ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!

ಕೊನೆಗೂ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರ ವರ್ಗಾವಣೆ ಆಗಿದೆ. ಅಬ್ದುಲ್ ರಹೀಂ ಹತ್ಯೆಯ ನಂತರ ಮುಸ್ಲಿಂ ಸಮುದಾಯದ ಮುಖಂಡರು ಪೊಲೀಸ್ ಇಲಾಖೆ ಹಾಗೂ ಗುಪ್ತಚರ ವೈಫಲ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಳಿಕ ರಾಜ್ಯ ಸರಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡಿದೆ.
ಸುಹಾಸ್ ಶೆಟ್ಟಿಯವರ ಕೊಲೆ ಆದಾಗ ಅದರ ವಿರುದ್ಧ ಬಜ್ಪೆ ಚಲೋ ಆಯೋಜನೆ ಮಾಡಲು ಅವಕಾಶ ನೀಡಿದ್ದು ಯಾಕೆ ಎನ್ನುವ ಮುಸ್ಲಿಂ ಮುಖಂಡರ ಪ್ರಶ್ನೆಯನ್ನು ಸೇರಿಸಿ ವೇದಿಕೆಯಲ್ಲಿ ಮುಖಂಡರು ಬಹಿರಂಗವಾಗಿ ಚಾಲೆಂಜ್ ಮಾಡುತ್ತಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವ ತನಕ ಎಲ್ಲದಕ್ಕೂ ಪೊಲೀಸ್ ಇಲಾಖೆಯನ್ನೇ ಕಟಕಟಯಲ್ಲಿ ನಿಲ್ಲಿಸುವ ಕೆಲಸವನ್ನು ಮುಸ್ಲಿಂ ಮುಖಂಡರು ಮಾಡಿದ್ದರು.
ಅದಕ್ಕೆ ಸರಿಯಾಗಿ ಕಾಂಗ್ರೆಸ್ಸಿನಲ್ಲಿರುವ ಮುಸ್ಲಿಂ ಮುಖಂಡರ ಮೇಲೆ ಕಾರ್ಯಕರ್ತರ ಒತ್ತಡ ಹೆಚ್ಚಾಗುತ್ತಾ ಹೋಯಿತು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರೂ ನಮಗೆ ರಕ್ಷಣೆ ಇಲ್ಲ,
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದು ಏನು ಪ್ರಯೋಜನ ಎನ್ನುವ ಮಾತುಗಳು ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂ ಮುಖಂಡರ ವಿರುದ್ಧ ಅವರದ್ದೇ ಸಮುದಾಯದ ಕಾರ್ಯಕರ್ತರಿಂದ ಬಾಣಗಳಾಗಿ ತೂರಿ ಬಂದವು. ಅಲ್ಪಸಂಖ್ಯಾತ ಘಟಕದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಾಹುಲ್ ಹಮೀದ್ ಒಂದು ವಾರದ ಒಳಗೆ ಏನಾದರೂ ಬದಲಾವಣೆ ಖಂಡಿತ ಆಗುತ್ತದೆ ಎಂದು ಮಂಗಳೂರಿನ ಶಾದಿ ಮಹಾಲ್ ನಲ್ಲಿ ನಡೆದ ಸಭೆಯಲ್ಲಿ ಮೈಕ್ ಮುಂದೆ ಹೇಳಿದಾಗ ಅಲ್ಲಿ ಸೇರಿದ ನಾಗರಿಕರು ವ್ಯಾಪಕ ವಿರೋಧ ಮಾಡಿದರು.
ಕೊನೆಗೆ ಎಲ್ಲಾ ಮುಸ್ಲಿಂ ಮುಖಂಡರು ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ಘೋಷಿಸಿದರು.
