ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?

ವಾಹನ ಚಾಲಕರು ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿ ಹೋಗುವುದರಿಂದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್, ಬ್ಲಾಕ್ ಗಳು ಆಗುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಇದಕ್ಕೆ ಪರಿಹಾರ ಒಂದೇ ಆಗಿದ್ದು, ವಾಹನ ಸವಾರರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದೇ ಇರುವುದು. ಆದರೆ ಯಾರು ಕೂಡ ಚೆಂದ ಮಾಡಿ ಹೇಳಿದರೆ ಕೇಳುವುದಿಲ್ಲವಾದ್ದರಿಂದ ವಾಹನಗಳನ್ನು ಟೋಯ್ ಮಾಡುವ ಮೂಲಕ ಬುದ್ಧಿ ಕಲಿಸಬಹುದು ಎಂದು ನಿರ್ಧಾರಕ್ಕೆ ಬಂದಿರುವ ರಾಜ್ಯ ಸರಕಾರ ಬೆಂಗಳೂರಿನಲ್ಲಿ ಟೋಯಿಂಗ್ ಮಾಡುವುದಕ್ಕೆ ಅಧಿಕೃತ ಆದೇಶ ನೀಡಿದೆ. ಟೋಯಿಂಗ್ ಹಿಂದೆ ಚಾಲ್ತಿಯಲ್ಲಿತ್ತು. ಆದರೆ ನಂತರ ನಾಗರಿಕರ ವಿರೋಧ ಮತ್ತು ವಿವಿಧ ಕಾರಣಗಳಿಂದ ಇದನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ವಿರುದ್ಧ ಪರಿಹಾರ ಕ್ರಮ ಕೈಗೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಆಗ್ರಹ ಕೇಳಿ ಬಂದಿರುವುದರಿಂದ ಈಗ ಅದನ್ನು ಆರಂಭಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ರಸ್ತೆಬದಿಯಲ್ಲಿ ನಿಲ್ಲಿಸಲಾದ ವಾಹನಗಳು, ವಿಶೇಷವಾಗಿ ದ್ವಿಚಕ್ರ ವಾಹನಗಳು ಸಂಚಾರ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರಿಂದ ನಗರದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತದೆ. ಸಿಲ್ಕ್ ಬೋರ್ಡ್ ಮತ್ತು ಹೆಬ್ಬಾಳ ಜಂಕ್ಷನ್ ಸೇರಿದಂತೆ ಎಂಟು ಸ್ಥಳಗಳಲ್ಲಿ ಪರಿಸ್ಥಿತಿ ಕೆಟ್ಟದಾಗಿರುತ್ತದೆ. ಈ ಹಿಂದೆ, ರಸ್ತೆಬದಿಯ ಪಾರ್ಕಿಂಗ್ ಅನ್ನು ತಪ್ಪಿಸಲು, ಟೋಯಿಂಗ್ ವ್ಯವಸ್ಥೆ ಜಾರಿಯಲ್ಲಿತ್ತು. ಇದೀಗ ಮತ್ತೆ ಆ ವ್ಯವಸ್ಥೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ನಾವು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು. ಪೊಲೀಸ್ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಟ್ಟಾಗಿ ಕೆಲಸ ಮಾಡಿದರೆ ಸಮಸ್ಯೆಯನ್ನು ಪರಿಹರಿಸಬಹುದು. ಸಂಚಾರ ಸಮಸ್ಯೆಗಳ ಕುರಿತು ವಿವರವಾ ವರದಿಯನ್ನು ಒಂದು ವಾರದೊಳಗೆ ಸರಕಾರಕ್ಕೆ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು. ಪೊಲೀಸರು ಈಗಾಗಲೇ ಜನದಟ್ಟಣೆ ಇರುವ ಸ್ಥಳಗಳ ಅಧ್ಯಯನ ನಡೆಸಿದ್ದಾರೆ. ಅದಕ್ಕೆ ಅನುಗುಣವಾಗಿ ಪರ್ಯಾಯ ಮಾರ್ಗಗಳು ಮತ್ತು ಮಾರ್ಗ ಬದಲಾವಣೆಗಳನ್ನು ಯೋಜಿಸಲಾಗುವುದು ಎಂದರು.
ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು. ಈಗ ಬೆಂಗಳೂರು ಬಳಿಕ ಮಂಗಳೂರಿನಲ್ಲಿಯೂ ಟೋಯಿಂಗ್ ಅಗತ್ಯ ಇದೆಯಾ ಎನ್ನುವ ವಿಷಯ ಚರ್ಚೆಗೆ ಬಂದಿದೆ. ಮಂಗಳೂರಿನಲ್ಲಿಯೂ ಅನೇಕ ಕಡೆ ರಸ್ತೆ ಅಗಲವಾಗಿದ್ದರೂ ಅಲ್ಲಿ ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡುತ್ತಿರುವುದರಿಂದ ರಸ್ತೆ ಅಗಲವಾಗಿಯೂ ಏನೂ ಪ್ರಯೋಜನವಿಲ್ಲ ಎಂದು ಜನರು ಆಡಿಕೊಳ್ಳುವಂತಾಗಿದೆ. ಹಂಪನಕಟ್ಟೆ ಪರಿಸರ, ರಥಬೀದಿ, ಸೆಂಟ್ರಲ್ ಮಾರುಕಟ್ಟೆ ರೋಡ್, ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ಜೈಲಿನ ಎದುರಿನ ರಸ್ತೆ ಹೀಗೆ ಅನೇಕ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ನಿಂದ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಪ್ರದೇಶದಲ್ಲಿ ಮತ್ತೆ ಟೋಯಿಂಗ್ ಆರಂಭಿಸಬೇಕು ಎನ್ನುವುದು ಜನಸಾಮಾನ್ಯರ ಬೇಡಿಕೆ.
Leave A Reply