಗರಿಕರಿಗೂ ಉತ್ತಮ ಪ್ರಯೋಜನ ಆಗುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಚಿಂತನೆ ನಡೆಸಿದಂತೆ ಕಾಣುತ್ತದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ವಿಧಾನಸೌಧ ಮಾರ್ಗದರ್ಶಿ ಪ್ರವಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ವಿದ್ಯಾರ್ಥಿಗಳಿಗೆ ವಿಜ್ಞಾನ, ಕಾನೂನು, ಹಣಕಾಸು ಹೀಗೆ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ವಿಷಯ ಕೋರ್ಸುಗಳ ಅಧ್ಯಯನಕ್ಕೆ ಅವಕಾಶಗಳಿವೆ. ಅದರೆ ರಾಜಕೀಯ ಕ್ಷೇತ್ರ ಪ್ರವೇಶಿಸುವವರಿಗೆ ಅಧ್ಯಯನಕ್ಕೆ ಅಷ್ಟು ಅವಕಾಶಗಳಿಲ್ಲ. ಹಾಗಾಗಿ ಉತ್ತಮ ರಾಜಕಾರಣಿಗಳನ್ನು ಹೊರತರಲು ರಾಜಕೀಯ ಕಾಲೇಜು ಆರಂಭಿಸಿ ಸೂಕ್ತ ತರಬೇತಿ ನೀಡುವ ಚಿಂತನೆ ಇದೆ. ಕಾನೂನಾತ್ಮಕವಾಗಿ ಚರ್ಚೆ ನಡೆಸಿ ನಿರ್ಧಾರ ಮಾಡಲಾಗುವುದು ಎಂದರು.
ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಧ್ವನಿಗೂಡಿಸಿ ನಾನು ಸ್ಪೀಕರ್ ಸೇರಿ ರಾಜಕೀಯ ಅಧ್ಯಯನಕ್ಕೆ ಕಾಲೇಜು ಆರಂಭಿಸುವ ಚಿಂತನೆ ಮಾಡಿದ್ದೆವು. ಅದು ಇನ್ನೂ ಒಂದು ಹಂತಕ್ಕೆ ಬರಬೇಕಿದೆ. ಕಾನೂನು ಸಚಿವ ಎಚ್ ಕೆ ಪಾಟೀಲ್, ಇತರರೊಂದಿಗೆ ಚರ್ಚಿಸಿ ನಮ್ಮ ಮಕ್ಕಳಿಗೆ ರಾಜಕೀಯ ಕ್ಷೇತ್ರದಲ್ಲಿಯೂ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಯಾರ ಕುಟುಂಬದಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು ಇರುತ್ತಾರೋ ಅಂತವರಿಗೆ ಮನೆಯಲ್ಲಿಯೇ ಪ್ರಾಕ್ಟಿಕಲ್ ಟ್ರೇನಿಂಗ್ ಇರುತ್ತದೆ. ಅಂತವರಿಗೆ ಹೊಸದಾಗಿ ಕಾಲೇಜಿನಲ್ಲಿ ಕಲಿಯುವ ಅಗತ್ಯ ಇರುವುದಿಲ್ಲ. ಆದರೆ ವಂಶಪಾರಂಪರೆಯಲ್ಲಿ ಯಾರೂ ರಾಜಕೀಯ ಸೇರದೇ ಇದ್ದಾಗ ಅಂತಹ ಕುಟುಂಬದಿಂದ ಯಾರಿಗಾದರೂ ರಾಜಕೀಯ ಕ್ಷೇತ್ರಕ್ಕೆ ಬರಬೇಕಾದರೆ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಿಷ್ಟು ಬೇಸಿಕ್ ಶಿಕ್ಷಣ ಸಿಕ್ಕಿದರೆ ರಾಜ್ಯಕ್ಕೆ, ದೇಶಕ್ಕೆ ಪ್ರಯೋಜನವಾದಿತು ಎನ್ನುವುದು ನಂಬಿಕೆ.