ಸಮಸ್ಯೆ ಶುರುವಾದದ್ದೇ ಇಲ್ಲಿ. ಮೇಲ್ನೋಟಕ್ಕೆ ಇದು ದಕ್ಷಿಣ ಕನ್ನಡದ ಮುಸ್ಲಿಮರ ಆಕ್ರೋಶ ಎಂದು ಅನಿಸಬಹುದು. ಆದರೆ ಇದು ಸಾಮೂಹಿಕ ಸುನಾಮಿಯಂತೆ ರಾಜ್ಯದ ಬೇರೆ ಜಿಲ್ಲೆಗಳಿಗೆ ಹರಡಲು ತುಂಬಾ ಸಮಯ ತೆಗೆದುಕೊಳ್ಳುವುದಿಲ್ಲ. ಅಂಡರ್ ಕರೆಂಟ್ ರೀತಿಯಲ್ಲಿ ಇದು ಕೆಲಸ ಮಾಡುತ್ತಾ ಹೋಗುತ್ತದೆ. ಇದನ್ನು ತಕ್ಷಣ ಮೊಳಕೆಯಲ್ಲಿ ಸರಿ ಮಾಡದೇ ಹೋದರೆ ನಂತರ ಕಾಳ್ಗಿಚ್ಚು ಆದ ಬಳಿಕ ಬಕೆಟ್ ನೀರು ತಂದು ಹಾಕಿದರೂ ಪ್ರಯೋಜನವಿಲ್ಲ. ಪರಿಸ್ಥಿತಿ ಹೀಗೆ ಇದ್ದರೆ ಇದರಿಂದ ಲಾಭ ಆಗುವುದು ಯಾರಿಗೆ? ಸಂಶಯವೇ ಇಲ್ಲ. ಎಸ್ ಡಿಪಿಐಗೆ.
ಎಸ್ ಡಿಪಿಐ ಈ ಪರಿಸ್ಥಿತಿಯ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿದೆ. ಒಂದು ಸಲ ಕಾಂಗ್ರೆಸ್ ಮುಸ್ಲಿಮರ ರಕ್ಷಣೆಗೆ ಕೆಲಸ ಮಾಡುವುದಿಲ್ಲ ಎನ್ನುವುದನ್ನು ಮುಸ್ಲಿಮರ ತಲೆಯಲ್ಲಿ ಕೂರಿಸಿದರೆ ನಂತರ ಎಸ್ ಡಿಪಿಐ ಕೆಲಸ ಸುಲಭ. ಇನ್ನು ಈ ಗಲಭೆಯ ಲಾಭ, ಈ ಹತ್ಯೆಗಳ ಮೈಲೇಜ್ ಎಸ್ ಡಿಪಿಐಗೆ ಸಿಕ್ಕಿಬಿಟ್ಟರೆ ಮುಗಿಯಿತು, ನಂತರ ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಾಂಗ್ರೆಸ್ ಪತಾಕೆ ಮತ್ತೆ ಹಾರಾಡುವುದು ಕಷ್ಟ. ಆದ್ದರಿಂದ ಏನಾದರೂ ಮಾಡಿ ತೋರಿಸಬೇಕು ಎನ್ನುವ ನಿರ್ಧಾರಕ್ಕೆ ಬಂದ ಸಿದ್ಧರಾಮಯ್ಯ ಮೊದಲಿಗೆ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಮಾಡಿದರು. ಪೊಲೀಸ್ ಕಮೀಷನರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ಆ ಜಾಗಕ್ಕೆ ಬೇರೆಯವರನ್ನು ತಂದು ಕೂರಿಸಿದರು.
ಇನ್ನು ಈ ಮುಸ್ಲಿಂ ಮುಖಂಡರನ್ನು ಸಮಾಧಾನ ಮಾಡುವ ಜವಾಬ್ದಾರಿಯನ್ನು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರಿಗೆ ವಹಿಸಿದರು. ಯಾಕೆಂದರೆ ಹರಿಪ್ರಸಾದ್ ಮೂಲತ: ದಕ್ಷಿಣ ಕನ್ನಡ ಜಿಲ್ಲೆಯವರು. ಅವರನ್ನು ಬಿಟ್ಟು ದಿನೇಶ್ ಗುಂಡೂರಾವ್ ಅಥವಾ ಸ್ವತ: ಪರಮೇಶ್ವರ್ ಅವರನ್ನು ಕಳುಹಿಸಿದರೂ ಮುಸ್ಲಿಂ ಮುಖಂಡರು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಇಂತಹ ಕೋಮು ವಿಷಯ ಬಂದಾಗ ಸಿದ್ಧರಾಮಯ್ಯ ಶೈಲಿಯಲ್ಲಿಯೇ ಮಾತನಾಡುವ ಹರಿಪ್ರಸಾದ್ ಅವರೇ ಸೂಕ್ತ ಎನ್ನುವ ತೀರ್ಮಾನಕ್ಕೆ ಸಿದ್ಧರಾಮಯ್ಯ ಬಂದುಬಿಟ್ಟಿದ್ದಾರೆ. ಅದರೊಂದಿಗೆ ಖಡಕ್ ಆಫೀಸರ್ ಇಲ್ಲಿಗೆ ಹಾಕಿ ಎನ್ನುವ ಮುಸ್ಲಿಂ ಮುಖಂಡರ ಒತ್ತಾಯದ ಮೇರೆಗೆ ಸುಧೀರ್ ಕುಮಾರ್ ರೆಡ್ಡಿಯವರನ್ನು ಪೊಲೀಸ್ ಕಮೀಷನರ್ ಆಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಕೆ ಅರುಣ್ ಅವರನ್ನು ನೇಮಕ ಮಾಡಿದ್ದಾರೆ.
