ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ – ಹೈಕೋರ್ಟ್ ಆದೇಶ… ರಾಜ್ಯ ಸರಕಾರಕ್ಕೆ ಮುಖಭಂಗ!

ಕ್ರಿಮಿನಲ್ ಪ್ರೊಸಿಜರ್ ಕೋಡ್ ( ಸಿಆರ್ ಪಿಸಿ) ಸೆಕ್ಷನ್ 321 ಅನ್ನು ಬಳಸಿ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಮುಂದಾದ ರಾಜ್ಯ ಸರಕಾರಕ್ಕೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ತೀವ್ರ ಮುಖಭಂಗ ಸಂಭವಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ರಾಜ್ಯ ಸರಕಾರ ಆರೋಪಿಗಳ ಮೇಲಿನ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂದೆ ಪಡೆಯಲು ನಿರ್ಧರಿಸಿತ್ತು. ಇದರಲ್ಲಿ ಹುಬ್ಬಳ್ಳಿ ಗಲಭೆಯಲ್ಲಿ ಪಾತ್ರವಹಿಸಿದ ದುಷ್ಕರ್ಮಿಗಳ ಮೇಲಿನ ಪ್ರಕರಣಗಳು ಕೂಡ ಇತ್ತು. ಅದರೊಂದಿಗೆ ಬೇರೆ ಗಂಭೀರ ಪ್ರಕರಣದಲ್ಲಿ ಆರೋಪಿಗಳಾಗಿರುವವರ ಕೇಸ್ ಕೂಡ ಇತ್ತು. ಸಿಆರ್ ಪಿಸಿ ಸೆಕ್ಷನ್ 321 ರ ಪ್ರಕಾರ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣದ ಅಂತಿಮ ತೀರ್ಪು ಬರುವ ಮೊದಲು ಅರ್ಜಿ ಸಲ್ಲಿಸಿ ರಾಜ್ಯ ಸರಕಾರದ ಪರವಾಗಿ ಪ್ರಕರಣವನ್ನು ಹಿಂದಕ್ಕೆ ಪಡೆದುಕೊಳ್ಳುವ ಅವಕಾಶವನ್ನು ಈ ಸೆಕ್ಷನ್ ನೀಡುತ್ತದೆ.
ಈ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳುವ ಮೂಲಕ ರಾಜ್ಯ ಸರಕಾರ ಆರೋಪಿಗಳಿಗೆ ಸಹಕರಿಸಿದಂತೆ ಆಗುತ್ತದೆ. ಇದು ರಾಜಕೀಯ ಪ್ರೇರಿತ ಮತ್ತು ರಾಜ್ಯ ಸರಕಾರದ ನಿರಂಕುಶ ನಿರ್ಧಾರವಾಗಿದೆ ಎಂದು ನ್ಯಾಯವಾದಿ ಗಿರೀಶ್ ಭಾರದ್ವಾಜ್ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹಾಕಿದ್ದರು.
ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ರಾಜ್ಯ ಉಚ್ಚ ನ್ಯಾಯಾಲಯ ರಾಜ್ಯ ಸರಕಾರದ ತೀರ್ಮಾನದ ವಿರುದ್ಧ ತೀರ್ಪು ನೀಡಿದ್ದು, ಕಾನೂನಿನ ದೃಷ್ಟಿಯಲ್ಲಿ ಸರಕಾರದ ತೀರ್ಮಾನವನ್ನು ಅನೂರ್ಜಿತಗೊಳಿಸಿದೆ. ಇನ್ನು ರಾಜ್ಯ ಸರಕಾರ ಹಿಂದಕ್ಕೆ ಪಡೆದುಕೊಳ್ಳಬೇಕು ನಿರ್ಧರಿಸಿದ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧದ ಕಾನೂನು ಪ್ರಕ್ರಿಯೆಗಳು ಯಥಾವತ್ತಾಗಿ ನಡೆಯಬೇಕು ಎಂದು ಇದೇ ಸಂದರ್ಭದಲ್ಲಿ ಸೂಚನೆ ನೀಡಿದೆ.
ಈ ಆದೇಶ ರಾಜ್ಯ ಸರಕಾರ ಯಾವುದೇ ಕಾನೂನು ಬಳಸಿಕೊಂಡು ತಾನು ಬಯಸಿದಂತೆ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳುವ ಸಂಪ್ರದಾಯಕ್ಕೆ ಬ್ರೇಕ್ ನೀಡಿದಂತೆ ಆಗಿದೆ. ಈ ಹಿಂದೆ ಗಂಭೀರ ಪ್ರಕರಣಗಳಲ್ಲಿ ರಾಜ್ಯ ಸರಕಾರಗಳು ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಳ್ಳುವ ಮೂಲಕ ಆರೋಪಿಗಳ ಕೃತ್ಯಗಳನ್ನು ಬೆಂಬಲಿಸಿದಂತೆ ಆದ ಪರಿಣಾಮ ಗಲಭೆಗಳು ಮತ್ತಷ್ಟು ನಡೆದು ರಾಜ್ಯದಲ್ಲಿ ಅಶಾಂತಿ, ದೊಂಬಿ, ಗಲಭೆಗಳಿಗೆ ಕಾರಣವಾಗಿತ್ತು.
ಈ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿಸದಸ್ಯ ಪೀಠ ನೀಡಿದ ಸೂಚನೆ ಒಂದು ಕೋಮಿನ ಓಲೈಕೆಗಾಗಿ ಕೇಸ್ ವಾಪಾಸ್ ಪಡೆಯುವ ತಂತ್ರಕ್ಕೆ ತಡೆ ನೀಡಿದೆ ಎಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ. ಇನ್ನು ನ್ಯಾಯವಾದಿ ಗಿರೀಶ್ ಭಾರದ್ವಾಜ್ ಅವರು ಮನವಿ ಮಾಡಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಗೆ ನೀಡಲು ಮಾನ್ಯ ನ್ಯಾಯಾಲಯ ಆದೇಶಿಸಬೇಕು ಎನ್ನುವ ಮನವಿಯನ್ನು ಕೂಡ ಪರಿಗಣಿಸಿರುವ ನ್ಯಾಯಾಲಯ ಆ ಪ್ರಕರಣಗಳನ್ನು ಎನ್ ಐಎಗೆ ನೀಡಲು ರಾಜ್ಯ ಸರಕಾರ ಕ್ರಮ ತಗೆದುಕೊಳ್ಳಬೇಕು ಎಂದು ಸೂಚಿಸಿದೆ.
Leave A Reply