ಬ್ರೆಡ್ ತಿಂತಿರಾ, ಬುಲೆಟ್ ತಿಂತಿರಾ ನೀವೆ ನಿರ್ಧರಿಸಿ ಎಂದು ಎಚ್ಚರಿಕೆ ಕೊಟ್ಟ ಮೋದಿ!

ನೀವು ಶಾಂತಿಯುತ ಜೀವನ ಬಯಸಿದ್ರೆ ನಿಮ್ಮ ಬ್ರೆಡ್ ತಿನ್ನಿ ಅಥವಾ ನಮ್ಮ ಬುಲೆಟ್ ಗಳು ಯಾವಾಗಲೂ ತಯಾರಾಗಿಯೇ ಇರುತ್ತವೆ. (ಸುಖ್ ಚೆನ್ ಕಿ ಜಿಂದಗಿ ಜಿಯೋ, ರೋಟಿ ಖಾವೋ, ವರ್ನಾ ಮೇರಿ ಗೋಲಿ ತೋ ಹೇ). ಹೀಗೆಂದು ಪಾಕಿಸ್ತಾನದ ಭಯೋತ್ಪಾದಕರಿಗೆ, ಪಾಕ್ ಸೈನ್ಯಕ್ಕೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗುಜರಾತಿನ ಬುಜ್ ಪ್ರದೇಶದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಮಾವೇಶದಿಂದಲೇ ಪಾಕಿಸ್ತಾನದ ನಾಗರಿಕರಿಗೆ ನೇರ ಸಂದೇಶ ನೀಡಿದ ಮೋದಿ, ನಿಮ್ಮ ಪಾಕಿಸ್ತಾನದ ಸರಕಾರ ಮತ್ತು ಸೇನೆ ಭಾರತದಲ್ಲಿ ಭಯೋತ್ಪಾದನೆಗೆ ಪೂರ್ಣ ಬೆಂಬಲ ನೀಡುತ್ತಿದೆ. ಇದರಿಂದ ಅವರ ಆದಾಯ ಹುಟ್ಟುತ್ತದೆ. ಆದ್ದರಿಂದಲೇ ಮುಂದೆ ಆಗಲಿರುವ ಏನೇ ಪರಿಣಾಮಗಳಿಗೆ ಅವರೇ ಹೊಣೆ ಎಂದು ಹೇಳಿದರು.
“ಪಾಕಿಸ್ತಾನದ ನಾಗರಿಕರು ಸ್ವಯಂಸ್ಫೂರ್ತಿಯಿಂದ ಮುಂದೆ ಬಂದು ಅವರ ದೇಶದಲ್ಲಿರುವ ಭಯೋತ್ಪಾದನೆಗೆ ಕೊನೆ ಹಾಡಬೇಕು. ಅದಕ್ಕಾಗಿ ಅಲ್ಲಿನ ಯುವಜನಾಂಗ ಕಂಕಣಬದ್ಧರಾಗಬೇಕು. ಭಾರತ ಗಡಿಯಾಚೆಯ ಭಯೋತ್ಪಾದನೆಯ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅದನ್ನು ಬುಡಸಮೇತ ಕಿತ್ತು ಹಾಕುವ ಸಂಕಲ್ಪ ಹೊಂದಿದೆ” ಎಂದು ಮೋದಿ ಹೇಳಿದರು.
1971 ರ ಭಾರತ- ಪಾಕ್ ಯುದ್ಧದ ಸಂದರ್ಭದಲ್ಲಿ ಪಾಕ್ ಸೇನೆ ಗುಜರಾತಿನ ಬುಜ್ ವಾಯು ಕೇಂದ್ರದ ಮೇಲೆ ದಾಳಿ ಮಾಡಿ ಅದನ್ನು ಧ್ವಂಸಗೊಳಿಸಿತ್ತು. ಆದರೆ ಬುಜ್ ಗ್ರಾಮದ ಹೆಣ್ಣುಮಕ್ಕಳೇ ಸೇರಿ ಕೇವಲ 72 ಗಂಟೆಯೊಳಗೆ ಬುಜ್ ವಾಯು ಕೇಂದ್ರವನ್ನು ಮತ್ತೆ ಯಥಾಸ್ಥಿತಿಗೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅಂತಹ ಧೀರ ಹೆಣ್ಣುಮಕ್ಕಳನ್ನು ಭೇಟಿಯಾಗುವ ಸಂದರ್ಭ ನನಗೆ ಬಂದಿತ್ತು. ಅವರಿಗೆ ಮತ್ತೆ ಧನ್ಯವಾದಗಳು ಎಂದು ಮೋದಿ ಹೇಳಿದರು.