ಸುಧೀರ್ ಕುಮಾರ್ ರೆಡ್ಡಿಯವರಿಗೆ ದಕ್ಷಿಣ ಕನ್ನಡ ಜಿಲ್ಲೆ ಗೊತ್ತು. ಎಸ್ ಪಿಯಾಗಿ ಇಲ್ಲಿ ಸ್ವಲ್ಪ ಕಾಲ ಇದ್ರು. ಕೋಮು ದ್ವೇಷ ವಿಷಯ ಬಂದಾಗ ಅದನ್ನು ಹ್ಯಾಂಡಲ್ ಮಾಡುವಲ್ಲಿ ನಿಷ್ಣಾತರು ಎನ್ನುವ ಹೆಗ್ಗಳಿಕೆ ಇದೆ. ಅದೇ ಅವರನ್ನು ಈಗ ಮತ್ತೆ ಮಂಗಳೂರು ಕಡೆ ಮುಖ ಮಾಡುವಂತೆ ಮಾಡಿದೆ. ಯಾಕೆಂದರೆ ಮಂಗಳೂರಿಗೆ ಮೊದಲು ಆಗಬೇಕಾದದ್ದೇ ಅದು. ಇವರಿಗೆ ನಕ್ಸಲ್ ವಿಷಯವನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ಇತ್ತೀಚೆಗೆ ಆರು ನಕ್ಸಲಿಯರ ಶರಣಾಗತಿಯಲ್ಲಿ ಸಾಬೀತಾಗಿದೆ. ಸದ್ಯ ಸಿಎಂ ಕಣ್ಣೇದುರಿಗೆ ಇದ್ದದ್ದೇ ರೆಡ್ಡಿ ಸಾಹೇಬ್ರು. ಇನ್ನು ಎಸ್ಪಿ ಅವರನ್ನು ಕೂಡ ವರ್ಗಾವಣೆ ಮಾಡಬೇಕು ಎನ್ನುವ ಕೂಗಿತ್ತಲ್ಲ, ಅದಕ್ಕೆ ಪಕ್ಕದ ಜಿಲ್ಲೆಯವರನ್ನೇ ಇಲ್ಲಿ ತರೋಣ ಎನ್ನುವ ನಿಶ್ಚಯ ಸಿಎಂ ಮಾಡಿಬಿಟ್ಟಿದ್ದಾರೆ. ಒಟ್ಟಿನಲ್ಲಿ ಈ ಹೊಸ ಅಧಿಕಾರಿಗಳ ಮೇಲೆ ಸರಕಾರ ವಿಶ್ವಾಸ ಇಟ್ಟಿರುವುದು ಮುಂದಿನ ಮೂರು ವರ್ಷ ಯಾವುದೇ ಕೋಮು ಹತ್ಯೆ ಆಗದೇ ಸರಕಾರಕ್ಕೆ ಉತ್ತಮ ಹೆಸರು ಬರಲಿ ಎನ್ನುವ ಕಾರಣಕ್ಕೆ. ಅದು ಈಡೇರುತ್ತಾ? ಮುಂದಿನ ಆರು ತಿಂಗಳು ನಿರ್ಣಾಯಕ. ಒಮ್ಮೆ ಎಸ್ಪಿ ಅರುಣ್, ಕಮೀಷನರ್ ರೆಡ್ಡಿ ಕಂಟ್ರೋಲ್ ತೆಗೆದುಕೊಂಡ್ರಾ ನಂತರ ಸರಕಾರ ನಿರಾಳವಾಗಬಹುದು.