ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ – ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!

ಆಂಧ್ರಪ್ರದೇಶದ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ನೀತಿ ಆಯೋಗದ ಸಭೆಯ ಬಳಿಕ ಮಾತನಾಡಿ ತಾವು ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ 500 ರೂಪಾಯಿ ಹಾಗೂ 2000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡುವಂತೆ ಮನವಿ ಮಾಡಿದ್ದು, ದೇಶದಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಲು ದೊಡ್ಡ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡುವುದೊಂದೇ ಪರಿಹಾರ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
ಕಡಪದಲ್ಲಿ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಇದರ ಮಹಾ ಸಮ್ಮೇಳನದಲ್ಲಿ ಮಾತನಾಡಿದ ನಾಯ್ಡು 2016 ರಲ್ಲಿ ಮೋದಿಯವರು 500 ಹಾಗೂ 1000 ರೂ ಮುಖಬೆಲೆಯ ನೋಟುಗಳನ್ನು ಅಮ್ಯಾನೀಕರಣಗೊಳಿಸಿದ ಸಂದರ್ಭದಲ್ಲಿ ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತರುವಂತೆ ತಾವೇ ಸಲಹೆ ನೀಡಿದ್ದಾಗಿ ಹೇಳಿದರು. ಆಗ ಎನ್ ಡಿಎ ಸಂಚಾಲಕರಾಗಿದ್ದ ಚಂದ್ರಬಾಬು ನಾಯ್ಡು ವಿವಿಧ ಎನ್ ಡಿಎ ಮುಖ್ಯಮಂತ್ರಿಗಳ, ತಜ್ಞರ ಹಾಗೂ ಎನ್ ಡಿಎ ರಚಿಸಲು ಕಾರಣೀಕರ್ತರಾಗಿರುವ ಹಲವರ ನಿಯೋಗವನ್ನು ರಚಿಸಿ, ನೀತಿ ನಿಯೋಗದ ಸಹಕಾರದಲ್ಲಿ ಒಂದು ಕಾರ್ಯಯೋಜನೆಯನ್ನು ಸಿದ್ಧಪಡಿಸಿದ್ದರು. ಅದು ಶೀಘ್ರ ಹಣ ವಿಲೇವಾರಿಯನ್ನು ನೋಟಿನ ಹಣದ ಕೈಬದಲಾವಣೆ ಇಲ್ಲದೇ ಮಾಡಬಹುದು ಎನ್ನುವ ಕಾರ್ಯಸೂಚಿ ರಚಿಸಲಾಗಿತ್ತು.
ಅದರ ನಂತರ ತಾವು ಮೋದಿಯವರನ್ನು ಭೇಟಿಯಾಗಿ ಡಿಜಿಟಲ್ ಕರೆನ್ಸಿ ಇರುವಾಗ ಈ 500 ಹಾಗೂ 2000 ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಬ್ಯಾನ್ ಮಾಡಬೇಕು. ರಾಜಕೀಯದಲ್ಲಿಯೂ ಹಣ ಹಂಚುವುದು ನಿಲ್ಲಬೇಕು ಎಂದು ತಿಳಿಸಿದ್ದೆ ಎಂದು ಬಹಿರಂಗ ವೇದಿಕೆಯಲ್ಲಿ ಹೇಳಿದ ನಾಯ್ಡು ನನ್ನ ಮಾತಿಗೆ ಒಪ್ಪಿಗೆ ಇದ್ರೆ, ಪ್ರೋತ್ಸಾಹದ ಕರತಾಡನ ಮಾಡಿ ಎಂದು ಕೇಳಿಕೊಂಡರು. ಅದಕ್ಕೆ ಸಮಾವೇಶದಲ್ಲಿ ಚಪ್ಪಾಳೆಗಳು ಕಿಕ್ಕಿರಿದು ಮೊಳಗಿದವು. ಅದರಲ್ಲಿ ಸಂತೃಪ್ತರಾದ ನಾಯ್ಡು ” ಇದು ಒಂದೇ ಭ್ರಷ್ಟ್ರಾಚಾರ ತೊಲಗಿಸಲು ದಾರಿ” ಎಂದರು.
ಇನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಯನ್ನು ಕೂಡ ಡಿಜಿಟಲ್ ಕರೆನ್ಸಿ ಮೂಲಕ ನೀಡಿದರೆ ಆಗ ಪಕ್ಷದಲ್ಲಿಯೂ ಪಾರದರ್ಶಕತೆ ಇರುತ್ತದೆ ಎಂದು ಅವರು ಹೇಳಿದರು.
ನಾವು ಆಡಳಿತದಲ್ಲಿ ಪಾರದರ್ಶತೆಗಾಗಿ ಶ್ರಮಿಸುತ್ತಾ ಬಂದಿದ್ದೇವೆ. ಅದು ಹೊರವರ್ತುಲದ ರಿಂಗ್ ರೋಡ್ ನಿಂದ ಹಿಡಿದು ಓಬಲಾಪುರಂ ಇಲ್ಲಿನ ಗಣಿಗಾರಿಕೆ ಇರಬಹುದು. ನಾವು ದಶಕದ ಹಿಂದೆ ಓಬಲಾಪುರಂ ಗಣಿಗಾರಿಕೆ ವಿರುದ್ಧ ಅಭಿಯಾನ ಆರಂಭಿಸಿದಾಗ ಅದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು. ಆದರೆ ಈಗ ದಶಕದ ಬಳಿಕ ನ್ಯಾಯಾಲಯ ಕೂಡ ಅಲ್ಲಿ ಅವ್ಯವಹಾರ ಆಗಿದೆ ಎಂದು ಹೇಳಿದೆ. ನಮ್ಮ ಅಂದಿನ ಹೋರಾಟಗಳೇ ಈಗ ದೇಶದ ಜನರ ಕಣ್ಣು ತೆರೆಸಿವೆ” ಎಂದು ಹೇಳಿದ ನಾಯ್ಡು ನಮ್ಮ ಹೋರಾಟದ ಫಲಶ್ರುತಿಯಾಗಿ ಸಿಬಿಐ ನ್ಯಾಯಾಲಯ ನಾಲ್ಕು ಆರೋಪಿಗಳಿಗೆ ಏಳು ವರ್ಷ ಶಿಕ್ಷೆ ವಿಧಿಸುವಂತಾಯಿತು. ಅದರಲ್ಲಿ ಕರ್ನಾಟಕದ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕೂಡ ಸೇರಿದ್ದಾರೆ ಎಂದರು.