ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!

ಮಧ್ಯಪ್ರದೇಶದ ಇಂದೋರ್ ನಲ್ಲಿ ಮೇ 11 ರಂದು ಮದುವೆಯಾಗಿ ಮೇ 20 ರಂದು ಹನಿಮೂನಿಗಾಗಿ ಮೇಘಾಲಯದ ಶಿಲ್ಲಾಂಗಿಗೆ ಹೋಗಿದ್ದ ನವಜೋಡಿ ಅಜ್ಞಾತ ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಯುವಕನನ್ನು ರಾಜಾ ರಘುವಂಶಿ ಹಾಗೂ ಪತ್ನಿಯನ್ನು ಸೋನಂ ರಘುವಂಶಿ ಎಂದು ಗುರುತಿಸಲಾಗಿದೆ. ಅವರ ಲಾಸ್ಟ್ ಲೊಕೇಶನ್ ಶಿಲ್ಲಾಂಗಿನ ಸೂಕ್ಷ್ಮ ಪ್ರದೇಶ ಓಸ್ರಾ ಹಿಲ್ ಎಂದು ತಿಳಿದು ಬಂದಿದೆ. ಅವರು ಸುತ್ತಾಡಲು ಬಾಡಿಗೆಗೆ ಪಡೆದುಕೊಂಡಿದ್ದ ಆಕ್ಟಿವಾ ಅಲ್ಲಿ ಅನಾಥ ಸ್ಥಿತಿಯಲ್ಲಿ ದೊರಕಿದೆ. ರಾಜಾ ರಘುವಂಶಿ ಇಂದೋರ್ ನಲ್ಲಿ ಸಾರಿಗೆ ವ್ಯವಹಾರವನ್ನು ನಡೆಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ.
ಕುಟುಂಬದವರ ಪ್ರಕಾರ ಮೇ 20 ರಂದು ಜೋಡಿ ಇಂದೋರ್ ನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಗುವಾಹಾಟಿಗೆ ತೆರಳಿದೆ. ಅಲ್ಲಿ ಮಾ ಕಾಮಾಕ್ಯ ದೇವಸ್ಥಾನದ ಭೇಟಿಯ ನಂತರ ಮೇ 23 ರಂದು ಅವರು ಶಿಲ್ಲಾಂಗಿಗೆ ತೆರಳಿದ್ದಾರೆ. ಅಲ್ಲಿ ತಲುಪಿದ ನಂತರ ಎರಡೂ ಕುಟುಂಬದವರೊಂದಿಗೆ ಪತಿ, ಪತ್ನಿ ಸಂವಹನ ನಡೆಸಿದ್ದು, ನಂತರ ಅವರ ಸಂಪರ್ಕ ತಪ್ಪಿ ಹೋಗಿದೆ.
ಆರಂಭದಲ್ಲಿ ದೂರವಾಣಿ ನೆಟ್ ವರ್ಕ್ ಸಮಸ್ಯೆಯಿಂದ ಕಾಲ್ ಸಾಧ್ಯವಾಗದೇ ಇರಬಹುದು ಎಂದು ಅಂದುಕೊಂಡಿದ್ದ ರಾಜಾ ಅವರ ಸಹೋದರ ಸಚಿನ್ ರಘುವಂಶಿ ನಂತರ ಇಬ್ಬರ ಫೋನ್ ಕೂಡ ಸ್ವೀಚ್ಡ್ ಆಫ್ ಆಗಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಅನೇಕ ಪ್ರಯತ್ನಗಳ ಬಳಿಕ ಇಬ್ಬರ ಫೋನ್ ಕೂಡ ಸಂಪರ್ಕಕ್ಕೆ ಸಿಗದೇ ಇದ್ದ ಕಾರಣ ಸೋನಂ ಸಹೋದರ ಗೋವಿಂದ್ ಹಾಗೂ ರಾಜಾ ಸಹೋದರ ವಿಪಿನ್ ಇಬ್ಬರೂ ತುರ್ತಾಗಿ ವಿಮಾನದ ಮೂಲಕ ಶಿಲ್ಲಾಂಗ್ ತಲುಪಿದ್ದಾರೆ.
ನವಜೋಡಿ ಅಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಗೂಗಲ್ ಮ್ಯಾಪಿನಲ್ಲಿ ಹಾಕಿ ಅದರ ಹತ್ತಿರದ ಲೋಕೇಶನ್ ಗೋವಿಂದ ಅವರು ಪತ್ತೆ ಮಾಡಿದ್ದರು. ಆ ಮೂಲಕ ಪತಿ, ಪತ್ನಿ ಇಬ್ಬರೂ ಎಲ್ಲಿ ಬಾಡಿಗೆ ಆಕ್ಟಿವಾ ತೆಗೆದುಕೊಂಡಿದ್ದರು ಎಂದು ಗೊತ್ತಾಯಿತು. ಆ ನಂತರ ಬಾಡಿಗೆ ವಾಹನ ನೀಡುವ ಏಜೆನ್ಸಿಯ ಪತ್ತೆಯಾಗಿದ್ದು, ಅವರಿಗೆ ರಾಜಾ, ಸೋನಂ ಫೋಟೊ ಕಳುಹಿಸಿಕೊಟ್ಟು ಈ ಬಗ್ಗೆ ಮಾಹಿತಿ ಕೇಳಲಾಗಿತ್ತು. ಅವರಿಂದ ಮಾಹಿತಿ ಸಿಕ್ಕಿದ್ದು ಏನೆಂದರೆ ಅವರಿಂದ ವಾಹನವನ್ನು ಪಡೆದುಕೊಂಡು ಇಬ್ಬರೂ ಆಸ್ರಾ ಹಿಲ್ ಕಡೆ ಹೋಗಿದ್ದಾರೆ.
