ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..

ಮಣಿರತ್ನಂ ನಿರ್ದೇಶನದ, ಕಮಲ ಹಾಸನ್, ಸಿಂಬು, ತ್ರಿಶಾ ಕೃಷ್ಣನ್ ಅಭಿನಯದ ಥಗ್ ಲೈಫ್ ಸಿನೆಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ತಮ್ಮ ಚಿತ್ರದ ಬಗ್ಗೆ ಮಾತನಾಡುವಾಗ ಕನ್ನಡ ಭಾಷೆ ತಮಿಳಿನಿಂದಲೇ ಹುಟ್ಟಿದ್ದು ಎಂದು ಹೇಳಿರುವ ಕಮಲ್ ಹಾಸನ್ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ಕನ್ನಡ ಪರ ಹೋರಾಟಗಾರರು ಕಮಲ್ ಹಾಸನ್ ತಮ್ಮ ಹೇಳಿಕೆಯ ಬಗ್ಗೆ ಕ್ಷಮೆಯಾಚಿಸುವ ತನಕ ಥಗ್ ಲೈಫ್ ಕರ್ನಾಟಕದಲ್ಲಿ ಬಿಡುಗಡೆಯಾಗಬಾರದು ಎಂದು ಷರತ್ತು ವಿಧಿಸಿದ್ದಾರೆ.
ಭಾರತದಲ್ಲಿ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಭಾಷೆಯ ಬಗ್ಗೆ ಪರ ಅಥವಾ ವಿರೋಧ ಮಾತನಾಡುವುದು ಯಾವಾಗಲೂ ವಿವಾದಕ್ಕೆ ಕಾರಣವಾಗುತ್ತದೆ. ಅದರಲ್ಲಿಯೂ ಖ್ಯಾತ ನಟರು ಇಂತಹ ವಿಷಯದಲ್ಲಿ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ಅವರ ಮುಂಬರುವ ಸಿನೆಮಾದ ಭವಿಷ್ಯದ ಬಗ್ಗೆಯೂ ಗಾಂಢಾಧಕಾರವನ್ನು ಚೆಲ್ಲುತ್ತದೆ. ಹೀಗಿರುವಾಗ ಕಮಲ್ ಹಾಸನ್ ಅನಾವಶ್ಯಕವಾಗಿ ವಿವಾದವನ್ನು ಎಳೆದುಕೊಂಡರು ಎಂದು ಈಗ ಅನಿಸುತ್ತಿದೆ.
ಕನ್ನಡ ಮತ್ತು ತಮಿಳು ಭಾಷೆ ಎರಡೂ ಕೂಡ ದ್ರಾವಿಡ ಭಾಷೆಗಳಾಗಿವೆ. ಎರಡೂ ಭಾಷೆಗಳಿಗೂ ಶ್ರೀಮಂತವಾದ ಸಂಸ್ಕೃತಿ ಮತ್ತು ಹಿನ್ನಲೆ ಇದೆ. ಇನ್ನು ಪಂಚ ದ್ರಾವಿಡ ಭಾಷೆಗಳಲ್ಲಿಯೇ ಕನ್ನಡ ಮತ್ತು ತಮಿಳು ಪ್ರಮುಖ ಭಾಷೆಗಳೆಂದು ಗುರುತಿಸ್ಪಟ್ಟಿವೆ. ಎರಡೂ ಒಂದೇ ಮೂಲದಿಂದ ಹುಟ್ಟಿರುವುದಾದರೂ ಎರಡೂ ಭಿನ್ನವಾಗಿ ತಮ್ಮದೇ ದಾರಿಯಲ್ಲಿ ಬೆಳೆದು ಪ್ರಖ್ಯಾತಗೊಂಡವು.
ಕನ್ನಡ ಕರ್ನಾಟಕದ ಅಧಿಕೃತ ರಾಜ್ಯಭಾಷೆಯಾಗಿ ದೇಶದ 22 ಅಧಿಕೃತ ಸಮ್ಮತ ರಾಷ್ಟ್ರೀಯ ಭಾಷೆಗಳಲ್ಲಿ ಒಂದಾಗಿ ಬೆಳೆದು ಬಂದಿದೆ. ಅಂದಾಜಿನ ಪ್ರಕಾರ ಪ್ರಸ್ತುತ 38 ಮಿಲಿಯನ್ ನಾಗರಿಕರು ಕನ್ನಡವನ್ನು ತಮ್ಮ ಮೊದಲ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು 10 ಮಿಲಿಯನ್ ಜನ ಎರಡನೇ ಅಧಿಕೃತ ಭಾಷೆಯಾಗಿ ಕನ್ನಡವನ್ನು ದಾಖಲೆಯಲ್ಲಿ ಒಪ್ಪಿಕೊಂಡಿದ್ದಾರೆ.
