ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!

ಭಾರತದ ಕೇರಳ ರಾಜ್ಯದ ಅಸಂಖ್ಯಾತ ನಾಗರಿಕರು ದುಬೈಯಲ್ಲಿ ವಿವಿಧ ಉದ್ಯೋಗ, ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲಿ ಅವರು ತಮ್ಮದೇ ರಾಜ್ಯದ ನಾಗರಿಕರನ್ನು ಸೇರಿಸಿ ಸಂಘಟನೆಯನ್ನು ರಚಿಸಿದ್ದಾರೆ. ಅಲ್ಲಿ ಅವರು ಆಗಾಗ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುತ್ತಾರೆ. ಅದಕ್ಕೆ ವಿವಿಧ ಪ್ರಖ್ಯಾತ ಗಣ್ಯರನ್ನು ಕರೆಸಿ ಸನ್ಮಾನಿಸುವುದು ಎಲ್ಲವೂ ನಡೆದುಕೊಂಡು ಬಂದಿದೆ. ಈ ಬಾರಿ ಅವರು ಅತಿಥಿಯನ್ನಾಗಿ ಆಹ್ವಾನಿಸಿದ್ದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಹೀದ್ ಅಫ್ರಿದಿಯನ್ನು.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಭಾರತದ ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನರಮೇಧ ನಡೆಸಿರುವುದು ಎಲ್ಲರಿಗೂ ಗೊತ್ತೆ ಇದೆ. ಶಹೀದ್ ಅಫ್ರಿದಿ ನಮ್ಮ ಶತ್ರು ರಾಷ್ಟ್ರ ಪಾಕಿಸ್ತಾನದವನಾಗಿದ್ದು, ಅವನ ಯೂಟ್ಯೂಬ್ ವಾಹಿನಿಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇನ್ನು ಶಹೀದ್ ಅಫ್ರಿದಿ ಹೇಗೆ ಅಂದರೆ ಪಾಕಿಸ್ತಾನ ಎಂತಹ ಕೃತ್ಯವನ್ನು ಮಾಡಿದ್ರೂ ಅದರ ನಡೆಯನ್ನು ಸಮರ್ಥಿಸಿ ಭಾರತದ ಬಗ್ಗೆ ಒಂದು ರೀತಿಯ ತಾತ್ಸಾರತೆಯನ್ನು ಹೊಂದಿರುವವನಾಗಿದ್ದಾನೆ. ಹಾಗಿರುವಾಗ ಅವನನ್ನು ಕರೆಸಿ ಕಾರ್ಯಕ್ರಮದಲ್ಲಿ ಅವನನ್ನು ಕೊಂಡಾಡುವುದು ಎಂದರೆ ಅದನ್ನು ಒಪ್ಪಲು ಆಗುತ್ತಾ?
ಈ ಕಾರ್ಯಕ್ರಮ ದುಬೈಯಲ್ಲಿ ಆಗಿರಬಹುದು. ಮಾಡಿದ್ದು ಅಲ್ಲಿ ನೆಲೆಸಿರುವವರೇ ಆಗಿರಬಹುದು. ಅವರು ಕೇರಳದವರೇ ಇದ್ದಿರಬಹುದು. ಆದರೆ ಕೇರಳದವರು ಕೂಡ ಭಾರತೀಯರಲ್ವಾ? ಹಾಗಾದರೆ ಕೇರಳದ ಭಾರತೀಯರಿಗೆ ಪೆಹಲ್ಗಾಂ ಘಟನೆ ಏನೂ ಅಲ್ವಾ? ಸತ್ತವರು ನಮ್ಮವರೇ ಎಂದು ಅನಿಸಲ್ವಾ? ಅಫ್ರೀದಿ ಕೊಂದಿದ್ದಾನಾ ಎಂದು ಕೇಳಿದವರೂ ಇದ್ದಾರೆ. ಹಾಗಾದರೆ ಆ ಪಾಕಿಸ್ತಾನದ ರಾಕ್ಷಸಿ ಭಯೋತ್ಪಾದಕರನ್ನು ಬಿಟ್ಟರೆ ಬೇರೆಯವರ ಬಗ್ಗೆ ನಮಗೆ ಸಾಫ್ಟ್ ಕಾರ್ನರ್ ಬರಬೇಕಾ? ಅಫ್ರಿದಿ ಅಲ್ಲಿ ಕಾರ್ಯಕ್ರಮಕ್ಕೆ ಬಂದು ನನಗೆ ಕೇರಳ ಇಷ್ಟ, ಅಲ್ಲಿನ ಆಹಾರ ಇಷ್ಟ ಎಂದು ಹೇಳಿದ ತಕ್ಷಣ ಅವನಿಗೆ ಉಘೇ ಉಘೇ ಎಂದು ಜೈಕಾರ ಹಾಕುವಷ್ಟು ಕೇರಳದ ಅನಿವಾಸಿ ಭಾರತೀಯರ ಹೃದಯ ಕಟುವಾಗಿದೆಯಾ? ಅವನ ನಿಕ್ ನೇಮ್ ಬೂಮ್ ಬೂಮ್ ಎಂದು ಉದ್ಘೋಷಿಸಿ ಖುಷಿ ಪಡುತ್ತಿದ್ದ ದುಬೈನ ಕೇರಳಿಗರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ಕೇಳಿ ಬಂದಿವೆ.