ಆ ಪ್ರದೇಶಕ್ಕೆ ಪೊಲೀಸರು ಹೋದಾಗ ಅಲ್ಲಿ ಗಾಡಿ ದೊರಕಿದ್ದು, ಗಂಡ, ಹೆಂಡತಿ ಅಲ್ಲಿಂದ ನಾಪತ್ತೆಯಾಗಿದ್ದಾರೆ. ಅದೊಂದು ಗುಡ್ಡಗಾಡಾಗಿದ್ದು, ಅಲ್ಲಿ ಜನಸಂಖ್ಯೆ ವಿರಳವಾಗಿರುತ್ತದೆ. ಅಲ್ಲಿ ಒಂದೇ ಒಂದು ರೆಸಾರ್ಟ್ ಇದ್ದು, ಅಲ್ಲಿ ಪ್ರವಾಸಿಗರು ತಂಗುವುದಕ್ಕಿಂತ ಹೆಚ್ಚಾಗಿ ಮಾಫಿಯಾ ಡಾನ್ ಗಳು ವಾಸ್ತವ್ಯ ಹೂಡಿರುತ್ತಾರೆ ಎಂದು ಪೊಲೀಸರೇ ಇವರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರೇ ಆ ಏರಿಯಾಕ್ಕೆ ಹೋಗಲು ಹಿಂದೇಟು ಹಾಕುತ್ತಾರೆ ಎಂದು ತಿಳಿದುಬಂದಿದೆ.
ಹೊಸದಾಗಿ ಮದುವೆಯಾದ ಜೋಡಿಯನ್ನು ಹುಡುಕಿ ಹೋದ ಅವರ ಕುಟುಂಬಸ್ಥರಿಗೆ ಭಾಷೆಯ ಕಾರಣದಿಂದ ಸ್ಥಳೀಯರೊಂದಿಗೆ ಸೂಕ್ತ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಸ್ಥಳಕ್ಕೆ ಅವರು ಯಾಕಾಗಿ ಬಂದರೋ ಎಂದು ಅಲ್ಲಿನ ಸ್ಥಳೀಯರೇ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಯಾಕೆಂದರೆ ಈ ಹಿಂದೆನೂ ಈ ಅಜ್ಞಾತ ಜಾಗಕ್ಕೆ ಬಂದ ನವಜೋಡಿಗಳು ಹೀಗೆ ನಿಗೂಢವಾಗಿ ಕಾಣೆಯಾಗಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಎರಡೂ ಕುಟುಂಬದವರು ಹಾಗೂ ಪೊಲೀಸರು ನಾಪತ್ತೆಯಾಗಿರುವ ಗಂಡ, ಹೆಂಡತಿಯನ್ನು ಅಹೋರಾತ್ರಿ ಹುಡುಕುವಲ್ಲಿ ನಿರತರಾಗಿದ್ದಾರೆ. ಆದರೆ ಆ ಪ್ರದೇಶ ಬಹಳ ವಿಶಾಲವಾಗಿರುವುದರಿಂದ ಅಲ್ಲಿ ಹುಡುಕಲು ಎಷ್ಟು ಜನರಿದ್ದರು ಕೂಡ ಸಾಕಾಗುವುದಿಲ್ಲ ಎನ್ನುವ ಪರಿಸ್ಥಿತಿ ಇದೆ.
ಸದ್ಯ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮೇಘಾಲಯದ ಮುಖ್ಯಮಂತ್ರಿ ಕೊರ್ನಾಡ್ ಸಂಗ್ಮಾ ಅವರ ಜೊತೆ ಮಾತನಾಡಿದ್ದು, ಇಂದೋರ್ ಪೊಲೀಸ್ ಕಮೀಷನರ್ ಸಂತೋಷ್ ಸಿಂಗ್ ಅವರು ಡಿಸಿಪಿ ಕ್ರೈಮ್ ಬ್ರಾಂಚ್ ರಾಜೇಶ್ ಕುಮಾರ್ ತ್ರಿಪಾಟಿ ಅವರನ್ನು ಈ ಬಗ್ಗೆ ತನಿಖೆಗೆ ನಿಯೋಜಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಈ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಸಲಾಗಿದೆ.
Leave A Reply