ಸಾಹಿತ್ಯಕಾರರ ಪ್ರಕಾರ ಕನ್ನಡ 2500 ವರ್ಷಗಳಿಗಿಂತಲೂ ಹಿಂದಿನಿಂದ ಸಂವಹನ ಭಾಷೆಯಾಗಿ ಬೆಳೆದುಬಂದಿದೆ. 450 ಸಿಇ ಯಲ್ಲಿ ಹಲ್ಮಿಡಿ ಶಾಸನದಲ್ಲಿ ಕನ್ನಡವನ್ನು ಬಳಸಲಾಗಿದ್ದು, ಆಗಲೇ ಒಂದು ಸಮುದಾಯ ಕನ್ನಡವನ್ನು ಬಳಸುತ್ತಿರುವುದು ಸಂಶೋಧನೆಯಿಂದ ಪತ್ತೆಯಾಗಿದೆ. ಅಶೋಕನ್ ಬ್ರಾಹ್ಮಿ ಗ್ರಂಥದಲ್ಲಿ ಕನ್ನಡ ಭಾಷೆಯನ್ನು ಬಳಸಲಾಗಿದೆ.
ಸಂಶೋಧನೆಕಾರ ಡಾ. ಎಸ್. ಸೆಟ್ಟರ್ ಪ್ರಕಾರ ಒಂಭತ್ತನೇ ಶತಮಾನದಲ್ಲಿ ರಾಜ ನೃಪತುಂಗ ಅವಧಿಯಲ್ಲಿ ರಚನೆಯಾದ ಕವಿರಾಜ ಮಾರ್ಗ ಗ್ರಂಥದಲ್ಲಿ ಕನ್ನಡವನ್ನು ಭಾಷೆಯಾಗಿ ಬಳಸಲಾಗಿದೆ. ಆಗಲೇ ಇದು ಕನ್ನಡ ಭಾಷೆ ಎಂದು ಇತಿಹಾಸದಲ್ಲಿ ದಾಖಲಾಗಿತ್ತು. ಅದರ ನಂತರ ಕನ್ನಡ ಭಾಷೆ ಬೇರೆ ಬೇರೆ ಪ್ರಾಕಾರ, ಶಬ್ದಗಳನ್ನು ತನ್ನಲ್ಲಿ ಟ್ಟುಕೊಂಡು ಬೆಳೆಯುತ್ತಾ ಬಂದಿದೆ. ಈಗ ಸುಮಾರು 20 ರೀತಿಯಲ್ಲಿ ಕನ್ನಡ ಭಾಷೆಯನ್ನು ಮಾತನಾಡುವ ಜನರಿದ್ದಾರೆ. ಅದು ಹವ್ಯಕ, ಸೋಲಿಗ ಕನ್ನಡ, ಕೊಡವ, ಕುಂದ, ಅರೆ ಭಾಷೆ, ಬಡಗ ಕನ್ನಡ, ಹುಬ್ಬಳ್ಳಿ ಕನ್ನಡ ಮತ್ತು ಗುಲ್ಬರ್ಗ ಕನ್ನಡ ಸಹಿತ ಕನ್ನಡದ ವ್ಯಾಪ್ತಿ ಮತ್ತು ಹಿರಿಮೆ ದೊಡ್ಡದಾಗುತ್ತಾ ಸಾಗಿದೆ.
ಇಷ್ಟೆಲ್ಲಾ ಇರುವಾಗ ಕಮಲ್ ಹಾಸನ ಕನ್ನಡದ ಬಗ್ಗೆ ಹೀಗೆ ಮಾತನಾಡಿದ್ದನ್ನು ರಾಜಕೀಯ ಕ್ಷೇತ್ರದ ಗಣ್ಯರು ಸೇರಿ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡ ಖಂಡಿಸಿದ್ದಾರೆ.
Leave A Reply