” ನಮ್ಮ ಪ್ರತಿದಾಳಿಯಿಂದಾಗಿ ಪಾಕಿಸ್ತಾನದಲ್ಲಿರುವ ಅವರ ವಾಯುಕೇಂದ್ರಗಳು ಇನ್ನು ಕೂಡ ಐಸಿಯು ಸ್ಥಿತಿಯಲ್ಲಿವೆ. ನಮ್ಮ ಸೈನಿಕರ ಪರಾಕ್ರಮ ಮತ್ತು ಸಾಮರ್ತ್ಯದ ವಿರುದ್ಧ ಮಂಡಿಯೂರಿದ ಪಾಕಿಸ್ತಾನ ಶಾಂತಿ ಧ್ವಜವನ್ನು ಹಾರಿಸಿ ನಮ್ಮ ಬಳಿ ಗೋಗರೆದ ಕಾರಣ ನಾವು ಯುದ್ಧ ನಿಲ್ಲಿಸಿದೆವು. ನಾವು ಮೊದಲೇ ಅವರಿಗೆ ತಿಳಿಸಿದ್ದೇವೆ. ನಮ್ಮ ಗುರಿ ಇರುವುದು ನಿಮ್ಮ ಭಯೋತ್ಪಾದಕರ ಅಡಗುದಾಣದ ಮೇಲೆ. ನಾವು ಉಗ್ರರನ್ನು ಸಂಹರಿಸುವಾಗ ನೀವು ಸುಮ್ಮನೆ ಕುಳಿತುಕೊಂಡರೆ ಸಾಕು. ಈಗ ನೀವು ನಮ್ಮ ಮೇಲೆ ದಾಳಿ ಮಾಡುವ ಮೂಲಕ ಅನಗತ್ಯವಾಗಿ ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ತಂದುಕೊಂಡಿದ್ದಿರಿ” ಎಂದು ಮೋದಿ ಹೇಳಿದರು.
ಇನ್ನು ಬುಜ್ ಪ್ರದೇಶಕ್ಕೆ ಭೇಟಿ ಕೊಡುವ ಮೊದಲು ದಾಹೋದ್ ನಲ್ಲಿಯೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ ಅಲ್ಲಿ ಕೂಡ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದರು.
ಆಪರೇಶನ್ ಸಿಂಧೂರದ ವಿಷಯವನ್ನು ಪ್ರಸ್ತಾಪಿಸಿದ ಮೋದಿ, ಪಹಲ್ಗಾಂ ಘಟನೆಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಕೈಗೊಂಡ ಕ್ರಮದ ಬಗ್ಗೆ ಮಾತನಾಡುತ್ತಾ ” ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸಿ ಹಾಕಲು ಮುಂದಾದ ಪ್ರತಿಯೊಬ್ಬನ ಸಾವು ಅಂದೇ ನಿಶ್ಚಿತವಾಗಿರುತ್ತದೆ” ಎಂದು ಹೇಳಿದರು. ಆಪರೇಶನ್ ಸಿಂಧೂರ ಕೇವಲ ಒಂದು ಮಿಲಿಟರಿ ಕಾರ್ಯಾಚರಣೆ ಅಲ್ಲ, ಅದು ಭಾರತದ ಶಕ್ತಿ, ಸಾಮರ್ತ್ಯ, ಪ್ರತಿಕಾರದ ಪರಾಕ್ರಮಕ್ಕೆ ಹಿಡಿದ ಕೈಗನ್ನಡಿ. ನಮ್ಮ ನಾಗರಿಕರ ಮೇಲೆ ಆಗಿರುವ ದಾಳಿ ನಮ್ಮ ಹೃದಯಗಳನ್ನು ಕಲುಕಿದೆ. ಅದಕ್ಕೆ ಉತ್ತರ ಕೊಡದೇ ವಿರಮಿಸುವುದಿಲ್ಲ ಎಂದು ತೋರಿಸಿಕೊಟ್ಟಿದ್ದೇವೆ” ಎಂದು ಹೇಳಿದರು
Leave A Reply