ಬೆಟ್ಟಿಂಗ್ ಇಲ್ಲದೇ ಇಸ್ಪೀಟ್ ಆಡುವುದು ನೈತಿಕವಾಗಿ ತಪ್ಪಲ್ಲ – ಸುಪ್ರೀಂಕೋರ್ಟ್

ಬೆಟ್ಟಿಂಗ್ ಉದ್ದೇಶವಿಲ್ಲದೇ ಇಸ್ಪೀಟ್ ಆಡುವುದು ನೈತಿಕವಾಗಿ ತಪ್ಪಲ್ಲ ಎಂದು ಕರ್ನಾಟಕದ ವ್ಯಕ್ತಿಯೊಬ್ಬರ ಪ್ರಕರಣದ ತೀರ್ಪಿನ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ವಿಚಾರಣೆ ನಡೆಸಿದ ಸುಪ್ರೀಂ ದ್ವಿಸದಸ್ಯ ಪೀಠ ” ಹಲವು ರೀತಿಯ ಇಸ್ಪೀಟ್ ಆಟಗಳಿವೆ. ಪ್ರತಿಯೊಂದು ನೈತಿಕ ಅಧ:ಪತನವನ್ನು ಒಳಗೊಂಡಿರುತ್ತದೆ ಎಂದು ಒಪ್ಪಿಕೊಳ್ಳುವುದು ಕಷ್ಟ. ವಿಶೇಷವಾಗಿ ಮನೋರಂಜನೆ ಅಥವಾ ಬೆಟ್ಟಿಂಗ್ ಅಂಶವಿಲ್ಲದೇ ಇಸ್ಪೀಟ್ ಆಟ ಮನರಂಜನೆಯ ಮೂಲ ಎಂದು ಸ್ವೀಕರಿಸಲಾಗುತ್ತದೆ” ಎಂದಿದೆ.
ಸರಕಾರಿ ಪಿಂಗಾಣಿ – ಕಾರ್ಖಾನೆ ನೌಕರರ ವಸತಿ ಸಹಕಾರಿ ಸಂಘ ಲಿ. ನಿರ್ದೇಶಕರ ಮಂಡಳಿಗೆ ಆಯ್ಕೆಯಾಗಿದ್ದ ಹನುಮಂತರಾಯಪ್ಪ ವೈಎಸ್ ಕೆಲವರೊಂದಿಗೆ ಇಸ್ಪೀಟ್ ಆಡುತ್ತಿದ್ದಾಗ ಸಿಕ್ಕಿಬಿದ್ದಿದ್ದರು. 200 ರೂ ದಂಡ ವಿಧಿಸಲಾಗಿತ್ತು. ಈ ಬೆನ್ನಲ್ಲೇ ಹನುಮಂತರಾಯಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಹೀಗಾಗಿ ವಜಾಗೊಳಿಸಬೇಕು ಎಂದು ಚುನಾವಣೆಯಲ್ಲಿ ಅವರ ವಿರುದ್ಧ ಸೋತಿದ್ದ ಬಿ. ರಂಗನಾಥ್ ಆಗ್ರಹಿಸಿದ್ದರು.
ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆಯ ಸೆಕ್ಷನ್ ಅಡಿ ಸದಸ್ಯತ್ವ ರದ್ದಾಗಿತ್ತು. ಹೈಕೋರ್ಟ್ ತೀರ್ಪು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಹನುಮಂತರಾಯಪ್ಪ ಸುಪ್ರೀಂ ಮೊರೆ ಹೋಗಿದ್ದರು. ಅಲ್ಲದೇ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪು ರದ್ದುಗೊಳಿಸಿ, ಹನುಮಂತಪ್ಪ ಆಯ್ಕೆ ಮಾನ್ಯ ಮಾಡಿದೆ. ಅವರ ನಿಗದಿತ ಅಧಿಕಾರವಧಿ ಪೂರ್ಣಗೊಳ್ಳುವ ತನಕ ಮಂಡಳಿಯಲ್ಲಿ ಮುಂದುವರೆಯಲಿದ್ದಾರೆ ಎಂದು ತೀರ್ಪು ನೀಡಿದೆ.