ಈ ಬಗ್ಗೆ ಎಕ್ಸ್ ನಲ್ಲಿ ಗಣ್ಯರು ಟ್ವೀಟ್ ಮಾಡಿದ್ದು ” ಅಫ್ರಿದಿ ಭಾರತದ ಟೀಕಾಕಾರನಾಗಿದ್ದಾನೆ. ಅವನು ಭಾರತೀಯ ಸೇನೆಯನ್ನು ಹೀಯಾಳಿಸಿ ಪಾಕಿಸ್ತಾನದ ಮೂಲಭೂತವಾದಿಗಳನ್ನು ಬೆಂಬಲಿಸಿದ್ದಾನೆ. ಹಾಗಿರುವಾಗ ದುಬೈಯಲ್ಲಿ ಅವನನ್ನು ಭಾರತೀಯ ಮೂಲದವರು ಕರೆದು ಕಾರ್ಯಕ್ರಮ ಮಾಡಿರುವ ಔಚಿತ್ಯವೇನು?” ಎಂದು ಪ್ರಶ್ನಿಸಿದ್ದಾರೆ. ಒಂದು ಕಡೆ ಗಡಿಯಲ್ಲಿ ಪಾಕಿಸ್ತಾನದ ಪ್ರಾಯೋಜಿತ ಭಯೋತ್ಪಾದನೆಯತ್ತ ಭಾರತದ ಸೈನಿಕರು ಹೋರಾಡುತ್ತಾ, ಹುತಾತ್ಮರಾಗುತ್ತಿದ್ದರೆ, ಇನ್ನೊಂದೆಡೆ ನಮ್ಮ ಸೈನಿಕರನ್ನು ದ್ವೇಷಿಸುವ ಪಾಕಿ ಅಫ್ರಿದಿಯನ್ನು ಕರೆದು ಭರ್ಜರಿ ಸ್ವಾಗತ ನೀಡಿರುವುದನ್ನು ಕಂಡಾಗ ರಕ್ತ ಕುದಿಯುತ್ತದೆ ಎಂದು ಮಾಜಿ ಯೋಧರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಫ್ರಿದಿ ಪಾಕಿಸ್ತಾನದ ಸಮಾ ಟಿವಿಗೆ ಕೊಟ್ಟ ಸಂದರ್ಶನವೊಂದರಲ್ಲಿ ” ನಿಮ್ಮ ದೇಶದಲ್ಲಿ ಎಂಟು ಲಕ್ಷ ಸೈನಿಕರು ಇದ್ದಾರೆ. ಹಾಗಿದ್ದೂ ಪೆಹಲ್ಗಾಂನಲ್ಲಿ ಪ್ರವಾಸಿಗರಿಗೆ ರಕ್ಷಣೆ ಕೊಡಲು ನಿಮಗೆ ಆಗಲಿಲ್ಲ ಎಂದರೆ ಅವರು ನಿಷ್ಟ್ರಯೋಜಕರು ಎಂದು ಅನಿಸುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾನೆ.
ಅಫ್ರಿದಿ ಇದೇ ಸಂದರ್ಶನದಲ್ಲಿ ಭಾರತದ ಮಾಧ್ಯಮಗಳು ಪಾಕಿಸ್ತಾನದ ವಿರುದ್ಧ ಭಯೋತ್ಪಾದನೆಯ ವಿಷಯವನ್ನು ಹಿಡಿದು ಆರೋಪ ಮಾಡುತ್ತಿರುವುದನ್ನು ಕೂಡ ಹಂಗಿಸಿದ್ದಾನೆ. ಅದರೊಂದಿಗೆ ಮಾಧ್ಯಮಗಳ ಪ್ರಚಾರ ಬಾಲಿವುಡ್ ಸಿನೆಮಾದಂತೆ ಇದೆ ಎಂದು ಟೀಕಿಸುತ್ತಾ, ಎಲ್ಲದಕ್ಕೂ ಭಾರತೀಯ ಕ್ರಿಕೆಟಿಗರು ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನವನ್ನು ಬೊಟ್ಟು ಮಾಡುವುದು ಸರಿಯಾ ಎಂದಿದ್ದಾನೆ. ಅವನ ಹೇಳಿಕೆಯ ನಂತರ ಪಾಕಿಸ್ತಾನ ಮೂಲಕ ಲಷ್ಕರೆ ತೈಬಾ ಈ ಘಟನೆಯನ್ನು ತಾನೇ ವಹಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.