ಒಬ್ಬ ಮುಗ್ಧನನ್ನು ಕೊಲ್ಲುವುದು ಇಡೀ ಮಾನವ ಜನಾಂಗವನ್ನೇ ಕೊಂದಂತೆ ಎಂದು ಕುರಾನ್ ಹೇಳಿದೆ – ಓವೈಸಿ

ಒಬ್ಬ ಮುಗ್ಧನನ್ನು ಕೊಲ್ಲುವುದು ಎಂದರೇ ಇಡೀ ಮಾನವ ಜನಾಂಗವನ್ನೇ ಕೊಂದಂತೆ ಎಂದು ಕುರಾನ್ ಹೇಳುತ್ತದೆ ಎಂದು ಹೈದ್ರಾಬಾದ್ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರ ಮುಖವನ್ನು ಓವೈಸಿ ತೆರೆದಿಟ್ಟಿದ್ದಾರೆ. ಯಾಕೆಂದರೆ ಪೆಹಲ್ಗಾಂನಲ್ಲಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿ ಹತ್ಯಾಕಾಂಡ ನಡೆಸಿದ ಭಯೋತ್ಪಾದಕರಿಗೆ ಈ ಮೂಲಕ ಅವರ ಧರ್ಮವನ್ನು ಓವೈಸಿ ನೆನಪಿಸಿದ್ದಾರೆ.
ಆಪರೇಶನ್ ಸಿಂಧೂರ ಬಳಿಕ, ಭಾರತದ ಸಂಸದರ ನಿಯೋಗಗಳು ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಗೆ ತೆರಳಿ ಪಾಕಿಸ್ತಾನದ ಹಣೆಬರವನ್ನು ತೆರೆದಿಡುತ್ತಿದ್ದು, ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಸ್ಪಷ್ಟಪಡುತ್ತಿವೆ. ಭಾರತೀಯ ಜನತಾ ಪಾರ್ಟಿಯ ಸಂಸದ ಬೈಜಯಂತ್ ಪಾಂಡಾ ನೇತೃತ್ವದ ಭಾರತೀಯ ನಿಯೋಗ ಬಹ್ರೇನ್ ತಲುಪಿದೆ. ಈ ವೇಳೆ ಆ ನಿಯೋಗದಲ್ಲಿರುವ ಅಸಾದುದ್ದೀನ್ ಓವೈಸಿ ಪಾಕಿಸ್ತಾನಕ್ಕೆ ತೀಕ್ಣ ಚಾಟಿಯೇಟು ಬೀಸಿದ್ದಾರೆ.
ಆ ಭಯೋತ್ಪಾದಕರು ಭಾರತದಲ್ಲಿ ಕೊಂದದ್ದು ನಮ್ಮ ದೇಶದ ಮುಗ್ಧ ಜನರನ್ನು. ಕೊಲ್ಲುವಾಗ ಧರ್ಮದ ವಿಚಾರ ತಂದಿದ್ದಾರೆ. ಜನರನ್ನು ಕೊಲ್ಲುವುದನ್ನು ಸಮರ್ಥಿಸಲು ಧರ್ಮವನ್ನು ಬಳಸಿಕೊಂಡಿದ್ದಾರೆ. ಇಸ್ಲಾಂ ಭಯೋತ್ಪಾದನೆಯನ್ನು ಖಂಡಿಸುತ್ತದೆ ಎಂದು ಓವೈಸಿ ಹೇಳಿದ್ದಾರೆ.
ನಮ್ಮ ರಾಜಕೀಯ ಸಂಬಂಧ ಏನೇ ಇರಲಿ. ನಮ್ಮ ದೇಶದಲ್ಲಿ ಒಮ್ಮತವಿದೆ ಎಂದು ಅಸಾದುದ್ದೀನ್ ಓವೈಸಿ ಹೇಳಿದರು. ನಮಗೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ. ಆದರೆ ನಮ್ಮ ದೇಶದ ಸಮಗ್ರತೆಯ ವಿಷಯ ಬಂದಾಗ, ನಮ್ಮ ನೆರೆಯ ದೇಶವು ಇದನ್ನು ಅರ್ಥ ಮಾಡಿಕೊಳ್ಳಲು ಇದು ಸರಿಯಾದ ಸಮಯ. ಪಾಕಿಸ್ತಾನವನ್ನು ಪೈನಾನ್ಸಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಇದರ ಬೂದು ಪಟ್ಟಿಗೆ ಮರಳಿ ಸೇರಿಸುವಲ್ಲಿ ಬಹ್ರೇನ್ ಸರಕಾರ ನಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸಿದ್ದೇವೆ ಎಂದರು.
ಪ್ರತಿಯೊಬ್ಬ ಭಾರತೀಯನ ಜೀವವನ್ನು ರಕ್ಷಿಸಲು ನಮ್ಮ ಸರಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಹೇಳಿದರು. ಮುಂದೊಮ್ಮೆ ಈ ರೀತಿಯ ಕೃತ್ಯಗಳನ್ನು ಎಸಗಲು ಧೈರ್ಯ ಮಾಡಿದರೆ, ಅವರ ನಿರೀಕ್ಷೆಗೂ ಮೀರಿರುವ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭಾರತೀಯ ನಿಯೋಗಗಳು ಪ್ರಪಂಚದಾದ್ಯಂತ 33 ದೇಶಗಳಿಗೆ ಭೇಟಿ ನೀಡುತ್ತಿವೆ ಮತ್ತು ಪಾಕಿಸ್ತಾನದ ನೈಜ ಮುಖವನ್ನು ಜಗತ್ತಿಗೆ ಬಹಿರಂಗಪಡಿಸುತ್ತಿವೆ.
ಓವೈಸಿ ತಮ್ಮ ನಿಯೋಗ ಭೇಟಿ ನೀಡಿದ ಕಡೆಗಳಲ್ಲೆಲ್ಲಾ ಪಾಕಿಸ್ತಾನದ ಕಪಟತೆಯನ್ನು ತೆರೆದಿಡುತ್ತಾ ಹೋಗುತ್ತಿದ್ದಾರೆ. ಅದರೊಂದಿಗೆ ಧರ್ಮದ ಹೆಸರಿನಲ್ಲಿ ನಡೆಸುತ್ತಿರುವ ದುರುಳತೆಯನ್ನು ಜಗತ್ತಿನ ಮುಂದಿಡುತ್ತಿದ್ದಾರೆ. ಓವೈಸಿ ಹೀಗೆ ಪಾಕಿಸ್ತಾನವನ್ನು ಲೆಫ್ಟ್ ರೈಟ್ ಮಾಡುತ್ತಿರುವುದರಿಂದ ಜನರಿಗೆ ವಾಸ್ತವ ಬಹಳ ಬೇಗ ತಿಳಿಯುತ್ತದೆ.
Leave A Reply