ಈ ತೀರ್ಪು ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಬಹಳ ದೊಡ್ಡ ದೂರಗಾಮಿ ಪರಿಣಾಮವನ್ನು ಉಂಟು ಮಾಡಲಿದೆ. ಸಾಮಾನ್ಯವಾಗಿ ನೈತಿಕತೆ ಎನ್ನುವ ಶಬ್ದವನ್ನು ಬಳಸಿ ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರನ್ನು ಹಣಿಯಲು ಅವರ ವಿರೋಧಿಗಳು ಷಡ್ಯಂತ್ರ ನಡೆಸುತ್ತಲೇ ಇರುತ್ತಾರೆ. ಆದರೆ ಈಗ ತೀರ್ಪಿನಿಂದ ಸುಪ್ರೀಂಕೋರ್ಟ್ ನೈತಿಕತೆಯ ವಿಷಯದಲ್ಲಿ ಸ್ಪಷ್ಪತೆಯನ್ನು ನೀಡಿದೆ. ಯಾವುದೇ ಸಣ್ಣ ಪ್ರಮಾಣದ ಇಂತಹ ಕೃತ್ಯಗಳು ಯಾವುದೇ ಬೇರೆ ವ್ಯಕ್ತಿಗಳಿಗೆ ಹಾನಿ ಮಾಡದೇ, ಸಮಾಜದಲ್ಲಿ ಅಶಾಂತಿ ಸೃಷ್ಟಿಸದೇ ಇದ್ದರೆ ಅದನ್ನು ನೈತಿಕ ಅಧ:ಪತನದ ದೃಷ್ಟಿಯಿಂದ ನೋಡುವ ಅಗತ್ಯವಿಲ್ಲ. ಯಾವುದೇ ಹಣದ ಪಾತ್ರವಿಲ್ಲದೇ, ಗ್ಯಾಂಬ್ಲಿಂಗ್ ನಡೆಯದೇ ಇದ್ದರೆ ಇಸ್ಪೀಟ್ ಆಟ ಕೇವಲ ಮನೋರಂಜನೆಗಾಗಿ ಮಾತ್ರ ಆಡಿದರೆ ಅದನ್ನು ಅನೈತಿಕತೆ ಎಂದು ಹೇಳಲು ಆಗುವುದಿಲ್ಲ ಎಂದಿದೆ.
ಸುಪ್ರೀಂ ಈ ತೀರ್ಪು ಸಣ್ಣ ವಿಷಯಗಳಿಂದಾಗಿ ತಮ್ಮ ಹುದ್ದೆಗಳನ್ನು ಕಳೆದುಕೊಳ್ಳುವ ಸಾರ್ವಜನಿಕ ವ್ಯಕ್ತಿಗಳ ಭವಿಷ್ಯದ ದೃಷ್ಟಿಯಿಂದ ಬಹಳ ದೊಡ್ಡ ಪರಿಣಾಮ ಬೀರಲಿದೆ. ಇಂತಹುದೇ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಬೇರೆ ವ್ಯಕ್ತಿಗಳಿಗೂ ಈ ತೀರ್ಪಿನಿಂದ ಒಂದಿಷ್ಟು ನಿರಾಳತೆ ಕಾಡಬಹುದು. ಈ ತೀರ್ಪು ಇಂತಹುದೇ ನೈತಿಕತೆಯ ವಿಷಯದಲ್ಲಿ ಪ್ರಕರಣವನ್ನು ಎದುರಿಸುತ್ತಿರುವವರಿಗೆ ದೊಡ್ಡ ಆಶಾಭಾವನೆಯನ್ನು ನೀಡಿದೆ.
ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಕೊಟ್ಟ ತೀರ್ಪಿನಲ್ಲಿ ಸ್ಪಷ್ಟ ಸಂದೇಶವಿದೆ. ಯಾವುದೇ ವ್ಯಕ್ತಿ ಭ್ರಷ್ಟತೆ, ಕ್ರಿಮಿನಲ್ ಉದ್ದೇಶ ಇಲ್ಲದೇ ಯಾರಿಗೂ ತೊಂದರೆ ನೀಡದೇ, ಮನೋರಂಜನೆಗಾಗಿ ಆಡಿದ ಇಸ್ಪೀಟ್ ನಿಂದಾಗಿ ಆತನನ್ನು ನೈತಿಕತೆ ಆಧಾರದಲ್ಲಿ ಯಾವುದೇ ವಿಷಯದಿಂದ ಹೊರಗೆ ಹಾಕಲು ಆಗುವುದಿಲ್ಲ. ಈ ತೀರ್ಪು ದೇಶದ ನ್ಯಾಯಾಂಗದ ದೃಷ್ಟಿಕೋನವನ್ನು ಸಾರ್ವಜನಿಕ ಸ್ಪಷ್ಟ ಪಡಿಸಿದೆ.